ಮೈಸೂರು: ನಾಡಿನ ಪ್ರಸಿದ್ಧ ಶ್ರದ್ದೆ ಹಾಗೂ ಭಕ್ತಿಯ ಧಾರ್ಮಿಕ ಕೇಂದ್ರಗಳಲ್ಲಿ ಶ್ರೀ ಧರ್ಮಸ್ಥಳ ಕ್ಷೇತ್ರವೂ ಒಂದು. ಇಂದು ಕ್ಷೇತ್ರವನ್ನು ವಿವಾದಿತ ಕೇಂದ್ರವನ್ನಾಗಿಸಲು ಕೆಲವರು ಯತ್ನಿಸುತ್ತಿರುವುದು ವಿಷಾದನೀಯ ಎಂದು ಸುತ್ತೂರು ಮಠಾಧೀಶರಾದ ಶ್ರೀ ಶಿವರಾತ್ರಿ ದೇಶಿಕೇಂದ್ರ ಸ್ವಾಮಿಗಳು ತಿಳಿಸಿದ್ದಾರೆ.
ನಂಬಿಕೆ ಎಂಬುದು ಬಹು ಸೂಕ್ಷ್ಮವಾದ ಸಂಗತಿ, ಅದು ಕನ್ನಡಿಯಿದ್ದಂತೆ, ಒಮ್ಮೆ ಅದು ಒಡೆದು ಹೋದರೆ ಮತ್ತೆ ಸರಿಪಡಿಸಲಾಗುವುದಿಲ್ಲ. ಒಡೆದ ಕನ್ನಡಿಯ ಪ್ರತಿಚೂರಿನಲ್ಲೂ ಪ್ರತ್ಯೇಕ ಪ್ರತ್ಯೇಕ ಬಿಂಬಗಳು ಕಾಣುತ್ತಿರುತ್ತವೆ. ಹೀಗೆ ಕಂಡ ಕಂಡ ಬಿಂಬಗಳನ್ನೆಲ್ಲ ನಂಬಿ ವಿಭಿನ್ನವಾಗಿ ಅರ್ಥೈಸುತ್ತಾ ಹೋಗುವುದು ಸೂಕ್ತವಾದುದಲ್ಲ. ಒಂದು ಧಾರ್ಮಿಕ ಕ್ಷೇತ್ರದ ಮೇಲೆ ನಿರಂತರವಾಗಿ ಒಂದಲ್ಲ ಒಂದು ವಿವಾದವನ್ನು ಮುನ್ನೆಲೆಗೆ ತರುತ್ತಿರುವ ಪ್ರಯತ್ನಗಳು ಸೂಕ್ತವಾದುವಲ್ಲ ಎಂದು ಶ್ರೀಗಳು ಹೇಳಿದ್ದಾರೆ.
ಶ್ರೀ ಧರ್ಮಸ್ಥಳ ಕ್ಷೇತ್ರ ಕರ್ನಾಟಕ ಮಾತ್ರವಲ್ಲದೇ ಇಡೀ ಭಾರತದ, ಜಗತ್ತಿನ ಅನೇಕ ಭಾಗಗಳ ಪರಂಪರಾಗತ ಸಹಬಾಳ್ವೆಗೆ ದ್ಯೋತಕ. ಅಲ್ಲಿ ಶಿವ ದೇವಾಲಯದಲ್ಲಿ ಪೂಜಿಸುವ ಅರ್ಚಕರು ವಿಷ್ಣುವನ್ನೇ ಪರಮ ದೈವವೆಂದು ನಂಬುವ ಮಾಧ್ವ ಸಂಪ್ರದಾಯದವರು. ಉಸ್ತುವಾರಿ ನೋಡಿಕೊಳ್ಳುತ್ತಿರುವವರು ಶ್ರಮಣ ಧರ್ಮದ ಜೈನ ಸಮುದಾಯದವರು. ಈ ಮೂರು ವಿಭಿನ್ನ ನಂಬಿಕೆಗಳು ಒಗ್ಗೂಡಿರುವ ಶ್ರೀಕ್ಷೇತ್ರದ ಮೂಲ ದೈವಕ್ಕೆ ಹೆಗ್ಗಡೆ ಕುಟುಂಬದ ಪರಂಪರೆಯವರೆಲ್ಲರೂ ಶ್ರದ್ಧಾ-ಭಕ್ತಿಗಳಿಂದ ನಡೆದುಕೊಳ್ಳುತ್ತಿರುವುದು ಹಾಗೂ ಯಾವುದೇ ಚ್ಯುತಿಬಾರದಂತೆ ನಿರ್ವಹಿಸುತ್ತಿರುವುದು ಹೆಮ್ಮೆ ಪಡುವ ವಿಚಾರ. ಇದು ಭಾವೈಕ್ಯತೆಗೆ ನಿಜವಾದ ತೋರುಗನ್ನಡಿ ಎಂದು ಶಿವರಾತ್ರಿ ಶ್ರೀಗಳು ದೀರ್ಘ ಪತ್ರ ಬರೆದು ಶ್ಲಾಘಿಸಿದ್ದಾರೆ
