ಬೆಂಗಳೂರು: ಕೇಂದ್ರ ವಿತ್ತಸಚಿವೆ ನಿರ್ಮಲಾ ಸೀತಾರಾಮನ್ ಅವರು ಮಂಡಿಸಿದ ಬಜೆಟ್
ರಾಜ್ಯದ ಹಿತಕ್ಕೆ ಮಾರಕವಾದ ನಿರಾಶಾದಾಯಕ ಬಜೆಟ್ ಎಂದು ಮುಖ್ಯ ಮಂತ್ರಿ ಸಿದ್ದರಾಮಯ್ಯ ಹೇಳಿದ್ದಾರೆ
ಕೇಂದ್ರ ಸರ್ಕಾರದ ಬಜೆಟ್ ಕುರಿತು ಮಾದ್ಯಮಗಳೊಂದಿಗೆ ಪ್ರತಿಕ್ರಿಯಿಸಿದ ಸಿಎಂ,
ಕೇಂದ್ರದ ಬಜೆಟ್ ಪೂರ್ವ ಸಭೆಯಲ್ಲಿ ನಾವಿಟ್ಟಿದ್ದ ಬೇಡಿಕೆಗಳಲ್ಲಿ ಒಂದನ್ನೂ ಸರ್ಕಾರ ಈಡೇರಿಸಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.
ದೆಹಲಿಯಲ್ಲೇ ರೈತರ ಪ್ರತಿಭಟನೆ ನಡೆಯುತ್ತಿದ್ದರೂ ಬಜೆಟ್ ನಲ್ಲಿ ಎಂ ಎಸ್ ಪಿ ಬಗ್ಗೆ ಚಕಾರ ಎತ್ತದಿರುವುದು ರೈತ ಸಮುದಾಯಕ್ಕೆ ಮಾಡಿದ ದೊಡ್ಡ ದ್ರೋಹ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ರಾಜ್ಯವನ್ನು ಪ್ರತಿನಿಧಿಸುವ ಕೇಂದ್ರದ ಸಚಿವರಲ್ಲಿ ಒಬ್ಬರೂ ರಾಜ್ಯದ ಹಿತಾಸಕ್ತಿ ಬಗ್ಗೆ ನೆಪಕ್ಕೂ ಬಾಯಿ ಬಿಟ್ಟಿಲ್ಲ,ರಾಜ್ಯಕ್ಕೆ ಏಕೆ ಚೊಂಬು ಕೊಟ್ಟಿದ್ದೀರಿ ಎಂದು ಬಿಜೆಪಿ-ಜೆಡಿಎಸ್ ಸಂಸದರು ಮತ್ತು ಕೇಂದ್ರ ಸಚಿವರು ಪ್ರಧಾನಿ ಮೋದಿಯವರನ್ನ ಕೇಳಬೇಕು ಎಂದು ಸಿದ್ದು ತಿಳಿಸಿದರು.
ಆಂದ್ರ-ಬಿಹಾರ ಬಿಟ್ಟು ಎಲ್ಲಾ ರಾಜ್ಯಗಳಿಗೂ ಅನ್ಯಾಯ ಆಗುದೆ,ಜೆಡಿಎಸ್-ಬಿಜೆಪಿ ಮೈತ್ರಿ ಇದ್ದರೂ ರಾಜ್ಯಕ್ಕೆ ಚೊಂಬು ಸಿಕ್ಕಿದೆ ಎಂದು ಟೀಕಿಸಿದರು.
ಆದಾಯ ತೆರಿಗೆಯ ಮಿತಿ 12 ಲಕ್ಷ ರೂಪಾಯಿಗಳಿಗೆ ಏರಿಸಿರುವುದನ್ನು ಕೊಂಡಾಡಲಾಗುತ್ತಿದೆ. ನಮ್ಮಲ್ಲಿ ಕಳೆದ ಹಣಕಾಸು ವರ್ಷದಲ್ಲಿ ಆದಾಯ ತೆರಿಗೆ ಪಾವತಿ ಮಾಡಿದವರು ಕೇವಲ 8.09 ಕೋಟಿ ಜನ,ಇದು ನಮ್ಮ ಒಟ್ಟು ಜನಸಂಖ್ಯೆಯ ಶೇಕಡಾ 6.64ರಷ್ಟಾಗತ್ತದೆ ಅವರಲ್ಲಿ 4.90 ಕೋಟಿ ಜನ ಸೊನ್ನೆ ತೆರಿಗೆ ಪಾವತಿ ದಾರರು. ಆದ್ದರಿಂದ ಆದಾಯ ತೆರಿಗೆ ಮಿತಿಯ ಹೆಚ್ಚಳ ಮೇಲು ಮಧ್ಯಮ ವರ್ಗದ ಕೆಲವೇ ಕುಟುಂಬಗಳಿಗೆ ನೆರವಾಗಬಹುದೇ ವಿನ: ದಿನದ ಆದಾಯ 100-150 ರೂಪಾಯಿಯಷ್ಟೆ ಹೊಂದಿದ ಶೇಕಡಾ 70ರಷ್ಟು ಜನಸಂಖ್ಯೆಗೆ ಇದರಿಂದ ಯಾವ ಲಾಭವೂ ಇಲ್ಲ ಎಂದು ಸಿದ್ದರಾಮಯ್ಯ ವಿಶ್ಲೇಷಿಸಿದರು.
