ಮಂಡ್ಯ: ಚನ್ನಪಟ್ಟಣ ಚುನಾವಣೆ ಪ್ರಚಾರದಲ್ಲಿ ಕುಮಾರಸ್ವಾಮಿ ಮತ್ತು ನಿಖಿಲ್ ಕುಮಾರಸ್ವಾಮಿ ಕಣ್ಣೀರಿನ ಬಗ್ಗೆ ಲಘುವಾಗಿ ಮಾತನಾಡಿರುವ ಕಾಂಗ್ರೆಸ್ ನಾಯಕರನ್ನು ಮಾಜಿ ಪ್ರಧಾನಿ ದೇವೇಗೌಡರು ತೀವ್ರ ತರಾಡೆಗೆ ತೆಗೆದುಕೊಂಡರು.
ನಮ್ಮ ವಂಶ ಬಡತನದಿಂದ ಕಷ್ಟಸುಖ ಅರಿತು ಮೇಲೆ ಬಂದಿದೆ. ನಮ್ಮ ವಂಶಕ್ಕೆ ಈ ಕಣ್ಣೀರು ಬಳುವಳಿಯಾಗಿ ಬಂದಿದೆ ಎಂದು ತಿರುಗೇಟು ನೀಡಿದರು.
ಪಾಂಡವಪುರದ ಚಿನಕುರುಳಿ ಗ್ರಾಮದಲ್ಲಿ ಮಾತನಾಡಿದ ಗೌಡರು,ನಮಗೆ ರೈತರ, ಬಡ ಜನರ ಕಷ್ಟ ಸುಖಗಳ ಅರಿವಿದೆ. ಅವರ ಕಷ್ಟಕ್ಕೆ ಸ್ಪಂದಿಸುವ ಹೃದಯ ಯಾರಿಗಿರುತ್ತೋ ಅವರಿಗೆ ಮಾತೃ ಹೃದಯ ಇರುತ್ತೆ. ಕಣ್ಣೀರಿನ ಬಗ್ಗೆ ವ್ಯಂಗ್ಯ ಮಾಡುವ ಜನರಿಗೆ ನಾನು ಇನ್ನೇನು ಹೇಳಲು ಬಯಸುವುದಿಲ್ಲ ಎಂದು ಹೇಳಿದರು.
ನಾನು ನನ್ನ ಕಡೆಯ ಉಸಿರು ಇರುವವರೆಗೂ ರಾಜಕೀಯದಲ್ಲಿ ಇರುತ್ತೇನೆ, ಮೊಮ್ಮಗನಿಗಾಗಿ ಈಗ ನಾನು ರಾಜಕೀಯಕ್ಕೆ ಬಂದಿಲ್ಲ. ಒಂದು ಪ್ರಾದೇಶಿಕ ಪಕ್ಷ ಉಳಿಸಲು ನಾನು ಬಂದಿದ್ದೀನಿ. ಈ ಸರ್ಕಾರ ತೆಗೆಯುವವರೆಗೂ ನಾನು ನಿದ್ದೆ ಮಾಡಲ್ಲ ಎಂದು ಕಡಕ್ಕಾಗಿ ಹೇಳಿದರು.
ಮೊಮ್ಮಗ ನಿಖಿಲ್ ಗೆದ್ದ ಮೇಲೂ ನಾನು ಮನೆಯಲ್ಲಿ ಮಲಗಲ್ಲ. ಆಮೇಲೆ ಕೂಡ ಹೋರಾಡಿ ಪಕ್ಷ ಕಟ್ಟುತ್ತೇನೆ ಎಂದು ತಿಳಿಸಿದರು
ಡಿ.ಕೆ ಶಿವಕುಮಾರ್ ಅವರು ಕಣ್ಣೀರು ಹಾಕಿರೋದು ಯಾವತ್ತಾದರೂ ನೋಡಿದ್ದೀರಾ,ಕೊತ್ವಾಲ್ ರಾಮಚಂದ್ರನಿಂದ 100 ರೂಪಾಯಿಗೆ ಕೆಲಸ ಶುರು ಮಾಡಿದ್ದು ಈ ಡಿಕೆಶಿ ಅದನ್ನು ನೆನಪಿಸಿಕೊಳ್ಳಲಿ ಎಂದು ಹೇಳಿದರು.
ಜವಾಹರ ಲಾಲ್ ನೆಹರು, ಇಂದಿರಾ ಗಾಂಧಿ ಅಂತಹವರು ಕಾಂಗ್ರೆಸ್ ಅಧ್ಯಕ್ಷರಾಗಿದ್ದರು. ಅಂತಹ ಪಕ್ಷದ ಅಧ್ಯಕ್ಷರಾಗಿರುವ ಡಿ.ಕೆ ಯಾವತ್ತಾದರೂ ಕಣ್ಣೀರು ಹಾಕಿದ್ದಾರಾ ಎಂದು ಪ್ರಶ್ನಿಸಿದರು.
