ನಮ್ಮ ಕ್ಲಿನಿಕ್ ಹೆಸರಿನಲ್ಲಿ ನೂರಾರು ಕೋಟಿ ಗುಳುಂ – ಉಷಾ ಮೋಹನ್ ಆರೋಪ

Spread the love

ಬೆಂಗಳೂರು: ರಾಜ್ಯದಲ್ಲಿ ನಮ್ಮ ಕ್ಲಿನಿಕ್ ಹೆಸರಿನಲ್ಲಿ ನೂರಾರು ಕೋಟಿ ಗುಳುಂ ಮಾಡಲಾಗಿದೆ ಎಂದು ಆಮ್ ಆದ್ಮಿ ಪಕ್ಷದ ರಾಜ್ಯ ಕಾರ್ಯದರ್ಶಿ ಉಷಾ ಮೋಹನ್ ಗಂಭೀರ ಆರೋಪ ಮಾಡಿದರು.

ಮಾಧ್ಯಮ ಗೋಷ್ಠಿಯಲ್ಲಿಂದು ಈ ಕುರಿತು ಮಾತನಾಡಿದ ಅವರು,ನಮ್ಮ ಕ್ಲಿನಿಕ್ ಗಳು ಪ್ರಾರಂಭವಾಗಿ ಎರಡು ವರ್ಷಗಳಾಗಿವೆ. ಇದುವರೆಗೆ ಆರೋಗ್ಯ ಇಲಾಖೆಯಿಂದ 350 ಕೋಟಿ ರೂ ವೆಚ್ಚ ಮಾಡಲಾಗಿದೆ. ಬಿಬಿಎಂಪಿಯ ಅಂಕಿ ಅಂಶಗಳ ಪ್ರಕಾರ 2,29,000 ರೋಗಿಗಳನ್ನು ಆರೈಕೆ ಮಾಡಲಾಗಿದ್ದು ಪ್ರತಿಯೊಬ್ಬರಿಗೂ 1800 ರೂ ಗಳಂತೆ ವ್ಯಯ ಮಾಡುತ್ತಿದ್ದು ಕೋಟ್ಯಾಂತರ ರೂಪಾಯಿಗಳು ಭ್ರಷ್ಟಾಚಾರಿಗಳ ಪಾಲಾಗುತ್ತಿದೆ ಎಂದು ದೂರಿದರು.

ಕಳೆದ ಒಂಬತ್ತು ವರ್ಷಗಳಲ್ಲಿ ದೆಹಲಿ ರಾಜ್ಯದಲ್ಲಿ 550ಕ್ಕೂ ಹೆಚ್ಚು ಮೊಹಲ್ಲಾ ಕ್ಲಿನಿಕ್ ಗಳಲ್ಲಿ 7 ಕೋಟಿಗೂ ಹೆಚ್ಚು ರೋಗಿಗಳನ್ನು ಆರೈಕೆ ಮಾಡಲಾಗಿದೆ. ಪ್ರತಿಯೊಬ್ಬರಿಗೂ ಕೇವಲ 101 ರೂಪಾಯಿಗಳಷ್ಟು ಮಾತ್ರ ಖರ್ಚು ಬರುತ್ತಿದೆ,ಆದರೆ ರಾಜ್ಯದ ನಮ್ಮ ಕ್ಲಿನಿಕ್ ಗಳಲ್ಲಿ ಬೃಹತ್ ಮಟ್ಟದ ಖರ್ಚನ್ನು ತೋರಿಸಿ ರೋಗಿಗಳ ಹೆಸರಲ್ಲಿ ನೂರಾರು ಕೋಟಿ ರೂಪಾಯಿಗಳನ್ನು ಗುಳುಂ ಮಾಡುತ್ತಿರುವುದಕ್ಕೆ ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ಕೂಡಲೇ ಉತ್ತರ ನೀಡಬೇಕು ಎಂದು ಅಂಕಿ ಅಂಕಿ ಅಂಶಗಳನ್ನು ಬಿಡುಗಡೆ ಮಾಡಿ‌ ಉಷಾ ಒತ್ತಾಯಿಸಿದರು.

ಮಂತ್ರಿಗಳು ಮೂರು ದಿವಸ ತಮ್ಮ ಸಮಯವನ್ನು ಮೀಸಲಿಟ್ಟು ದೆಹಲಿಗೆ ಭೇಟಿ ನೀಡಿ ಅಲ್ಲಿನ ಆರೋಗ್ಯ ವ್ಯವಸ್ಥೆಯನ್ನು ತಿಳಿದುಕೊಂಡು ಅದೇ ರೀತಿಯ ಗುಣಮಟ್ಟದ ಚಿಕಿತ್ಸೆಗಳನ್ನು ಅಗ್ಗದ ದರದಲ್ಲಿ ಹೇಗೆ ನೀಡಬಹುದೆಂಬುದನ್ನು ಅರಿಯಲಿ ಎಂದು ಸಲಹೆ ನೀಡಿದರು.

ಇಲ್ಲದಿದ್ದಲ್ಲಿ ಆರೋಗ್ಯ ಮಂತ್ರಿಗಳಿಗೂ ನಮ್ಮ ಕ್ಲಿನಿಕ್ ಗಳಿಂದ ಬಹುಪಾಲು ಹೋಗುತ್ತಿದೆ ಎಂಬುದನ್ನು ರಾಜ್ಯದ ಜನ ಅರ್ಥಮಾಡಿಕೊಳ್ಳ ಬೇಕಾಗುತ್ತದೆ ಈ ಕುರಿತುಸಚಿವರು ಉತ್ತರಿಸಬೇಕು ಎಂದು ಉಷಾ ಮೋಹನ್ ಆಗ್ರಹಿಸಿದರು.

ಪತ್ರಿಕಾಗೋಷ್ಠಿಯಲ್ಲಿ ಬೆಂಗಳೂರು ನಗರ ಮಾಧ್ಯಮ ಉಸ್ತುವಾರಿ ಅನಿಲ್ ನಾಚಪ್ಪ ಉಪಸ್ಥಿತರಿದ್ದರು.