ಮೈಕ್ರೋ ಫೈನಾನ್ಸ್ :ರೈತರ ಆತ್ಮಹತ್ಯೆಗೆ ಸರ್ಕಾರ ಹೊಣೆ ಮು.ಮಂ ಚಂದ್ರು

Spread the love

ಬೆಂಗಳೂರು: ರಾಜ್ಯದಲ್ಲಿ ಇತ್ತೀಚಿನ ಮೈಕ್ರೋ ಫೈನಾನ್ಸ್ ಗಳ ವಸೂಲಿ ದಂಧೆಗಳಿಗೆ ರೈತರು ಆತ್ಮಹತ್ಯೆ ಮಾರ್ಗ ಹಿಡಿದಿರುವುದಕ್ಕೆ ರಾಜ್ಯ ಸರ್ಕಾರ ಹೊಣೆ ಹೊರಬೇಕು ಆಮ್ ಆದ್ಮಿ ಪಕ್ಷದ ರಾಜ್ಯಾಧ್ಯಕ್ಷ ಡಾ. ಮುಖ್ಯಮಂತ್ರಿ ಚಂದ್ರು ಒತ್ತಾಯಿಸಿದ್ದಾರೆ.

ಈ ಬಗ್ಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಪತ್ರ ಬರೆದಿರುವ ಚಂದ್ರು,ಮೈಕ್ರೋ ಫೈನಾನ್ಸ್‌ ಹಾವಳಿಗೆ ಕೂಡಲೇ ಕಠಿಣ ಕಾನೂನು ಕ್ರಮಗಳನ್ನು ತೆಗೆದುಕೊಳ್ಳಬೇಕು ಎಂದು ಆಗ್ರಹಿಸಿದ್ದಾರೆ.

ಈ ಅಕ್ರಮ ಕಂಪನಿಗಳು ಸ್ಥಳೀಯ ರಾಜಕಾರಣಿಗಳು ಹಾಗೂ ಪೊಲೀಸ್ ಇಲಾಖೆಯ ಕೃಪಾಕಟಾಕ್ಷದಿಂದಾಗಿ ರೈತಾಪಿ ಮಕ್ಕಳ ಮೇಲೆ ಆರ್ ಬಿ ಐ ನಿಯಮಾವಳಿಗಳು ಹಾಗೂ ಈ ನೆಲದ ಕಾನೂನುಗಳನ್ನು ಉಲ್ಲಂಘಿಸಿ ಅಕ್ರಮ ವಸೂಲಿ, ಬೆದರಿಕೆ, ಅಪಮಾನ ದಂತಹ ಕ್ರಿಮಿನಲ್ ಮಾರ್ಗಗಳಿಂದ ಚಕ್ರ ಬಡ್ಡಿ ವಸೂಲಿ ಮಾಡುತ್ತಿರುವುದು ರಾಜ್ಯದಲ್ಲಿ ಪೊಲೀಸ್ ಇಲಾಖೆ ವೈಫಲ್ಯಗೊಂಡಿರುವುದರ ಸಂಕೇತವಾಗಿದೆ ಎಂದು ಪತ್ರದಲ್ಲಿ ತಿಳಿಸಿದ್ದಾರೆ.

ಸ್ಥಳೀಯ ಸಹಕಾರಿ ಸಂಸ್ಥೆಗಳು ರೈತರಿಗೆ ಕಡಿಮೆ ಬಡ್ಡಿ ದರದಲ್ಲಿ ಹಣಕಾಸು ನೆರವು ನೀಡದೆ ಕೇವಲ ಪ್ರಭಾವಿಗಳ, ಸ್ಥಳೀಯ ಶಾಸಕರುಗಳ ಬಿಗಿ ಮುಷ್ಟಿಯಲ್ಲಿ ಸಿಲುಕಿಕೊಂಡಿವೆ. ಮತ್ತೊಂದು ಕಡೆ ಸರ್ಕಾರದಿಂದ ರೈತಾಪಿ ವರ್ಗಗಳಿಗೆ ಬೆಳೆ ನಷ್ಟ ಪರಿಹಾರಗಳಿಗೆ ಪರಿಣಾಮಕಾರಿ ಯಾದ ಯೋಜನೆಗಳು ತಲುಪದೇ ಅನಿವಾರ್ಯವಾಗಿ ರೈತರು ಸಾಲಕ್ಕಾಗಿ ಇಂತಹ ಅಕ್ರಮ ಫೈನಾನ್ಸ್ ಕಂಪನಿಗಳ ಮೊರೆ ಹೋಗಿ ತಮ್ಮ ಜೀವಗಳನ್ನೇ ಬಲಿ ಕೊಡುವಂತಹ ವಾತಾವರಣ ಹಾಗೂ ಸಂದರ್ಭಗಳು ರಾಜ್ಯದಲ್ಲಿ ಸೃಷ್ಟಿಯಾಗಿದೆ ಎಂದು ಆತಂಕ ವ್ಯಕ್ತಪಡಿಸಿದ್ದಾರೆ.

ರಾಜ್ಯದ ಪೊಲೀಸ್ ಇಲಾಖೆ ಹಾಗೂ ಕೇಂದ್ರದ ಜಾರಿ ನಿರ್ದೇಶನಾಲಯ ಕಣ್ಮುಚ್ಚಿ ಕುಳಿತಿರುವುದು ಬೇಸರದ ಸಂಗತಿಯಾಗಿದೆ. ಆರಂಭದಲ್ಲೇ ಈ ಕಂಪನಿಗಳ ವಿರುದ್ಧ ಕಠಿಣ ಕ್ರಮ ತೆಗೆದುಕೊಂಡಿದ್ದರೆ ರೈತರ ಜೀವವನ್ನು ಉಳಿಸಬಹುದಾಗಿತ್ತು. ಆದರೆ ಹಲವು ತಿಂಗಳುಗಳಿಂದ ಸರ್ಕಾರ ಹಾಗೂ ವಿಪಕ್ಷಗಳು ಇಲ್ಲಸಲ್ಲದ ರಾಜಕೀಯ ಆರೋಪ ಪ್ರತ್ಯಾರೋಪಗಳಲ್ಲಿ ತೊಡಗಿವೆ,ಹಾಗಾಗಿ ರೈತರ ಆತ್ಮಹತ್ಯೆಗೆ ತಾವುಗಳೇ ನೇರ ಹೊಣೆ ಹೊರಬೇಕೆಂದು ಒತ್ತಾಯಿಸಿದ್ದಾರೆ.

ಕೂಡಲೇ ಕಾನೂನಿನ ಬಿಗಿ ಕುಣಿಕೆಯನ್ನು ಹಣಕಾಸು ಕಂಪನಿಗಳ ವಿರುದ್ಧ ಪ್ರಯೋಗಿಸಬೇಕು ಹಾಗೂ ಕೇಂದ್ರದ ಜಾರಿ ನಿರ್ದೇಶನಾಲಯಕ್ಕೆ ಕ್ರಮ ತೆಗೆದುಕೊಳ್ಳಲು ಶೀಘ್ರ ಶಿಫಾರಸ್ಸು ಮಾಡಿ ರೈತರ ಆತ್ಮಹತ್ಯೆ,ಶೋಷಣೆಗಳನ್ನು ತಪ್ಪಿಸಬೇಕೆಂದು ಮುಖ್ಯಮಂತ್ರಿ ಚಂದ್ರು ತಮ್ಮ ಪತ್ರದಲ್ಲಿ ಮುಖ್ಯ ಮಂತ್ರಿಗಳನ್ನು ಆಗ್ರಹಿಸಿದ್ದಾರೆ.