ಮುನೇಶ್ವರ ಕಾವಲ್ ಮೈದಾನದಲ್ಲಿ ವಿ.ಐ.ಪಿ ರಸ್ತೆ:ಚೆಲುವರಾಜು ವಿರೋಧ

ಹುಣಸೂರು: ಹುಣಸೂರು ನಗರಾದ್ಯಂತ ಗುಂಡಿ ಬಿದ್ದಿರುವ ರಸ್ತೆಗಳನ್ನು ಸರಿಪಡಿಸದೇ ಮುನೇಶ್ವರ ಕಾವಲ್ ಮೈದಾನದಲ್ಲಿ ವಿ.ಐ.ಪಿ ರಸ್ತೆ ಮಾಡ ಹೊರಟಿರುವುದು ಸರಿಯಲ್ಲ, ಇದರ ಬಗ್ಗೆ ಸಂಪೂರ್ಣ ಮಾಹಿತಿ ನೀಡಬೇಕೆಂದು ಕರ್ನಾಟಕ ಪ್ರಜಾ ಪಾರ್ಟಿ ರೈತಪರ್ವ ತಾ.ಅಧ್ಯಕ್ಷ ಚೆಲುವರಾಜು ಮನವಿ ಮಾಡಿದ್ದಾರೆ.

ಈ ವಿಷಯಕ್ಕೆ ಸಂಬಂಧಿಸಿದಂತೆ ಅವರು ಹುಣಸೂರು‌ ನಗರಸಭಾ ಆಯುಕ್ತರಿಗೆ ಚೆಲುವರಾಜು ಪತ್ರ ಬರೆದಿದ್ದಾರೆ.
ಹುಣಸೂರು ನಗರದ ಮುನೇಶ್ವರ ಕಾವಲ್ ಮೈದಾನದಲ್ಲಿ ವಿ.ಐ.ಪಿ. ರಸ್ತೆ ನಿರ್ಮಾಣ ಮಾಡಲು ಟೆಂಡರ್ ಆಗಿರುವುದು ಸರಿಯಷ್ಟೆ ಆದರೆ ನಗರಸಭಾ ಮೈದಾನದಲ್ಲಿ ವಿ.ಐ.ಪಿ. ರಸ್ತೆ ಮಾಡುವಂತಿಲ್ಲ, ಸಾರ್ವಜನಿಕರಿಗೆ ಹಾಗೂ ಶಾಲಾ ಕಾಲೇಜುಗಳ ಮಕ್ಕಳಿಗೆ ಕ್ರೀಡಾ ಮತ್ತಿತರ ಸರ್ಕಾರಿ ಕಾರ್ಯಕ್ರಮಗಳನ್ನು ನಡೆಸಲು ಮೀಸಲಾಗಿರುವ ಈ ಆಟದ ಮೈದಾನದಲ್ಲಿ ವಿ.ಐ.ಪಿ ರಸ್ತೆ ನಿರ್ಮಾಣ ಮಾಡುತ್ತಿರುವುದು ಎಷ್ಟರಮಟ್ಟಿಗೆ ಸರಿ ಎಂದು ಅವರು ಪ್ರಶ್ನಿಸಿದ್ದಾರೆ.

ಕಾಮಗಾರಿಗಳನ್ನು ಕೈಗೆತ್ತಿಕೊಂಡು ಬಿಲ್ ಮಾಡಿಸುವುದು ನಗರಸಭಾ ಅಧಿಕಾರಿಗಳ ದುರುದ್ದೇಶವಾಗಿದೆ, ನಗರಾದ್ಯಂತ ಗುಂಡಿ ಬಿದ್ದಿರುವ ರಸ್ತೆಗಳನ್ನು ಮುಚ್ಚಿಸದೇ ಇರುವುದರಿಂದ ಹುಣಸೂರಿನ ಜನತೆ ಪ್ರಾಣ ಕೈಯಲ್ಲಿ ಹಿಡಿದುಕೊಂಡು ಸಂಚರಿಸಬೇಕಾದ ಸ್ಥಿತಿ ಇದೆ.

