ಚನ್ನಪಟ್ಟಣ: ನನ್ನ ಕೊನೆ ಉಸಿರು ಎಳೆಯುವ ಮುನ್ನ ಮೇಕೆದಾಟು ಯೋಜನೆಗೆ ಪ್ರಧಾನಿ ಮೋದಿ ಅವರಿಂದ ಒಪ್ಪಿಗೆ ಕೊಡಿಸುತ್ತೇನೆ ಎಂದು ಮಾಜಿ ಪ್ರಧಾನಿ ಹೆಚ್.ಡಿ.ದೇವೇಗೌಡರು ಹೇಳಿದರು.
ಹೊಡಿಕೆಹೊಸಹಳ್ಳಿ ಗ್ರಾಮದಲ್ಲಿ ಎನ್ ಡಿಎ ಅಭ್ಯರ್ಥಿ ನಿಖಿಲ್ ಕುಮಾರಸ್ವಾಮಿ ಪರವಾಗಿ ಮತಯಾಚನೆ ಮಾಡುವ ವೇಳೆ ಮಾತನಾಡಿದ ದೇವೇಗೌಡರು,ಮೇಕೆದಾಟು ಯೋಜನೆ ಆಗುತ್ತೆ ಎಂದರೆ ಅದು ಪ್ರಧಾನಿ ನರೇಂದ್ರ ಮೋದಿ ಅವರಿಂದ ಮಾತ್ರ ಸಾಧ್ಯ. ಇದರಲ್ಲಿ ಎರಡು ಮಾತಿಲ್ಲ, ಆದರೆ ತಮಿಳುನಾಡಿನವರು ನಮ್ಮ ಕುತ್ತಿಗೆ ಹಿಡಿದಿದ್ದಾರೆ ಎಂದು ಬೇಸರ ವ್ಯಕ್ತಪಡಿಸಿದರು.
ನಾನು ಇಗ್ಗಲೂರು ಆಣೆಕಟ್ಟು ಕಟ್ಟಿದ್ದು ದೊಡ್ಡ ವಿಷಯ ಅಲ್ಲ. ನಾನು ಪ್ರಧಾನಿ ಆಗಿದ್ದು ದೈವದ ಆಟ. ಮೇಕೆದಾಟು ಯೋಜನೆ ಬಗ್ಗೆ ನಾನು ಮೋದಿ ಅವರಿಗೆ ವಾಸ್ತವ ಸ್ಥಿತಿಯನ್ನು ಮನವರಿಕೆ ಮಾಡಿಕೊಡುತ್ತೇನೆ. ಈಗಾಗಲೇ ಹಲವಾರು ಸಲ ಅವರು ನನ್ನ ಮನವಿ ಆಲಿಸಿದ್ದಾರೆ ಎಂದು ತಿಳಿಸಿದರು.
ಆರು ತಿಂಗಳಿಂದ ಕಾಂಗ್ರೆಸ್ ಅಧ್ಯಕ್ಷ ಡಿ.ಕೆ ಶಿವಕುಮಾರ್ ಅವರು ನಾನೇ ಅಭ್ಯರ್ಥಿ ಅಂದರು. ರಾಜ್ಯದ ಮಾನ ಮಾರ್ಯಾದೆಯನ್ನು ತೀರಾ ಕೆಳಮಟ್ಟಕ್ಕೆ ತೆಗೆದುಕೊಂಡು ಹೋದರು ಎಂದು ಕಿಡಿಕಾರಿದರು.
ಆಲಮಟ್ಟಿ, ಹಾರಂಗಿ, ಹೇಮಾವತಿ, ಯಗಚಿ ಅಣೆಕಟ್ಟು ಕಟ್ಟಿದವರು ಯಾರು, ಬರೀ ಇಗ್ಗಲೂರು ಡ್ಯಾಮ್ ಅಷ್ಟೇ ಅಲ್ಲ. ನಿಮ್ಮನ್ನು ನಾನು ನೋಡುತ್ತಿದ್ದರೆ 92 ವರ್ಷದ ನನಗೆ 18ರ ಶಕ್ತಿ ಬರುತ್ತದೆ. ಇನ್ನೂ ನಾಲ್ಕಾರು ವರ್ಷ ಬದುಕಿರುತ್ತೇನೆ ಎಂದರು ದೇವೇಗೌಡರು ನುಡಿದರು.
ಹಿಮಾಲಯ ಪರ್ವತಕ್ಕೂ ಇಲ್ಲಿನ ಸಣ್ಣ ಗುಡ್ಡಕ್ಕೂ ಎಲ್ಲಿಯ ಹೊಲಿಕೆ. ಒಂದು ಶಾಲೆ ಮಾಡಲು ಜಾಗ ಕೇಳಿದರೆ ದುಡ್ಡು ದುಡ್ಡು ಅಂತಾರೆ ಎಲ್ಲಿಯ ಡಿಕೆ,ಎಲ್ಲಿಯ ಹೆಚ್ ಡಿ ಕೆ
ಎಂದು ಗುಡುಗಿದರು.
ನಿಖಿಲ್ ನ ನಾನೇ ರಾಜ್ಯ ನಾಯಕನನ್ನಾಗಿ ಮಾಡುತ್ತೇನೆ ತೋಟದಲ್ಲಿ ಕುಳಿತು ಹೇಳಿಕೊಟ್ಟು ರಾಜ್ಯ ನಾಯಕನನ್ನಾಗಿ ಮಾಡುವ ಕಾಲ ಬರಲಿದೆ. ಅವನನ್ನು ದೊಡ್ಡ ನಾಯಕನನ್ನಾಗಿ ರೂಪಿಸುತ್ತೇನೆ ಎಂದು ದೇವೆಗೌಡರು ಪ್ರಕಟಿಸಿದರು.