ಚಿಕ್ಕಲ್ಲೂರು ಶ್ರೀ ಸಿದ್ದಪ್ಪಾಜಿ ಜಾತ್ರೆ: ಮೂಲ‌ ಸೌಕರ್ಯ ಕಲ್ಪಿಸಲು ಮಂಜುನಾಥ್ ಆದೇಶ

(ವರದಿ:ಸಿದ್ದರಾಜು,ಕೊಳ್ಳೇಗಾಲ)

ಕೊಳ್ಳೇಗಾಲ: ಜಿಲ್ಲೆಯ ಪ್ರಮುಖ ಯಾತ್ರಾ ಸ್ಥಳವಾಗಿರುವ ಚಿಕ್ಕಲ್ಲೂರಿನಲ್ಲಿ ಮೂಲಭೂತ ಸೌಕರ್ಯಗಳು ಇಲ್ಲದಿದ್ದರೂ ಭಕ್ತರು ಅದನ್ನು ಲೆಕ್ಕಿಸದೆ ಪೂಜಾ ಕೈಂಕರ್ಯಗಳಲ್ಲಿ ತೊಡಗಿಸಿ ಕೊಳ್ಳುತ್ತಿದ್ದಾರೆ,ಮುಂದಿನ ವರ್ಷ ಅಭಿವೃದ್ಧಿ ಕಾರ್ಯಗಳು ಆಗಲೇಬೇಕು ಎಂದು ಹನೂರು ಶಾಸಕ ಎಂ.ಆರ್.ಮಂಜುನಾಥ್ ಸೂಚಿಸಿದರು.

ಈ ಕ್ಷೇತ್ರವನ್ನು ಅಭಿವೃದ್ಧಿ ಪಡಿಸಿ ಭಕ್ತರಿಗೆ ಅಗತ್ಯ ಮೂಲಭೂತ ಸೌಲಭ್ಯ ಕಲ್ಪಿಸಲು ಶ್ರೀ ಕ್ಷೇತ್ರದ ಶಾಶ್ವತ ಅಭಿವೃದ್ಧಿಗೆ ಕ್ರಿಯಾ ಯೋಜನೆ ತಯಾರುಮಾಡಿ ಎಂದು ಜಿಲ್ಲಾಧಿಕಾರಿಗಳಿಗೆ ಶಾಸಕರು ಆದೇಶಿಸಿದರು.

ತಾಲ್ಲೂಕಿನ ಸುಪ್ರಸಿದ್ಧ ಚಿಕ್ಕಲ್ಲೂರು ಶ್ರೀ ಸಿದ್ದಪ್ಪಾಜಿ ಜಾತ್ರಾ ಮಹೋತ್ಸವ 2026 ರ ಜ. 3 ರಿಂದ 7 ರ ವರೆಗೆ ನಡೆಯಲಿದ್ದು, ಸೌಹಾರ್ದತೆಯ ಪ್ರತೀಕವಾಗಿರುವ ಈ ಪವಾಡ ಪುರುಷನ ಜಾತ್ರೆಗೆ ಲಕ್ಷಾಂತರ ಭಕ್ತರು ಭಾಗವಹಿಸುವುದರಿಂದ ಅಗತ್ಯ ಸಿದ್ದತೆ ಕೈಗೊಳ್ಳಲು ಚಾಮರಾಜನಗರ ಜಿಲ್ಲಾಡಳಿತ ವತಿಯಿಂದ ಹಮ್ಮಿಕೊಂಡಿದ್ದ ಪೂರ್ವ ಭಾವಿ ಸಭೆಯಲ್ಲಿ ಮಾತನಾಡಿದ ಶಾಸಕರು ಚಿಕ್ಕಲ್ಲೂರು ಜಾತ್ರೆ ತನ್ನದೆ ಆದ ಪರಂಪರೆ ಹೊಂದಿದೆ ಎಂದು ತಿಳಿಸಿದರು.

ಇಲ್ಲಿಗೆ ಬರುವ ಲಕ್ಷಾಂತರ ಭಕ್ತರಿಗೆ 5 ದಿನಗಳ ಕಾಲ ಯಾವುದೆ ಮೂಲ ಸೌಲಭ್ಯಗಳಿಗೆ ಕೊರತೆಯಾಗದಂತೆ ಎಲ್ಲಾ ವ್ಯವಸ್ಥೆಗಳನ್ನು ಕಲ್ಪಿಸಲು ವಿವಿಧ ಇಲಾಖೆಗಳ ಅಧಿಕಾರಿಗಳು ತ್ವರಿತವಾಗಿ ಮುಂದಾಗಬೇಕು, ಭಕ್ತಾದಿಗಳಿಗೆ ಸರಬರಾಜು ಮಾಡುವ ಉಪಾಹಾರ, ನೀರಿನ ಶುದ್ಧತೆ ಪರೀಕ್ಷಿಸಬೇಕು ಎಂದು ಸೂಚಿಸಿದರು.
ತಾತ್ಕಾಲಿಕವಾಗಿ ಹೋಟೆಲ್‌ಗಳನ್ನು ತೆರೆಯುವವರಿಗೆ ಶುಚಿತ್ವ ಕಾಪಾಡಿಕೊಳ್ಳುವಂತೆ ಸೂಚಿಸಬೇಕು. ಪರಿಕರಗಳು, ಕುಡಿಯುವ ನೀರು, ಶುದ್ಧತೆಯಿಂದ ಇರುವಂತೆ ತಿಳಿಸಬೇಕು. ಆರೋಗ್ಯಕ್ಕೆ ಪೂರಕವಾದ ಕ್ರಮವಹಿಸುವಂತೆ ಪರವಾನಗಿ ನೀಡುವ ಹಂತದಲ್ಲಿಯೇ ಕಟ್ಟು ನಿಟ್ಟಾಗಿ ಹೇಳಬೇಕು, ಸ್ನಾನ ಮತ್ತು ಶೌಚಕ್ಕೆ ಕಡ್ಡಾಯವಾಗಿ ನೀರಿನ ವ್ಯವಸ್ಥೆ ಕಲ್ಪಿಸಬೇಕು ಎಂದು ಶಾಸಕರು ಹೇಳಿದರು.

ಚಿಕ್ಕಲ್ಲೂರು ಅಭಿವೃದ್ಧಿ ಪಡಿಸಿ ಭಕ್ತರಿಗೆ ಅಗತ್ಯ ಮೂಲಭೂತ ಸೌಲಭ್ಯ ಕಲ್ಪಿಸಿ ಎಂಬ ಕೂಗು ಹಲವಾರು ವರ್ಷಗಳಿಂದಲೂ ಇದೆ. ಇದನ್ನು ಹೋಗಲಾಡಿಸಲು ಶ್ರೀ ಕ್ಷೇತ್ರದ ಶಾಶ್ವತ ಅಭಿವೃದ್ಧಿಗೆ ಕ್ರಿಯಾ ಯೋಜನೆ ತಯಾರು ಮಾಡಿ ಎಂದು ಜಿಲ್ಲಾಧಿಕಾರಿಗಳಿಗೆ ಸೂಚಿಸಿದ ಮಂಜುನಾಥ್, ಪಾಳ್ಯ ಗ್ರಾಮದಿಂದ ಚಿಕ್ಕಲ್ಲೂರಿನವರೆಗೂ ನಾಲ್ಕು ಪಥದ ರಸ್ತೆ ಮಾಡಬೇಕೆಂಬುದು ನನ್ನ ಚಿಂತನೆಯಾಗಿದೆ. ಕ್ಷೇತ್ರವನ್ನು ಸಂಪರ್ಕಿಸುವ ಗ್ರಾಮಗಳಲ್ಲಿ ರಸ್ತೆ ಅಭಿವೃದ್ಧಿ ಕಾಮಗಾರಿ ನಡೆಯುತ್ತಿದೆ. ಈಗಾಗಲೇ ಕೆಲವೆಡೆ ಡಾಂಬರೀಕರಣ ಆಗುತ್ತಿದೆ. ಇನ್ನೂ 6 ಕಿ.ಮೀ. ರಸ್ತೆ ಆಗಲಿದೆ. ಆದರೂ ಜಾತ್ರಾ ಸಂದರ್ಭದಲ್ಲಿ ಭಕ್ತಾದಿಗಳಿಗೆ ಯಾವುದೇ ತೊಂದರೆಯಾಗದಂತೆ ರಸ್ತೆ ಸರಿಪಡಿಸುವ ಕೆಲಸ ಮಾಡಲಾಗುವುದು ಎಂದು ಭರವಸೆ ನೀಡಿದರು.

ಮಲೈಮಹದೇಶ್ವರ ಬೆಟ್ಟದಲ್ಲಿ ಪ್ರಾಧಿಕಾರ ಇದ್ದರೂ ಸಾಲೂರು ಮಠದ ಸ್ವಾಮೀಜಿಗಳು ಶ್ರೀ ಮಠದ ಆಚಾರ ವಿಚಾರಗಳನ್ನು ಮುಂದುವರಿಸಿಕೊಂಡು ಬರುತ್ತಿದ್ದು ಅವರ ಪೂಜಾ ಕೈಂಕರ್ಯಗಳು ಎಂದಿನಂತೆ ನಿರಂತರವಾಗಿ ಮುಂದುವರೆಯುತ್ತಿವೆ. ಮಲೈಮಹದೇಶ್ವರ ಬೆಟ್ಟದಲ್ಲಿ ಯಾವುದೇ ಸಮಸ್ಯೆ ಇಲ್ಲಾ. ಹಾಗಾಗಿ ಚಿಕ್ಕಲ್ಲೂರಿನಲ್ಲಿ ಪ್ರಾಧಿಕಾರ ರಚನೆಗೆ ಸಾರ್ವಜನಿಕರ ಸಹಕಾರ ಅತ್ಯಮುಖ್ಯವಾಗಿದೆ. ಮಠದವರು ಎರಡು ಕಡೆಯವರು ಕುಳಿತು ಒಂದು ಒಳ್ಳೆಯ ತೀರ್ಮಾನವನ್ನು ಭಕ್ತರಿಗಾಗಿ ಕೈಗೊಳ್ಳಬೇಕು ಎಂದು ಸಲಹೆ ನೀಡಿದರು.

