ಹುಣಸೂರು: ಹುಣಸೂರು ನಗರಸಭೆ ವ್ಯಾಪ್ತಿಯ ವಾರ್ಡ್ ನಂಬರ್ 27, ಹೌಸಿಂಗ್ ಬೋರ್ಡ್ ಗೆ ಹೋಗುವ ರಸ್ತೆ ಕಿತ್ತು ರಾಡಿಯಾಗಿಬಿಟ್ಟಿದೆ.
ಈ ರಸ್ತೆ ಚೆನ್ನಾಗಿಯೇ ಇತ್ತು ಆದರೆ ಯಾವ ಕಾರಣಕ್ಕೆ ರಸ್ತೆಯನ್ನು ಕಿತ್ತು ಹಾಕಿದ್ದಾರೆ ಎಂಬುದು ತಿಳಿಯದು.
ರಸ್ತೆ ಗುಂಡಿಗಳಲ್ಲಿ ಈಗ ಮಳೆ ನೀರು ತುಂಬಿಕೊಂಡು ಮನೆಯಿಂದ ಮಕ್ಕಳು,ಹಿರಿಯರು ಸೇರಿದಂತೆ ಯಾರೂ ಹೊರಬರದಂತಾಗಿದೆ.
ಏಕೆಂದರೆ ರಸ್ತೆ ಗುಂಡಿ ಮಯವಾಗಿದ್ದು ಮಳೆ ನೀರು ಸದಾ ತುಂಬಿಕೊಂಡು ಹೆಸರು ಗದ್ದೆಯಾಗಿದೆ, ಇಷ್ಟು ಕೆಟ್ಟ ರಸ್ತೆಯಲ್ಲಿ ಓಡಾಡುವುದು ಹೇಗೆ? ರಾತ್ರಿಯಾಗುತ್ತಿದ್ದಂತೆ ಕತ್ತಲು ಆವರಿಸುತ್ತದೆ ಕಳ್ಳರು ಬಂದರೆ ಏನು ಮಾಡಬೇಕು ಎಂದು ಜನ ಪ್ರಶ್ನಿಸಿದ್ದಾರೆ.
ನಗರಸಭೆ ಆಯುಕ್ತರು, ಅಧಿಕಾರಿಗಳು ಜನಪ್ರತಿನಿಧಿಗಳು ಈ ರಸ್ತೆಯಲ್ಲಿ ಸಂಚರಿಸಿ ತೋರಿಸಲಿ ಎಂದು ಇಲ್ಲಿನ ಜನ ಕಿಡಿಕಾರಿ ಒತ್ತಾಯಿಸಿದ್ದಾರೆ.
ಈ ಭಾಗದ ಜನಪ್ರತಿನಿಧಿಗಳಿಗೆ ಈ ರಸ್ತೆ ಕಾಣಿಸುತ್ತದೊ ಇಲ್ಲವೋ ತಿಳಿಯದು ಚೆನ್ನಾಗಿದ್ದ ರಸ್ತೆಯನ್ನ ಕಿತ್ತು ಹಾಕಿರುವುದು ಏಕೆ ಎಂದು ಕರ್ನಾಟಕ ಪ್ರಜಾ ಪಾರ್ಟಿ ರೈತ ಪರ್ವ ಹುಣಸೂರು ತಾಲೂಕು ಅಧ್ಯಕ್ಷ ಚೆಲುವರಾಜು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಇದೇ ರಸ್ತೆಯಲ್ಲಿ ರಾತ್ರಿಯಾದರೆ ಕತ್ತಲು ಆವರಿಸಿಕೊಂಡಿರುತ್ತದೆ ಏಕೆಂದರೆ ಇಲ್ಲಿರುವ 8 ವಿದ್ಯುತ್ ಕಂಬಗಳ ದೀಪಗಳನ್ನು ತೆಗೆದುಹಾಕಲಾಗಿದೆ, ಇದುವರೆಗೆ ಬೀದಿ ದೀಪಗಳನ್ನು ಅಳವಡಿಸಿಲ್ಲ ಎಂದು ಜನ ಆಕ್ರೋಶ ದಿಂದ ನುಡಿದಿದ್ದಾರೆ.

ಎರಡು ತಿಂಗಳಿಂದ ರಸ್ತೆಯಲ್ಲಿ ಬೀದಿ ದೀಪಗಳೂ ಇಲ್ಲ, ಮೊದಲೇ ರಸ್ತೆ ಕಿತ್ತು ರಾಡಿಯಾಗಿದೆ, ಬೀದಿ ದೀಪಗಳು ಇಲ್ಲದ ಕಾರಣ ಸಂಜೆಯಾಗುತ್ತಿದ್ದಂತೆ ಸಣ್ಣಪುಟ್ಟ ಸಾಮಾನು ತರಲು ಕೂಡಾ ಹೊರ ಬರುವುದು ಸಾಧ್ಯವಾಗುತ್ತಿಲ್ಲ, ಕೆಲಸ ಕಾರ್ಯಗಳಿಗೆ ಹೊರಗೆ ಹೋದವರು ಮನೆಗೆ ವಾಪಸ್ ಬರುವುದು ಹೇಗೆ ಎಂದು ಚೆಲುವರಾಜು ಪ್ರಶ್ನಿಸಿದ್ದಾರೆ.
ಕತ್ತಲೆಯಲ್ಲಿ ಈ ಕೆಟ್ಟ ರಸ್ತೆಯಲ್ಲಿ ಜನ ಬಿದ್ದು ಗಾಯಗೊಂಡ ಉದಾಹರಣೆಗಳು ಇವೆ ಆದರೂ ಸಂಬಂಧ ಪಟ್ಟ ಅಧಿಕಾರಿಗಳಾಗಲಿ ಜನಪ್ರತಿನಿಧಿಗಳಾಗಲಿ ತಿರುಗಿ ನೋಡಿಲ್ಲ ಎಂದು ಜನರ ಪರವಾಗಿ ಅವರು ಕಿಡಿಕಾರಿದ್ದಾರೆ.
ತಕ್ಷಣವೇ 21ನೇ ವಾರ್ಡ್ ರಸ್ತೆಯನ್ನು ಸರಿಪಡಿಸಬೇಕು ಮತ್ತು ಬೀದಿ ದೀಪಗಳನ್ನು ಅಳವಡಿಸಬೇಕು ಇಲ್ಲದಿದ್ದರೆ ಜನ ನಗರ ಸಭೆ ಮುಂದೆ ಪ್ರತಿಭಟನೆ ಮಾಡಲು ಸಿದ್ಧರಿದ್ದಾರೆ ಎಂದು ಅವರು ಎಚ್ಚರಿಸಿದ್ದಾರೆ.