ಮೈಸೂರು: ಶೇ.15 ರಷ್ಟು ಸಾರಿಗೆ ಬಸ್ ದರ ಹೆಚ್ಚಳ ಮಾಡಿರುವ ರಾಜ್ಯ ಸರ್ಕಾರದ ಕ್ರಮವನ್ನು ಖಂಡಿಸಿ ಕರ್ನಾಟಕ ಸೇನಾ ಪಡೆ ಸದಸ್ಯರು ಹಳೆ ಜಿಲ್ಲಾಧಿಕಾರಿಗಳ ಕಚೇರಿ ಮುಂಭಾಗ ಪ್ರತಿಭಟನೆ ನಡೆಸಿದರು.
ಪ್ರತಿಭಟನೆ ನೇತೃತ್ವ ವಹಿಸಿದ್ದ ಕರ್ನಾಟಕ ಸೇನಾ ಪಡೆ ಜಿಲ್ಲಾಧ್ಯಕ್ಷ ತೇಜೇಶ್ ಲೋಕೇಶ್ ಗೌಡ ಮಾತನಾಡಿ, ರಾಜ್ಯ ಸರ್ಕಾರ ಅಧಿಕಾರಕ್ಕೆ ಬಂದಾಗಿನಿಂದ ದಿನ ಬೆಳಗಾದರೆ ಒಂದಲ್ಲ ಒಂದು ಬೆಲೆ ಏರಿಕೆ ಮಾಡಿ, ಕನ್ನಡಿಗರ ರಕ್ತ ಹೀರುತ್ತಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ರಾಜ್ಯ ಸರ್ಕಾರದ ಬಕಾಸುರ ಹೊಟ್ಟೆ ತುಂಬಿಸಲು ಕನ್ನಡಿಗರು ಇನ್ನೆಷ್ಟು ತೆರಿಗೆ ಶುಲ್ಕ ತೆತ್ತಬೇಕೋ ಗೊತ್ತಿಲ್ಲ ಎಂದು ಕಿಡಿಕಾರಿದರು.
20 ರೂ ಇದ್ದ ಸ್ಟ್ಯಾಂಪ್ ಪೇಪರ್ ಬೆಲೆಯನ್ನು 100 ರೂಪಾಯಿಗೆ ಏರಿಸಿದ್ದಾರೆ. ರಿಜಿಸ್ಟ್ರೇಷನ್ ದರ, ಆಸ್ತಿ ತೆರಿಗೆ ದರ 30-40% ಏರಿಕೆಯಾಗಿದೆ. ವಿದ್ಯುತ್ ದರ, ಜನನ ಮರಣ ಪ್ರಮಾಣ ಪತ್ರ ಶುಲ್ಕ, ಹಾಲಿನ ದರ ಜೊತೆಗೆ ಈಗ ಕೆ ಎಸ್ ಆರ್ ಟಿ ಸಿ ಬಸ್ ದರವನ್ನು ಶೇ 15 ರಷ್ಟು ಏರಿಸಿ ಹೊಸ ವರ್ಷದ ಸಂಭ್ರಮದಲ್ಲಿದ್ದ ಜನರಿಗೆ ಶಾಕ್ ನೀಡಿದೆ ಎಂದು ಕಿಡಿಕಾರಿದರು.
ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬರಲು ಹಲವಾರು ಬಿಟ್ಟಿ ಭಾಗ್ಯಗಳನ್ನು ಘೋಷಣೆ ಮಾಡಿ, ಈಗ ರಾಜ್ಯವನ್ನು ಆರ್ಥಿಕ ಸಂಕಷ್ಟಕ್ಕೆ ದೂಡುತ್ತಿದೆ. ಶ್ರೀಲಂಕಾ, ದೆಹಲಿಯಲ್ಲಾದಂತೆ ನಮ್ಮ ರಾಜ್ಯವು ಆರ್ಥಿಕ ದೀವಾಳಿಯಾಗಲಿದೆ ಎಂದು ತೇಜೇಶ್ ಲೋಕೇಶ್ ಗೌಡ ಆತಂಕ ವ್ಯಕ್ತಪಡಿಸಿದರು.
ಅತ್ಯದಿಕ ಬಾರಿ ಬಜೆಟ್ ಮಂಡನೆ ಮಾಡಿರುವ ಮುಖ್ಯಮಂತ್ರಿ ಸಿದ್ದರಾಮಯ್ಯನವರು ಹಣಕಾಸಿನ ವ್ಯವಸ್ಥೆಯನ್ನು ನೋಡಿಕೊಳ್ಳದೆ, ಕೆಎಸ್ಆರ್ಟಿಸಿ ಸಿಬ್ಬಂದಿಗೆ ಸರಿಯಾಗಿ ಸಂಬಳ ನೀಡದೆ, ಶಕ್ತಿ ಯೋಜನೆಗೆ ಹಣ ಹೊಂದಿಸಲು ಏಕಾಏಕಿ ಶೇ 15 ರಷ್ಟು ಬಸ್ ದರ ಏರಿಕೆ ಮಾಡಿರುವುದು ಅತ್ಯಂತ ನೋವಿನ ಸಂಗತಿ ಆಗಿದೆ ಎಂದು ಬೇಸರಪಟ್ಟರು.
ಈ ಕೂಡಲೇ ಮುಖ್ಯಮಂತ್ರಿಗಳು ಏರಿಕೆ ಮಾಡಿರುವ ಸಾರಿಗೆ ದರವನ್ನು ವಾಪಸ್ ಪಡೆಯಬೇಕು ಇಲ್ಲದಿದ್ದರೆ ಉಗ್ರ ಪ್ರತಿಭಟನೆ ಮಾಡುತ್ತೇವೆ ಎಂದು ಎಚ್ಚರಿಕೆ ನೀಡಿದರು.

ಕೃಷ್ಣಪ್ಪ, ಪ್ರಭುಶಂಕರ್, ಹನುಮಂತಯ್ಯ, ಪ್ರಭಾಕರ್, ನೇಹ, ಸಿಂಧುವಳಿ ಶಿವಕುಮಾರ್, ಭಾಗ್ಯಮ್ಮ, ಡಾ . ಶಾಂತರಾಜೇಅರಸ್, ನಾಗರಾಜು, ಶುಭಶ್ರೀ, ವರ್ಕುಡ್ ಕೃಷ್ಣೇಗೌಡ, ಸ್ವಾಮಿ ಗೌಡ, ರಘುಅರಸ್, ಪ್ರದೀಪ್, ದರ್ಶನ್ ಗೌಡ, ಚಂದ್ರಶೇಖರ್, ತ್ಯಾಗರಾಜ್, ಬಸವರಾಜು, ಗುರುಮಲ್ಲಪ್ಪ ಹಾಗೂ ರಾಮಕೃಷ್ಣೇಗೌಡ ಮತ್ತಿತರರು ಪ್ರತಿಭಟನೆಯಲ್ಲಿ ಪಾಲ್ಗೊಂಡಿ ದ್ದರು.