ಮಠದ ಪರಂಪರೆ ಮತ್ತು ಆಚಾರ ವಿಚಾರಗಳಿಗೆ ಯಾವುದೇ ಸಮಸ್ಯೆಯಾಗದಂತೆ ಪ್ರಾಧಿಕಾರ ರಚನೆಯಾದರೆ ಲಕ್ಷಾಂತರ ಭಕ್ತರಿಗೆ ಶಾಶ್ವತ ಅಭಿವೃದ್ಧಿ ಕಾರ್ಯಗಳು ಮಾಡಲು ಸಾಧ್ಯವಾಗುತ್ತದೆ ಎಂದು ಎಂ.ಆರ್.ಮಂಜುನಾಥ್ ತಿಳಿಸಿದರು.

ಜಿಲ್ಲಾಧಿಕಾರಿ ಸಿ.ಟಿ.ಶಿಲ್ಪಾನಾಗ್ ಮಾತನಾಡಿ ಜನವರಿ 3 ರಿಂದ 7 ರವರೆಗೂ ನಡೆಯಲಿರುವ ಚಿಕ್ಕಲ್ಲೂರು ಜಾತ್ರೆಗೆ ಬರುವ ಭಕ್ತರಿಗೆ ಮೂಲಭೂತ ಸೌಕರ್ಯ ಒದಗಿಸುವ ನಿಟ್ಟಿನಲ್ಲಿ 20 ದಿನಗಳ ಮುನ್ನವೇ ಅಧಿಕಾರಿಗಳ ಸಭೆ ಕರೆಯಲಾಗಿದ್ದು ಜಾತ್ರಾ ಸಂದರ್ಭದಲ್ಲಿ ವಿದ್ಯುತ್ ಸೇವೆ ನಿರಂತರವಾಗಿರ ಬೇಕು. ತಾತ್ಕಾಲಿಕ ಆರೋಗ್ಯ ಕೇಂದ್ರ ತೆರೆದು ವೈದ್ಯರು ಸಿಬ್ಬಂದಿ ಯನ್ನು ನಿಯೋಜಿಸಬೇಕು, ಭಕ್ತಾದಿಗಳ ಸಂಖ್ಯೆಗೆ ಅನುಗುಣವಾಗಿ ಕೆಎಸ್‌ಆರ್‌ಟಿಸಿ ವತಿಯಿಂದ ಹೆಚ್ಚು ಬಸ್‌ಗಳ ನಿಯೋಜನೆ ಮಾಡಬೇಕು, ಭಕ್ತರ ಸುರಕ್ಷತೆ, ಮತ್ತು ಭದ್ರತೆ, ಅಹಿತಕರ ಘಟನೆಗಳನ್ನು ತಡೆಗಟ್ಟಲು ಸೂಕ್ತ ಪೊಲೀಸ್ ಬಂದೋಬಸ್ತ್ ಮಾಡಿಕೊಳ್ಳಬೇಕು ಎಂದು ಹೇಳಿದರು.

ಈ ಬಾರಿ ಚೆಕ್ ಪೋಸ್ಟ್ ಗಳಲ್ಲಿ ಪೊಲೀಸರು ಪ್ರಾಣಿಗಳನ್ನು ತಡೆದರೆ ಸ್ಥಳೀಯ ಯುವಕರ ತಂಡ ಕಟ್ಟಿಕೊಂಡು ಪೊಲೀಸರ ಕಾರ್ಯಚರಣೆಯ ವಿರುದ್ಧ ನಾವು ಕಾರ್ಯಚರಣೆ ಮಾಡಬೇಕಾಗುತ್ತದೆ ಎಂದು ಸಭೆಯಲ್ಲಿ ಭಾಗವಹಿಸಿದ್ದವರು ಹೇಳುತ್ತಿದ್ದಂತೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ. ಕವಿತಾ ಅವರು ನಾವು ನ್ಯಾಯಾಲಯದ ಆದೇಶದಂತೆ ಪಾಲನೆ ಮಾಡುತ್ತಿದ್ದೇವೆ ಕಳೆದ ವರ್ಷ ಚೆಕ್ ಪೋಸ್ಟನಲ್ಲಿ ಕುರಿ ಕೋಳಿಗಳನ್ನು ತಪಾಸಣೆ ಮಾಡಿಲ್ಲಾ, ನೀವೇ ಈ ವರ್ಷ ಜಾತ್ರೆಯನ್ನು ಅಚ್ಚುಕಟ್ಟಾಗಿ ಮಾಡಿದ್ದೀರಿ ಎಂದು ಹೇಳಿದ್ದೀರಿ, ಈ ಸಭೆಯಲ್ಲಿ ಪೊಲೀಸರ ವಿರುದ್ಧ ಮಾತನಾಡುವುದು ಸರಿಯಲ್ಲ, ನಮ್ಮ ಕರ್ತವ್ಯವನ್ನು ನಾವು ಸರಿಯಾಗಿ ಮಾಡುತ್ತಿದ್ದೇವೆ. ನಮ್ಮ ಕರ್ತವ್ಯಕ್ಕೆ ಯಾರೇ ಅಡ್ಡಿ ಬಂದರೂ ನಿರ್ದಾಕ್ಷಿಣ್ಯವಾಗಿ ಕ್ರಮ ಕೈಗೊಳ್ಳುತ್ತೇವೆ ಎಂದು ಖಾರವಾಗಿಯೇ ಹೇಳಿದರು.

ಜಿ.ಪಂ. ಸಿಇಒ ಮೋನಾರೋತ್, ತಹಸೀಲ್ದಾರ್ ಗಳಾದ ಬಸವರಾಜು, ಚೈತ್ರ ತೆಳ್ಳನೂರು, ಗ್ರಾಂ.ಪಂ ಪಿಡಿಒ ಶೋಭರಾಣಿ, ಪಾಳ್ಯ ನಾಡಕಚೇರಿ ಉಪತಹಸೀಲ್ದಾರ್ ವಿಜಯಕುಮಾರ್, ರಾಜಸ್ವ ನಿರೀಕ್ಷಕ ರಂಗಸ್ವಾಮಿ, ಚಿಕ್ಕಲ್ಲೂರು ಮಠದ ಭರತ್ ರಾಜೇ ಅರಸ್ ಜಿಲ್ಲಾ ಹಾಗೂ ತಾಲ್ಲೂಕು ಮಟ್ಟದ ಅಧಿಕಾರಿಗಳು ಮತ್ತು ಮುಖಂಡರು ಸಭೆಯಲ್ಲಿ ಪಾಲ್ಗೊಂಡಿದ್ದರು.

ಚಿಕ್ಕಲ್ಲೂರು ಶ್ರೀ ಸಿದ್ದಪ್ಪಾಜಿ ಜಾತ್ರೆ: ಮೂಲ‌ ಸೌಕರ್ಯ ಕಲ್ಪಿಸಲು ಮಂಜುನಾಥ್ ಆದೇಶ Read More

ಕನ್ನಡ ರಾಜ್ಯೋತ್ಸವದಲ್ಲಿ ಸಾಧಕರಿಗೆ ಸನ್ಮಾನ

ಮೈಸೂರು: ಶ್ರೀ ದತ್ತಾತ್ರೇಯ ಪ್ರತಿಷ್ಠಾನ ಮತ್ತು ಕರ್ನಾಟಕ ಬಸವೇಶ್ವರ ಸಮಾಜ ಸೇವಾ ಟ್ರಸ್ಟ್ ವತಿಯಿಂದ ಭಾನುವಾರ ಹಮ್ಮಿಕೊಂಡಿದ್ದ ಕನ್ನಡ ರಾಜ್ಯೋತ್ಸವ ಕಾರ್ಯಕ್ರಮದಲ್ಲಿ ಸಾಧಕರನ್ನು ಸನ್ಮಾನಿಸಲಾಯಿತು.

ಮೈಸೂರಿನ ಶ್ರೀ ಶಿವರಾತ್ರಿ ರಾಜೇಂದ್ರ ಭವನದಲ್ಲಿ ನಡೆದ ಕನ್ನಡ ರಾಜ್ಯೋತ್ಸವ ಕಾರ್ಯಕ್ರಮದಲ್ಲಿ ವಿವಿಧ ಕ್ಷೇತ್ರಗಳಲ್ಲಿ ಸಾಧನೆಗೈದ ಸಾಧಕರಿಗೆ ಗೌರವಿಸಿ ಸನ್ಮಾನಿಸಲಾಯಿತು.

ಕನ್ನಡ ಕ್ರಾಂತಿದಳ ರಾಜ್ಯಾಧ್ಯಕ್ಷ ತೇಜಸ್ವಿ ನಾಗಲಿಂಗ ಸ್ವಾಮಿ, ಶ್ರೀ ಶಿವರಾತ್ರಿಶ್ವರ ಆಟೋಚಾಲಕ ಮತ್ತು ಮಾಲಿಕರ ಸಂಘದ ಅಧ್ಯಕ್ಷ ಮಹೇಶ್ ಕುಮಾರ್, ಕಾಲಾ ಶನೇಶ್ವರ ಸ್ವಾಮಿ ದೇವಸ್ಥಾನ ಮುಖ್ಯಸ್ಥರಾದ ಸೂರ್ಯ ದೇವ , ಗ್ರಾಮ ಪಂಚಾಯಿತಿ ಮಾಜಿ ಸದಸ್ಯರಾದ ಕಮಲಾ ನಟರಾಜ್ ಮತ್ತಿತರ ಸಾಧಕರನ್ನು ಗೌರವಿಸಲಾಯಿತು.

ಕನ್ನಡ ರಾಜ್ಯೋತ್ಸವದಲ್ಲಿ ಸಾಧಕರಿಗೆ ಸನ್ಮಾನ Read More

ವಿದ್ಯಾರ್ಥಿಗಳಲ್ಲಿ ಸಾಮಾಜಿಕ ಹೊಣೆಗಾರಿಕೆ ಬೆಳೆಸುವ ಮಹತ್ವದ ವೇದಿಕೆ ಎನ್ಎಸ್ಎಸ್-ಸಿ.ಆರ್.ದಿನೇಶ್

ಹುಣಸೂರು: ರಾಷ್ಟ್ರೀಯ ಸೇವಾ ಯೋಜನೆ ವಿದ್ಯಾರ್ಥಿಗಳಲ್ಲಿ ಸಾಮಾಜಿಕ ಹೊಣೆಗಾರಿಕೆಯನ್ನು ಬೆಳೆಸುವ ಮಹತ್ವದ ವೇದಿಕೆಯಾಗಿದೆ ಎಂದು ನಂಜನಗೂಡು ಬಾಲಕರ ಸರ್ಕಾರಿ ಪದವಿ ಪೂರ್ವ ಕಾಲೇಜಿನ ಪ್ರಾಂಶುಪಾಲರು ಹಾಗೂ ರಾಜ್ಯ ಪ್ರಶಸ್ತಿ ವಿಜೇತರಾದ ಸಿ ಆರ್ ದಿನೇಶ್ ತಿಳಿಸಿದರು.

ತಟ್ಟೆಕೆರೆ ಗ್ರಾಮದಲ್ಲಿ ಅಯೋಜಿಸಲಾಗಿದ್ದ
ಹುಣಸೂರಿನ ಬಾಲಕಿಯರ ಸರ್ಕಾರಿ ಪದವಿ ಪೂರ್ವ ಕಾಲೇಜಿನ ರಾಷ್ಟ್ರೀಯ ಸೇವಾ ಯೋಜನೆಯ ವಾರ್ಷಿಕ ಶಿಬಿರದ
ಸಮಾರೋಪ ಭಾಷಣದಲ್ಲಿ ಅವರು ಮಾತನಾಡಿದರು.

ರಾಷ್ಟ್ರೀಯ ಸೇವಾ ಯೋಜನೆಯು ವಿದ್ಯಾರ್ಥಿಗಳಲ್ಲಿ ಸೇವಾ ಸಂಸ್ಕೃತಿ, ಮಾನವೀಯ ಮೌಲ್ಯಗಳನ್ನು ಬೆಳೆಸುತ್ತದೆ, ಪುಸ್ತಕದ ಜ್ಞಾನಕ್ಕಿಂತ ಹೊರತಾಗಿ ಸಮಾಜದ ನೈಜ ಸಮಸ್ಯೆಗಳನ್ನು ಅರಿಯಲು ಎನ್ಎಸ್ಎಸ್ ಶಿಬಿರಗಳು ವಿದ್ಯಾರ್ಥಿಗಳಿಗೆ ಅವಕಾಶ ಒದಗಿಸುತ್ತವೆ ಎಂದು ಹೇಳಿದರು.

ಎನ್ಎಸ್ಎಸ್ ಶಿಬಿರಗಳ ಮೂಲಕ ಗ್ರಾಮೀಣ ಪ್ರದೇಶಗಳಲ್ಲಿ ಸ್ವಚ್ಛತಾ ಅಭಿಯಾನ, ಆರೋಗ್ಯ ತಪಾಸಣೆ ಶಿಬಿರಗಳು, ಮಹಿಳಾ ಸಬಲೀಕರಣ, ಮತದಾರರ ಜಾಗೃತಿ, ಪರಿಸರ ಸಂರಕ್ಷಣೆ, ರಸ್ತೆ ಸುರಕ್ಷತೆ, ಡಿಜಿಟಲ್ ಸಾಕ್ಷರತೆ ಹಾಗೂ ಸಂವಿಧಾನ ಜಾಗೃತಿ ಕಾರ್ಯಕ್ರಮಗಳನ್ನು ಯಶಸ್ವಿಯಾಗಿ ನಡೆಸಿರುವುದನ್ನು ದಿನೇಶ್ ಅವರು ಪ್ರಶಂಸಿಸಿದರು.

ಈ ಎಲ್ಲ ಚಟುವಟಿಕೆಗಳು ವಿದ್ಯಾರ್ಥಿಗಳನ್ನು ಜವಾಬ್ದಾರಿಯುತ ನಾಗರಿಕರಾಗಿ ರೂಪಿಸುವಲ್ಲಿ ಸಹಕಾರಿಯಾಗಿವೆ ಎಂದು ಅಭಿಪ್ರಾಯಪಟ್ಟರು.
ಹುಣಸೂರಿನ ತಹಸಿಲ್ದಾರರಾದ ಮಂಜುನಾಥ್ ಅವರು ಮಾತನಾಡಿ ಇಂದಿನ ಯುವ ಪೀಳಿಗೆ ರಾಷ್ಟ್ರದ ಭವಿಷ್ಯ ಎಂದು ತಿಳಿಸಿದರು.

ಸೇವೆಯ ಮೂಲಕ ಸ್ವಭಾವ ನಿರ್ಮಾಣವೇ ಎನ್ ಎಸ್ ಎಸ್ ಮೂಲ ತತ್ವ. ಸೇವೆಯ ಅನುಭವದಿಂದ ವಿದ್ಯಾರ್ಥಿಗಳಲ್ಲಿ ಸಹಾನುಭೂತಿ, ನಾಯಕತ್ವ ಮತ್ತು ಶಿಸ್ತು ಗುಣಗಳು ಬೆಳೆಯುತ್ತವೆ ಎಂದು ಹೇಳಿದರು.

ಪ್ರತಿಯೊಬ್ಬ ಎನ್ಎಸ್ಎಸ್ ಸ್ವಯಂಸೇವಕರು ತಮ್ಮ ಜೀವನದಲ್ಲಿಯೂ ಸೇವಾ ಮನೋಭಾವವನ್ನು ಅಳವಡಿಸಿಕೊಳ್ಳಬೇಕು ಎಂದು ಕರೆ ನೀಡಿದರು.

ಪತ್ರಕರ್ತ ಹನುಗೋಡು ನಟರಾಜ್ ಅವರು ಮಾತಾಡಿ, ರಾಷ್ಟ್ರೀಯ ಸೇವಾ ಯೋಜನೆಯಿಂದ ವಿದ್ಯಾರ್ಥಿಗಳು ಕ್ರಿಯಾಶೀಲರಾಗಲು ಸಾಧ್ಯವಾಗುತ್ತದೆ. ಉನ್ನತ ಹುದ್ದೆ ಪಡೆದವರು ಅವರ ವಿದ್ಯಾರ್ಥಿ ಜೀವನದಲ್ಲಿ ಇಂತಹ ಶಿಬಿರದಲ್ಲಿ ಭಾಗವಹಿಸಿದ ಪರಿಣಾಮವಾಗಿ ಅವರುಗಳು ಸಾಧನೆ ಮಾಡಲು ಸಾಧ್ಯ ಎಂದು ಹೇಳಿದರು.

ಕೊಡಗಿನ ಈ ಹಿಂದೆ ಜಿಲ್ಲಾಧಿಕಾರಿ ಆಗಿದ್ದ ಐಎಎಸ್ ಅಧಿಕಾರಿ ಶ್ರೀವಿದ್ಯಾ ಇದಕ್ಕೆ ಉದಾಹರಣೆ ಎಂದು ಹೇಳಿದರು.

ಕಾಲೇಜಿನ ಪ್ರಾಂಶುಪಾಲರಾದ ರಾಮೇಗೌಡ ಅವರು ಅಧ್ಯಕ್ಷೀಯ ಭಾಷಣ ಮಾಡಿ ರಾಷ್ಟ್ರೀಯ ಸೇವಾ ಯೋಜನೆ ಕಾಲೇಜಿನ ಶೈಕ್ಷಣಿಕ ಚಟುವಟಿಕೆಗಳಿಗೆ ಪೂರಕವಾಗಿ ವಿದ್ಯಾರ್ಥಿಗಳ ಸಮಗ್ರ ವ್ಯಕ್ತಿತ್ವ ವಿಕಸನಕ್ಕೆ ದಾರಿ ಮಾಡಿಕೊಡುತ್ತದೆ ಎಂದು ಹೇಳಿದರು.

ಕಾಲೇಜು ಅಭಿವೃದ್ಧಿ ಸಮಿತಿಯ ಉಪಾಧ್ಯಕ್ಷರಾದ ತಟ್ಟೆಕೆರೆ ಶ್ರೀನಿವಾಸ್ ವಿದ್ಯಾರ್ಥಿನಿಯರು ನಮ್ಮ ಗ್ರಾಮಕ್ಕೆ ಆಗಮಿಸಿ ಬಹಳ ಅಚ್ಚುಕಟ್ಟಾಗಿ ಸ್ವಚ್ಛತೆಯ ಅರಿವು ಮೂಡಿಸಿದ್ದಾರೆ. ನಮ್ಮ ಗ್ರಾಮಸ್ಥರು ಎಲ್ಲಾ ರೀತಿಯಲ್ಲೂ ಅವರಿಗೆ ಸಹಕಾರ ನೀಡಿದ್ದಾರೆ. ಅದಕ್ಕಾಗಿ ಎಲ್ಲಾ ಗ್ರಾಮಸ್ಥರಿಗೆ ಧನ್ಯವಾದ ತಿಳಿಸುತ್ತೇನೆ ಎಂದರು.

ಈ ಸಂದರ್ಭದಲ್ಲಿ ಎನ್ಎಸ್ಎಸ್ ಕಾರ್ಯಕ್ರಮಾಧಿಕಾರಿ ದೇವರಾಜ್ ಅವರು ವಾರ್ಷಿಕ ವರದಿಯನ್ನು ಮಂಡಿಸಿ, ಸ್ವಯಂಸೇವಕರ ಶ್ರಮ, ತ್ಯಾಗ ಮತ್ತು ಸೇವಾಭಾವವನ್ನು ಸ್ಮರಿಸಿದರು.

ಸಮಾರಂಭದಲ್ಲಿ ಉತ್ತಮ ಸೇವೆ ಸಲ್ಲಿಸಿದ ಎನ್ಎಸ್ಎಸ್ ಸ್ವಯಂಸೇವಕರಿಗೆ ಹಾಗೂ ತಂಡಗಳಿಗೆ ಪ್ರಮಾಣಪತ್ರಗಳು ಮತ್ತು ಗೌರವ ಪತ್ರಗಳನ್ನು ವಿತರಿಸಲಾಯಿತು.

ಸುಶ್ಮಿತಾ ತಮ್ಮ ಶಿಬಿರ ಅನುಭವಗಳನ್ನು ಹಂಚಿಕೊಂಡು,ಎನ್ಎಸ್ಎಸ್ ಜೀವನದಲ್ಲಿ ತಂದಿರುವ ಸಕಾರಾತ್ಮಕ ಬದಲಾವಣೆಗಳ ಬಗ್ಗೆ ತಿಳಿಸಿದರು.

ಕಾರ್ಯಕ್ರಮದಲ್ಲಿ ಗ್ರಾಮ ಪಂಚಾಯತಿ ಅಧ್ಯಕ್ಷರಾದ ಗೌರಮ್ಮ, ಉಪಾಧ್ಯಕ್ಷರಾದ ನಟರಾಜು ,ಉಪನ್ಯಾಸಕರು, ಗ್ರಾಮ ಪಂಚಾಯತಿ ಸದಸ್ಯರು, ಗ್ರಾಮದ ಯಜಮಾನರು ಮತ್ತು ಗ್ರಾಮಸ್ಥರು ಪಾಲ್ಗೊಂಡಿದ್ದರು.

ವಿದ್ಯಾರ್ಥಿಗಳಲ್ಲಿ ಸಾಮಾಜಿಕ ಹೊಣೆಗಾರಿಕೆ ಬೆಳೆಸುವ ಮಹತ್ವದ ವೇದಿಕೆ ಎನ್ಎಸ್ಎಸ್-ಸಿ.ಆರ್.ದಿನೇಶ್ Read More

ಕೆ ಆರ್ ಬ್ಯಾಂಕಿನ ನೂತನ ದಿನದರ್ಶಿಕೆ ಬಿಡುಗಡೆ

ಮೈಸೂರು: ಮೈಸೂರಿನ ಅಗ್ರಹಾರದ ಕೃಷ್ಣರಾಜೇಂದ್ರ ಬ್ಯಾಂಕಿನ 2026ರ ದಿನದರ್ಶಿಕೆಯನ್ನು ಹೊರತರಲಾಗಿದ್ದು,
ಭಾನುವಾರ ಬಿಡುಗಡೆ ಮಾಡಲಾಯಿತು.

ಕೆ.ಆರ್. ಬ್ಯಾಂಕಿನ ಅಧ್ಯಕ್ಷ ಬಸವರಾಜು ಬಸಪ್ಪ ಹಾಗೂ ಸಹಕಾರ ಇಲಾಖೆಯ ಉಪ ನಿಬಂಧಕ ವೀರೇಂದ್ರ ಅವರು ದಿನದರ್ಶಿಕೆಯನ್ನು ಬಿಡುಗಡೆಗೊಳಿಸಿದರು.

ಈ ವೇಳೆ ಉಪ ನಿಬಂಧಕ ವೀರೇಂದ್ರ ಅವರು ಮಾತನಾಡಿ, ಗ್ರಾಹಕರಿಗೆ ಸೇವಾ ಸೌಲಭ್ಯ ಬ್ಯಾಂಕಿನ ವತಿಯಿಂದ ನಿರಂತರವಾಗಿ ತಲುಪಲಿ. ಬ್ಯಾಂಕ್ ಯಶಸ್ವಿಯಾಗಿ ಮುಂದುವರಿಯಲಿ, ಇದಕ್ಕೆ ಬೇಕಾದ ಎಲ್ಲ ಸಹಕಾರವನ್ನು ಇಲಾಖೆ ಕೊಡಲಿದೆ ಎಂದು ತಿಳಿಸಿದರು.

ಬ್ಯಾಂಕಿನ ಅಧ್ಯಕ್ಷ ಬಸವಾರಾಜು ಬಸಪ್ಪ ಮಾತನಾಡಿ, ಇತ್ತೀಚೆಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ನವೀಕೃತ ಕಟ್ಟಡವನ್ನು ಉದ್ಘಾಟಿಸಿದರು ಎಂದು ಹೇಳಿದರು.

ಬ್ಯಾಂಕಿನ ಅಭಿವೃದ್ಧಿಗೆ ನಮ್ಮ ಆಡಳಿತ ಮಂಡಳಿಯ ಎಲ್ಲರ ಸಹಕಾರವಿದೆ. ಮುಂದಿನ ದಿನಗಳಲ್ಲಿ ಹೊಸ ಹೊಸ ಶಾಖೆಗಳನ್ನು ತೆರೆಯುವ ಆಲೋಚನೆ ಇದೆ. ಬ್ಯಾಂಕಿನ ಎಲ್ಲ ಸದಸ್ಯರಿಗೆ ಕ್ಯಾಲೆಂಡರ್ ವಿತರಣೆ ಮಾಡಲಾಗುವುದು ಎಂದು ತಿಳಿಸಿದರು.

ಕಾರ್ಯಕ್ರಮದಲ್ಲಿ ನಿರ್ದೇಶಕರಾದ ನಂ.ಸಿದ್ದಪ್ಪ, ಹೆಚ್. ವಾಸು, ಪ್ರತಿದ್ವನಿ ಪ್ರಸಾದ್, ನಾಗಜ್ಯೋತಿ, ಪಂಚಾಕ್ಷರಿ, ಗಣೇಶ ಮೂರ್ತಿ, ಶಿವಪ್ರಕಾಶ್, ಅಧಿಕಾರಿಗಳಾದ ಸಹಾಯಕ ನಿರೀಕ್ಷಕ ಕೆ.ರಾಜು, ಕೆಆರ್ ಬ್ಯಾಂಕಿನ ಮ್ಯಾನೇಜರ್ ಅನಂತ ವೀರಪ್ಪ ಮತ್ತಿತರರು ಹಾಜರಿದ್ದರು.

ಕೆ ಆರ್ ಬ್ಯಾಂಕಿನ ನೂತನ ದಿನದರ್ಶಿಕೆ ಬಿಡುಗಡೆ Read More

ಯೂನಿಟಿ ಮಾಲ್ ನಿರ್ಮಾಣಕ್ಕೆ ವಿರೋಧಇಲ್ಲ: ನಮ್ಮ ಜಾಗದಲ್ಲಿ ಕಟ್ಟಡ ನಿರ್ಮಾಣ ಸರಿಯಲ್ಲ-ಪ್ರಮೋದಾದೇವಿ

ಮೈಸೂರು: ಯೂನಿಟಿ ಮಾಲ್ ನಿರ್ಮಾಣಕ್ಕೆ ನನ್ನ ವಿರೋಧ ಇಲ್ಲ, ಆದರೆ ನಮ್ಮ ಜಾಗದಲ್ಲಿ ಕಟ್ಟಡ ನಿರ್ಮಾಣ ಮಾಡುವುದು ಸರಿಯಲ್ಲ ಎಂದು ರಾಜವಂಶಸ್ಥೆ ಪ್ರಮೋದಾದೇವಿ ಒಡೆಯರ್ ತಿಳಿಸಿದ್ದಾರೆ.

ಮೈಸೂರು ಯೂನಿಟಿ ಮಾಲ್ ನಿರ್ಮಾಣಕ್ಕೆ ಹೈಕೋರ್ಟ್ ತಡೆ ವಿಚಾರ ಕುರಿತು ಪತ್ರಿಕಾ ಪ್ರಕಟಣೆ ಮೂಲಕ ಸ್ಪಷ್ಟನೆ ನೀಡಿರುವ ಪ್ರಮೋದದೇವಿ ಒಡೆಯರ್, ನ್ಯಾಯಾಲಯದಲ್ಲಿ ಇದೇ ವಿಚಾರವಾಗಿ ಪ್ರಕರಣವಿದೆ,ಮೈಸೂರು ಕಸಬಾ ಹೋಬಳಿಯ ಸ. ನಂ.1 ರಲ್ಲಿರುವ ದೊಡ್ಡಕೆರೆ ಟ್ಯಾಂಕ್ ಬೆಡ್ ಭೂಮಿ. ಇಲ್ಲಿ ನಿರ್ಮಿಸಲು ಉದ್ದೇಶಿಸಲಾದ ಯೂನಿಟಿ ಮಾಲ್‌ ವಿಚಾರಕ್ಕೆ ಕರ್ನಾಟಕದ ಹೈಕೋರ್ಟ್‌ ಯಥಾಸ್ಥಿತಿ ಆದೇಶದ ನೀಡಿದೆ ಎಂದು ತಿಳಿಸಿದ್ದಾರೆ‌.

ಈ ವಿಚಾರವಾಗಿ ಕೆಲ ಪತ್ರಿಕೆ ಮತ್ತು ಕೆಲ ಟಿವಿಗಳಲ್ಲಿ ತಪ್ಪು ವರದಿ ಪ್ರಕಟವಾಗಿದೆ. ರಾಜ್ಯದ ಕರಕುಶಲ ವಸ್ತುಗಳು ಮತ್ತು ಜಿಐ ಟ್ಯಾಗ್ ಮಾಡಲಾದ ಉತ್ಪನ್ನಗಳನ್ನು ಪ್ರದರ್ಶಿಸುವುದನ್ನು ನಾನು ವಿರೋಧಿಸುವುದಿಲ್ಲ, ಬಹಿರಂಗ ಮತ್ತು ಅಂತರಂಗ ಜಗಳ ವಿಚಾರ ಸಹ ಇಲ್ಲಿ ಇಲ್ಲ
ಎಂದು ಪ್ರಮೋದಾದೇವಿ ಒಡೆಯರ್ ಸ್ಪಷ್ಟಪಡಿಸಿದ್ದಾರೆ.

ಕರ್ನಾಟಕ ಸರ್ಕಾರವು ಮಾಲ್ ಸ್ಥಾಪಿಸಲಿ ಅದಕ್ಕೆ ನನ್ನ ವಿರೋಧ ಇಲ್ಲ. ಆದರೆ ಸರ್ಕಾರಕ್ಕೆ ಸೇರಿದ ಯಾವುದೇ ಭೂಮಿಯನ್ನು ಹಂಚಿಕೆ ಮಾಡಲಿ. ಈ ನಿರ್ದಿಷ್ಟ ಖಾಸಗಿ ಆಸ್ತಿಯನ್ನು ಹಂಚಿಕೆ ಮಾಡುವುದು ಸರಿಯಲ್ಲ.

ಇದು ಭಾರತ ಸರ್ಕಾರ ಮತ್ತು ಅಂದಿನ ರಾಜ್ಯ ಸರ್ಕಾರದ ನಡುವೆ ರಾಜ್ಯಗಳ ವಿಲೀನದ ಸಮಯದಲ್ಲಿ ನಂತರದ ಒಪ್ಪಂದದ ದಿನಾಂಕ 23-01-1950 ರಂದು ಇತ್ಯರ್ಥವಾಗಿದೆ.
ನನ್ನ ಪೂರ್ವಜರ ಭೂಮಿಯನ್ನು ಉಳಿಸಿಕೊಳ್ಳುವುದು ಮತ್ತು ರಕ್ಷಿಸುವುದು ನನ್ನ ಜವಾಬ್ದಾರಿ. ಅದೇ ಕೆಲಸವನ್ನು ನಾನು ಮಾಡಿದ್ದೇನೆ. ಸರ್ಕಾರದ ಪ್ರತಿಕ್ರಿಯೆ ಮುಂದಿನ ವಿಚಾರಣೆಗಾಗಿ ಕರ್ನಾಟಕದ ಹೈಕೋರ್ಟ್ ಮುಂದೆ ಬರಲಿದೆ ಎಂದು ಪ್ರಮೋದಾದೇವಿ ಒಡೆಯರ್ ತಿಳಿಸಿದ್ದಾರೆ.

ಯೂನಿಟಿ ಮಾಲ್ ನಿರ್ಮಾಣಕ್ಕೆ ವಿರೋಧಇಲ್ಲ: ನಮ್ಮ ಜಾಗದಲ್ಲಿ ಕಟ್ಟಡ ನಿರ್ಮಾಣ ಸರಿಯಲ್ಲ-ಪ್ರಮೋದಾದೇವಿ Read More

ಮೈಸೂರಲ್ಲಿ ಮೈ ಕೊರೆಯುವ ಚಳಿ!ಬೆಳೆ,ಜಾನುವಾರು ಸಂರಕ್ಷಣೆಗೆ ಸಲಹೆ

ಮೈಸೂರು: ಜಿಲ್ಲೆಯಲ್ಲಿ ಕಳೆದ ಕೆಲವು ದಿನ ಗಳಿಂದ ಮೈ ಕೊರೆಯುವ ಚಳಿ ಪ್ರಾರಂಭವಾಗಿದ್ದು, ವಾತಾವರಣದಲ್ಲಿ ದಿಢೀರ್ ಉಷ್ಣಾಂಶ ಕುಸಿತವಾಗಿದೆ.
ಶೀತ ಮಾರುತದಿಂದ ಜನರು ಕಂಗೆಟ್ಟಿದ್ದಾರೆ.

ನವೆಂಬರ್‌ನಲ್ಲಿ ಆಗಿಂದಾಗ್ಗೆ ಮಳೆ ಹಾಗೂ ಮೋಡ ಕವಿದ ವಾತಾವರಣ ಇರುತ್ತಿತ್ತು,ಆದರೆ ಚಳಿ ವಾತಾವರಣ ಕಂಡು ಬರಲಿಲ್ಲ.
ಈಗ ಮಳೆ ಹಾಗೂ ಮೋಡ ಕವಿದ ವಾತಾವರಣ ದೂರವಾಗಿದೆ, ಚಳಿಯು ತೀವ್ರಗುತ್ತಿದೆ.

ಜಿಲ್ಲೆಯಲ್ಲಿ ಕನಿಷ್ಠ 16 ಡಿಗ್ರಿ ಸೆಲ್ಸಿಯಸ್, ತಾಪಮಾನ ದಾಖಲಾಗಿದ್ದು,ಮಧ್ಯಾಹ್ನದ ವೇಳೆಯಲ್ಲೂ ಚಳಿ ಅನುಭವವಾಗುತ್ತಿದೆ.
ಹಾಗಾಗಿ ಜನರು ಬೆಚ್ಚನೆಯ ಉಡುಪು ಧರಿಸಿ ಸಂಚರಿಸುವುದು ಸಾಮಾನ್ಯವಾಗಿ ಬಿಟ್ಟಿದೆ.

ಭಾರತೀಯ ಹವಾಮಾನ ಇಲಾಖೆಯ ಮುನ್ಸೂಚನೆ ಪ್ರಕಾರ, ಜಿಲ್ಲೆಯಲ್ಲಿ ಡಿ. ೧ ರಿಂದ ೩ರವರೆಗೆ ಕನಿಷ್ಠ 16ರಿಂದ 17 ಹಾಗೂ ಗರಿಷ್ಟ 28 ರಿಂದ 29 ಡಿಗ್ರಿ ಸೆಲ್ಸಿಯಸ್ ತಾಪಮಾನ ದಾಖಲಾಗಿದೆ.

ಜಿಲ್ಲೆಯಲ್ಲಿ ಚಳಿಯ ತೀವ್ರತೆ ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ ರೈತಾಪಿ ವರ್ಗದವರು ಜಾನುವಾರುಗಳ ರಕ್ಷಣೆ ಹಾಗೂ ಬೆಳೆಗಳ ರಕ್ಷಣೆಗೆ ಅಗತ್ಯ ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳಲು ಭಾರತೀಯ ಹವಾಮಾನ ಇಲಾಖೆಯ ನಾಗನಹಳ್ಳಿಯ ಕೃಷಿ ಹವಾಮಾನ ಕ್ಷೇತ್ರ ವಿಭಾಗದ ಹಿರಿಯ ಕ್ಷೇತ್ರ ಅಧೀಕ್ಷಕ ಡಾ. ಎನ್. ಉಮಾಶಂಕರ್ ಸಲಹೆಗಳನ್ನು ನೀಡಿದ್ದಾರೆ.

ಬೆಳಿಗ್ಗೆ ಕಡಿಮೆ ತಾಪಮಾನ ಕಂಡು ಬರುತ್ತಿರುವ ಹಿನ್ನೆಲೆಯಲ್ಲಿ ಬೆಳೆಗಳು ಮತ್ತು ಜಾನುವಾರುಗಳಿಗೆ ಶೀತದ ಒತ್ತಡವನ್ನು ಉಂಟು ಮಾಡಬಹುದು. ಹಾಗಾಗಿ ತರಕಾರಿ ಹೊಲಗಳಲ್ಲಿ ಮಣ್ಣಿನ ಉಷ್ಣತೆ ಯನ್ನು ಕಾಪಾಡಿಕೊಳ್ಳಲು ಸಂಜೆ ಲಘು ನೀರಾವರಿ ಒದಗಿಸುವುದು ಉತ್ತಮ.

ರಾತ್ರಿಯಲ್ಲಿ ನರ್ಸರಿಗಳು ಮತ್ತು ಎಳೆಯ ಸಸಿಗಳನ್ನು (ಟೊಮೆಟೊ, ಮೆಣಸಿನಕಾಯಿ, ಎಲೆಕೋಸು) ಒಣ ಹುಲ್ಲು ಅಥವಾ ಪ್ಲಾಸ್ಟಿಕ್ ಹಾಳೆಗಳಿಂದ ಮುಚ್ಚಬೇಕು ಎಂದು ಸಲಹೆ ನೀಡಿದ್ದಾರೆ.

ಮಳೆಯ ನಿರೀಕ್ಷೆ ಇಲ್ಲದ ಕಾರಣ ೫ ರಿಂದ ೭ ದಿನಗಳಿಗೊಮ್ಮೆ ಬೆಳೆಗಳಿಗೆ ನೀರು ಹಾಕುವುದು ಉತ್ತಮ. ತೇವಾಂಶ
ಮಧ್ಯಮವಾಗಿರುವುದರಿಂದ ಹೆಚ್ಚುವರಿ ನೀರಾವರಿಯನ್ನು ತಪ್ಪಿಸಬೇಕು.

ಭತ್ತ (ಹಾಲುಕರೆಯುವ ಹಂತ), ರಾಗಿ, ಕೆಂಪು ಬೇಳೆ ಮತ್ತು ತರಕಾರಿ ಬೆಳೆಗಳಿಗೆ ನೀರಾವರಿಗೆ ಆದ್ಯತೆ ನೀಡಬೇಕು. ಕಳೆ ಕೀಳಲು, ಮಣ್ಣು ತೆಗೆಯಲು ಮತ್ತು ಗೊಬ್ಬರ ಅಥವಾ ಕೀಟನಾಶಕ ಅನ್ವಯಿಕೆಗೆ ಅನುಕೂಲಕರ ಹವಾಮಾನ ಹೊಂದಿದೆ.

ಧಾನ್ಯಗಳು, ಅರಿಶಿನ, ಶುಂಠಿ ಮತ್ತು ದ್ವಿದಳ ಧಾನ್ಯಗಳನ್ನು ಕೊಯ್ಲು ಮಾಡಲು ಮತ್ತು ಒಣಗಿಸಲು ಒಣ ಮತ್ತು ಬಿಸಿಲಿನ ವಾತಾವರಣ ಸೂಕ್ತವಾಗಿದೆ.

ಕೊಯ್ಲಿನ ನಂತರದ ನಷ್ಟವನ್ನು ತಪ್ಪಿಸಲು ಉತ್ಪನ್ನಗಳನ್ನು ಸಂಗ್ರಹಿಸಿ ಬಿಸಿಲಿನಲ್ಲಿ ಒಣಗಿಸ ಬೇಕು. ಬಾಳೆ, ತೆಂಗು ಮತ್ತು ಅಡಕೆಯ ಜಲಾನಯನ ಪ್ರದೇಶಗಳ ಸುತ್ತಲೂ ಮಲ್ಚಿಂಗ್ ಮಾಡುವುದರಿಂದ ಮಣ್ಣಿನ ತೇವಾಂಶವನ್ನು ಸಂರಕ್ಷಿಸಲು ಸಹಾಯವಾಗುತ್ತದೆ.

ಬಾಳೆ, ಪಪ್ಪಾಯಿ ಮತ್ತು ಸಪೋಟಾದಂತಹ ಹಣ್ಣಿನ ಬೆಳೆಗಳಿಗೆ ನಿಯಮಿತವಾಗಿ ನೀರು ಒದಗಿಸಬೇಕು. ಗಾಳಿಯ ಪ್ರಸರಣವನ್ನು ಸುಧಾರಿಸಲು ಅನಗತ್ಯ ಚಿಗುರುಗಳನ್ನು ಕತ್ತರಿಸಬೇಕು.

