ಮೈಸೂರು: ಸತತ ಮಳೆಯಿಂದ ಕಾವೇರಿ ತುಂಬಿ ಹರಿಯುತ್ತಿದ್ದಾಳೆ, ಕೆಆರ್ ಎಸ್ ಡ್ಯಾಮ್ ಗೆ ಒಳ ಹರಿವು ಜಾಸ್ತಿಯಾಗಿದೆ,,ಜಲಾಶಯದಿಂದ ಹೆಚ್ಚಿನ ನೀರನ್ನು ಹೊರಬಿಡಲಾಗುತ್ತದೆ ನದಿಪಾತ್ರಕ್ಕೆ ಜನ ಬರಬಾರದು ಎಂದು ಎಚ್ಚರಿಕೆ ನೀಡಿದ್ದರೂ ಜನ ಬಂದು ತೊಂದರೆಗೆ ಸಿಲುಕುತ್ತಿದ್ದಾರೆ.
ಏನೋ ಅದೃಷ್ಟವಶಾತ್ ಪೊಲೀಸ್ ಇನ್ಸ್ಪೆಕ್ಟರ್ ಅವರ ಸಮಯಪ್ರಜ್ಞೆಯಿಂದ ತಂದೆ,ಮಗ ಪ್ರಾಣಾಪಾಯದಿಂದ ಬಚಾವಾಗಿದ್ದಾರೆ.
ನದಿಯಲ್ಲಿ ಸಿಲುಕಿದ್ದವರ ರಕ್ಷಣೆಗೆ ಬನ್ನೂರು ಪೊಲೀಸ್ ಠಾಣೆ ಇನ್ಸ್ಪೆಕ್ಟರ್ ಮನೋಜ್ ಕುಮಾರ್ ಧಾವಿಸಿದ್ದರಿಂದ ತಂದೆ ಮಗ ಬದುಕುಳಿದಿದ್ದಾರೆ.
ಬನ್ನೂರಿನ ಕಾವೇರಿ ನದಿಯಲ್ಲಿ ಈ ಘಟನೆ ನಡೆದಿದ್ದು,ಬನ್ನೂರಿನ ಕೃಷ್ಣೆಗೌಡ ಹಾಗೂ ಅವರ ಪುತ್ರ ಪ್ರವೀಣ್ ಅವರನ್ನು ರಕ್ಷಿಸಲಾಗಿದೆ.
ಹಸು ಮೇಯಿಸಲು ತೆರಳಿದ್ದ ತಂದೆ ಮಗ ನದಿಯಲ್ಲಿ ಸಿಲುಕಿದ್ದಾರೆ, ಈ ವೇಳೆ ಕೆಆರ್ ಎಸ್ ಡ್ಯಾಮ್ ನಿಂದ ನದಿಗೆ ನೀರು ಬಿಟ್ಟ ಪರಿಣಾಮ ನೀರಿನ ಸೆಳೆತಕ್ಕೆ ಸಿಲುಕಿ ತಂದೆ ಮಗ ತೊಂದರೆಗೊಳಗಾದರು.
ಇದನ್ನು ನೋಡಿದ ಸ್ಥಳೀಯರು ಕೂಡಲೇ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ.
ಕೂಡಲೇ ಸ್ಥಳಕ್ಕಾಗಮಿಸಿದ ಮನೋಜ್ ಕುಮಾರ್ ಅವರು ತೆಪ್ಪ ನಡೆಸುವವರ ಸಹಾಯದಿಂದ ನದಿಯಲ್ಲಿ ಸಿಲುಕಿದ್ದ ಅಪ್ಪ ಮಗನನ್ನು ರಕ್ಷಣೆ ಮಾಡಿದ್ದಾರೆ.
ಇನ್ಸ್ಪೆಕ್ಟರ್ ಮನೋಜ್ ಕುಮಾರ್ ಸಮಯಪ್ರಜ್ಞೆಗೆ ಸಾರ್ವಜನಿಕರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.