ಇದನ್ನು ಸರಿಪಡಿಸಲು ಮೊದಲ ಆದ್ಯತೆ ನೀಡಬೇಕಾದ ನಗರಸಭೆ ಅಧಿಕಾರಿಗಳು ಅನಾವಶ್ಯಕವಾಗಿ ಮುನೇಶ್ವರ ಕಾವಲ್ ಆಟದ ಮೈದಾನದಲ್ಲಿ ವಿ.ಐ.ಪಿ. ರಸ್ತೆ ಮಾಡಲು ಹೊರಟಿರುವುದು ಸರಿಯಲ್ಲ.
ನಗರಸಭಾ ಮೈದಾನವನ್ನು ಆಟದ ಮೈದಾನವಾಗಿ ಅಭಿವೃದ್ಧಿಪಡಿಸಬೇಕಾದ ಅಧಿಕಾರಿಗಳು ವಿ.ಐ.ಪಿ. ರಸ್ತೆ ಮಾಡಲು ಹೊರಟಿರುವುದು ಹಾಸ್ಯಾಸ್ಪದವಾಗಿದೆ.
ಆದ್ದರಿಂದ ಕೂಡಲೇ ವಿ.ಐ.ಪಿ. ರಸ್ತೆಗೆ ಕರೆಯಲಾಗಿದ್ದ ಟೆಂಡರ್ ಪ್ರಕ್ರಿಯೆ ಆದೇಶದ ಕಾಪಿ, ಕಾಮಗಾರಿಗಾಗಿ ಮಾಡಲಾಗಿರುವ ಅಗ್ರಿಮೆಂಟ್ ಪ್ರತಿ ಹಾಗೂ ಕಾಮಗಾರಿಯ ಅಂದಾಜು ಪಟ್ಟಿಯ ಸಂಪೂರ್ಣ ಮಾಹಿತಿ ದಾಖಲೆಗಳನ್ನು ನೀಡಬೇಕೆಂದು ಚೆಲುವರಾಜು ಕೋರಿದ್ದಾರೆ.

ಮಾಹಿತಿಗಳನ್ನು ಕೊಡಲು ತಪ್ಪಿದರೆ ಕರ್ನಾಟಕ ಉಚ್ಚ ನ್ಯಾಯಾಲಯದಲ್ಲಿ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು ಸಲ್ಲಿಸಲಾಗುತ್ತದೆ ಎಂದು ಅವರು ತಿಳಿಸಿದ್ದಾರೆ.

ಯಾವುದೇ ಕಾರಣಕ್ಕೂ ಟೆಂಡರ್ ಪಡೆದಿರುವ ಗುತ್ತಿಗೆದಾರನಿಗೆ ಹಾಗೂ ಸಂಬಂಧಪಟ್ಟ ಅಧಿಕಾರಿಗಳಿಗೆ ಯಾವುದೇ ಬಿಲ್ ಪಾಸ್ ಮಾಡಬಾರದು ಎಂದು ಪರಿಸರ ಇಂಜಿನಿಯರ್ ಗೂ ಅವರು ಮನವಿ ಮಾಡಿದ್ದಾರೆ.

ಈ ಕಾಮಗಾರಿಯಲ್ಲಿ ಜಲ್ಲಿ ಹಾಕದೆ ಕಾಂಕ್ರಿಟ್ ಹಾಕುತ್ತಿದ್ದು ಕಾಮಗಾರಿಯು ಸಂಪೂರ್ಣ ಕಳಪೆಯಿಂದ ಕೂಡಿದೆ. ಇಡೀ ಹುಣಸೂರಿನ ಜನ ವಿರೋಧಿಸಿದ್ದಾರೆ, ಇದನ್ನು ವಿಚಾರಿಸಲು ಹೋದ ನಮ್ಮ ಮೇಲೆಯೇ ಗುತ್ತಿಗೆದಾರ ಬೆದರಿಕೆ ಹಾಕಿ ತಳ್ಳಾಡಿದ್ದಾರೆ ಈ ಬಗ್ಗೆ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಲಾಗುವುದು ಎಂದು
ಚೆಲುವರಾಜು ತಿಳಿಸಿದ್ದಾರೆ

ಮುನೇಶ್ವರ ಕಾವಲ್ ಮೈದಾನದಲ್ಲಿ ವಿ.ಐ.ಪಿ ರಸ್ತೆ:ಚೆಲುವರಾಜು ವಿರೋಧ Read More

ರಾ. ಹೆದ್ದಾರಿ ಚತುಷ್ಪಥ ರಸ್ತೆಯಾಗಿ ಮೇಲ್ದರ್ಜೆಗೇರಿಸಲು ಡಿಪಿಆರ್ ಸಿದ್ಧ: ಮಂಜುನಾಥ್

(ವರದಿ:ಸಿದ್ದರಾಜು,ಕೊಳ್ಳೇಗಾಲ)

