ರಾಜ್ಯದಿಂದನಾಲ್ವರು ಪಾಕ್‌ ಪ್ರಜೆಗಳ ಗಡಿಪಾರು

Spread the love

ಬೆಂಗಳೂರು: ಪಹಲ್ಗಾಮ್‌ ದಾಳಿ ಬಳಿಕ ಅಲ್ಪಾವಧಿ ವೀಸಾ ಹೊಂದಿದ್ದ ನಾಲ್ವರು ಪಾಕ್‌ ಪ್ರಜೆಗಳನ್ನು ರಾಜ್ಯದಿಂದ ಗಡಿಪಾರು ಮಾಡಲಾಗಿದೆ.

ದೀರ್ಘಾವಧಿ ವೀಸಾ ಹೊಂದಿರುವವರ ಗಡಿಪಾರಿಗೆ ಕೇಂದ್ರ ಸೂಚಿಸದ ಕಾರಣ ದೀರ್ಘಾವಧಿ ವೀಸಾ ಹೊಂದಿರುವ 91 ಪಾಕ್‌ ಪ್ರಜೆಗಳು ಇನ್ನೂ ಕರ್ನಾಟಕದಲ್ಲೇ ಇದ್ದಾರೆ.

ವಿವಿಧ ಜಿಲ್ಲೆಗಳಲ್ಲಿ 91 ಮಂದಿ ವಾಸವಾಗಿದ್ದಾರೆ ಎಂದು ಜಿಲ್ಲಾಡಳಿತ ಮತ್ತು ಪೊಲೀಸ್ ಇಲಾಖೆ ಕಾರ್ಯಾಚರಣೆ ವೇಳೆ ಬೆಳಕಿಗೆ ಬಂದಿದೆ.

5 ಪಾಕಿಸ್ತಾನಿ ಪ್ರಜೆಗಳು ವೈದ್ಯಕೀಯ ವೀಸಾದಡಿ ರಾಜ್ಯದಲ್ಲಿದ್ದಾರೆ. ಇವರಿಗೆ ಏ.29ರವರೆಗೆ ಮಾತ್ರ ದೇಶದಲ್ಲಿರಲು ಕೇಂದ್ರ ಸರ್ಕಾರ ವಿನಾಯಿತಿ ನೀಡಿದ್ದು, ಗಡುವಿನೊಳಗೆ ನಿಯಮಾನುಸಾರ ಹೊರ ಕಳುಹಿಸಲಾಗುತ್ತದೆ.

ರಾಜ್ಯದಲ್ಲಿ ಅತಿ ಹೆಚ್ಚು ಪಾಕಿಸ್ತಾನಿ ಪ್ರಜೆಗಳು ಉತ್ತರ ಕನ್ನಡ ಜಿಲ್ಲೆಯಲ್ಲಿದ್ದು, ಭಟ್ಕಳದಲ್ಲಿ 14 ಹಾಗೂ ಕಾರವಾರದಲ್ಲಿ ಒಬ್ಬರು ಸೇರಿ ಒಟ್ಟಾರೆ 15 ಮಂದಿ ವಾಸವಾಗಿದ್ದಾರೆ. ಈ ಪೈಕಿ 12 ಮಹಿಳೆಯರು ಹಾಗೂ ಮೂವರು ಮಕ್ಕಳಿದ್ದಾರೆ.

ಭಟ್ಕಳದ ನವಾಯತ್ ಸಮುದಾಯದಲ್ಲಿ ಪಾಕಿಸ್ತಾನದವರೊಂದಿಗೆ ಮದುವೆಯಾಗುವ ಸಂಪ್ರದಾಯವಿದೆ. ಪಾಕಿಸ್ತಾನಿಯರನ್ನು ಮದುವೆಯಾದ ಬಳಿಕ ಕೇಂದ್ರ ಸರ್ಕಾರ ದೀರ್ಘಾವಧಿ ವೀಸಾವನ್ನು ನೀಡುತ್ತಿದೆ. ಇದಲ್ಲದೆ ಬೆಂಗಳೂರು, ಕಲಬುರಗಿ, ಮಂಗಳೂರು, ಮೈಸೂರು ಸೇರಿದಂತೆ ರಾಜ್ಯದ ಹಲವು ಕಡೆ ಪಾಕ್‌ ಪ್ರಜೆಗಳು ನೆಲೆಸಿದ್ದಾರೆ.

ದಾವಣಗೆರೆಯಲ್ಲಿ ಒಬ್ಬ ಪಾಕಿಸ್ತಾನ ವಿದ್ಯಾರ್ಥಿ ಶಿಕ್ಷಣದ ವೀಸಾ ಮೇಲೆ ಭಾರತಕ್ಕೆ ಬಂದಿದ್ದಾರೆ. ದಾವಣಗೆರೆಯ ಜೆಜೆಎಂ ವೈದ್ಯಕೀಯ ಕಾಲೇಜಿನಲ್ಲಿ ಅಂತಿಮ ವರ್ಷದ ಎಂಬಿಬಿಎಸ್ ಓದುತ್ತಿದ್ದಾರೆ ಇವರ ವೀಸಾ ಅವಧಿ ಇನ್ನೂ ಮುಗಿದಿಲ್ಲ,ವೀಸಾ ಮುಗಿದ ನಂತರ ಅವರು ಹೋಗಬೇಕಿದೆ.