ಮೈಸೂರು: ದಸರಾ ವಸ್ತುಪ್ರದರ್ಶನದಲ್ಲಿ ಅನಧಿಕೃತ ರಸ್ತೆಬದಿ ವ್ಯಾಪಾರಸ್ಥರಿಂದ ಪ್ರವಾಸಿಗರಿಗೆ ಗ್ರಾಹಕರಿಗೆ ಆಗುತ್ತಿರುವ ತೊಂದರೆ ತಪ್ಪಿಸಬೇಕೆಂದು ಕರ್ನಾಟಕ ವಸ್ತು ಪ್ರದರ್ಶನ ಪ್ರಾಧಿಕಾರದ ಅಧ್ಯಕ್ಷ ಅಯೂಬ್ ಖಾನ್ ಅವರಿಗೆ ಮನವಿ ಸಲ್ಲಿಸಲಾಯಿತು.
ಮಂಗಳವಾರ ಅಖಿಲ ಭಾರತೀಯ ಗ್ರಾಹಕ ಪಂಚಾಯತ್ ಮೈಸೂರು ಘಟಕದ ವತಿಯಿಂದ ಅಯೂಬ್ ಖಾನ್ ಅವರಿಗೆ
ಮನವಿ ನೀಡಲಾಯಿತು.
ಮೈಸೂರು ದಸರಾ ವಸ್ತುಪ್ರದರ್ಶನಕ್ಕೆ ತನ್ನದೇ ಆದ ಹಿನ್ನೆಲೆ ಇತಿಹಾಸವಿದೆ, ದೇಶವಿದೇಶದಿಂದ ಲಕ್ಷಾಂತರ ಪ್ರವಾಸಿಗರು ಬರುತ್ತಾರೆ, ಮಳಿಗೆಗಳ ವ್ಯಾಪಾರಸ್ಥರು ಕೂಡ ಲಕ್ಷಾಂತರ ಹಣ ವ್ಯಯಿಸಿ 3ತಿಂಗಳು ವ್ಯಾಪಾರಕ್ಕೆ ಶ್ರಮ ವಹಿಸುತ್ತಾರೆ, ಆದರೆ ಕರ್ನಾಟಕ ವಸ್ತುಪ್ರದರ್ಶನದ ಕಾರ್ಯನಿರ್ವಾಹಣಾಧಿಕಾರಿ ಮತ್ತು ಅಧಿಕಾರಿಗಳು ಕೇವಲ ಎಸಿ ರೂಮಿನಲ್ಲಿ ಕೂತು ಕೆಲಸಕ್ಕೆ ಸೀಮಿತವಾಗಿದ್ದಾರೆ ಹೊರತು ಪ್ರತಿನಿತ್ಯ ಪ್ರವಾಸಿಗರಿಗೆ ಸಾರ್ವಜನಿಕರಿಗೆ ಗ್ರಾಹಕರಿಗೆ ಆಗುತ್ತಿರುವ ತೊಂದರೆ ಸಮಸ್ಯೆಗಳನ್ನ ಬಗೆಹರಿಸುವಲ್ಲಿ ವಿಫಲವಾಗಿದ್ದಾರೆ ಎಂದು ಅಖಿಲ ಭಾರತೀಯ ಗ್ರಾಹಕ ಪಂಚಾಯತ್ ನವರು ದೂರಿದರು.
ಅಂತವರಿಗೆ ಹೆಚ್ಚಿನ ಸಂಬಳ ಕೊಡಬೇಕು, ಆಡಳಿತ ಅಧಿಕಾರಿಗಳ ದುರಾಡಳಿತದಿಂದ ಎ ಬ್ಲಾಕ್, ಚಾಮುಂಡಿ ಬ್ಲಾಕ್ ಮುಖ್ಯದ್ವಾರದ ಮುಂಭಾಗ ಸೇರಿದಂತೆ ವಸ್ತುಪ್ರದರ್ಶನದ ಬಹುತೇಖ ರಸ್ತೆಗಳಲ್ಲಿ ಅನಧಿಕೃತವಾಗಿ ರಸ್ತೆಬದಿ ವ್ಯಾಪಾರಸ್ಥರು ಗ್ರಾಹಕರನ್ನ ಸುತ್ತುವರೆದು ನಡೆದು ಹೋಗಲು ದಾರಿ ಬಿಡುತ್ತಿಲ್ಲ.