ಕೊಳ್ಳೇಗಾಲ: ಬೆಂಗಳೂರು-ದಿಂಡಿಗಲ್ (ಕೊಳ್ಳೇಗಾಲ) ರಾಷ್ಟ್ರೀಯ ಹೆದ್ದಾರಿಯನ್ನು ಚತುಷ್ಪಥ ರಸ್ತೆಯಾಗಿ ಮೇಲ್ದರ್ಜೆಗೆ ಏರಿಸಲು ಡಿಪಿಆರ್ ಸಿದ್ದವಾಗಿದೆ. ಅಂಡರ್ ಪಾಸ್ ಕಾಮಗಾರಿ ಕೂಡಾ ಡಿಪಿಆರ್‌ನಲ್ಲಿ ಸೇರಿದೆ
ಎಂದು ‌ಹನೂರು ಶಾಸಕ ಎಂ.ಆರ್.ಮಂಜುನಾಥ್ ತಿಳಿಸಿದರು.

ಮೇಲ್ಸೇತುವೆ ಕಾರ್ಯವನ್ನು ಡಿಪಿಆರ್‌ನಲ್ಲಿ ಸೇರಿಸಿಕೊಳ್ಳುವಂತೆ ಸಲಹೆ ಮಾಡಿದ್ದೇನೆ, ನಾಲ್ಕು ಜಂಕ್ಷನ್ ಗಳಿದ್ದು ಸತ್ತೇಗಾಲ ಜಂಕ್ಷನ್ ಕೊಳ್ಳೇಗಾಲದಿಂದ ಬರುವ ಸತ್ತೇಗಾಲ ಪ್ರವೇಶದ್ವಾರ ಹೆದ್ದಾರಿಯ ಬೈಪಾಸ್ ತಿರುವಿನಿಂದ ಉಗನಿಯ ರಸ್ತೆವರೆಗೆ ಫ್ಲೈ ಓವರ್ ಆಗಿ ಅಲ್ಲಿ 2 ಅಂಡರ್ ಪಾಸ್ ಆದಾಗ ಸಮಸ್ಯೆ ಬಗೆಹರಿದು ಅಪಘಾತಗಳಾಗುವುದು ತಪ್ಪಲಿದೆ ಎಂದು ಹೇಳಿದರು.

ರಾಷ್ಟ್ರೀಯ ಹೆದ್ದಾರಿ ಅಧಿಕಾರಿಗಳು ಹಾಗೂ ಜಿಲ್ಲಾಧಿಕಾರಿ ಶಿಲ್ಪಾನಾಗ್ ಅವರ ಜೊತೆ ತಾಲ್ಲೂಕಿನ ನರೀಪುರ ಹಾಗೂ ಸತ್ತೇಗಾಲದ ಬಳಿ ರಾಷ್ಟ್ರೀಯ ಹೆದ್ದಾರಿ ಪರಿಶೀಲನೆ ನಡೆಸಿ ಶಾಸಕರು ಮಾತನಾಡಿದರು.

ಈ ವೇಳೆ ಸತ್ತೇಗಾಲ ಗ್ರಾಮಸ್ಥರು ನಾವು ಜೂನ್ ತಿಂಗಳಲ್ಲಿ ಶಾಸಕರು, ಜಿಲ್ಲಾಧಿ ಕಾರಿಗಳು ಹಾಗೂ ಎನ್‌ಹೆಚ್ ಅಧಿಕಾರಿಗಳಿಗೆ ಸತ್ತೇಗಾಲ ರಸ್ತೆಯಲ್ಲಿ ಹಿಂದೆ ಅಪಘಾತಗೊಂಡು ಹತ್ತಾರು ಮಂದಿ ಪ್ರಾಣ ಕಳೆದುಕೊಂಡಿರುವ ಬಗ್ಗೆ ಗಮನಕ್ಕೆ ತರಲಾಗಿದೆ. ಇಲ್ಲಿಯವರೆಗೂ ಎರಡು ಕಡೆ ಹಂಪ್ಸ್ ಬಿಟ್ಟರೆ ಯಾವುದೇ ಸಮಸ್ಯೆ ಬಗೆ ಹರಿದಿಲ್ಲ. ನಾವು ಹೆದ್ದಾರಿಗೆ ಭೂಮಿ ಕೊಟ್ಟಿದ್ದೇವೆ, ಆದರೆ ಇಂದು ನಮ್ಮ ಜಮೀನಿಗೆ ನಾವು ಇಳಿಯಲು ಆಗುತ್ತಿಲ್ಲ, ಸಮಸ್ಯೆ ಬಗೆ ಹರಿಯುವವರೆಗೂ ನಾವು ಟೋಲ್ ಸಂಗ್ರಹ ಮಾಡಲು ಬಿಡುವುದಿಲ್ಲ. ಆದಷ್ಟು ಬೇಗ ಕಾಮಗಾರಿ ಪೂರ್ಣಗೊಳ್ಳಬೇಕೆಂದು ಆಗ್ರಹಿಸಿದರು.

