ಕನ್ನಡ ಚಿತ್ರರಂಗದಲ್ಲಿ ಹೊಸ ಮುಖದ ಸಾಕಷ್ಟು ಪ್ರತಿಭಾವಂತ ಕಲಾವಿದರಿದ್ದಾರೆ:ಡಾಲಿ

Spread the love

ಮೈಸೂರು: ಕನ್ನಡ ಚಿತ್ರರಂಗದಲ್ಲಿ ಹೊಸ ಮುಖದ ಸಾಕಷ್ಟು ಪ್ರತಿಭಾವಂತ ಕಲಾವಿದರಿದ್ದರೂ ಸೂಕ್ತ ವೇದಿಕೆ ಸಿಕ್ಕಿರುವುದಿಲ್ಲ‌ ಎಂದು ಖ್ಯಾತ ನಟ ಡಾಲಿ ಧನಂಜಯ ಅಭಿಪ್ರಾಯ ಪಟ್ಟಿದ್ದಾರೆ.

ಮೈಸೂರು ಜೆಕೆ ಮೈದಾನದಲ್ಲಿ ಮೇಕ್ ಸೊಸೈಟಿ ಸ್ಮೈಲ್ ಫೌಂಡೇಶನ್ ವತಿಯಿಂದ
ನಡೆದ 4 ನೇ ವರ್ಷದ ಮೈಸೂರು ಅಂತರಾಷ್ಟ್ರೀಯ ಫಿಲ್ಮ್ ಫೆಸ್ಟಿವಲ್ ಸಿನಿ ಸಂತೆ ಸಮಾರೋಪದಲ್ಲಿ ಡಾಲಿ ಅವರು ಪ್ರಶಸ್ತಿ ಪ್ರದಾನ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.

ಹೊಸ ಪ್ರಯೋಗಗಳು, ನಿರ್ದೇಶನ, ಸಂಗೀತ ಸಾಹಿತ್ಯ ಇವೆಲ್ಲದಕ್ಕೂ ಮನ್ನಣೆ ನೀಡಲು ಸಿನಿ ಸಂತೆ‌ ತರಹದ ವಸ್ತುಪ್ರದರ್ಶನ ಪ್ರಶಸ್ತಿ ಪ್ರದಾನ ಆಯೋಜನೆ ಉತ್ತಮ ಬೆಳವಣಿಗೆ, ಕಲಾವಿದರಾಗಿ ನಾವು ಬೆಳೆಯುವ ಜೊತೆಯಲ್ಲೆ ಹೊಸ ಮುಖದ ಕಲಾವಿದರನ್ನು ಕರೆ ತಂದು ವೇದಿಕೆ ಕಲ್ಪಿಸಿ ಪರಿಚಯಿಸಿ ಪ್ರೋತ್ಸಾಹಿಸಿದರೆ ಕಲಾವಿದನಲ್ಲಿರುವ ಕಲೆ ಸಾರ್ಥಕವಾಗುತ್ತದೆ ಎಂದು ಹೇಳಿದರು.

ನಂತರ ಕರ್ನಾಟಕ ವಸ್ತುಪ್ರದರ್ಶನ ಪ್ರಾಧಿಕಾರದ ಅಧ್ಯಕ್ಷ ಅಯೂಬ್ ಖಾನ್ ಅವರು ಮಾತನಾಡಿ ಮೈಸೂರು ಕಲಾವಿದರ ತವರೂರು.ನಾಟಕ, ನೃತ್ಯ, ಗಾಯನ, ರಂಗಭೂಮಿ, ಸಿನಿಮಾ ಕ್ಷೇತ್ರದಲ್ಲಿ ಸಾವಿರಾರು ಕಲಾವಿದರು ಮೈಸೂರಿನ ಸಾಂಸ್ಕೃತಿಕ ಹಿರಿಮೆಯನ್ನ ಶ್ರೀಮಂತಗೊಳಿಸಿದ್ದಾರೆ ಎಂದು ಕೊಂಡಾಡಿದರು.

ನಮ್ಮ ದಸರಾ ವಸ್ತುಪ್ರದರ್ಶನ ಆವರಣದಲ್ಲಿ ಮುಂದಿನ ದಿನದಲ್ಲಿ ಬೇಸಿಗೆ ಶಿಬಿರ ಹಮ್ಮಿಕೊಂಡು ಕಲಾಸಕ್ತರಿಗಾಗಿ ತರಬೇತಿ ಶಿಬಿರವನ್ನ ಆಯೋಜಿಸಿ ಹೊಸ ಮುಖದ ಯುವ ಕಲಾವಿದರಿಗೆ ವೇದಿಕೆ ಕಲ್ಪಿಸಿಕೊಡುವ ಚಿಂತನೆಯಿದೆ ಎಂದು ತಿಳಿಸಿದರು.

ಅತ್ಯುತ್ತಮ
65ಕ್ಕೂ ಹೆಚ್ಚು ಶಾರ್ಟ್ ಮೂವೀಸ್, ಕಿರುಚಿತ್ರ ಚಿತ್ರಗಳಿಗೆ
ಪ್ರಶಸ್ತಿ ಪ್ರದಾನ ಮಾಡಲಾಯಿತು.

ಸಮಾರಂಭದಲ್ಲಿ ಮೈಸೂರು ಅಂತರಾಷ್ಟ್ರೀಯ ಚಲನಚಿತ್ರ ಉತ್ಸವದ ಆಯೋಜಕರಾದ ರಂಜಿತ ಸುಬ್ರಹ್ಮಣ್ಯ ಹಾಗೂ ಸಂಧ್ಯಾ ರಾಣಿ, ಕೆ ಎಂ ಪಿ ಕೆ ಟ್ರಸ್ಟ್ ಅಧ್ಯಕ್ಷ ವಿಕ್ರಮ ಅಯ್ಯಂಗಾರ್, ರೇಖಾ ಶ್ರೀನಿವಾಸ್, ನಿರೂಪಕರಾದ ಅಜಯ್ ಶಾಸ್ತ್ರಿ, ಕೆ ಆರ್ ಬ್ಯಾಂಕ್ ಅಧ್ಯಕ್ಷ ಬಸವರಾಜ್ ಬಸಪ್ಪ, ವಿಶೇಷ ಚೇತನ ಕ್ರೀಡಾಪಟು ಅಲೋಕ್ ಜೈನ್,ವನಮಾಲ, ಎಂ ಎನ್ ಚೇತನ್ ಗೌಡ, ಮೋಹನ್, ಶ್ರೀನಾಥ್ ಮತ್ತಿತರರು ಹಾಜರಿದ್ದರು.