ಪ್ರಧಾನ ಮಂತ್ರಿ ಕೃಷಿ ಸಿಂಚಾಯಿ ಯೋಜನೆಗೆ 2024-25 ರಲ್ಲಿ 8,250 ಕೋಟಿ ಅನುದಾನ ಒದಗಿಸಿದ್ದರೆ, ಈ ಬಜೆಟ್ನಲ್ಲಿ 8,260 ಕೋಟಿ ಮಾತ್ರ ಒದಗಿಸಿದೆ.
ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳ ವಿದ್ಯಾರ್ಥಿಗಳಿಗೆ ನೀಡಲಾಗುವ ವಿದ್ಯಾರ್ಥಿ ವೇತನವನ್ನೂ ಹೆಚ್ಚಿಸಿಲ್ಲ.
ರೈತರ ಬೆಳೆಗಳಿಗೆ ನೀಡಲಾಗುವ ಬೆಳೆ ವಿಮೆಗೆ 2024-25 ರಲ್ಲಿ 15,864 ಕೋಟಿ ರೂಪಾಯಿಗಳನ್ನು ಒದಗಿಸಿದ್ದರೆ, ಈ ವರ್ಷ ಕೇವಲ 12,242 ಕೋಟಿ ರೂಪಾಯಿಗಳನ್ನು ಒದಗಿಸಲಾಗಿದೆ.
ನಿರ್ಮಲಾ ಸೀತಾರಾಮನ್ ಅವರು ಪೋಷಣ್ ಅಭಿಯಾನ-2 ರ ಬಗ್ಗೆ ಬಜೆಟ್ನಲ್ಲಿ ಹೊಸದಾಗಿ ಮತ್ತು ದೊಡ್ಡದಾಗಿ ಪೋಷಣ್-2 ಎಂದು ಅನುಷ್ಠಾನ ಮಾಡುವುದಾಗಿ ಓದಿದರು. ಆದರೆ 2023-24 ರಲ್ಲಿ 21,810 ಕೋಟಿ ರೂ. ಅನುದಾನ ಖರ್ಚು ಮಾಡಿದ್ದರೆ, ಈ ವರ್ಷ ಕೇವಲ 150 ಕೋಟಿ ರೂಪಾಯಿಗಳನ್ನು ಮಾತ್ರ ಹೆಚ್ಚು ಮಾಡಿ 21,960 ಕೋಟಿ ರೂಪಾಯಿಗಳನ್ನು ಒದಗಿಸಿದ್ದಾರೆ.
ಯಥಾ ಪ್ರಕಾರ ಈ ಬಜೆಟ್ನಲ್ಲಿ ಮೇಕ್ ಇನ್ ಇಂಡಿಯಾ, ಸ್ಟಾರ್ಟಪ್ ಇಂಡಿಯಾ, ಸಬ್ ಕಾ ಸಾಥ್-ಸಬ್ ಕಾ ವಿಕಾಸ್, ಮುಂತಾದ ಪದಗಳನ್ನು ಸಚಿವರು ಉಪಯೋಗಿಸಿದರು. ಆದರೆ, ಮೇಕ್ ಇನ್ ಇಂಡಿಯಾಗೆ ಕೇವಲ 100 ಕೋಟಿ ರೂಪಾಯಿಗಳನ್ನು ಒದಗಿಸಿದ್ದಾರೆ,ಹಾಗಾಗಿ ಇದು ಬರಿ ಬಾಯಿ ಮಾತಿನಲ್ಲಿ ಹೊಟ್ಟೆ ತುಂಬಿಸುವ ಬಜೆಟ್ ಆಗಿದೆ ಎಂದು ಸಿಎಂ ಟೀಕಿಸಿದರು.
ಕೃಷಿ ಕ್ಷೇತ್ರಕ್ಕೆ ದೊಡ್ಡ ಕೊಡುಗೆ ನೀಡುವುದಾಗಿ ಬಜೆಟ್ನ ಆರಂಭದಲ್ಲೇ ಹೇಳಿದರು. ಆದರೆ ಒದಗಿಸಿರುವ ಅನುದಾನ ಮಾತ್ರ ಆನೆಯ ಹೊಟ್ಟೆಗೆ ಅರೆಕಾಸಿನ ಮಜ್ಜಿಗೆಯಂತಿದೆ.
ಕಾಟನ್ ಟೆಕ್ನಾಲಜಿ ಮಿಷನ್ಗೆ ಕೇವಲ 500 ಕೋಟಿ ಇಟ್ಟಿದ್ದಾರೆ,
ದೇಶದ ಬಡವರಿಗೆ ಆಹಾರ ಖಾತ್ರಿ ಯೋಜನೆಗೆ 2024-25 ರಲ್ಲಿ 2.06 ಲಕ್ಷ ಕೋಟಿ ರೂಪಾಯಿ ಅನುದಾನ ಒದಗಿಸಿದ್ದರೆ, ಈ ಬಾರಿ 2.03 ಕೋಟಿ ಅನುದಾನ ಒದಗಿಸಿದ್ದಾರೆ.
ರೈಲ್ವೇ ಇಲಾಖೆಗೆ ನೀಡುವ ಅನುದಾನಗಳನ್ನೂ ಕಡಿಮೆ ಮಾಡಲಾಗಿದೆ ಹೀಗೆ ಈ ಬಾರಿಯ ಬಜೆಟ್ ನಿರಾಶಾದಾಯಕ ಎಂದು ಸಿದ್ದರಾಮಯ್ಯ ಹೇಳಿದರು.