ಮೈಸೂರು: ರಾಜ್ಯ ಸರಕಾರದ ಗೃಹಲಕ್ಷ್ಮೀ ಯೋಜನೆಯ ಹಣ ಕೂಡಲೇ ಬಿಡುಗಡೆಗೊಳಿಸುವಂತೆ ಮೈಸೂರು ನಗರ ಬಿಜೆಪಿ ಉಪಾಧ್ಯಕ್ಷೆ ಹೇಮಾ ನಂದೀಶ್ ಆಗ್ರಹಿಸಿದ್ದಾರೆ.
ಕರ್ನಾಟಕದಲ್ಲಿ ಗ್ಯಾರಂಟಿ ಯೋಜನೆಗಳ ಆಮಿಷ ನೀಡಿ ಅಧಿಕಾರಕ್ಕೆ ಬಂದಿರುವ ಕಾಂಗ್ರೆಸ್ ಇದೀಗ ಯೂ ಟರ್ನ್ ಹೊಡೆಯುವ ಲಕ್ಷಣ ತೋರಿಸುತ್ತಿದೆ ಎಂದು ಟೀಕಿಸಿದ್ದಾರೆ.
ನನಗೂ ಫ್ರೀ, ನಿನಗೂ ಫ್ರೀ, ಹೆಣ್ಣು ಮಕ್ಕಳ ಖಾತೆಗೆ ಪ್ರತಿ ತಿಂಗಳು 2000 ರೂ. ಹಣ ಜಮಾವಣೆ, ಅನ್ನಭಾಗ್ಯ, ಯುವನಿಧಿ ಎಂದು ಚುನಾವಣಾ ಪ್ರಚಾರದಲ್ಲಿ ಘಂಟಾಘೋಷವಾಗಿ ಹೇಳುತ್ತಿದ್ದ ಸಿದ್ದರಾಮಯ್ಯ ಅವರು ಈಗ ಯೋಜನೆ ಜಾರಿಗೆ ಹಣದ ಕೊರತೆ ಇದೆ ಎಂದು ಜಾರಿಗೊಳ್ಳುತ್ತಿದ್ದಾರೆ ಎಂಬುದಾಗಿ ಹೇಮಾ ನಂದೀಶ್ ದೂರಿದ್ದಾರೆ.
ಅನ್ನಭಾಗ್ಯದ ನಗದು ಫಲಾನುಭವಿಗಳಿಗೆ ನೀಡದೆ ಐದು ತಿಂಗಳಾಗಿದೆ. ಗೃಹಲಕ್ಷ್ಮೀ ಯೋಜನೆಯ ಮಾಸಿಕ ಹಣ ಫಲಾನುಭವಿಗಳ ಖಾತೆಗೆ ಪಾವತಿಸದೆ ಮೂರು ತಿಂಗಳಾಗಿದೆ. ಸರ್ಕಾರ ಕೂಡಲೇ ಗ್ಯಾರಂಟಿ ಯೋಜನೆಯ ಫಲಾನುಭವಿ ಗಳಿಗೆ ಹಣವನ್ನು ಪಾವತಿಸಬೇಕೆಂದು ಅವರು ಒತ್ತಾಯಿಸಿದ್ದಾರೆ.
ಬಸ್ ಪ್ರಯಾಣ ದರ, ಮೆಟ್ರೊ ರೈಲು ದರ, ವಿದ್ಯುತ್ ದರ ಏರಿಕೆ ಮಾಡಿ ಜನಸಾಮಾನ್ಯರ ಮೇಲೆ ಬರೆ ಎಳೆ ಯುತ್ತಿರುವ ಸರ್ಕಾರ, 5 ರೂಪಾಯಿ ಇದ್ದ ಜನನ, ಮರಣ ದೃಢೀಕರಣ ಪತ್ರದ ದರವನ್ನು ಏಕಾಏಕಿ 50 ರೂಪಾಯಿಗೆ ಏರಿಸುವುದರ ಮೂಲಕ ಜನವಿರೋಧಿ, ಜನರ ಜೇಬು ಲೂಟಿ ಮಾಡಲು ಹೊರಟಿರುವ ಸರ್ಕಾರ ಎಂಬುದು ಸಾಬೀತು ಪಡಿಸಿದೆ ಎಂದು ಪ್ರಕಟಣೆಯಲ್ಲಿ ಹೇಮಾ ನಂದೀಶ್ ವ್ಯಂಗ್ಯ ವಾಡಿದ್ದಾರೆ.