ಸಭಾಪತಿ ಹೊರಟ್ಟಿ ಅವರ ನಡೆ ಅನುಮಾನಾಸ್ಪದ – ಜಗದೀಶ್ ಚಂದ್ರ

Spread the love

ಬೆಂಗಳೂರು:‌‌ ವಿಧಾನ ಪರಿಷತ್ ನಲ್ಲಿ ಸಿ.ಟಿ. ರವಿ ರವರ ಸ್ತ್ರೀನಿಂದನೆ, ನಂತರದಲ್ಲಿ ನಡೆದ ಎಲ್ಲಾ ಘಟನೆಗಳು ಶಾಂತಿಪ್ರಿಯ ಕರ್ನಾಟಕಕ್ಕೆ ಕಪ್ಪುಮಸಿ ಬಳಿದಂತಾಗಿದೆ ಎಂದು ಆಮ್ ಆದ್ಮಿ ಪಕ್ಷದ ಬೆಂಗಳೂರು ನಗರ ಪ್ರಧಾನ ಕಾರ್ಯದರ್ಶಿ ಜಗದೀಶ್ ಚಂದ್ರ ಬೇಸರ ವ್ಯಕ್ತಪಡಿಸಿದರು.

ಬೆಳಗಾವಿ ಅಧಿವೇಶನದಲ್ಲಿ ನಡೆದ ಸಿ.ಟಿ .ರವಿ ಮತ್ತು ಲಕ್ಷ್ಮೀ ಹೆಬ್ಬಾಳ್ಕರ್ ಪ್ರಕರಣದ ಬಗ್ಗೆ ಸದನದ ಗೌರವ ಕಾಪಾಡಿ ಎಂಬ ಘೋಷವಾಕ್ಯದೊಂದಿಗೆ ಆಮ್ ಆದ್ಮಿ ಪಕ್ಷದ ಕಾರ್ಯಕರ್ತರು ಪಕ್ಷದ ಕಚೇರಿ ಮುಂಭಾಗದಲ್ಲಿ ಮಂಗಳವಾರ ಹಮ್ಮಿಕೊಂಡಿದ್ದ ಕಪ್ಪು ಪಟ್ಟಿ ಧರಿಸಿ ಖಂಡನೆ ಸಭೆಯಲ್ಲಿ ಅವರು ಮಾತನಾಡಿದರು.

ಸದನದಲ್ಲಿಯೇ ಮಹಿಳೆ ಅದರಲ್ಲಿಯೂ ಪ್ರಮುಖ ಮಂತ್ರಿಯೊಬ್ಬರಿಗೆ ಈ ರೀತಿಯ ನಿಂದನೆ ಆಗುವುದಿದ್ದರೆ ಮಹಿಳೆಯರಿಗೆ ಕರ್ನಾಟಕವು ಎಷ್ಟು ಸುರಕ್ಷಿತ ಎಂಬ ಅನುಮಾನ ಕಾಡುತ್ತದೆ. ಸಿ.ಟಿ. ರವಿ ವರ್ತನೆ ಯಾವುದೇ ನಾಗರೀಕ ಸಮಾಜ ಕ್ಷಮಿಸುವುದಿಲ್ಲ ಎಂದು ಹೇಳಿದರು.

ಸಭಾಪತಿಗಳು ತೆಗೆದುಕೊಂಡಿರುವ ರೂಲಿಂಗ್ ಸಹ ಪಕ್ಷಪಾತ ಮಾಡಿರುವ ಅನುಮಾನ ರಾಜ್ಯದ ಜನತೆಗೆ ಕಾಡಲು ಆರಂಭಿಸಿದೆ ಎಂದು ತಿಳಿಸಿದರು.