ಧರ್ಮಸ್ಥಳದ ಧರ್ಮಾಧಿಕಾರಿಗಳಾದ ಶ್ರೀ ಡಿ. ವೀರೇಂದ್ರ ಹೆಗ್ಗಡೆಯವರು ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮೀಣಾಭಿವೃದ್ಧಿ ಯೋಜನೆ ಮೂಲಕ ಗ್ರಾಮೀಣ ಜನರ ಬದುಕನ್ನು ಸಮೃದ್ಧಗೊಳಿಸಲು ಹಮ್ಮಿಕೊಂಡಿರುವ ಕಾರ್ಯಗಳು ಅಪೂರ್ವವಾದುವು ಎಂದು ಬಣ್ಣಿಸಿದ್ದಾರೆ.
ಗ್ರಾಮಗಳಿಗೆ ಕುಡಿಯುವ ನೀರು ಮತ್ತು ಮೂಲಭೂತ ಸೌಕರ್ಯಗಳನ್ನು ಕಲ್ಪಿಸುತ್ತಿರುವರು. ದೇವಾಲಯಗಳ ಜೀಣೋದ್ಧಾರ ಕೈಗೊಳ್ಳುತ್ತಿರುವರು. ಮಂಜೂಷಾ ವಸ್ತುಸಂಗ್ರಹಾಲಯದ ಮೂಲಕ ಪ್ರಾಚೀನ ವಸ್ತುಗಳು, ಸ್ಮರಣಿಕೆಗಳು ಹಾಗೂ ಹಸ್ತಪ್ರತಿಗಳ ಸಂಗ್ರಹ ಮತ್ತು ಪ್ರದರ್ಶನ ವ್ಯವಸ್ಥೆ ಮಾಡಿರುವರು. ಸ್ತ್ರೀಶಕ್ತಿ ಸಂಘಗಳ ಮೂಲಕ ಗ್ರಾಮೀಣ ಮಹಿಳೆಯರ ಆರ್ಥಿಕ ಭದ್ರತೆಯನ್ನು ಹೆಚ್ಚಿಸಿ ಸ್ವಾಭಿಮಾನ ಮತ್ತು ಸ್ವಾವಲಂಬಿ ಬದುಕನ್ನು ಕಲ್ಪಿಸುತ್ತಿರುವರು ಇದೆಲ್ಲಾ ಅನುಕರಣೀಯ ಎಂದು ಹೇಳಿದ್ದಾರೆ.
ಇಂತಹ ಪವಿತ್ರ ಕ್ಷೇತ್ರದ ಪರಿಸರದಲ್ಲಿ ನಡೆದ ಕೆಲವು ಅಸಹಜ ಸಾವಿನ ಪ್ರಕರಣಗಳು ಗಂಭೀರವಾದುವೇ ಆಗಿರಬಹುದು. ಆದರೆ ಇಂತಹ ಪ್ರಕರಣಗಳನ್ನು ಶ್ರೀಕ್ಷೇತ್ರದೊಂದಿಗೆ ತಳಕು ಹಾಕಲು ಪ್ರಯತ್ನಿಸುವುದು ದುಡುಕಿನ ನಿರ್ಧಾರವಾಗುತ್ತದೆ. ಸತ್ಯ ಸದಾ ಮೌನಿ, ಸುಳ್ಳಿಗೆ ಆರ್ಭಟ ಜಾಸ್ತಿ.ಇದರಿಂದ ಶ್ರದ್ಧಾವಂತ ಮನಸ್ಸುಗಳಿಗೆ ಧಕ್ಕೆಯುಂಟಾಗಬಾರದು.
