ಮೈಸೂರು: ಮೈಸೂರಿನ ನೇಗಿಲಯೋಗಿ ವಿವಿದೋದ್ದೇಶ ಸಹಕಾರ ಸಂಘದ 30.18 ಲಕ್ಷ ಹಣ ದುರುಪಯೋಗಪಡಿಸಿಕೊಂಡ ಆರೋಪದ ಮೇಲೆ ಸಿಇಒ ವಿರುದ್ದ ಎಫ್ಐಆರ್ ದಾಖಲಾಗಿದೆ.
ನೇಗಿಲಯೋಗಿ ವಿವಿದೋದ್ದೇಶ ಸಹಕಾರ ಸಂಘದ ಸಿಇಒ ವೆಂಕಟೇಶ್ ವಿರುದ್ಧ
ಅಶೋಕಾಪುರಂ ಪೊಲೀಸ್ ಠಾಣೆಯಲ್ಲಿ ಎಫ್.ಐ.ಆರ್.ದಾಖಲಾಗಿದೆ.
ಕಳೆದ 10 ವರ್ಷಗಳಿಂದ ವೆಂಕಟೇಶ್ ಸಂಸ್ಥೆಯಲ್ಲಿ ಸಿಇಒ ಆಗಿ ಕಾರ್ಯನಿರ್ವಹಿಸುತ್ತಿದ್ದಾರೆ.ನೇಗಿಲಯೋಗಿ ವಿವಿದೋದ್ದೇಶ ಸೌಹಾರ್ಧ ಸಹಕಾರಿ ಸಂಸ್ಥೆಯು ಮರುಳೇಶ್ವರ ಸೇವಾ ಟ್ರಸ್ಟ್ ಗೆ ಸೇರಿದ ಕಟ್ಟಡದಲ್ಲಿ ಕಾರ್ಯನಿರ್ವಹಿಸುತ್ತಿತ್ತು.ಕಾರಣಾಂತರದಿಂದ 19-02-2024 ಬೀಗ ಹಾಕಲಾಗಿತ್ತು.
ಸಂಸ್ಥೆ 27-06-2024 ರಂದು ಹೊಸ ಕಟ್ಟಡಕ್ಕೆ ಸ್ಥಳಾಂತರಗೊಂಡಿತು.ಈ ಅವಧಿಯಲ್ಲಿ ಷೇರುದಾರರು ಹಾಗೂ ಸಾಲಗಾರರು ಪಾವತಿಸಬೇಕಾದ ಹಣವನ್ನ ಸಿಇಒ ವೆಂಕಟೇಶ್ ಅವರಿಗೆ ತಲುಪಿಸಿದ್ದಾರೆ.ಹಣಕ್ಕೆ ರಸೀತಿ ಸಹ ನೀಡಿದ್ದಾರೆ.
ಆದರೆ ಹಣವನ್ನ ಸಂಸ್ಥೆಯ ಬ್ಯಾಂಕ್ ಖಾತೆಗೆ ಜಮಾ ಮಾಡದೆ ಇನ್ನಿತರ ಖಾತೆಗಳಿಗೆ ಜಮಾ ಮಾಡಿದ್ದಾರೆ.ಈ ಬಗ್ಗೆ ವೆಂಕಟೇಶ್ ರವರನ್ನ ಪ್ರಶ್ನಿಸಿದಾಗ 3.06 ಲಕ್ಷ ಬಳಸಿಕೊಂಡಿರುವುದಾಗಿ ತಪ್ಪೊಪ್ಪಿಗೆ ಬರೆದು ಕೊಟ್ಟಿದ್ದಾರೆ.ಆದರೆ ಆಡಿಟ್ ಮಾಡಿಸಿದಾಗ 30.18 ಲಕ್ಷ ಹಣ ದುರುಪಯೋಗವಾಗಿರುವುದು ಗೊತ್ತಾಗಿದೆ.
ಈ ಬಗ್ಗೆ ವೆಂಕಟೇಶ್ ಸೂಕ್ತ ಉತ್ತರ ನೀಡಿಲ್ಲ ಹಾಗೂ ಸಂಸ್ಥೆಯ ಪದಾಧಿಕಾರಿಗಳ ಕೈಗೆ ಸಿಗದೆ ನಾಪತ್ತೆಯಾಗಿದ್ದಾರೆ.ಹಾಗಾಗಿ ವೆಂಕಟೇಶ್ ವಿರುದ್ದ ಅಶೋಕಾಪುರಂ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ.