ಬೆಂಗಳೂರು: ಗ್ಯಾರಂಟಿ ಹಣವನ್ನೇ ಬಿಡುಗಡೆ ಮಾಡದೇ ತಲಾದಾಯದಲ್ಲಿ ರಾಜ್ಯವೇ ಪ್ರಥಮ ಎಂದು ಹೇಳಲು ಕಾಂಗ್ರೆಸ್ ನಾಯಕರುಗಳಿಗೆ ನಾಚಿಕೆಯಾಗುವುದಿಲ್ಲವೇ ಎಂದು ಆಪ್ ರಾಜ್ಯ ಕಾರ್ಯಾಧ್ಯಕ್ಷ ಸೀತಾರಾಮ ಗುಂಡಪ್ಪ ಪ್ರಶ್ನಿಸಿದ್ದಾರೆ
ಕಳೆದ ಫೆಬ್ರವರಿ ತಿಂಗಳಿನಿಂದ ರಾಜ್ಯದ ಅನೇಕ ಜಿಲ್ಲೆಗಳಲ್ಲಿ ಲಕ್ಷಾಂತರ ಮಹಿಳೆಯರಿಗೆ ಗೃಹಲಕ್ಷಿಯ ಹಣವನ್ನೇ ಬಿಡುಗಡೆ ಮಾಡಿಲ್ಲ. ಎಲ್ಲ ಜಿಲ್ಲೆಗಳಲ್ಲಿಯೂ ಮಹಿಳೆಯರು ಸಾಕಷ್ಟು ಆಕ್ರೋಶಭರಿತರಾಗಿದ್ದಾರೆ. ಗ್ಯಾರೆಂಟಿ ಹಣವನ್ನು ರಾಜ್ಯ ಕಾಂಗ್ರೆಸ್ ಸರ್ಕಾರ ಕೇವಲ ಚುನಾವಣೆಗಳಿಗಾಗಿ, ತಮ್ಮ ನಕಲಿ ಸಾಧನ ಸಮಾವೇಶಗಳ ಸಮಯದಲ್ಲಿ ಮಹಿಳೆಯರ ಪ್ರಲೋಭನೆಗಾಗಿ ಬಿಡುಗಡೆ ಮಾಡುತ್ತಿದ್ದಾರೆ. ಇನ್ನು ಮಿಕ್ಕೆಲ್ಲಾ ಗ್ಯಾರಂಟಿಗಳು ಸಂಪೂರ್ಣ ಹಳ್ಳ ಹಿಡಿದಿವೆ ಎಂದು ಮಾಧ್ಯಮ ಹೇಳಿಕೆಯಲ್ಲಿ ಆರೋಪಿಸಿದ್ದಾರೆ.
ಆಹಾರ ಭದ್ರತಾ ಕಾಯ್ದೆಯಡಿ ಕೇಂದ್ರ ಸರ್ಕಾರವು ಕಡ್ಡಾಯವಾಗಿ ಕುಟುಂಬದ ಪ್ರತಿಯೊಬ್ಬ ಸದಸ್ಯರಿಗೂ ತಲಾ 5 ಕೆ.ಜಿ. ಅಕ್ಕಿಯನ್ನು ಅನ್ನಭಾಗ್ಯ ಎಂಬ ಹೆಸರಿನಲ್ಲಿ ಕಾಂಗ್ರೆಸ್ ರಾಜ್ಯ ಸರ್ಕಾರವು ತನ್ನ ಕಾರ್ಯಕ್ರಮದಂತೆ ಬಿಂಬಿಸಿ
ಕೊಳ್ಳುತ್ತಿರುವುದು ನಾಚಿಕೆಗೇಡಿನ ಸಂಗತಿ ಎಂದು ಅವರು ಟೀಕಿಸಿದ್ದಾರೆ.
