ಮೈಸೂರು: ಯುವ ದಸರಾ ಕಾರ್ಯಕ್ರಮದಲ್ಲಿ ಬಾಲಿವುಡ್ ಖ್ಯಾತ ಗಾಯಕ ಜುಬಿನ್ ನೌಟಿಯಾಲ ಅವರ ಹಾಡಿನ ಮೋಡಿಗೆ ಯುವಜನತೆ ಫುಲ್ ಫಿದಾ ಆಗಿಬಿಟ್ಟರು.
ವಿಶ್ವ ವಿಖ್ಯಾತ ಮೈಸೂರು ದಸರಾ ಮಹೋತ್ಸವ ಅಂಗವಾಗಿ ನಗರದ ಉತ್ತನಹಳ್ಳಿ ರಿಂಗ್ ರಸ್ತೆಯ ಜ್ವಾಲಾಮುಖಿ ತ್ರಿಪುರ ಸುಂದರಿ ದೇವಸ್ಥಾನದ ಬಳಿ ಯುವ ದಸರಾ ಉಪ ಸಮಿತಿಯಿಂದ ಆಯೋಜಿಸಲಾಗಿದ್ದ ಮೂರನೇ ದಿನದ ಸಂಗೀತ ಸಂಜೆ ಕಾರ್ಯಕ್ರಮದಲ್ಲಿ ಬಾಲಿವುಡ್ ಖ್ಯಾತ ಗಾಯಕ ಜುಬಿನ್ ನೌಟಿಯಾಲ್ ಅವರ ಹೇ ತೋ ದಿಲ್ ಯಹ್ ರುಕ್ ಜಾ ಜರಾ ಎಂಬ ಹಾಡಿಗೆ ಯುವ ಸಮೂಹ ಕುಣಿದು ಕುಪ್ಪಳಿಸಿದರು.
ಗಿಟಾರ್ ಹಿಡಿದು ಹಿಂದಿ ಭಾಷೆಯ ವಿಶೇಷವಾದ ಹಾಡುಗಳಾದ ಮೊಹಬ್ಬತ್ ಕೆ ಮೇರಿ.. ಫಹಲಾ ಸಫರ್ ಮೇ.., ಏಕ್ ಮುಲಾಕಾತ್ ಹು.. ತ ಮೇರೆ ಪಾಸ್ ಹೋ.., ನಾ ಚಯನೆ ಸೇ ಜೀನಾ ದೇದಿ, ನಾ ಚಯನೇ ಸೇ ಮರನಾ ದೇದಿ.., ಜಬ್ ಜಬ್ ತೇರೆ.. ಜಿಸ್ ಮೇ ಕಾ.. ಸೇರಿದಂತೆ ಇತ್ತೀಚೆಗಷ್ಟೇ ಬಿಡುಗಡೆಗೊಂಡಿದ್ದ ಸಯಾರಾ ಚಿತ್ರದ ಗೀತೆಗೆ ಮೊದಲ ಬಾರಿಗೆ ಯುವ ದಸರಾ ವೇದಿಕೆಯಲ್ಲಿ ತುಜಸೇ ದೂರ್ ಮೇ ಕಿ ವಜಾ ಕೆ ಲಿಯೇ ಹೂ…. ಗೀತೆ ಹಾಡಿ ಮನಸೂರೆಗೊಂಡರು.
ತೆಲುಗು ಭಾಷಾ ಗಾಯಕ ಶ್ರೀರಾಮ್ ಚಂದ್ರ ಅವರ ಅಲ್ಲಾ ತೂ ಆಯಿರೆ.. ಎಂಬ ಹಾಡಿನ ಮೂಲಕ ಪ್ರಾರಂಭಿಸಿ, ಹಿಂದಿ ಹಾಡುಗಳಾದ ಯೇ ಜವಾನಿ ಹೇ ದಿವಾನಿ ಚಿತ್ರದ ಸುಬಾನಲ್ಲಾ ಜೋ ಹೋ ರಹಾ ಹೇ… ಜವಾನ್ ಚಿತ್ರದ ಚಲಿಯಾ ತೇರಿ ಓರ್ ಕೇ, ಚಲೆಯಾ ಹೇ ಜೋರ್ ಕೇ.., ಕೇಸರಿಯಾ ತೇರಾ.., ರಬನೆ ಬನಾಯಾ.., ಎಂಬ ಗಾಯನದೊಂದಿಗೆ ನೃತ್ಯದ ಝಳಕ್ ಅನ್ನು ಸಹ ಪ್ರದರ್ಶಿಸಿದರು.
ಜೊತೆಗೆ ಕನ್ನಡದ ಮುಂಗಾರು ಮಳೆ ಚಿತ್ರದ ಅನಿಸುತಿದೆ ಯಾಕೋ ಇಂದು.. ನೀನೇನೆ ನನ್ನವಳೆಂದು ಹಾಡುವ ಮೂಲಕ ಕನ್ನಡಿಗರ ಮನ ಗೆದ್ದರು.
ಬ್ರಹ್ಮಾಸ್ತ್ರದ ದೇವಾ ದೇವಾ ಹೋ. ದಿ ಬೀಸ್ಟ್ ಚಿತ್ರ ಸೇರಿದಂತೆ ಸಾಕಷ್ಟು ಪ್ರಸಿದ್ಧ ತೆಲುಗು, ಹಿಂದಿ ಚಿತ್ರಗಳ ಹಾಡನ್ನು ಹಾಡುವ ಮೂಲಕ ನೆರೆದಿದ್ದ ಯುವ ಸಮೂಹ ಕುಣಿಯುವಂತೆ ಮಾಡಿದರು.