ಆಗ ಶಾಸಕರು, ತಕ್ಷಣಕ್ಕೆ ಮೇಲ್ಲೇತುವೆ ನಿರ್ಮಿಸಲು ಸಾಧ್ಯವಿಲ್ಲ. ಜಿಲ್ಲಾಧಿಕಾರಿಗಳು ಡಿಪಿಆರ್ ತಯಾರು ಮಾಡಿ ಸರ್ಕಾರದ ಅನುಮೋದನೆ ಪಡೆಯಬೇಕಾಗಿದೆ. ಕನಿಷ್ಠ ಆರು ತಿಂಗಳಾದರೂ ಕಾಲಾವಕಾಶ ಬೇಕು. ಅಲ್ಲಿಯವರೆಗೆ ಸುರಕ್ಷಿತ ಕ್ರಮಕೈಗೊಳ್ಳಲಾಗುವುದು ಎಂದು ಭರವಸೆ ನೀಡಿದರು.

ಈ ವೇಳೆ ಶಾಸಕ ಮಂಜುನಾಥ್ ಹಾಗೂ ಜಿಲ್ಲಾಧಿಕಾರಿ ಶಿಲ್ಪಾನಾಗ್ ಅವರು ಎನ್‌,ಹೆಚ್ ಅಧಿಕಾರಿಗಳಿಗೆ ನಿಮಗೆ ನಾವು ಇದಕ್ಕಿಂತ ಹೆಚ್ಚು ಸಹಾಯ ಮಾಡಲು ಆಗುವುದಿಲ್ಲ. ಆದಷ್ಟು ಬೇಗ ಕಾಮಗಾರಿ ಮುಗಿಸಿ ಸಮಸ್ಯೆ ಬಗ್ಗೆ ಹರಿಸಿ ಶಾಶ್ವತ ಪರಿಹಾರಕ್ಕಾಗಿ ಹೆದ್ದಾರಿಗೆ ಮೇಲ್ಲೇತುವೆ ನಿರ್ಮಿಸಬೇಕು, ಗ್ರಾಮಕ್ಕೆ ಸಂಪರ್ಕ ಕಲಿಸಲು ಅಂಡರ್ ಪಾಸ್ ರಸ್ತೆ ಕಲ್ಪಿಸಬೇಕೆಂದು ಸೂಚಿಸಿದರು.

ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಶಾಸಕ  ಎಂ.ಆರ್.ಮಂಜುನಾಥ್ ಅವರು ಈ ಹೆದ್ದಾರಿ 2012-13ರಲ್ಲಿ ವಿನ್ಯಾಸವಾಗಿ ಕಾಮಗಾರಿ ಪ್ರಾರಂಭಿಸಿ ಅರ್ಧಕ್ಕೆ ಬಿಟ್ಟು ಹೋಗಿದ್ದರಿಂದ ಇಷ್ಟೆಲ್ಲ ಸಮಸ್ಯೆ ಅವಘಡಕ್ಕೆ ಕಾರಣವಾಗಿದೆ ಕಳೆದ ಹತ್ತು ವರ್ಷಗಳಿಂದ ದಟ್ಟಣೆ ವೇಗವಾಗಿ ಬೆಳೆಯುತ್ತಿರುವುದರಿಂದ ನಾಲ್ಕು ಪಥದ ಹೆದ್ದಾರಿಯಾಗಿ ಮೇಲ್ದರ್ಜೆಗೆ ಏರಿಸಲು ವಿಸ್ತೃತ ವರದಿ ಸಿದ್ಧವಾಗುತ್ತಿದೆ ಎಲ್ಲಾ ಘಟನೆಗಳಾಗಿರುವು ದರಿಂದ ಸೂಕ್ಷ್ಮವಾಗಿ ಗಮನಿಸಿ ಈ ”ರಾಷ್ಟ್ರೀಯ ಹೆದ್ದಾರಿಯನ್ನು ಚತುಷ್ಪಥ ರಸ್ತೆಯಾಗಿ ಮೇಲ್ದರ್ಜೆಗೆ ಏರಿಸಲು ಡಿಪಿಆರ್ ಸಿದ್ದವಾಗಿದೆ, ನಾಲ್ಕು ಜಂಕ್ಷನ್ ಗಳಿದ್ದು ಸತ್ತೇಗಾಲ ಜಂಕ್ಷನ್ ಕೊಳ್ಳೇಗಾಲದಿಂದ ಬರುವ ಸತ್ತೇಗಾಲ ಪ್ರವೇಶದ್ವಾರ ಹೆದ್ದಾರಿಯ ಬೈಪಾಸ್ ತಿರುವಿನಿಂದ ಉಗನಿಯ ರಸ್ತೆವರೆಗೆ ಫ್ಲೈ ಓವರ್ ಆಗಿ ಅಲ್ಲಿ 2 ಅಂಡರ್ ಪಾಸ್ (ಕೆಳಸೇತುವೆ) ಆದಾಗ ಈ ಸಮಸ್ಯೆ   ಬಗೆಹರಿದು ಅಪಘಾತಗಳಾಗುವುದು ತಪ್ಪಲಿದೆ. ಹಾಗೆಯೇ ಉಪ್ಪಾರರ ಬೀದಿಯ ರಸ್ತೆ, ಅವರು ಈ ಅಂಡರ್ ಪಾಸ್ ನಲ್ಲೇ ಓಡಾಡಿಕೊಂಡರೆ ಸಮಸ್ಯೆ ಬರುವುದಿಲ್ಲ ಆಗ ಯಾವುದೇ ಅಪಘಾತಗಳು ಸಂಭವಿಸುವುದಿಲ್ಲ ಎಂದು ವಿಶ್ವಾಸ ವ್ಯಕ್ತಪಡಿಸಿದರು.

10 ದಿನದಲ್ಲಿ ಸಣ್ಣಪುಟ್ಟ ಕೆಲಸಗಳನ್ನು ಪೂರ್ಣಗೊಳಿಸಬೇಕು ಎಂದು ಹೇಳಿದ್ದೇವೆ. ಏನಾಗಬೇಕು ಎಂಬುದನ್ನು ಲಿಸ್ಟ್ ಮಾಡಿ ಸ್ಪೀಡ್ ಬ್ರೇಕರ್ ಹಾಕಿದ್ದಾರೆ, ವಿದ್ಯುತ್ ದೀಪಗಳನ್ನು ಅಳವಡಿಸುವ ಕಾರ್ಯ ಬಾಕಿ ಇದ್ದು ಅದನ್ನು ಮಾಡಿಕೊಡುವಂತೆ ಒತ್ತಾಯ ಮಾಡಿದ್ದೇನೆ. ಬಾಕಿ ಇರುವುದನ್ನು ಮುಗಿಸಬೇಕು ಎಂದು ಜಿಲ್ಲಾಧಿಕಾರಿ ಸಂಬಂಧಪಟ್ಟ ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ. ಹಾಗಾಗಿ ಮಾಡುತ್ತಾರೆ ಮಾಡದೇ ಹೋದರೆ ಇದೇ 14ರಂದು ಡಿಸಿ ವರ್ಚುಯಲ್ ಸಭೆ ತೆಗೆದುಕೊಳ್ಳಲು ಸೂಚಿಸಿದ್ದೇನೆ ಅಲ್ಲಿ ಕಾಮಗಾರಿಯ ಪ್ರಗತಿಯನ್ನು ಪರಿಶೀಲಿಸಲಿದ್ದಾರೆ ಎಂದು ಮಂಜುನಾಥ್ ತಿಳಿಸಿದರು.

ಈ ಸಂದರ್ಭದಲ್ಲಿ ಕೊಳ್ಳೇಗಾಲ ಉಪವಿಭಾಗಧಿಕಾರಿ ದಿನೇಶ್ ಕುಮಾರ್ ಮೀನಾ,ತಹಸೀಲ್ದಾರ್ ಬಸವರಾಜು, ಎನ್‌.ಹೆಚ್ ಅಧಿಕಾರಿಗಳಾದ ಚಾರುಲತಾ ಜೈನ್, ವಿಶ್ವ, ತಾಪಂ ಇಒ ಗುರುಶಾಂತಪ್ಪ ಬೆಳ್ಳುಂಡಗಿ, ಸೆಸ್ಕ್ ಎಇಇ ರಾಜು, ಲೋಕೋಪಯೋಗಿ ಎಇಇ ಪುರುಷೋತ್ತಮ್, ನೀರಾವರಿ ಇಲಾಖೆಯ  ಎಇಇ ರಾಮಕೃಷ್ಣ ಮತ್ತಿತರ ಅಧಿಕಾರಿಗಳು ಹಾಜರಿದ್ದರು.

ರಾ. ಹೆದ್ದಾರಿ ಚತುಷ್ಪಥ ರಸ್ತೆಯಾಗಿ ಮೇಲ್ದರ್ಜೆಗೇರಿಸಲು ಡಿಪಿಆರ್ ಸಿದ್ಧ: ಮಂಜುನಾಥ್ Read More

ಡಿ.7 ರಂದು ಸಾಹಸಸಿಂಹ ನೆನಪಿನಲ್ಲಿ ವಿಷ್ಣು ಸಂಭ್ರಮ- ಚಿತ್ರಗೀತೆಗಳ ಕಾರ್ಯಕ್ರಮ

ಮೈಸೂರು: ಕನ್ನಡಚಿತ್ರರಂಗದ ಸಾಹಸಸಿಂಹ ವಿಷ್ಣುವರ್ಧನ್ ನೆನಪಿನಲ್ಲಿ ‘ವಿಷ್ಣು ಸಂಭ್ರಮ’ ಮಧುರ ಸಾಹಿತ್ಯದ ರಸದೌತಣ ಗೀತೆಗಳ ಗಾಯನ ಕಾರ್ಯಕ್ರಮವನ್ನ ಗಾನ ಸಂಗಮ ಕಲಾತಂಡದ ವತಿಯಿಂದ ಡಿ. 7ರಂದು ಭಾನುವಾರ ಬೆಳಗ್ಗೆ 9ರಿಂದ ಸಂಜೆ 6ರವರಗೆ ಉದ್ಬೂರು ಗೇಟ್ ಬಳಿಯಿರುವ ವಿಷ್ಣು ಸ್ಮಾರಕ ಭವನದಲ್ಲಿ ಆಯೋಜಿಸಲಾಗಿದೆ.

ವಿಷ್ಣು ಸಂಭ್ರಮ ಕಾರ್ಯಕ್ರಮದ ಮಾಹಿತಿ ಪೋಸ್ಟರ್ ಅನ್ನು ರಂಗಭೂಮಿ ಕಲಾವಿದ ಮೆಲ್ಲಹಳ್ಳಿ ರಾಜೇಶ್ ಸಿ ಗೌಡ ಅವರು ಪಿ. ಕಾಳಿಂಗರಾವ್ ಗಾನ ಮಂಟಪದಲ್ಲಿ ಬಿಡುಗಡೆ ಮಾಡಿದರು.

ವಿಷ್ಣು ಸಂಭ್ರಮ ಆಯೋಜಕರು ಕಲಾವಿದರುಗಳಾದ ಮಲ್ಲಿಕಾರ್ಜುನ್ ಮತ್ತು ಅನಿತಾ ನೇತೃತ್ವದಲ್ಲಿ ಪ್ರಕಾಶ್, ಮೋಹನ್ ಕುಮಾರ್, ಕೃಷ್ಣ, ಅಶೋಕ್ ಕುಮಾರ್, ಸಿದ್ದಪ್ಪಾಜಿ ಸೇರಿದಂತೆ 25ಕ್ಕೂ ಹೆಚ್ಚು ಕಲಾವಿದರು ಸಾಹಾಸಿಂಹ ವಿಷಗಣು ಗೀತೆಗಳನ್ನ ಹಾಡಲಿದ್ದಾರೆ.

ಈ ವೇಳೆ ಮೆಲ್ಲಹಳ್ಳಿ ರಾಜೇಶ್ ಸಿ ಗೌಡ ಅವರು ಮಾತನಾಡಿ, ಮೈಸೂರಿನಲ್ಲಿ ಸಾಹಸಸಿಂಹ ವಿಷ್ಣುವರ್ಧನ್ ಅವರ ಅಭಿಮಾನಿಗಳು ವಿಷ್ಣುಸಂಭ್ರಮದ ಮೂಲಕ ಬೆಳಗ್ಗೆಯಿಂದ ಸಂಜೆಯವರೆಗೆ ನಿರಂತರವಾಗಿ ವಿಷ್ಣು ಸಂಭ್ರಮ ಕಾರ್ಯಕ್ರಮವನ್ನ ಆಯೋಜಿಸಲಾಗಿದೆ ಎಂದು ಹೇಳಿದರು.

