ಗಣಪತಿ ಶ್ರೀಗಳ 83 ನೆ ಜನ್ಮದಿನ: ನಾಣ್ಯ ಬಿಡುಗಡೆ ಮಾಡಿದ ಆರ್ ಬಿ ಐ

Spread the love

ಮೈಸೂರು: ಅವಧೂತ ದತ್ತ ಪೀಠಾಧಿಪತಿ ಶ್ರೀ ಗಣಪತಿ ಸಚ್ಚಿದಾನಂದ ಸ್ವಾಮೀಜಿಯವರ 83 ನೆ‌ ಜನ್ಮದಿನಾಚರಣೆ ವಿಶೇಷವಾಗಿ ನೆರವೇರಿದ್ದು,ಆರ್ ಬಿ ಐ ನಾಣ್ಯ ಬಿಡುಗಡೆ ಮಾಡುವ ಮೂಲಕ ಶ್ರೀಗಳಿಗೆ ಗೌರವ ಸಲ್ಲಿಸಿದೆ.

ಶ್ರೀಗಳ ಜನ್ಮದಿನಾಚರಣೆ ಪ್ರಯುಕ್ತ ಸೋಮವಾರ ಬೆಳಿಗ್ಗೆ 8ಗಂಟೆಗೆ ಶ್ರೀ ದತ್ತ ವೆಂಕಟೇಶ್ವರ ದೇವಸ್ಥಾನದಲ್ಲಿ ಸ್ವಾಮಿಗೆ ರುದ್ರ ಹೋಮ, ಆಯುಷ್ಯ ಹೋಮ, ರುದ್ರ ಅಭಿಷೇಕ ನೆರವೇರಿಸಲಾಯಿತು.ಇದೇ ವೇಳೆ ಸಚ್ಚಿದಾನಂದೇಶ್ವರ ಸ್ವಾಮಿ ಮುಂದೆ ಮಂತ್ರಪಠಣಗಳು ನೆರವೇರಿದವು.

ನಂತರ ಗಣಪತಿ ಶ್ರೀಗಳನ್ನು ಅಲಂಕೃತ ಸಾರೋಟ್ ನಲ್ಲಿ ಪ್ರಾರ್ಥನಾ ಮಂದಿರದಿಂದ ನಾದಮಂಟಪದ ವರೆಗೆ‌ ಮೆರವಣಿಗೆಯಲ್ಲಿ ಕರೆತರಲಾಯಿತು.

ನಾದ ಮಂಟಪದಲ್ಲಿ ಶ್ರೀ ಚಕ್ರ ಪೂಜೆ ನೆರವೇರಿಸಿ,ನಂತರ ಪೂಜ್ಯ ಶ್ರೀ ಗಣಪತಿ ಸಚ್ಚಿದಾನಂದ ಸ್ವಾಮೀಜಿ ಅವರಿಗೆ ಪ್ರತ್ಯಕ್ಷ ಪಾದ ಪೂಜೆಯನ್ನು ಅವಧೂತ ದತ್ತಪೀಠದ ಕಿರಿಯ ಶ್ರೀಗಳಾದ ಶ್ರೀ ದತ್ತ ವಿಜಯಾನಂದ ತೀರ್ಥ ಸ್ವಾಮೀಜಿಯವರು ನೆರವೇರಿಸಿ,ಪುಷ್ಪ ನಮನ ಸಲ್ಲಿಸಿದರು.

ಗಣಪತಿ ಸಚ್ಚಿದಾನಂದ ಸ್ವಾಮೀಜಿಯವರ ಜನುಮದಿನದ ಸಂದರ್ಭವಾಗಿ ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ ಶ್ರೀಗಳ ಚಿತ್ರವುಳ್ಳ ನಾಣ್ಯವನ್ನು ಬಿಡುಗಡೆ ಮಾಡಿ ಗೌರವ ಸಮರ್ಪಿಸಿದ್ದು ನಿಜಕ್ಕೂ ವಿಶೇಷವಾಗಿದ್ದು,ನಾಣ್ಯವನ್ನು ಈ ವೇಳೆ ಭಕ್ತರಿಗೆ ಪ್ರದರ್ಶಿಸಲಾಯಿತು.

ಆರ್ ಬಿ ಐ ಹೈದರಾಬಾದ್ ಶಾಖೆಯ ಮ್ಯಾನೇಜರ್ ವಿಜಯಲಕ್ಷ್ಮೀ ಅವರು ನಾಣ್ಯಗಳನ್ನು ಸ್ವಾಮೀಜಿಯವರಿಗೆ ಸಮರ್ಪಿಸಿದರು.