ಇದಕ್ಕೂ ಮುನ್ನ ಗಾಯಕ ಚಿನ್ಮಯ್ ಆತ್ರೇಯ ಅವರಿಂದ ಕರಾಟೆ ಕಿಂಗ್ ಶಂಕರ್ ಅವರ ಒಂದೇ ಒಂದು ಆಸೆಯು ತೋಳಲಿ ಬಳಸಲು.., ತೂ ಹೀ ಮೇರಿ ಶಬಿ ಹೇ ಸುಬಾ ಹೇ.. ತೂ ಹೀ ಮೇರಿ ದುನಿಯಾ.. ಎಂಬ ಬಾಲಿವುಡ್ ಗಾಯನಕ್ಕೆ, ರೂಪು ತೇರಾ ಮಸ್ತಾನ, ಪ್ಯಾರ್ ಮೇರಾ ದಿವಾನ ಎಂದು ರೆಟ್ರೋ ಗೀತೆಗಳನ್ನು ಹಾಡುವ ಮೂಲಕ ಎಲ್ಲರನ್ನು ರಂಜಿಸಿದರು. ಅಲ್ಲದೇ ಡಾ.ರಾಜ್ ಕುಮಾರ್ ಅವರ ಹೊಸ ಬೆಳಕು ಮೂಡುತ್ತಿದೆ… ರವಿಚಂದ್ರನ್ ಅವರ ಯಾರೇ ನೀನು ರೋಜಾ ಹೂವೆ, ಯಾರೇ ನೀನು ಮಲ್ಲಿಗೆ ಹೂವೇ…ಮತ್ತಿತರ ಕನ್ನಡದ ಹಾಡಿಗೆ ಧ್ವನಿಗೂಡಿಸಿದರು.
ಕಾರ್ಯಕ್ರಮ ಪ್ರಾರಂಭಕ್ಕೂ ಮುನ್ನ ವಿವಿಧ ಡ್ಯಾನ್ಸ್ ಶಾಲೆಗಳಿಂದ ಆಗಮಿಸಿದ್ದ ನೃತ್ಯಗಾರರು ಕನ್ನಡದ ಚಿತ್ರಗೀತೆಗೆ ನೃತ್ಯ ಪ್ರದರ್ಶಿಸಿದರು.
ಮೈಸೂರಿನ ಅಪ್ಪಟ ರೇಷ್ಮೆ ಸೀರೆಯನ್ನುಟ್ಟ ನಾರಿಯರು ವೇದಿಕೆಯಲ್ಲಿ ಚೆಂದದ ಕ್ಯಾಟ್ ವಾಕ್ ಮಾಡಿದರೆ, ಹುಡುಗರು ಕುರ್ತಾ ಶಲ್ಯ ಹಾಗೂ ಪಂಚೆ ಧರಿಸಿ, ಮಧು ಮಕ್ಕಳಂತೆ ಹೆಜ್ಜೆ ಹಾಕಿದ್ದು ವಿಶೇಷವಾಗಿತ್ತು.
ಇದಕ್ಕೂ ಮುನ್ನ ಜಿಲ್ಲಾ ಉಸ್ತುವಾರಿ ಸಚಿವ ಹೆಚ್.ಸಿ.ಮಹದೇವು ಹಾಗೂ ಪಶು ಸಂಗೋಪನಾ ಮತ್ತು ರೇಷ್ಮೆ ಇಲಾಖೆ ಸಚಿವ ಕೆ.ವೆಂಕಟೇಶ್ ಅವರಿಂದ ಕರ್ನಾಟಕ ರೇಷ್ಮೆ ಉದ್ಯಮ ನಿಗಮ ಮತ್ತು ರೇಷ್ಮೇ ಸೀರೆ ಕುರಿತು ರಚಿಸಿ, ಪ್ರಕಟಿಸಿರುವ ಸ್ಟ್ಯಾನ್ಲಿ ಸತೀಶ್ ಅವರ ಪುಸ್ತಕವನ್ನು ಬಿಡುಗಡೆಗೊಳಿಸಿದರು.
ಪುಸ್ತಕ ಬಿಡುಗಡೆ ಸಂದರ್ಭದಲ್ಲಿ ಕರ್ನಾಟಕ ರೇಷ್ಮೆ ಉದ್ಯಮದ ನಿಗಮ ನಿಯಮಿತದ ವ್ಯವಸ್ಥಾಪಕ ನಿರ್ದೇಶಕರಾದ ಝಹೀರಾ ನಾಸೀಂ , ವಿಧಾನ ಪರಿಷತ್ ಸದಸ್ಯರಾದ ಮಂಜೇಗೌಡ, ಜಿಲ್ಲಾಧಿಕಾರಿ ಲಕ್ಷ್ಮೀಕಾಂತ ರೆಡ್ಡಿ ಹಾಗೂ ಉಪಸಮಿತಿ ಅಧ್ಯಕ್ಷರು, ಉಪಾಧ್ಯಕ್ಷರು, ಸದಸ್ಯರು ಮತ್ತಿತರ ಗಣ್ಯರು ಹಾಜರಿದ್ದರು.