ದೇವೇಗೌಡರು, ಕುಮಾರಸ್ವಾಮಿ, ನಿಖಿಲ್ ಕುಮಾರಸ್ವಾಮಿನೂ ಕಣ್ಣೀರು ಹಾಕಿದ್ದಾರೆ. ದೇಶಕ್ಕೆ ಅನ್ನ ಕೊಡುವ ರೈತನಿಗೆ ನೋವಾದಾಗ ಹೃದಯ ಮರುಗುತ್ತದೆ. ಅಂತವರಿಗೆ ಕಣ್ಣೀರು ಬರುತ್ತದೆ. ನನ್ನ ಮೊಮ್ಮಗ ಕಣ್ಣೀರು ಹಾಕಿದರ ಬಗ್ಗೆ ಮಾತಾಡುತ್ತಾರೆ. ನಮ್ಮ ವಂಶವೇ ಕಣ್ಣೀರು ಹಾಕುತ್ತದೆ. ನಮ್ಮ ಅಪ್ಪನಿಂದಲೇ ನಮಗೆ ಕಣ್ಣೀರು ಹಾಕೋದು ಬಂದಿದೆ. ಬಡತನವನ್ನು ನಾವು ಅನುಭವಿಸಿದ್ದೇವೆ. ಬಡವರ ಬಗ್ಗೆ ನಮಗೆ ಬೇಗೆ, ನೋವು ಇದೆ ಎಂದರು.
ಡಿಸಿಎಂ ಅವರು ಚನ್ನಪಟ್ಟಣದಲ್ಲಿ 6 ತಿಂಗಳು ಪ್ರವಾಸ ಮಾಡಿದರು. ಅವರೇ ಪಾರ್ಟಿ ಅಧ್ಯಕ್ಷರು, ಅವರೇ ಬಿ ಫಾರಂ ಕೊಡೋದು. ಕನಕಪುರದ ಎಂಎಲ್ಎ, ಮಂತ್ರಿಯಾದವರು ನಾನೇ ನಿಲ್ತೀನಿ ಎಂದಿದ್ದರು. ಅವರ ತಲೆಯಲ್ಲಿ ಏನೇನೂ ಇದ್ಯೋ. ಹೆಚ್ಡಿಕೆ ವರ್ಸಸ್ ಡಿಕೆ ಅಂತ ದಿನ ಚರ್ಚೆಯಾಗ್ತಿದೆ. ರಾಮನಗರವನ್ನು ಜಿಲ್ಲೆ ಮಾಡಿದ್ದು ಕುಮಾರಸ್ವಾಮಿ. ರಾಮನಗರವನ್ನು ಬೆಂಗಳೂರಿಗೆ ಸೇರಿಸ್ತೀನಿ, ಜನರಿಗೆ ಅನುಕೂಲ ಆಗುತ್ತೆ ಎನ್ನುತ್ತಿದ್ದಾರೆ. ಅವರು ರಾಮನಗರವನ್ನು ಉದ್ಧಾರ ಮಾಡುತ್ತಾರಂತೆ ಎಂದು ದೊಡ್ಡಗೌಡರು ಟೀಕಿಸಿದರು.
ವಾಲ್ಮೀಕಿ ಸಮಾಜದ 80 ಕೋಟಿ ತೆಗೆದುಕೊಂಡು ತೆಲಂಗಾಣ ಎಲೆಕ್ಷನ್ ಗೆ ಖರ್ಚು ಮಾಡಿದರು. ಬಡಬಗ್ಗರ ಹಣವನ್ನು ರಾಜಕೀಯಕ್ಕೆ ಬಳಕೆ ಮಾಡಿಕೊಂಡಿದ್ದಾರೆ. ನನಗೆ 92 ವರ್ಷ, ನಿಖಿಲ್ ಗೆದ್ದ ಬಳಿಕ ಮಲಗಲ್ಲ. ಈ ಸರ್ಕಾರವನ್ನು ತೆಗೆಯುವವರೆಗೂ ಮಲಗಲ್ಲ.
ಮಾಜಿ ಸಚಿವ ಸಿ.ಎಸ್.ಪುಟ್ಟರಾಜು, ಮಾಜಿ ಸಂಸದ ಕುಪೇಂದ್ರ ರೆಡ್ಡಿ, ಶಾಸಕ ಮಂಜುನಾಥ್, ಚಿಕ್ಕ ಸೋಮಣ್ಣ ಮತ್ತಿತರರು ಹಾಜರಿದ್ದರು.