ಗೃಹ ಜ್ಯೋತಿ ಎಂಬ ಹೆಸರಿನಲ್ಲಿ 300 ಯೂನಿಟ್ ಉಚಿತ ವಿದ್ಯುತ್ ನೀಡುತ್ತೇವೆಂದು ಸುಳ್ಳು ಹೇಳಿ ಈಗ ಸರಾಸರಿಯ ನೆಪದಲ್ಲಿ 50 ಯೂನಿಟ್ ಗಳನ್ನು ನೀಡಲು ಸಹ ಸಾಧ್ಯವಾಗುತ್ತಿಲ್ಲ,ಬೇಕಾಬಿಟ್ಟಿ ವಿದ್ಯುತ್ ಬೆಲೆ ಏರಿಸಿ ರಾಜ್ಯದ ಕೈಗಾರಿಕಗಳ ಮೇಲೆ ಹಾಗೂ ಗೃಹಶಕ್ತಿ ಬಳಕೆದಾರರ ಬಿಲ್ಲುಗಳಲ್ಲಿ ಸುಲಿಗೆ ಮಾಡುತ್ತಿದ್ದಾರೆ, ಈಗ ಪ್ರತಿಯೊಬ್ಬ ಬಳಕೆದಾರರು ಸ್ಮಾರ್ಟ್ ಮೀಟರ್ ಅಳವಡಿಸಿಕೊಳ್ಳಬೇಕೆಂಬ ಕಡ್ಡಾಯವನ್ನು ಹಾಕುವ ಮೂಲಕ ಸಿದ್ದರಾಮಯ್ಯ ಸರ್ಕಾರ ಹಗಲುದರೊಡೆಗೆ ಇಳಿದಿರುವುದು ರಾಜ್ಯದ ಜನತೆಯ ನತದೃಷ್ಟ ಪರಿಸ್ಥಿತಿಗೆ ಹಿಡಿದ ಕನ್ನಡಿಯಾಗಿದೆ ಎಂದು ಸೀತಾರಾಮ ಗುಂಡಪ್ಪ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಶಕ್ತಿ ಯೋಜನೆಯಿಂದ ಪ್ರಯಾಣಿಕರ ಹಾಗೂ ಸಾರಿಗೆ ನಿಗಮಗಳ ಪರಿಸ್ಥಿತಿ ಹೇಳ ತೀರದಾಗಿದೆ,ಯುವ ನಿಧಿ ಯೋಜನೆಯಲ್ಲಿ ಮಾಸಾಶನವನ್ನು ರಾಜ್ಯದ ಯಾವ ನಿರುದ್ಯೋಗ ಪದವೀಧರರಿಗೆ ಬಿಡುಗಡೆ ಮಾಡುತ್ತಿದ್ದಾರಾ ಎಂಬ ಮಾಹಿತಿ ಸರ್ಕಾರದಲ್ಲಿಯೇ ಇಲ್ಲದಾಗಿದೆ ಎಂದು ಅವರು ವ್ಯಂಗ್ಯ ವಾಡಿದ್ದಾರೆ.
ಬೆಂಗಳೂರು ನಗರದಲ್ಲಿ ರಿಯಲ್ ಎಸ್ಟೇಟ್ ಉದ್ಯಮ ಹಾಗೂ ಐಟಿ ಉದ್ಯಮಗಳು ಲಕ್ಷಾಂತರ ಉದ್ಯೋಗವನ್ನು ಸೃಷ್ಟಿಸಿವೆ. ರಾಜ್ಯದ ಕೈಗಾರಿಕೋದ್ಯಮಿಗಳು ರಾಜ್ಯದಲ್ಲಿ ಎಷ್ಟೇ ಸಂಕಷ್ಟಗಳು ಬಂದರೂ ಸಹ ತಮ್ಮ ಉತ್ಪಾದನೆಯ ಮೂಲಕ ತಲಾದಾಯದಲ್ಲಿ ಹೆಚ್ಚಿನ ಕೊಡುಗೆಯನ್ನು ನೀಡುತ್ತಿದ್ದಾರೆ.
ಬೆಂಗಳೂರು ನಗರವು ದೇಶದ ಅರ್ಥವ್ಯವಸ್ಥೆಯ ಹೃದಯ ಎಂಬ ಹಿರಿಮೆ ಗರಿಮೆಯನ್ನು ಈ ಮೂಲಕ ಗಳಿಸಿಕೊಂಡಿದೆ. ದೇಶಕ್ಕೆ ಅತಿ ಹೆಚ್ಚಿನ ತೆರಿಗೆ ಕೊಡುಗೆ ಬೆಂಗಳೂರು ನಗರದಿಂದ ಹೋಗುತ್ತಿದೆ. ಈ ಎಲ್ಲಾ ಕಾರಣಗಳಿಂದಾಗಿ ಮಾತ್ರ ರಾಜ್ಯವು ತಲಾದಾಯದಲ್ಲಿ ದೇಶದಲ್ಲಿಯೇ ಪ್ರಪ್ರಥಮ ಸ್ಥಾನದಲ್ಲಿ ಇದೆ ಎಂಬುದನ್ನು ಅರಿಯಲಿ.
ಆದರೆ ಕಾಂಗ್ರೆಸ್ ಪಕ್ಷದ ನಾಯಕರು ತಮ್ಮ ಗ್ಯಾರಂಟಿಗಳಿಂದಲೇ ರಾಜ್ಯದ ತಲಾದಾಯ ವೃದ್ಧಿಯಾಗಿದೆ ಎಂಬ ಹಸಿ ಹಸಿ ಸುಳ್ಳುಗಳನ್ನು ಹರಡುವ ಮೂಲಕ ಜನತೆಯನ್ನು ದಾರಿತಪ್ಪಿಸುವ ನೀಚ ಕೆಲಸಗಳನ್ನು ನಿಲ್ಲಿಸಬೇಕು ಎಂದು
ಸೀತಾರಾಮ ಗುಂಡಪ್ಪ ಒತ್ತಾಯಿಸಿದ್ದಾರೆ.