ಚಳಿಯಿಂದ ಜಾನುವಾರುಗಳನ್ನು ರಕ್ಷಿಸಿ ಚಳಿಯ ವಾತಾವರಣ ಇರುವ ಹಿನ್ನೆಲೆಯಲ್ಲಿ ಜಾನುವಾರು ಮತ್ತು ಕೋಳಿಗಳಿಗೆ ರಾತ್ರಿ ಮತ್ತು ಮುಂಜಾನೆ ಬೆಚ್ಚಗಿನ ಮತ್ತು ಒಣ ಆಶ್ರಯಗಳನ್ನು ಒದಗಿಸಬೇಕು ಎಂದು ತಿಳಿಸಿದ್ದಾರೆ.

ಕೊಟ್ಟಿಗೆಗಳಿಗೆ ಶೀತ ಗಾಳಿ ಪ್ರವೇಶಿಸುವುದನ್ನು ತಪ್ಪಿಸಬೇಕು. ರೇಷ್ಮೆ ಹುಳು ಸಾಕುವ ಮನೆಗಳಲ್ಲಿ ಸೂಕ್ತವಾದ ಉಷ್ಣಾಂಶ ಮತ್ತು ತೇವಾಂಶವನ್ನು ಕಾಪಾಡ ಬೇಕು, ರೇಷ್ಮೆ ಹುಳುಗಳು ಬೆಳಗಿನ ತಂಪಾದ ಗಾಳಿಗೆ ಒಡ್ಡಿಕೊಳ್ಳುವುದನ್ನು ತಪ್ಪಿಸಬೇಕು ಎಂದು ಡಾ. ಎನ್. ಉಮಾಶಂಕರ್ ಸೂಚಿಸಿದ್ದಾರೆ.

hi

ಮೈಸೂರಲ್ಲಿ ಮೈ ಕೊರೆಯುವ ಚಳಿ!ಬೆಳೆ,ಜಾನುವಾರು ಸಂರಕ್ಷಣೆಗೆ ಸಲಹೆ Read More

ಡಿ. 21 ರಂದು ಮೈಸೂರಿನಲ್ಲಿ ಪಲ್ಸ್ ಪೋಲಿಯೋ ಲಸಿಕಾ ಕಾರ್ಯಕ್ರಮ

ಮೈಸೂರು: ಇದೇ ಡಿ. 21 ರಂದು ಜಿಲ್ಲೆಯಾದ್ಯಂತ ಪಲ್ಸ್ ಪೋಲಿಯೋ ಲಸಿಕಾ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ.
5 ವರ್ಷದೊಳಗಿನ ಪ್ರತಿ ಮಗುವಿಗೆ ತಪ್ಪದೆ ಪಲ್ಸ್ ಪೋಲಿಯೋ ಲಸಿಕೆ ಹಾಕಿಸಿ ಎಂದು ಜಿಲ್ಲಾಧಿಕಾರಿ ಜಿ.ಲಕ್ಷ್ಮೀಕಾಂತ ರೆಡ್ಡಿ ಕರೆ ನೀಡಿದ್ದಾರೆ.

ಜಿಲ್ಲಾ ಪಂಚಾಯತ್ ಡಿ.ದೇವರಾಜ ಅರಸು ಸಭಾಂಗಣದಲ್ಲಿ ಹಮ್ಮಿಕೊಂಡಿದ್ದ ಪಲ್ಸ್ ಪೋಲಿಯೋ ಲಸಿಕಾ ಅಭಿಯಾನ ಕುರಿತ ಪೂರ್ವಭಾವಿ ಸಭೆಯಲ್ಲಿ ಅವರು ಮಾತನಾಡಿದರು.

ಡಿಸೆಂಬರ್ 21 ರಂದು ಬೆಳಗ್ಗೆ 8 ರಿಂದ ಸಂಜೆ 5 ಗಂಟೆ ವರೆಗೆ ಬೂತ್ ಮಟ್ಟದಲ್ಲಿ ಲಸಿಕೆ ನೀಡಲಾಗುತ್ತದೆ. ಡಿಸೆಂಬರ್ 22 ರಿಂದ ಡಿಸೆಂಬರ್ 24 ರವರೆಗೆ ಮನೆ ಮನೆಗೆ ಭೇಟಿ ನೀಡಿ ಲಸಿಕೆ ನೀಡುವ ಕಾರ್ಯವನ್ನು ಹಮ್ಮಿಕೊಳ್ಳಲಾಗಿದೆ. ಡಿಸೆಂಬರ್ 21 ರಿಂದ 24 ರವರೆಗೆ 4 ದಿನಗಳು ಸಂಚಾರ ಕೇಂದ್ರಗಳು ಹಾಗೂ ಹೆಚ್ಚಿನ ಅಪಾಯ ಪ್ರದೇಶಗಳಲ್ಲಿ ವಿಶೇಷ ಅಭಿಯಾನ ಹಮ್ಮಿಕೊಳ್ಳಲಾಗಿದೆ ಎಂದು ತಿಳಿಸಿದರು.

ಡಿಸೆಂಬರ್ 21ಕ್ಕೆ 5 ವರ್ಷಕ್ಕಿಂತ ಕಡಿಮೆ ವಯಸ್ಸಿನ ಪ್ರತಿಯೊಂದು ಮಗುವಿಗೂ ತಪ್ಪಿದೆ ಪಲ್ಸ್ ಪೋಲಿಯೋ ಲಸಿಕೆ ಹಾಕಿಸಿ. ಪಲ್ಸ್ ಪೋಲಿಯೋ ಲಸಿಕೆ ನೀಡಲು ಅಗತ್ಯವಿರುವ ಸಿಬ್ಬಂದಿಗಳಿಗೆ ನರ್ಸಿಂಗ್ ಕಾಲೇಜಿನ ವಿದ್ಯಾರ್ಥಿಗಳನ್ನು ಬಳಸಿಕೊಳ್ಳಿ. ರೂಟ್ ಮ್ಯಾಪ್ ಗಳನ್ನು ಸಮರ್ಪಕವಾಗಿ ಮಾಡಿಕೊಳ್ಳಿ ಎಂದು ಅಧಿಕಾರಿಗಳಿಗೆ ಸೂಚನೆ ನೀಡಿದರು.

ಡಾ.ಸುದೀರ್ ನಾಯಕ್ ಮಾತನಾಡಿ, ಕಳೆದ 14 ವರ್ಷಗಳಿಂದ ದೇಶದಲ್ಲಿ ಯಾವುದೇ ಪೋಲಿಯೋ ಪ್ರಕರಣಗಳು ಕಂಡು ಬಂದಿಲ್ಲ. ಕರ್ನಾಟಕದಲ್ಲಿ 2007ರಲ್ಲಿ ಕೊನೆಯದಾಗಿ ಒಂದು ಪೋಲಿಯೋ ಪ್ರಕರಣ ಕಂಡುಬಂದಿತ್ತು. ನಂತರ ಯಾವುದೇ ಪೋಲಿಯೋ ಪ್ರಕರಣಗಳು ಕಂಡು ಬಂದಿಲ್ಲ. ಪೋಲಿಯೋ ಲಸಿಕೆ ಹಾಕಿಸಿದ ಮಗುವಿನ ಬೆರಳಿಗೆ ಇಂಕ್ ಹಾಕಲಾಗುವುದು. ಇದರಿಂದ ಯಾರಿಗೆ ಲಸಿಕೆ ಹಾಕಲಾಗಿದೆ ಎಂಬುದನ್ನು ಹಾಗೂ ಎರಡೆರಡು ಬಾರಿ ಲಸಿಕೆ ಹಾಕಿಸುವುದನ್ನು ತಪ್ಪಿಸಬಹುದಾಗಿದೆ ಎಂದು ತಿಳಿಸಿದರು.

ಜಿಲ್ಲೆಯಲ್ಲಿ 5 ವರ್ಷದೊಳಗಿನ 2,22,084 ಮಕ್ಕಳು ಇದ್ದಾರೆ.ಅವರೆಲ್ಲರಿಗೂ‌ ಲಸಿಕೆ ನೀಡುವ ಗುರಿ ಹೊಂದಲಾಗಿದೆ. 1648 ಬೂತ್ ಗಳಲ್ಲಿ ಲಸಿಕೆ ನೀಡಲಾಗುತ್ತದೆ. 50 ಮೊಬೈಲ್ ಟೀಮ್ ಗಳನ್ನು ಮಾಡಿಕೊಳ್ಳಲಾಗಿದೆ ಎಂದು ಮಾಹಿತಿ ನೀಡಿದರು.

ಸಭೆಯಲ್ಲಿ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಎಸ್.ಯುಕೇಶ್ ಕುಮಾರ್, ಮೈಸೂರು ಮಹಾನಗರ ಪಾಲಿಕೆ ಆಯುಕ್ತ ಶೇಕ್ ತನ್ವೀರ್ ಆಸಿಫ್, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಧಿಕಾರಿ ಡಾ ಕುಮಾರ್ ಸ್ವಾಮಿ, ಜಿಲ್ಲಾ ಸರ್ವೇಕ್ಷಣಾಧಿಕಾರಿ ಡಾ.ನಾಗರಾಜು, ಆರ್.ಸಿ.ಹೆಚ್ ಅಧಿಕಾರಿ ಮಹಮ್ಮದ್ ಸಿರಾಜ್ ಸೇರಿದಂತೆ ವಿವಿಧ ಇಲಾಖೆ ಅಧಿಕಾರಿಗಳು ಉಪಸ್ಥಿತರಿದ್ದರು.