ಕಾರ್ಯಕ್ರಮವನ್ನು ಕರ್ನಾಟಕ ವಸ್ತುಪ್ರದರ್ಶನ ಪ್ರಾಧಿಕಾರದ ಅಧ್ಯಕ್ಷರಾದ ಅಯೂಬ್ ಖಾನ್ ಅವರು ಉದ್ಘಾಟಿಸಲಿದ್ದು, ಮೆಲ್ಲಹಳ್ಳಿ ರಾಜೇಶ್ ಸಿ ಗೌಡ ಅಧ್ಯಕ್ಷತೆ ವಹಿಸಲಿದ್ದಾರೆ.
ಮುಖ್ಯ ಅತಿಥಿಗಳಾಗಿ ಜನಾರ್ಧನ್, ನಗರಪಾಲಿಕೆ ಮಾಜಿ ಸದಸ್ಯ ರಘುರಾಜೇ ಅರಸ್, ಕೆ.ವಿ ಮಲ್ಲೇಶ್, ಮಾರ್ಕೆಟ್ ಶ್ರೀನಿವಾಸ್, ಕರವೇ ಅಧ್ಯಕ್ಷ ಲಿಂಗರಾಜು, ಪ್ರಕಾಶ್, ನಿರೂಪಕ ಅಜಯ್ ಶಾಸ್ತ್ರಿ, ಒಕ್ಕಲಿಗರ ಸಂಘದ ನಿರ್ದೇಶಕ ಗುರುರಾಜ್, ರಂಗಸ್ವಾಮಿ ಪಾಪು, ಮಹೇಂದ್ರ ಕಾಗಿನೆಲೆ, ಪ್ರದೀಪ್, ರಾಕೇಶ್ ಕುಮಾರ್, ಜಯಲಕ್ಷ್ಮಿ ಭಾಗವಹಿಸಲಿದ್ದಾರೆ ಎಂದು ತಿಳಿಸಿದರು.

ವಿಷ್ಣು ಸಂಭ್ರಮ ಪೋಸ್ಟರ್ ಬಿಡುಗಡೆ ವೇಳೆ ಮೆಲ್ಲಹಳ್ಳಿ ರಾಜೇಶ್ ಸಿ ಗೌಡ, ಅಯೋಜಕರಾದ ಮಲ್ಲಿಕಾರ್ಜುನ್ ಮತ್ತು ಅನಿತಾ, ಪ್ರಕಾಶ್, ಶಿವಲಿಂಗಯ್ಯ, ನಿರೂಪಕ ಅಜಯ್ ಶಾಸ್ತ್ರಿ, ಅಶೋಕ್ ಕೃಷ್ಣ, ಮೋಹನ್ ಮತ್ತಿತರರು ಹಾಜರಿದ್ದರು.

ಡಿ.7 ರಂದು ಸಾಹಸಸಿಂಹ ನೆನಪಿನಲ್ಲಿ ವಿಷ್ಣು ಸಂಭ್ರಮ- ಚಿತ್ರಗೀತೆಗಳ ಕಾರ್ಯಕ್ರಮ Read More

ದರ್ಶನ್ ಅಭಿಮಾನಿಗಳಿಂದ ವೃದ್ಧಾಶ್ರಮದಲ್ಲಿ ಸೇವಾ ಕಾರ್ಯ

ಮೈಸೂರು: ದರ್ಶನ್ ಅಭಿಮಾನಿಗಳು ವೃದ್ಧಾಶ್ರಮದಲ್ಲಿ ಸೇವಾ ಕಾರ್ಯ ಮಾಡುವ ಮೂಲಕ ಮಾದರಿಯಾಗಿದ್ದಾರೆ.
ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರ ಬಹುನಿರೀಕ್ಷಿತ ಚಿತ್ರ ‘ಡೆವಿಲ್’ ಡಿಸೆಂಬರ್ 11ರಿಂದ ರಾಜ್ಯಾದ್ಯಂತ ತೆರೆ ಕಾಣುತ್ತಿರುವ ಹಿನ್ನೆಲೆಯಲ್ಲಿ, ದರ್ಶನ್ ಅಭಿಮಾನಿಗಳ ಸಂಘದವರು ಹೂಟಗಳ್ಳಿಯಲ್ಲಿರುವ ಪಿ.ಜಿ.ಆರ್.ಎಸ್.ಎಸ್. ಆಶ್ರಯ ಕೇಂದ್ರ ಮತ್ತು ವೃದ್ಧರ ಬೃಂದಾವನನಲ್ಲಿ ವೃದ್ಧ ನಾಗರಿಕರಿಗೆ ಹೊದಿಕೆ ಹಾಗೂ ಅಗತ್ಯ ಸಾಮಗ್ರಿಗಳನ್ನು ವಿತರಿಸುವ ಮೂಲಕ ಹೃದಯಸ್ಪರ್ಶಿ ಸೇವಾ ಕಾರ್ಯ ಮಾಡಿದರು.
ಚಿತ್ರ ಯಶಸ್ವಿಯಾಗಲಿ, ತಂಡದ ಮೇಲೆ ಹಿರಿಯ ನಾಗರಿಕರ ಆಶೀರ್ವಾದ ಇರಲಿ ಎಂಬ ಸಂಕಲ್ಪದೊಂದಿಗೆ ಈ ಸೇವಾ ಚಟುವಟಿಕೆಯನ್ನು ಆಯೋಜಿಸಿದ್ದರು.
ಹಿರಿಯ ನಾಗರಿಕರು ಆಶೀರ್ವಾದ ನೀಡಿ,
ಚಿತ್ರ ಹಿಟ್ ಆಗಲಿ, ದರ್ಶನ್ ಉತ್ತಮ ಗೆಲುವು ಕಾಣಲಿ ಎಂದು ಹಾರೈಸಿದರು.
ಬಿಜೆಪಿ ಮುಖಂಡರಾದ ಕೇಬಲ್ ಮಹೇಶ್,ಕಡಕೋಳ ಜಗದೀಶ್,ಬೈರತಿ ಲಿಂಗರಾಜು,ರಕ್ತದಾನಿ ಮಂಜು,ಸಹನಗೌಡ,ಹರೀಶ್ ನಾಯ್ಡು,ಎಸ್ ಎನ್ ರಾಜೇಶ್,ರವಿಚಂದ್ರ,ರಾಕೇಶ್ ಸೇರಿದಂತೆ ಅನೇಕರು ಹಾಜರಿದ್ದರು.

