ಬೆಂಗಳೂರು: ಸರ್ಕಾರ ಆರೋಗ್ಯ ಮತ್ತು ಶಿಕ್ಷಣ ಕ್ಷೇತ್ರಕ್ಕೆ ಹೆಚ್ಚಿನ ಆದ್ಯತೆ ನೀಡದಿದ್ದಲ್ಲಿ ಯಾವುದೇ ಕಾರಣಕ್ಕೂ 2047 ಇರಲಿ 2147ರವರೆಗೂ ವಿಕಸಿತ ಭಾರತ ನಿರ್ಮಾಣ ಸಾಧ್ಯವಿಲ್ಲ ಎಂದು ದೆಹಲಿ ಮಾಡೆಲ್ ಕೃತಿಯ ಲೇಖಕ ಜಾಸ್ಮಿನ್ ಶಾ ತಿಳಿಸಿದರು.
ನಗರದ ಬೆಂಗಳೂರು ಅಂತರರಾಷ್ಟ್ರೀಯ ಕೇಂದ್ರದಲ್ಲಿ ಇಂದು ಸಂಜೆ ದೆಹಲಿ ಮಾಡೆಲ್ ಪುಸ್ತಕವನ್ನು ಲೋಕಾರ್ಪಣೆಗೊಳಿಸಿದ ಸಂದರ್ಭದಲ್ಲಿ ಪುಸ್ತಕದ ಲೇಖಕರೂ ಹಾಗೂ ದೆಹಲಿ ಅಭಿವೃದ್ಧಿ ಕಮಿಷನ್ ಮಾಜಿ ಉಪಾಧ್ಯಕ್ಷರಾದ ಜಾಸ್ಮಿನ್ ಶಾ ಮಾತನಾಡಿದರು.

