ಬೆಂಗಳೂರು: ಹೆತ್ತು,ಹೊತ್ತು ಪ್ರೀತಿಯಿಂದ ಸಾಕಿ ಬೆಳೆಸಿದ ಮಕ್ಕಳು ವೃದ್ದಾಪ್ಯದಲ್ಲಿ ತಮ್ಮನ್ನು ಮಕ್ಕಳು ನೋಡಿಕೊಳ್ಳುತ್ತಾರೆ ಎಂದು ತಂದೆ,ತಾಯಿ ಆಸೆ ಇಟ್ಟುಕೊಳ್ಳುವುದೇ ತಪ್ಪೇನೊ ಎಂಬುದು ಕೆಲ ಘಟನೆಗಳನ್ನು ಕಂಡಾಗ ಅನಿಸಿಬಿಡುತ್ತದೆ.
ರಾಜ್ಯದ ರಾಜಧಾನಿ ಬೆಂಗಳೂರಿನಲ್ಲಿ ನಡೆದಿರುವ ಮನಕಲಕುವ ಘಟನೆ ಇದಕ್ಕೆ ಸಾಕ್ಷಿಯಾಗಿದೆ.
ಜೆಪಿ ನಗರ 8ನೇ ಹಂತದ ವೃದ್ದಾಶ್ರಮದಲ್ಲಿ ವೃದ್ಧ ದಂಪತಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ.
ಕೃಷ್ಣಮೂರ್ತಿ (81) ಮತ್ತು ಅವರ ಪತ್ನಿ ರಾಧಾ (74) ಆತ್ಮಹತ್ಯೆ ಮಾಡಿಕೊಂಡ ವೃದ್ದ ದಂಪತಿ.
ಈ ದಂಪತಿಯನ್ನು ಕೆಲ ವಾರಗಳ ಹಿಂದೆ ಅವರ ಪುತ್ರನೇ ತಂದು ಸೇರಿಸಿ ಹೋಗಿದ್ದರಂತೆ.
ಮನೆಯಲ್ಲಿ ಸೊಸೆ ಮಾಡುವ ಅಡುಗೆ ಚೆನ್ನಾಗಿಲ್ಲವೆಂದು ಹೇಳಿದ್ದಕ್ಕೆ ಸೊಸೆ ತಾತ್ಸಾರ ಮಾಡಿ ಜಗಳ ಮಾಡುತ್ತಿದ್ದಳು. ಇದನ್ನು ಮಗನಿಗೆ ಹೇಳಿದರೆ ಅಸತ ಕೂಡ ಜಗಳ ಮಾಡಿ ತಂದೆ-ತಾಯಿಗೆ ಬೈಯುತ್ತಿದ್ದ.ಸದಾ ಜಗಳದಿಂದ ದಂಪತಿ ನೊಂದಿದ್ದರು.
ಮಂಗಳವಾರ ರಾತ್ರಿ ದಂಪತಿ ಅವರ ಕೋಣೆಯಲ್ಲಿ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.
ಬುಧವಾರ ಅವರ ಕೊಠಡಿಯ ಬಾಗಿಲು ಬಹಳ ಹೊತ್ತಾದರೂ ತೆರೆಯದ ಕಾರಣ ಆಶ್ರಮದ ಸಿಬ್ಬಂದಿ ಪೊಲೀಸರ ನೆರವಿನಿಂದ ಬಾಗಿಲು ತೆರೆಸಿದ್ದು,ನೇಣಿನ ಕುಣಿಕೆಯಲ್ಲಿ ದಂಪತಿಯ ಶವ ಪತ್ತೆಯಾಗಿದೆ.
ತಲಘಟ್ಟಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿ ಮುಂದಿನ ಕ್ರಮ ಕೈಗೊಂಡಿದ್ದಾರೆ.