ಗ್ರಾಹಕರ ಮೇಲೆ ದಬ್ಬಾಳಿಕೆಯೂ ಹೆಚ್ಚಾಗಿದೆ, ಇದರ ಮಧ್ಯೆ ರಸ್ತೆಯಲ್ಲಿ ನಡೆದುಕೊಂಡು ಹೋಗಲು ಜಾಗವಿಲ್ಲದ ಕಾರಣ ಗುಂಪಿನಲ್ಲಿ ಕಳ್ಳರ ಹಾವಳಿಯೂ ತಪ್ಪಿದಲ್ಲ, ಇದು ಮೈಸೂರು ಪ್ರವಾಸೋದ್ಯಮಕ್ಕೆ ಕಪ್ಪು ಚುಕ್ಕೆ ಎಂದು ಅಖಿಲ ಭಾರತೀಯ ಗ್ರಾಹಕ ಪಂಚಾಯತ್ ಮೈಸೂರು ಘಟಕದ ಅಧ್ಯಕ್ಷರಾದ ಸಿ ಎಸ್ ಚಂದ್ರಶೇಖರ್ ಹೇಳಿದರು.
ರಸ್ತೆಬದಿ ವ್ಯಾಪಾರಕ್ಕೆ ಪ್ರಾಧಿಕಾರ ಅನುಮತಿ ನೀಡಿದೆಯೇ ಇದರಿಂದ ಪ್ರಾಧಿಕಾರಕ್ಕೆ ಎಷ್ಟು ಆದಾಯ ಬಂದಿದೆ ಮುಖ್ಯ ಕಾರ್ಯನಿರ್ವಾಹಣಾಧಿಕಾರಿ ಮತ್ತು ಅಧಿಕಾರಿಗಳು ಸುಮ್ಮನಿರಲು ಕಾರಣವೇನು ಎಂದು ಪ್ರಶ್ನಿಸಿದರು.
ಸುತ್ತಲು ಸಿಸಿ ಕ್ಯಾಮೆರಾ ಇದ್ದು ಅನಧಿಕೃತ ರಸ್ತೆ ಬದಿ ವ್ಯಾಪರಸ್ಥರಿಂದ ಮುಗ್ಧ ಪ್ರವಾಸಿಗರಿಗೆ ಆಗುತ್ತಿರುವ ಶೋಷಣೆ ವಂಚನೆ ಜಾಲವನ್ನ ತಡೆಹಿಡಿಯಲು ಗಸ್ತಿನ ಪೋಲಿಸರು, ಭದ್ರತಾ ಸಿಬ್ಬಂದಿಗಳು ಮುಂದಾಗುವಂತೆ ಸೂಚಿಸಬೇಕೆಂದು ಆಯುಕ್ತರಲ್ಲಿ ಮನವಿ ಮಾಡಿದರು.
ಕರ್ನಾಟಕ ವಸ್ತುಪ್ರದರ್ಶನ ಪ್ರಾಧಿಕಾರದ ಅಧ್ಯಕ್ಷರು ಈಕೂಡಲೇ ಕ್ರಮಕೈಗೊಂಡು ಸಾರ್ವಜನಿಕರಿಗೆ ಪ್ರವಾಸಿಗರಿಗೆ ಸುಗಮಸಂಚಾರಕ್ಕೆ ಅವಕಾಶ ಕಲ್ಪಿಸಿಕೊಡಬೇಕೆಂದು ಕೋರಿದರು.
ಈ ಸಂದರ್ಭದಲ್ಲಿ ಅಖಿಲ ಭಾರತೀಯ ಗ್ರಾಹಕ ಪಂಚಾಯತ್ ಮೈಸೂರು ಘಟಕದ ಕಾರ್ಯದರ್ಶಿ ವಿಕ್ರಮ ಅಯ್ಯಂಗಾರ್, ಮಹಿಳಾ ಪ್ರಮುಖ ನಾಗಮಣಿ, ಚಕ್ರಪಾಣಿ, ದಯಾನಂದ್ ಮತ್ತಿತರರು ಹಾಜರಿದ್ದರು.