ಡಿ. 21 ರಂದು ಮೈಸೂರಿನಲ್ಲಿ ಪಲ್ಸ್ ಪೋಲಿಯೋ ಲಸಿಕಾ ಕಾರ್ಯಕ್ರಮ Read More

ಮೈಸೂರಿನಲ್ಲಿ ಪತ್ರ ಬರಹಗಾರರ ಪ್ರತಿಭಟನೆ

ಮೈಸೂರು: ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಒತ್ತಾಯಿಸಿ
ಮೈಸೂರು ನಗರ ಮತ್ತು ತಾಲೂಕು ಪತ್ರ ಬರಹಗಾರರ ಒಕ್ಕೂಟ ಮೈಸೂರು ಉತ್ತರ ಉಪನೋಂದಣಾಧಿಕಾರಿ ಕಚೇರಿ ಎದುರು ಪ್ರತಿಭಟನೆ ನಡೆಸಿದರು.

ನಂತರ ಜಿಲ್ಲಾ ಉಪನೋಂದಣಾಧಿಕಾರಿ
ಹಾಗೂ ಮೈಸೂರು ತಾಲೂಕು ತಹಶೀಲ್ದಾರ್ ಅವರಿಗೆ ಮನವಿ ಸಲ್ಲಿಸಿದರು.

ಮುದ್ರಾಂಕ ಹಾಗೂ ನೋಂದಣಿ ಇಲಾಖೆಯು ಈಗಾಗಲೇ ಕಾವೇರಿ 2.0 ತಂತ್ರಾಂಶದ ಮೂಲಕ ದಾಖಲಾತಿಗಳನ್ನು ರವಾನಿಸುವ ಬಗ್ಗೆ ಕ್ರಮ ಕೈಗೊಂಡಿದ್ದು, ಈ ಸಂಬಂಧ ಆಗಿದ್ದಾಂಗ್ಗೆ ಸುಧಾರಣೆ ವಿಷಯದಲ್ಲಿ ಹಲವಾರು ಬದಲಾವಣೆಗಳನ್ನು ತಂದಿದೆ,ಆದರೆ ಸುಧಾರಣೆಗಳಿಂದಾಗಿ ಜನಸಾಮಾನ್ಯರ ನೋಂದಣಿ ಪ್ರಕ್ರಿಯೆಯ ವೇಗ ಕುಂಠಿತವಾಗುತ್ತಿದೆ ಎಂದು ಪ್ರತಿಭಟನಾ ನಿರತರು ತಿಳಿಸಿದರು.

ಜತೆಗೆ ಪತ್ರಬರಹಗಾರರಿಗೆ ಸಮರ್ಪಕ ಸೇವೆಯನ್ನು ಜನ ಸಾಮಾನ್ಯರಿಗೆ ನೀಡುವುದು ದುಸ್ಸಾಹಸವಾಗಿದೆ. ನೋಂದಣಿ ಪ್ರಕ್ರಿಯೆಯಲ್ಲಿ ಈಗಾಗಲೇ ವಿಭಾಗ ಪತ್ರ, ದಾನಪತ್ರ ಹಾಗೂ ಇನ್ನಿತರೆ ದಾಖಲಾತಿಗಳನ್ನು ಅಪ್‌ಲೋಡ್ ಮಾಡುವುದು ಸಹಾ ಸಾಧ್ಯವಾಗದ ಕಾರಣ ಜನಸಾಮಾನ್ಯರು ತಮ್ಮ ಕುಟುಂಬದ ಸ್ಥಿರಾಸ್ತಿಗಳನ್ನು ನೋಂದಣಿ ಮಾಡಿಕೊಳ್ಳುವುದು ಸಾಧ್ಯವಿಲ್ಲದಂತಾಗಿದೆ ಎಂದು ತಿಳಿಸಿದರು .

ಸುಧಾರಣೆಯ ನೆಪದಲ್ಲಿ ಪತ್ರಬರಹಗಾರರು, ವಕೀಲರು ಹಾಗೂ ಜನಸಾಮಾನ್ಯರಿಗೆ ಯಾವುದೇ ರೀತಿಯಲ್ಲಿ ವಿಷಯಗಳು ತಿಳಿಯದ ಕಾರಣ ಇಲಾಖೆಯಿಂದ ರಹದಾರಿ ಪಡೆದಿರುವ ಪತ್ರ ಬರಹಗಾರರು ಹಾಗೂ ಜನಸಾಮಾನ್ಯರು ತೀರ್ವ ತೊಂದರೆ ಅನುಭವಿಸುವಂತಾಗಿದೆ. ಆದ ಕಾರಣ ಸಂಬಂಧಪಟ್ಟ ಅಧಿಕಾರಿಗಳು ಈ ವಿಚಾರವನ್ನು ಇಲಾಖೆಯ ಉನ್ನತ ಅಧಿಕಾರಿಗಳು ಹಾಗೂ ಸಚಿವರಿಗೆ ಮನದಟ್ಟು ಮಾಡುವ ಮೂಲಕ ಜನಸಾಮಾನ್ಯರ ನೋಂದಣಿ ಪ್ರಕ್ರಿಯೆಯನ್ನು ಪತ್ರ ಬರಹಗಾರರು ಸುಲಲಿತವಾಗಿ ನಡೆಸಲು ಅನುವು ಮಾಡಿಕೊಡಬೇಕೆಂದು ಪ್ರತಿಭಟನೆಕಾರರು ಒತ್ತಾಯಿಸಿದರು.

ಪ್ರತಿಭಟನೆಯಲ್ಲಿ ಒಕ್ಕೂಟದ ಅಧ್ಯಕ್ಷ ನಿಸಾರ್ ಅಹಮದ್ ಖಾನ್, ಉಪಾಧ್ಯಕ್ಷ‌ ಎಂ ಎಸ್ ಧನಂಜಯ್,ಕಾರ್ಯದರ್ಶಿ ಕೆ ಆರ್ ಉದಯ್ ಕುಮಾರ್, ಖಜಾಂಜಿ ಎಂ ಎಸ್ ನರಸಿಂಹಮೂರ್ತಿ, ಸಂಚಾಲಕ ಎಂ ಗಣೇಶ್, ನಿರ್ದೇಶಕರುಗಳಾದ ಕೆ ಆರ್ ಸತ್ಯನಾರಾಯಣ್, ಎಂ ಎನ್. ದೇವರಾಜು, ನಾಗಭೂಷಣ ಆರಾಧ್ಯ, ಮಹಾದೇವ್, ಕುಮಾರ್, ಪಣಿರಾಜ್ ಎಸ್, ಚಂದ್ರಶೇಖರ್ ಎಸ್, ಎನ್ ದಿನೇಶ್ ಕುಮಾರ್, ಎಸ್ ಎಸ್ ವೇಣು, ಜಯಲಕ್ಷ್ಮಿ ಹಾಗೂ ಇನ್ನಿತರ ಪತ್ರ ಬರಹಗಾರರು ಪಾಲ್ಗೊಂಡಿದ್ದರು.

ಮೈಸೂರಿನಲ್ಲಿ ಪತ್ರ ಬರಹಗಾರರ ಪ್ರತಿಭಟನೆ Read More

ಪ್ರಜಾಪ್ರಭುತ್ವದ ಮೌಲ್ಯ ತಿಳಿಸಲುವಿದ್ಯಾರ್ಥಿಗಳಿಗೆ ತಾ.ಮಟ್ಟದ ಪ್ರಬಂಧ ಸ್ಪರ್ಧೆ

ನಂಜನಗೂಡು: ನಂಜನಗೂಡಿನ ಬಾಲಕರ ಸರ್ಕಾರಿ ಪದವಿ ಪೂರ್ವ ಕಾಲೇಜಿನಲ್ಲಿ
“ಮತದಾರರಿಗೆ ಶಿಕ್ಷಣ ನೀಡುವಲ್ಲಿ ಹಾಗೂ ಮತದಾರರ ಪಟ್ಟಿಯನ್ನು ಶುದ್ಧೀಕರಿಸುವಲ್ಲಿ ಮತಗಟ್ಟೆ ಮಟ್ಟದ ಅಧಿಕಾರಿಗಳ ಪಾತ್ರ” ಎಂಬ ವಿಷಯದ ಮೇಲೆ ಪ್ರಬಂಧ ಸ್ಪರ್ಧೆಯನ್ನು ಆಯೋಜಿಸಲಾಯಿತು.

ಚುನಾವಣಾ ಜಾಗೃತಿ ಮತ್ತು ಪ್ರಜಾಪ್ರಭುತ್ವದ ಮೌಲ್ಯಗಳನ್ನು ಯುವಜನರಲ್ಲಿ ಬೇರೂರಿಸುವ ಉದ್ದೇಶದಿಂದ ನಂಜನಗೂಡಿನ ನೋಡಲ್ ಕೇಂದ್ರವೂ ಆದ ಬಾಲಕರ ಸರ್ಕಾರಿ ಪದವಿ ಪೂರ್ವ ಕಾಲೇಜಿನಲ್ಲಿ ತಾಲೂಕು ಮಟ್ಟದ ಪ್ರಬಂಧ ಸ್ಪರ್ಧೆಯನ್ನು ಏರ್ಪಡಿಸಲಾಯಿತು.

ಕಾರ್ಯಕ್ರಮವನ್ನು ಉದ್ಘಾಟಿಸಿದ ಕಾಲೇಜಿನ ಪ್ರಾಂಶುಪಾಲರಾದ ಸಿ.ಆರ್.ದಿನೇಶ್ ಅವರು ಮಾತನಾಡಿ,ಮತದಾರರ ಪಟ್ಟಿ ನಿಖರವಾಗಿರುವುದು ಪ್ರಜಾಪ್ರಭುತ್ವದ ಶುದ್ಧತೆಯನ್ನು ಕಾಪಾಡುವ ಪ್ರಮುಖ ಹಂತ. ಈ ಕಾರ್ಯದಲ್ಲಿ ಬಿಎಲ್ಒ ಗಳು ನಿಷ್ಠೆಯಿಂದ ಮತ್ತು ತಳಮಟ್ಟದಲ್ಲಿ ದುಡಿಯುತ್ತಾರೆ,ವಿದ್ಯಾರ್ಥಿಗಳು ಇವರ ಕಾರ್ಯವನ್ನು ಅರ್ಥಮಾಡಿಕೊಳ್ಳುವುದ
ರಿಂದ ಮುಂದಿನ ದಿನಗಳಲ್ಲಿ ಜವಾಬ್ದಾರಿಯುತ ಮತದಾರರಾಗಿ ರೂಪಗೊಳ್ಳಬಹುದು ಎಂದು ಹೇಳಿದರು.

ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದ ಬಾಲಕಿಯರ ಸರ್ಕಾರಿ ಪದವಿ ಪೂರ್ವಕಾಲೇಜಿನ ರಾಜ್ಯಶಾಸ್ತ್ರ ಉಪನ್ಯಾಸಕ ರಾಘವೇಂದ್ರ ಅವರು ಮಾತನಾಡಿ, “ಮತದಾನ ಪಟ್ಟಿ ಶುದ್ಧೀಕರಣ, ಮನೆಮನೆಗೆ ಸರ್ವೇ, ಹೊಸ ಮತದಾರ ನೋಂದಣಿ, ನಕಲು ಹೆಸರುಗಳು ಮತ್ತು ಮೃತರ ಹೆಸರುಗಳ ತಿದ್ದುಪಡಿ,ಇವುಗಳೆಲ್ಲವು ಚುನಾವಣೆ ಸುಗಮವಾಗಿ ನಡೆಯಲು ಅಗತ್ಯವಾದ ಮೂಲಭೂತ ಕಾರ್ಯಗಳು. ಜನರಿಗೆ ಚುನಾವಣೆ ಜಾಗೃತಿ ನೀಡುವುದು ಸಹ ಬಿಎಲ್ಒ ಗಳ ಮಹತ್ವದ ಹೊಣೆಗಾರಿಕೆ ಎಂದು ಹೇಳಿದರು.

ಪ್ರಬಂಧ ಸ್ಪರ್ಧೆಯ ವಿಷಯವನ್ನು ವಿದ್ಯಾರ್ಥಿಗಳಿಗೆ ಇನ್ನಷ್ಟು ಮನಮುಟ್ಟುವಂತೆ ಮಾಡುವ ವಿಧಾನವನ್ನು ಕಾರ್ಯಕ್ರಮದ ಸಂಯೋಜಕರಾದ ಹೆಚ್.ಕೆ.ಸ್ವಾಮಿ ಗೌಡ ಅವರು ಮಾಹಿತಿ ನೀಡಿದರು.

ಕಾರ್ಯಕ್ರಮದಲ್ಲಿ ಉಪನ್ಯಾಸಕರಾದ ಲಿಂಗಣ್ಣ ಸ್ವಾಮಿ ಹೇಮಕುಮಾರ್,ಡಾ. ಬಿ.ಜೆ ಗೋಪಾಲಕೃಷ್ಣ, ಶ್ರೀಧರ್ ,ಸೌಮ್ಯ ಉಪಸ್ಥಿತರಿದ್ದರು.

ಮೊದಲ ಮೂರು ಸ್ಥಾನ ಗಳಿಸಿದ ವಿದ್ಯಾರ್ಥಿಗಳು ಜಿಲ್ಲಾ ಮಟ್ಟಕ್ಕೆ ಆಯ್ಕೆಯಾಗಿದ್ದಾರೆ.

ಕನ್ನಡ ಮಾದ್ಯಮ:
ಪ್ರಥಮ ಸ್ಥಾನ ಸೌಮ್ಯ. ಕಾರ್ಮಲ್ ಪಿಯು ಕಾಲೇಜ್ ನಂಜನಗೂಡು.
ದ್ವಿತೀಯ ಸ್ಥಾನ ಆರತಿ. ಬಾಲಕಿಯರ ಸ.ಪ.ಪೂ.ಕಾಲೇಜು ನಂಜನಗೂಡು,
ತೃತೀಯ ಸ್ಥಾನ ಶಾಲಿನಿ. ಜೆಎಸ್ಎಸ್ ಪ ಪೂ ಕಾ ನಂಜನಗೂಡು.

ಆಂಗ್ಲ ಮಾಧ್ಯಮ:
ಪ್ರಥಮ ಸ್ಥಾನ ಮರಿಯಾ ಸರ್ವತ್ ಪಿ.ಎನ್ ಬಾಲಕರ ಸರ್ಕಾರಿ ಪ ಪೂ. ಕಾಲೇಜು ನಂಜನಗೂಡು ,
ದ್ವಿತೀಯ ಸ್ಥಾನ ಐಶ್ವರ್ಯ ಎಂ, ಕಾರ್ಮಲ್ ಪ.ಪೂ. ಕಾಲೇಜು ನಂಜನಗೂಡು ,
ತೃತೀಯ ಸ್ಥಾನ ಪೂರ್ಣಿಮಾ ಡಿ.ಬಾಲಕರ ಸರ್ಕಾರಿ ಪ.ಪೂ. ಕಾಲೇಜು ನಂಜನಗೂಡು.

ಪ್ರಜಾಪ್ರಭುತ್ವದ ಮೌಲ್ಯ ತಿಳಿಸಲುವಿದ್ಯಾರ್ಥಿಗಳಿಗೆ ತಾ.ಮಟ್ಟದ ಪ್ರಬಂಧ ಸ್ಪರ್ಧೆ Read More

ಮಹಾಜನ ಪದವಿ ಪೂರ್ವ ಕಾಲೇಜಿನಲ್ಲಿ ಅಪರಾಧ ತಡೆ ಮಾಸಾಚಾರಣೆ

ಮೈಸೂರು: ಮೈಸೂರಿನ ಜಯಲಕ್ಷ್ಮಿಪುರಂ ಪೊಲೀಸ್ ಠಾಣೆ ವತಿಯಿಂದ ಮಹಾಜನ ಪದವಿಪೂರ್ವ ಕಾಲೇಜಿನಲ್ಲಿ
ಅಪರಾಧ ತಡೆ ಮಾಸಾಚಾರಣೆ ಹಮ್ಮಿಕೊಳ್ಳಲಾಯಿತು.

ಈ ವೇಳೆ ಜಯಲಕ್ಷ್ಮಿ ಪುರಂ ಠಾಣೆಯ ಸಬ್ ಇನ್ಸ್ಪೆಕ್ಟರ್ ನಾರಾಯಣ್ ಅವರು ಮಾತನಾಡಿ ಸೈಬರ್ ವಂಚನೆ, ಸಾಮಾಜಿಕ ಜಾಲತಾಣಗಳಲ್ಲಿ ವಿದ್ಯಾರ್ಥಿಗಳ ದುರ್ಬಳಕೆ ಮತ್ತು ಆನ್ಲೈನ್ ಗೇಮಿಂಗ್ ಚಟಗಳಿಂದ ದೂರವಿರುವಂತೆ ವಿದ್ಯಾರ್ಥಿಗಳಿಗೆ ಕರೆ ನೀಡಿದರು.

ಇಂತಹ ಚಟುವಟಿಕೆಗಳು ಎಲ್ಲಾದರೂ ಕಂಡುಬಂದರೆ ಯಾವುದೇ ಸಂಧರ್ಬದಲ್ಲಿ ಪೋಷಕರ ಸಹಾಯದಿಂದ ಪೊಲೀಸರಿಗೆ ದೂರು ನೀಡಿ ನಿಮ್ಮ ಜವಾಬ್ದಾರಿ ಮೆರೆಯಬೇಕು ಎಂದು ನಾರಾಯಣ್ ಸಲಹೆ ನೀಡಿದರು.

ಕಾಲೇಜು ಪ್ರಾಂಶುಪಾಲ ವಿಶಕಂಠಮೂರ್ತಿ ಅವರು ಮಾತನಾಡಿ ನಮ್ಮ ಕಾಲೇಜಿನ ವಿದ್ಯಾರ್ಥಿಗಳು ಯಾವುದೇ ದುಷ್ಟ ಚಟಗಳಿಗೆ ಬಲಿಯಾಗುವುದಿಲ್ಲ ಎಂದು ಸಾಕ್ಷಿಕರಿಸಲು ನಾನು ಪ್ರತಿಯೊಂದು ದಿನವೂ ಖುದ್ದಾಗಿ ವೀಕ್ಷಿಸುತ್ತೇನೆ ನಮ್ಮ ವಿದ್ಯಾರ್ಥಿ ಗಳು ಶೈಕ್ಷಣಿಕವಾಗಿ ಮತ್ತು ಸಾಂಸ್ಕೃತಿಕವಾಗಿ ಆಟೋಟಗಳಲ್ಲಿ ಬಹಳ ಚಟುವಟಿಕೆಯಿಂದ ಇದ್ದಾರೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.

ಆದರೂ ನಾವು ಮುಂದಿನದಿನಗಳಲ್ಲಿ ವಿದ್ಯಾರ್ಥಿಗಳಿಗಾಗಿ ಸಹಾಯವಾಣಿ ಸಮಿತಿ ರಚಿಸಿ ತಕ್ಷಣ ಕಾರ್ಯರಂಭ ಮಾಡುತ್ತೇವೆ ಮತ್ತು ಪೋಷಕರ ಜೊತೆ ಈ ಸಂಬಂಧ ಸಭೆ ಮಾಡಿ ಅವರ ಸಹಾಯವನ್ನು ಪಡೆದು ಉತ್ತಮ ವಾತಾವರಣ ನಿರ್ಮಿಸುತ್ತೇವೆ ಇದಕ್ಕೆ ನಮ್ಮ ಆಡಳಿತ ಮಂಡಳಿಯವರು ಸಹಾ ಬಹಳ ಸಹಕಾರಿ ಯಾಗಿದ್ದಾರೆ ಎಂದು ತಿಳಿಸಿದರು.

ಕಾರ್ಯಕ್ರಮದಲ್ಲಿ ಕನ್ನಡ ವಿಭಾಗದ ಮುಖ್ಯಸ್ಥರಾದ ಸ್ವಾಮಿ ಗೌಡ, ರಸಾಯನ ಶಾಸ್ತ್ರ ವಿಭಾಗದ ಮುಖ್ಯಸ್ಥರಾದ ಕೆ ಆರ್. ರಾಘವೇಂದ್ರ ಮತ್ತು ಎಲ್ಲ ವಿಭಾಗದ ವಿದ್ಯಾರ್ಥಿಗಳು ಹಾಜರಿದ್ದರು.

ಮಹಾಜನ ಪದವಿ ಪೂರ್ವ ಕಾಲೇಜಿನಲ್ಲಿ ಅಪರಾಧ ತಡೆ ಮಾಸಾಚಾರಣೆ Read More