ಮೈಸೂರು: ಗೃಹಬಳಕೆ ಸಿಲಿಂಡರ್ ದುರ್ಬಳಕೆ ತಡೆಯಲು ಬಾರ್ಕೋಡ್ ಬಳಕೆ ಜಾರಿಗೆ ತರಬೇಕೆಂದು ಅಖಿಲ ಭಾರತೀಯ ಗ್ರಾಹಕ ಪಂಚಾಯತ್ ಮೈಸೂರು ಘಟಕದ ಅಧ್ಯಕ್ಷ ಸಿ. ಎಸ್ ಚಂದ್ರಶೇಖರ್ ಆಗ್ರಹಿಸಿದ್ದಾರೆ
ಗೃಹಬಳಕೆ ಸಿಲಿಂಡರ್ ದುರ್ಬಳಕೆ ತಡೆಗಟ್ಟುವ ನಿಟ್ಟಿನಲ್ಲಿ ರೇಷನ್ ಹಂಚಿಕೆ ಮಾದರಿಯಲ್ಲಿ ಗ್ರಾಹಕರು ಹಾಗೂ ಸಿಲಿಂಡರ್ಗೆ ಬಾರ್ ಕೋಡ್ ಅಳವಡಿಸಿ, ಬಯೋಮೆಟ್ರಿಕ್ ವ್ಯವಸ್ಥೆ ಜಾರಿಗೊಳಿಸಬೇಕೆಂದು ಅವರು ಹೇಳಿದ್ದಾರೆ.
ಕೋಟ್ಯಂತರ ರೂಪಾಯಿ ನಷ್ಟ ಮತ್ತು ಸ್ಫೋಟದ ಅಪಾಯವನ್ನುಂಟು ಮಾಡುವ ವಾಹನಗಳು ಮತ್ತು ವಾಣಿಜ್ಯ ಸ್ಥಳಗಳಲ್ಲಿ ಗೃಹ ಬಳಕೆಯ ಸಿಲಿಂಡರ್ಗಳ ವ್ಯಾಪಕ ಬಳಕೆಯನ್ನು ನಿಲ್ಲಿಸಬೇಕು ಎಂದು ಸಲಹೆ ನೀಡಿದ್ದಾರೆ.
ಗ್ರಾಹಕರು ನೋಂದಾಯಿತ ಮೊಬೈಲ್ ಸಂಖ್ಯೆಯಿಂದ ಬುಕ್ ಮಾಡಿದ ನಂತರ ಒಟಿಪಿ ಕಳುಹಿಸಬೇಕು,ಸಿಲಿಂಡರ್ ವಿತರಿಸುವಾಗ ಒಟಿಪಿ ನಮೂದಿಸಿದಾಗ ಬಿಲ್ ರಚಿಸುವ ವ್ಯವಸ್ಥೆ ರಚಿಸಬೇಕು, ಎಲ್ ಪಿಜಿ ಅಂದರೆ ಡೆಲಿವರಿ ಅಥೆಂಟಿಕೇಶನ್ ಕೋಡ್ ಅಥವಾ ಬಾರ್ಕೋಡ್ ಅನ್ನು ಕಟ್ಟುನಿಟ್ಟಾಗಿ ಜಾರಿಗೊಳಿಸಬೇಕು ಎಂದು ಚಂದ್ರಶೇಖರ್ ಹೇಳಿದ್ದಾರೆ.
ವಾಣಿಜ್ಯ ಸಿಲಿಂಡರ್ ಬೆಲೆಗಳು ಶೇ. 100 ರಷ್ಟು ಹೆಚ್ಚಾಗಿದ್ದು ವಾಣಿಜ್ಯ ಸಂಸ್ಥೆಗಳು ಗೃಹಬಳಕೆಯ ಸಿಲಿಂಡರ್ ಗಳನ್ನು ವ್ಯಾಪಕವಾಗಿ ಬಳಸುತ್ತಿವೆ.
ಇದರಿಂದ ಸರಕಾರಕ್ಕೆ ಕೋಟ್ಯಂತರ ರೂ. ನಷ್ಟವಾಗುತ್ತಿದೆ. ಸಂಘಟಿತ ದಂಧೆ ನಡೆಸುವವರಿಗೆ ಸರಕಾರಿ ತೈಲ ಕಂಪನಿಗಳು ಮತ್ತು ಎಲ್ ಪಿಜಿ ವಿತರಕರು ಬೆಂಬಲ ನೀಡುತ್ತಿದ್ದು, ಇದರ ವಿರುದ್ಧ ಸರಕಾರ ತಕ್ಷಣ ಕ್ರಮ ಕೈಗೊಳ್ಳಬೇಕು ಎಂದು ಅವರು ಆಗ್ರಹಿಸಿದ್ದಾರೆ.
ಜಿಲ್ಲೆಯಲ್ಲಿ ಗೃಹಬಳಕೆಯ ಸಿಲಿಂಡರ್ಗಳು ಆಟೋ ಮತ್ತಿತರೆ ವಾಹನಗಳಿಗೆ ದುರ್ಬಳಕೆಯಾಗುತ್ತಿವೆ ಈ ಅಕ್ರಮಕ್ಕೂ ಕಡಿವಾಣ ಹಾಕಬೇಕು ಎಂದೂ ಚಂದ್ರಶೇಖರ್ ತಿಳಿಸಿದ್ದಾರೆ.