ಇಂಥ ಕೃತ್ಯಗಳನ್ನು ಸಮಗ್ರವಾಗಿ ತನಿಖೆ ಮಾಡಿ ಸತ್ಯವನ್ನು ಅನಾವರಣ ಮಾಡಬೇಕಾದುದು ಸರ್ಕಾರದ ಜವಾಬ್ದಾರಿಯಾಗಿದ್ದು, ಅದಕ್ಕಾಗಿ ವಿಶೇಷ ತನಿಖಾ ತಂಡವನ್ನು ರಚಿಸಿದೆ. ಶ್ರೀಕ್ಷೇತ್ರದ ಬಗ್ಗೆ ಅಪಾರ ಭಕ್ತಿ ಮತ್ತು ಶ್ರದ್ಧೆಯನ್ನು ಹೊಂದಿರುವ ಸದ್ಭಕ್ತರು ಶಾಂತಿ ಮತ್ತು ಸಂಯಮದಿಂದ ಇರಬೇಕಾದುದು ಅಗತ್ಯ.
ಹಾಗೆಯೇ ನ್ಯಾಯಕ್ಕಾಗಿ ಆಗ್ರಹಿಸುವವರು ಕೂಡ ಯಾವುದೇ ಪೂರ್ವಾಗ್ರಹಗಳಿಗೆ ಒಳಗಾಗದೆ ತನಿಖೆ ಪೂರ್ಣವಾಗುವವರೆಗೆ ಅಸಹನೆಗೊಳ್ಳದೆ ತಾಳ್ಮೆಯಿಂದ ಇರಬೇಕಾದುದೂ ಅಗತ್ಯ ಯಾವುದನ್ನೇ ಆಗಲಿ ಒಡೆಯುವುದು ಸುಲಭ, ಕಟ್ಟುವುದು ಕಷ್ಟ ಎಂಬುದನ್ನು ಎಲ್ಲರೂ ಅರಿಯಬೇಕು. ಸರ್ಕಾರ ಆದಷ್ಟು ಶೀಘ್ರವಾಗಿ ಕೂಲಂಕುಷವಾಗಿ ತನಿಖೆ ನಡೆಸಿ ಸತ್ಯವನ್ನು ಪತ್ತೆ ಹಚ್ಚಬೇಕು ಎಂದು ಶಿವರಾತ್ರಿ ದೇಶೀಕೇಂದ್ರ ಶೀಗಳು ಸಲಹೆ ನೀಡಿದ್ದಾರೆ.
ಇಂಥ ಘಟನೆಗಳಿಂದ ಶ್ರೀಕ್ಷೇತ್ರದ ಧರ್ಮಾಧಿಕಾರಿಗಳಾದ ಡಾ. ಡಿ. ವೀರೇಂದ್ರ ಹೆಗ್ಗಡೆಯವರು ಮತ್ತು ಅವರ ಕುಟುಂಬವರ್ಗದವರು, ಶ್ರೀಕ್ಷೇತ್ರದ ಸೇವಾಕರ್ತರು, ಭಕ್ತಾದಿಗಳು ಹಾಗೂ ಅಭಿಮಾನಿಗಳು ವಿಚಲಿತರಾಗದೆ, ಧೈರ್ಯ ಹಾಗೂ ಸಮಾಧಾನಗಳಿಂದಿದ್ದು, ಶ್ರೀಕ್ಷೇತ್ರದ ಎಲ್ಲ ಧಾರ್ಮಿಕ ಚಟುವಟಿಕೆಗಳನ್ನು ಎಂದಿನಂತೆ ಮುಂದುವರಿಸಿಕೊಂಡು ಹೋಗುತ್ತಿರಬೇಕು.
ಇಂತಹ ಸೂಕ್ಷ್ಮ ಸಂದರ್ಭಗಳಲ್ಲಿ ಎಲ್ಲರೂ ಅವರೊಂದಿಗೆ ಒಟ್ಟಾಗಿದ್ದು ಕ್ಷೇತ್ರದ ಸಂರಕ್ಷಣೆಗೆ ಸಹಕರಿಸಬೇಕಾದುದು ಅತ್ಯಗತ್ಯ. ಶ್ರೀ ಮಂಜುನಾಥ ಸ್ವಾಮಿಯ ಕೃಪೆಯಿಂದ ಆದಷ್ಟು ಜಾಗ್ರತೆ ಎಲ್ಲ ಕಾರ್ಮೋಡಗಳು ಕರಗಿ ಶಾಂತಿ-ನೆಮ್ಮದಿಗಳು ನೆಲೆಸುವಂತಾಗಲೆಂದು ಹಾರೈಸುತ್ತೇವೆ ಎಂದು ಶ್ರೀಗಳು ತಿಳಿಸಿದ್ದಾರೆ.