ಈ ಸಂದರ್ಭದಲ್ಲಿ ಭಕ್ತರಿಗೆ ಆಶೀರ್ವಚನ ನೀಡಿ ಮಾತನಾಡಿದ ಗಣಪತಿ ಶ್ರೀಗಳು,ಹರೀಃಓಂ ನಮಃಶಿವಾಯ ಮಂತ್ರ ಪಠಣ ಮಾಡಿದರೆ ಎಲ್ಲರಿಗೂ ಒಳಿತಾಗಲಿದೆ
ಬೇರೆಯವರಿಗೆ ಅನ್ಯಾಯ ಮಾಡಬಾರದು
ಎಂದು ತಿಳಿಹೇಳಿದರು.

ನಾವೆಲ್ಲ ಸನಾತನ ಧರ್ಮವನ್ನು ರಕ್ಷಿಸಬೇಕು,ಧರ್ಮ ಮಾರ್ಗದಲ್ಲಿ ನಡೆಯುವವರನ್ನು ಭಗವಂತ ರಕ್ಷಿಸುತ್ತಾನೆ ಅಧರ್ಮ ಮಾಡುವವರನ್ನ ಶಿಕ್ಷಿಸುತ್ತಾನೆ ಎಂದು ಶ್ರೀಗಳು ನುಡಿದರು.

ನಿನ್ನೆಯಷ್ಟೇ ಭಾರತ ಸೇನೆಗೆ 25 ಲಕ್ಷ ಕಾಣಿಕೆ ಸಮರ್ಪಿಸಿದ್ದೇವೆ,ಕಷ್ಟ ಗಳು ಬರುತ್ತವೆ ಹಾಗೇ ಹೋಗುತ್ತದೆ‌ ಆ ಭಗವಂತನನ್ನ ನಂಬಿ ಪ್ರಾರ್ಥಿಸಿದರೆ ಎಲ್ಲವೂ ಪರಿಹಾರವಾಗುತ್ತದೆ ಎಂದು ತಿಳಿಸಿದರು.

ಪಾದಪೂಜೆ ನಂತರ ಚೈತನ್ಯ ಅರ್ಚನ-ದತ್ತ ಪೀಠದ ಬಿರುದು ಪ್ರದಾನ ಮಾಡಲಾಯಿತು.
ವೇದ ನಿಧಿ-ಶ್ರೀ. ವಿಷ್ಣುಭಟ್ಲ ಲಕ್ಷ್ಮೀ ನಾರಾಯಣ ಘನಪಾಠಿ.
ಶಾಸ್ತ್ರ ನಿಧಿ-ಶ್ರೀ ಕುಪ್ಪ ವಿಶ್ವನಾಥ ಶಾಸ್ತ್ರಿ.
ನಾದ ನಿಧಿ-ಪಂ. ವಿನಾಯಕ ತೊರವಿ,
ನಾದ ನಿಧಿ- ವಿದ್ವಾನ್ ಶಶಾಂಕ್ ಸುಬ್ರಮಣ್ಯಂ
ನಾಟ್ಯ ನಿಧಿ-ವಿದುಷಿ ಟಿ ಎಸ್ ಶ್ರೀ ಲಕ್ಷ್ಮಿ
ಆಸ್ಥಾನ ಶಿಲ್ಪಿ- ಶ್ರೀ. ಕೃಷ್ಣ ಮೂರ್ತಿ.
ಜಯಲಕ್ಷ್ಮಿ ಪುರಸ್ಕಾರ-ಶ್ರೀಮತಿ ಗಂಗಾವರಂ ವೇದಾವತಿ ಮತ್ತು ಶ್ರೀಮತಿ ಗೀತಾ ಪುಂಜಾಲ
ದತ್ತ ಪೀಠ ಬಂಧು-ಶ್ರೀ. ಕಮಲ್ ಕಪೂರ್,ಸಂಪತ್ ಕುಮಾರ್ ಆಚಾರ್, ಶ್ರೀ ಕಂಟೇಟಿ ಶ್ರೀನಿವಾಸ್ ಹಾಗೂ ಮೈಸೂರಿನ ಎಸ್.ನಾಗರಾಜ್
ಸಸ್ಯ ಬಂಧು- ಶ್ರೀಮತಿ ಸುಚಿತಾ ರೆಡ್ಡಿ ಅವರಿಗೆ ಬಿರುದು ಪ್ರದಾನ ಮಾಡಿ ಶ್ರೀಗಳು ಆಶೀರ್ವದಿಸಿದರು.

ಇದೇ ಪ್ರಥಮ ಬಾರಿಗೆ ಶ್ರೀಗಳು ನಾಟ್ಯನಿಧಿ ಪ್ರಶಸ್ತಿಯನ್ನು ಕೂಡಾ ಪ್ರಾರಂಬಿಸುವ ಮೂಲಕ ತಾವು ಕಲಾ ಪೋಶಕರು ಎಂಬುದನ್ನು ತಿಳಿಸಿದ್ದಾರೆ.

ಕೊನೆಯಲ್ಲಿ ಆಶ್ರಮದ ಭಕ್ತರು ಕೇಕ್ ತಂದು ಶ್ರೀಗಳಿಂದ ಕಟ್ ಮಾಡಿಸಿ ಸಂಭ್ರಮಿಸಿದರು.