ಬಜೆಟ್ ಬಗ್ಗೆ ಬಿಜೆಪಿ ಅಪಪ್ರಚಾರ:ಡಾ.ಪುಷ್ಪಾ ಅಮರನಾಥ್

Spread the love

ಮೈಸೂರು: ಸಿಎಂ ಸಿದ್ದರಾಮಯ್ಯ ಅವರು ಎಲ್ಲಾ ವರ್ಗಗಳಿಗೂ ಅನುಕೂಲವಾಗುವಂತೆ ಸಮತೋಲಿತ ಬಜೆಟ್ ಮಂಡನೆ ಮಾಡಿದ್ದಾರೆ ಎಂದು ಕರ್ನಾಟಕ ರಾಜ್ಯ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿಯ ಉಪಾಧ್ಯಕ್ಷೆ ಡಾ. ಪುಷ್ಪಾ ಅಮರನಾಥ್ ತಿಳಿಸಿದರು.

ಜಿಲ್ಲಾ ಪಂಚಾಯತ್ ಡಿ.ದೇವರಾಜ ಅರಸು ಸಭಾಂಗಣದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಸಿಎಂ ಮಂಡಿಸಿದ ಬಜೆಟ್ ಅನ್ನು ಬಿಜೆಪಿ ನಾಯಕರು ಇದು ಹಲಾಲ್ ಬಜೆಟ್, ಮುಸ್ಲಿಂ ಬಜೆಟ್ ಎಂದು ಟೀಕಿಸುತ್ತಿದ್ದಾರೆ. ಅಲ್ಪಸಂಖ್ಯಾತರು ಎಂದರೆ ಕೇವಲ ಮುಸ್ಲಿಮರು ಮಾತ್ರವಲ್ಲ. ಜೈನ, ಸಿಖ್, ಬೌದ್ಧ ಸೇರಿದಂತೆ ಇನ್ನಿತರ ಅಲ್ಪಸಂಖ್ಯಾತ ಸಮುದಾಯಗಳು ಸೇರಿವೆ. ಆದರೂ ಬಿಜೆಪಿ ನಾಯಕರು ಅಪಪ್ರಚಾರ ಮಾಡುತ್ತಿದ್ದಾರೆ. ಸಿದ್ದರಾಮಯ್ಯನವರ ಜನಪರ ಬಜೆಟ್ ಸಹಿಸಲಾರದೇ ಹೊಟ್ಟೆಕಿಚ್ಚಿನಿಂದ ಅಪಪ್ರಚಾರ ಮಾಡುತ್ತಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಗ್ಯಾರಂಟಿ ಯೋಜನೆಗಳ ಅನುಷ್ಠಾನಕ್ಕಾಗಿ ಸಮಿತಿ ರಚಿಸಿರುವುದಕ್ಕೆ ವಿಪಕ್ಷಗಳ ಆಕ್ಷೇಪ, ಕೆಲವು ಶಾಸಕರಿಂದ ತೀವ್ರ ವಿರೋಧ ವಿಚಾರ ಕುರಿತು ಪ್ರತಿಕ್ರಿಯಿಸಿದ ಡಾ.ಪುಷ್ಮಾಅವರು, ಸರ್ಕಾರದ ಯೋಜನೆಗಳನ್ನು ಜನರಿಗೆ ತಲುಪಿಸಲು ಕೇವಲ ಅಧಿಕಾರಿಗಳಿಂದ ಮಾತ್ರ ಸಾಧ್ಯವಿಲ್ಲ. ಹಾಗಾಗಿ ಸಮಿತಿಗಳ ಅವಶ್ಯಕತೆ ಇದೆ‌ ಎಂದು ‌ಹೇಳಿದರು.

ಇಡೀ ರಾಜ್ಯಕ್ಕೆ ಕೇವಲ ಹದಿನೈದು ಜನರ ಸಮಿತಿಯನ್ನು ಮಾತ್ರ ರಚನೆ ಮಾಡಲಾಗಿದೆ. ನಮಗೇನು ಸರ್ಕಾರ ಸಂಬಳ ಕೊಡುತ್ತಿಲ್ಲ. ಕೇವಲ ಗೌರವ ಧನ ಕೊಡುತ್ತಿದ್ದು, ಬೇರೆ ಯಾವುದೇ ಸವಲತ್ತುಗಳನ್ನು ಕೊಡುತ್ತಿಲ್ಲ. ಗ್ಯಾರಂಟಿ ಸಮಿತಿ ರಚನೆಯಿಂದ ಶಾಸಕರ ಅಧಿಕಾರ ಮೊಟಕಾಗಿಲ್ಲ ಎಂದು ಡಾ ಪುಷ್ಪ ಅಮರನಾಥ್ ತಿಳಿಸಿದರು.