ಘಟನೆ ನಡೆದ ದಿನವೇ ಸಿ.ಟಿ.ರವಿಗೆ ಕ್ಲೀನ್ ಚಿಟ್ ನೀಡುವಂತಹ ಪ್ರಕ್ರಿಯೆಗಳು ಬಸವರಾಜ ಹೊರಟ್ಟಿ ಅವರಿಂದ ಆಗಿದೆ. ನಂತರದ ದಿನಗಳಲ್ಲಿ ಸಭಾಪತಿಗಳ ನೇತೃತ್ವದಲ್ಲಿ ಅಲ್ಲಿದ್ದ ಎಲ್ಲಾ ಶಾಸಕರುಗಳನ್ನು ಕರೆಸಿ ವಿಚಾರಣೆ ನಡೆಸದೆ ಪಕ್ಷಪಾತ ರೀತಿಯಲ್ಲಿ ರೂಲಿಂಗ್ ನೀಡಿರುವುದು ಅನುಮಾನ ಮೂಡುವಂತಿದೆ ಎಂದು ಜಗದೀಶ್ ಚಂದ್ರ ಆರೋಪಿಸಿದರು.

ಕೋಟ್ಯಾಂತರ ರೂಪಾಯಿಗಳ ಜನತೆಯ ತೆರಿಗೆ ಹಣವನ್ನು ಅನವಶ್ಯಕವಾಗಿ ಈ ರೀತಿ ಸದನದ ಗೌರವ ಹಾಳು ಮಾಡುವ ರೀತಿಯಲ್ಲಿ ದುರ್ವಿನಿಯೋಗವಾದರೆ ಆಮ್ ಆದ್ಮಿ ಪಕ್ಷ ಎಂದಿಗೂ ಸಹಿಸುವುದಿಲ್ಲ ಎಂದು ಎಚ್ಚರಿಸಿದರು.

ಶಾಸಕರು ತಮ್ಮ ವೈಯಕ್ತಿಕ ದ್ವೇಷಗಳನ್ನು ಸಾಧಿಸಲು ಚಿಂತಕರ ಚಾವಡಿಯಂತಹ ಮೇಲ್ಮನೆಯನ್ನು ಬಳಸಿಕೊಳ್ಳುತ್ತಿರುವುದು ನಿಜಕ್ಕೂ ದುರದೃಷ್ಟಕರ ಇಂತಹ ಚಾರಿತ್ರ್ಯ ಹೀನ, ಭ್ರಷ್ಟ ವ್ಯಕ್ತಿಗಳು ಮೇಲ್ಮನೆಗೆ ಬರುತ್ತಿರುವುದನ್ನು ಎಲ್ಲ ಪಕ್ಷಗಳು ತಡೆಗಟ್ಟಬೇಕು ಎಂದು ಜಗದೀಶ್ ಚಂದ್ರ ಒತ್ತಾಯಿಸಿದರು.

ಪಕ್ಷದ ಅನೇಕ ಮುಖಂಡರುಗಳು ಹಾಗೂ ಕಾರ್ಯಕರ್ತರು ಬಾಯಿಗೆ ಬಟ್ಟೆ ಕಟ್ಟಿಕೊಂಡು ಖಂಡನಾ‌ ಸಭೆಯಲ್ಲಿ
ಭಾಗವಹಿಸಿದ್ದರು.

ಸಿ.ಟಿ.ರವಿ ಶಾಸಕತ್ವ ರದ್ದು ಗೊಳಿಸಿ,ಮಹಿಳಾ ವಿರೋಧಿ ಸಿ.ಟಿ.ರವಿ ಉಚ್ಛಾಟನೆ ಅಸಗಬೇಕು,ಸದನದ ಸದಸ್ಯರೇ ರಾಜ್ಯದ ಜನ ನಿಮ್ಮನ್ನು ಕ್ಷಮಿಸುವುದಿಲ್ಲ,ಸದನದ ಗೌರವ ಕಾಪಾಡಿ ಮುಂತಾದ ಭಿತ್ತಿಪತ್ರ‌ ಪ್ರದರ್ಶಿಸಿ ಆಕ್ರೋಶ‌ ವ್ಯಕ್ತಪಡಿಸಿದರು.