2015 ರಿಂದ 2023ರ ವರೆಗೆ ದೆಹಲಿಯಲ್ಲಿ ಶಿಕ್ಷಣ ,ಆರೋಗ್ಯ, ವಿದ್ಯುತ್, ನೀರು, ಸಂಚಾರ, ಪರಿಸರ ಇನ್ನು ಮುಂತಾದ 60 ಕ್ಷೇತ್ರಗಳಲ್ಲಿ ಆಮ್ ಆದ್ಮಿ ಪಕ್ಷದ ಸರ್ಕಾರ ಮಾಡಿರುವ ಆಮೂಲಾಗ್ರ ಬದಲಾವಣೆಗಳಲ್ಲಿ ನನ್ನ ಪಾತ್ರ ಸಹ ನೇರವಾಗಿ ಇದ್ದುದರಿಂದ ಈ ದೆಹಲಿ ಮಾಡೆಲ್ ಪುಸ್ತಕವನ್ನು ಬರೆಯಲು ಸಾಧ್ಯವಾಯಿತು ಎಂದು ಹೇಳಿದರು.
ವ್ಯವಸ್ಥೆಯ ಬದಲಾವಣೆಗಾಗಿ ಮಾಡಿರುವ ಅನೇಕ ಸುಧಾರಣೆಗಳನ್ನು ಪ್ರಾಮಾಣಿಕ ಹಾದಿಯಲ್ಲಿ ರಚನಾತ್ಮಕವಾಗಿ ಟೀಕಿಸದೆ ವಿರೋಧಪಕ್ಷಗಳು ಲೇವಡಿ ಸಂಸ್ಕೃತಿಯೆಂದು ಅಪಪ್ರಚಾರ ಮಾಡುತ್ತಿರುವುದು ರಾಷ್ಟ್ರಕ್ಕೆ ಶೋಭೆ ತರುವುದಿಲ್ಲ ಎಂದು ಬೇಸರಪಟ್ಟರು.
ಇಂದು ದೇಶದ ಸರ್ಕಾರಿ ಶಾಲೆಗಳಲ್ಲಿ ಫೇಲಾದ ವಿದ್ಯಾರ್ಥಿಗಳು ಮಾತ್ರ ಭರ್ತಿಯಾಗುತ್ತಾರೆ ಎನ್ನುವ ಸಂದರ್ಭದಲ್ಲಿ ದೆಹಲಿಯ ರಾಜ್ಯದಲ್ಲಿ ಪ್ರತಿ ವರ್ಷ ಎರಡುವರೆ ಲಕ್ಷಕ್ಕೂ ಹೆಚ್ಚು ವಿದ್ಯಾರ್ಥಿಗಳು ಖಾಸಗಿ ಶಾಲೆಯಿಂದ ಸರ್ಕಾರಿ ಶಾಲೆಗೆ ದಾಖಲಾಗುತ್ತಿದ್ದಾರೆ. 25,000ಕ್ಕೂ ಹೆಚ್ಚು ತರಗತಿಗಳು ಅತ್ಯಾಧುನಿಕವಾಗಿ ಅಂತರರಾಷ್ಟ್ರೀಯ ಗುಣಮಟ್ಟದ ಶಿಕ್ಷಣವನ್ನು ದೆಹಲಿಯ ಮಕ್ಕಳಿಗೆ ನೀಡಲಾಗುತ್ತಿದೆ. ಕಳೆದ ಹತ್ತು ವರ್ಷದಿಂದ ಶೇ 97 ರಷ್ಟು ಸರ್ಕಾರಿ ಶಾಲೆಯ ವಿದ್ಯಾರ್ಥಿಗಳು ತೇರ್ಗಡೆಯಾಗುತ್ತಿದ್ದಾರೆ ಇದು ಹೆಮ್ಮೆಯ ವಿಚಾರ ಎಂದು ಜಾಸ್ಮಿನ್ ಶಾ ತಿಳಿಸಿದರು.
ಭಾರತದ ಇತರೆ ರಾಜ್ಯಗಳಿಗೆ ಹೋಲಿಸಿದರೆ ದೆಹಲಿಯಲ್ಲಿ ವಿದ್ಯುತ್ ಬೆಲೆ ಅತ್ಯಂತ ಕಡಿಮೆ ದರದಲ್ಲಿ ಸಿಗುತ್ತಿದೆ, ಕಳೆದ ಹತ್ತು ವರ್ಷಗಳಿಂದ ಯಾವುದೇ ಹೆಚ್ಚುವರಿ ಮಾಡಿಲ್ಲದಿರುವುದು ದೆಹಲಿ ಮಾಡೆಲ್ ನ ವಿಶೇಷ. ಇದೇ ರೀತಿ ಮೂಲಭೂತ ಸೌಕರ್ಯ, ಪರಿಸರ , ಸಂಚಾರ ಇನ್ನಿತರ ಕ್ಷೇತ್ರಗಳಲ್ಲಿ ಗಣನೀಯ ಸುಧಾರಣೆ ಮಾಡಲಾಗಿದೆ ಎಂದು ಹೇಳಿದರು.
ಬೆಂಗಳೂರಿಗೂ ನನಗೂ ಅವಿನಾಭಾವ ಸಂಬಂಧವಿದೆ, ಐಟಿ ಕ್ಷೇತ್ರದಲ್ಲಿ ದುಡಿಯುತ್ತಿದ್ದಾಗ ಪ್ರತಿ ದಿವಸ 5 ಗಂಟೆಗಳ ಕಾಲ ಟ್ರಾಫಿಕ್ ಜಾಮ್ ನಲ್ಲಿ ಇದ್ದದ್ದು ನನಗೆ ಈ ರೀತಿಯ ಸಾಧನೆಗೆ ಪ್ರೇರೇಪಣೆ ನೀಡಿದೆ ಎಂದು ಜಾಸ್ಮಿನ್ ಶಾ ಸ್ಮರಿಸಿದರು.

ಪುಸ್ತಕ ವನ್ನು ಆಮ್ ಆದ್ಮಿ ಪಕ್ಷದ ರಾಜ್ಯಾಧ್ಯಕ್ಷ ಡಾ. ಮುಖ್ಯಮಂತ್ರಿ ಚಂದ್ರು ಹಾಗೂ ರಾಷ್ಟ್ರೀಯ ಜಂಟಿ ಕಾರ್ಯದರ್ಶಿ ಪೃಥ್ವಿ ರೆಡ್ಡಿ ಬಿಡುಗಡೆ ಮಾಡಿದರು.

ಪತ್ರಕರ್ತೆ ಧನ್ಯ ರಾಜೇಂದ್ರನ್ ಕಾರ್ಯಕ್ರಮ ನಿರೂಪಣೆ ಮಾಡಿದರು. ಸಂವಾದ ಕಾರ್ಯಕ್ರಮದಲ್ಲಿ ಅನೇಕ ಸಾಮಾಜಿಕ ಚಿಂತಕರು ಭಾಗವಹಿಸಿದ್ದರು.
