ಚನ್ನಪಟ್ಟಣ: ಸಿಡಿ ಬ್ರದರುಗಳಿಗೆ ಸಿಡಿ, ವಿಡಿಯೋ, ಆಡಿಯೋ ಮಾಡುವುದೇ ಕೆಲಸ ಎಂದು ಕೇಂದ್ರ ಸಚಿವ ಹೆಚ್.ಡಿ.ಕುಮಾರಸ್ವಾಮಿ ಡಿ.ಕೆ.ಸಹೋದರರ ಬಗ್ಗೆ ವ್ಯಂಗ್ಯವಾಡಿದ್ದಾರೆ.
ಹಾಸನದಲ್ಲಿ ಇಂಥದೇ ಷಡ್ಯಂತ್ರ ಮಾಡಿದರು. ಚನ್ನಪಟ್ಟಣದಲ್ಲಿಯೂ ಅದನ್ನೇ ಮಾಡುತ್ತಿದ್ದಾರೆ ಎಂದು ಅವರು ಆಕ್ರೋಶ ವ್ಯಕ್ತಪಡಿಸಿದರು.
ಚನ್ನಪಟ್ಟಣದ ಸೋಗಾಲಪಾಳ್ಯದಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಕುಮಾರಸ್ವಾಮಿ, ನಾನು ವಿಧಾನಸೌಧದಲ್ಲಿ ಮಾತಾಡಿರುವ ಆಡಿಯೋವನ್ನು ಅವರು ಎಲ್ಲಾ ಸಭೆಗಳಲ್ಲಿ ಕೇಳಿಸುತ್ತಿದ್ದಾರೆ. ಅವರಿಗೆ ಎಷ್ಟು ಹತಾಶೆ, ಸೋಲಿನ ಭೀತಿ ಕಾಡುತ್ತಿದೆ ಎನ್ನುವುದಕ್ಕೆ ಇದೇ ಸಾಕ್ಷಿ. ಕೇವಲ ಒಂದು ತುಣುಕು ಕತ್ತರಿಸಿ ಬಿಡುವುದಲ್ಲ, ಪೂರ್ಣ ಆಡಿಯೋ ಬಿಡಲಿ, ಆಗ ಅವರ ಮರ್ಯಾದೆ ಏನು ಎಂಬುದು ಗೊತ್ತಾಗುತ್ತದೆ ಎಂದು ಟಾಂಗ್ ಕೊಟ್ಟರು.
ಸಿಡಿ ಆಡಿಯೋ, ವಿಡಿಯೋ ಬಿಡುವುದಲ್ಲಿ ಡಿಕೆ ಸಹೋದರರು ನಿಪುಣರು, ಅವರು ಇಂಥದ್ದೇ ದಂಧೆ ಮಾಡಿಕೊಂಡು ಬರುತ್ತಿದ್ದಾರೆ,ಆ ಆಡಿಯೋ ಹಳೆಯದು. ನಾನು ವಿಧಾನಸಭೆಯಲ್ಲಿ ಮಾತನಾಡಿದ್ದು. ಒಂದು ವಾರದಿಂದ ಅದನ್ನು ಕತ್ತರಿಸಿ ಹಂಚುತ್ತಿದ್ದಾರೆ. ವಾಸ್ತವ ಪರಿಸ್ಥಿತಿ ಬಗ್ಗೆ ಮಾತನಾಡಿದ್ದೆ. ಪಕ್ಕದ ಮದ್ದೂರು ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ವಿಚಾರವಾಗಿ ಹೇಳಿದ್ದ ಆಡಿಯೋ ಅದು. ಇಸ್ಪೀಟ್, ಕ್ರಿಕೆಟ್ ಬೆಟ್ಟಿಂಗ್ ದಂಧೆ ನಡೆಸುವವರು ಐದು ವರ್ಷ ಅವರು ಕೆಲಸ ಮಾಡಲಿ. ನಾನು ಎರಡು ದಿನದಲ್ಲಿ ಬದಲಾವಣೆ ಮಾಡುತ್ತೇನೆ ಎಂದು ನಾನು ಹೇಳಿದ್ದೆ. ಅದನ್ನೇ ಇವರು ಚನ್ನಪಟ್ಟಣಕ್ಕೆ ತಂದು ಹೇಳುತ್ತಿದ್ದಾರೆ ಎಂದು ಟೀಕಿಸಿದರು.
ಇವರಂತೆ ನಾನು ಅಕ್ರಮ ಮಾಡಿ ಚುನಾವಣೆ ಮಾಡುವುದಿಲ್ಲ. ನನ್ನ ಚುನಾವಣೆಯನ್ನು ಕಾರ್ಯಕರ್ತರೇ ಮಾಡುತ್ತಾರೆ, ಅವರೇ ಮತ ಕೇಳುತ್ತಾರೆ. ನಾನು ಆ ರೀತಿ ಮಾತನಾಡುವ ಅವಶ್ಯಕತೆ ಇಲ್ಲ. ಇಂದಿನ ರಾಜಕೀಯ ಪರಿಸ್ಥಿತಿಯಲ್ಲಿ ಉತ್ತಮ ಕೆಲಸ ಮಾಡಿದವರು ಇಂತವರಿಂದ ನಗಣ್ಯ ಆಗುತ್ತಾರೆ ಎನ್ನುವ ಹಿನ್ನೆಲೆಯಲ್ಲಿ ಹೇಳಿದ್ದೆ. ಆ ಆಡಿಯೋವನ್ನು ಪೂರ್ತಿ ಹಾಕಿ ಕೇಳಿಸಿದರೆ ಇವರ ಬಂಡವಾಳ, ಯೋಗ್ಯತೆ ಗೊತ್ತಾಗುತ್ತದೆ ಎಂದು ತಿರುಗೇಟು ನೀಡಿದರು.