ಮೈಸೂರು: ಕನ್ನಡಾಂಬೆ ರಕ್ಷಣಾ ವೇದಿಕೆ ವತಿಯಿಂದ ಶಾಸಕ ಜಿ.ಟಿ.ದೇವೇಗೌಡರ ಹುಟ್ಟುಹಬ್ಬವನ್ನು ಉದ್ಯಾನವನಗಳಲ್ಲಿ ಸಸಿಗಳನ್ನು ನೆಟ್ಟು ಅರ್ಥಪೂರ್ಣವಾಗಿ ಆಚರಿಸಲಾಯಿತು.
ಮಂಗಳವಾರ ಬೆಳಗ್ಗೆ ಕನ್ನಡಾಂಬೆ ರಕ್ಷಣಾ ವೇದಿಕೆ ಅಧ್ಯಕ್ಷರಾದ ಬಿ.ಬಿ. ರಾಜಶೇಖರ್ ನೇತೃತ್ವದಲ್ಲಿ ವೇದಿಕೆ ಕಾರ್ಯಕರ್ತರು ಇಲವಾಲ ಬಳಿಯ ಈರಪ್ಪನ ಕೊಪ್ಪಲು ಗ್ರಾಮದ ಉದ್ಯಾನವನದಲ್ಲಿ ೭೫
ವಿವಿಧ ಹಣ್ಣು, ಹೂವುಗಳ ಸಸಿಗಳನ್ನು ನೆಟ್ಟು ನೀರೆರೆಯಲಾಯಿತು.
ಬಳಿಕ ಈರಪ್ಪನ ಕೊಪ್ಪಲು ಗ್ರಾಮದ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಯ ಮಕ್ಕಳಿಗೆ ಲೇಖನ ಸಾಮಾಗ್ರಿಗಳನ್ನು ವಿತರಣೆ ಮಾಡಲಾಯಿತು.

ನಂತರ ವಿವಿ ಪುರಂ ಬಡಾವಣೆಯ ಕಾಳಿದಾಸ ರಸ್ತೆಯಲ್ಲಿರುವ ಶ್ರೀ ಲಕ್ಷ್ಮೀದೇವಮ್ಮ ಶಂಕರಶೆಟ್ಟಿ ಹೆರಿಗೆ ಆಸ್ಪತ್ರೆಯ ಒಳ ರೋಗಿಗಳಿಗೆ ಬ್ರೆಡ್ ಮತ್ತು ಹಣ್ಣುಗಳನ್ನು ವಿತರಿಸಲಾಯಿತು.
ಈ ಸಂದರ್ಭದಲ್ಲಿ ಕನ್ನಡಾಂಬೆ ರಕ್ಷಣಾ ವೇದಿಕೆಯ ರಾಜ್ಯಾಧ್ಯಕ್ಷ ಬಿ.ಬಿ.ರೇಜಶೇಖರ್ ಮಾತನಾಡಿ, ಶಾಸಕರು ಮತ್ತು ಮಾಜಿ ಸಚಿವರೂ ಆದ ಜಿ.ಟಿ.ದೇವೇಗೌಡರು ಅಜಾತ ಶತೃವಾಗಿದ್ದಾರೆ ಎಂದು ಹೇಳಿದರು.
ಚಾಮುಂಡೇಶ್ವರಿ ಕ್ಷೇತ್ರದ ಸರ್ವಾಂಗೀಣ ಅಭಿವೃದ್ಧಿಗೆ ಅವರು ಹಗಲಿರುಳು ಶ್ರಮಿಸುತ್ತಿದ್ದಾರೆ. ಯಾವುದೇ ಜಾತಿ, ಧರ್ಮ, ವರ್ಣ, ವರ್ಗಗಳ ಬೇದವಿಲ್ಲದೇ ಎಲ್ಲರನ್ನೂ ಸರಿ ಸಮಾನವಾಗಿ ಕಂಡು ಎಲ್ಲ ಸಮುದಾಯಗಳ ಅಭಿವೃದ್ಧಿಗೆ ಶ್ರಮಿಸುತ್ತಿದ್ದಾರೆ ಎಂದು ಬಣ್ಣಿಸಿದರು.
ದೇವರಾಜ ಅರಸು, ಸಿದ್ದರಾಮಯ್ಯ ಬಿಟ್ಟರೆ ಮೈಸೂರು ಭಾಗದ ಅತ್ಯಂತ ಪ್ರಭಾವಿ ರಾಜಕಾರಣಿಯಾದ ಜಿ.ಟಿ.ದೇವೇಗೌಡರು ಎಲ್ಲರನ್ನೂ ಪ್ರೀತಿ ಪೂರ್ವಕವಾಗಿ ಕಾಣುತ್ತಾ ಕ್ಷೇತ್ರದ ಅಭಿವೃದ್ಧಿ ಮಾಡುತ್ತಿದ್ದಾರೆ ಎಂದು ಬಿ.ಬಿ. ರಾಜಶೇಖರ್ ಶ್ಲಾಘಿಸಿದರು.
ಹಿರಿಯ ಸಹಕಾರಿ ಧುರೀಣರೂ ಆದ ಜಿ.ಟಿ.ದೇವೇಗೌಡರ ೭೫ನೇ ವರ್ಷದ ಹುಟ್ಟು ಹಬ್ಬವನ್ನು ೭೫ ಸಸಿಗಳನ್ನು ನೆಡುವ ಮೂಲಕ ಕನ್ನಡಾಂಬೆ ರಕ್ಷಣಾ ವೇದಿಕೆ ವತಿಯಿಂದ ಅರ್ಥಪೂರ್ಣವಾಗಿ ಆಚರಿಸುತ್ತಿದ್ದೇವೆ ಎಂದು ತಿಳಿಸಿದರು.
ಬಳಿಕ ಅವರು ಜಿ.ಟಿ.ದೇವೇಗೌಡರ ಮನೆಗೆ ಬಂದು ಕೇಕ್ ಕತ್ತರಿಸಿ ಜಿಟಿಡಿ ಅವರನ್ನು ಗೌರವಿಸಿ ಹುಟ್ಟುಹಬ್ಬದ ಶುಭಾಶಯ ಕೋರಿದರು.
ಈ ಸಂದರ್ಭದಲ್ಲಿ ವೇದಿಕೆಯ ರಾಜ್ಯ ಖಜಾಂಚಿ ನಂಜುಂಡ, ಸಿಂಧುವಳ್ಳಿ ಶಿವಕುಮಾರ್, ಕಿರಣ್, ಲೋಕೇಶ್, ಹರೀಶ್, ಬೊಮ್ಮನಹಳ್ಳಿ ಲೋಕೇಶ್, ಶಿವಕುಮಾರ್, ಶಿವಲಿಂಗಪ್ಪ, ಚಂದ್ರಶೇಖರ್, ಕಾವಿ ಬಸಪ್ಪ, ಈಡೇಗೌಡ, ಮಾದಪ್ಪ, ವತ್ಸಲ, ರಶ್ಮಿ ಸಿಂಗ್ ಮತ್ತಿತರರು ಹಾಜರಿದ್ದರು.