ದರ್ಶನ್ ಅಭಿಮಾನಿಗಳಿಂದ ವೃದ್ಧಾಶ್ರಮದಲ್ಲಿ ಸೇವಾ ಕಾರ್ಯ Read More

ಪುಸ್ತಕವನ್ನು ಕೊಂಡು ಓದುವ ಸಂಸ್ಕೃತಿ ಬೆಳೆಸಿ-ಪ್ರತಾಪ್ ಸಿಂಹ ಕರೆ

ಮೈಸೂರು: ಪುಸ್ತಕವನ್ನು ಕೊಂಡು ಓದುವವರು ಇರುವ ತನಕ ಲೇಖಕರಿಗೆ ಅಭಿರುಚಿ ಸಿಗುತ್ತದೆ. ಹಾಗಾಗಿ ಎಲ್ಲರೂ ಪುಸ್ತಕ ಓದಿ ಓದುವ ಸಂಸ್ಕೃತಿಯನ್ನು ಬೆಳೆಸಬೇಕು ಎಂದು ಮಾಜಿ ಸಂಸದ ಪ್ರತಾಪ್ ಸಿಂಹ ಕರೆ ನೀಡಿದರು.

ನಗರದ ಜೆಎಲ್‌ ಬಿ ರಸ್ತೆಯಲ್ಲಿರುವ ದಿ ಇನ್ಸ್ ಟಿಟ್ಯೂಟ್ ಆಫ್ ಎಂಜಿನಿಯರಿಂಗ್ ಸಭಾಂಗಣದಲ್ಲಿ ಮೈಸೂರು ಕಲ್ಚರಲ್ ಅಸೋಸಿಯೇಷನ್ ಮತ್ತು ಕಲಿಸು ಫೌಂಡೇಶನ್ ವತಿಯಿಂದ ಆಯೋಜಿಸಿದ್ದ ಅರ್ಜುನ 2ನೇ ವರ್ಷದ ನೆನಪು ಹಾಗೂ ಹಿರಿಯ ಪತ್ರಕರ್ತ ಐತಿಚಂಡ ರಮೇಶ ಉತ್ತಪ್ಪ ರಚಿಸಿರುವ ಸಾವಿನ ಸತ್ಯ‘ಅರ್ಜುನಾ ನಿನ್ನ ಕೊಂದದ್ದು ಮದಗಜವಲ್ಲ ಪಾಪಿ ಮನುಷ್ಯ’ ಹಾಗೂ ದಸರಾ ಆನೆಗಳು ‘ಭೀಮ ಹಾಗೂ ಇತರರು’ ಕೃತಿಗಳನ್ನು ಬಿಡುಗಡೆಗೊಳಿಸಿ ಅವರು ಮಾತನಾಡಿದರು.

ಕರ್ನಾಟಕದಲ್ಲಿ ಅತಿಹೆಚ್ಚು ಆನೆಗಳಿರುವುದು ಖುಷಿಯ ವಿಚಾರ. ಕೊಡಗು, ಮೈಸೂರು ಭಾಗಗಳಲ್ಲಿ ಹೆಚ್ಚು ಆನೆಗಳ ಉಪಟಳವಿದೆ. ಇದರಿಂದ ಮಾನವ-ಆನೆಗಳ ಸಂಘರ್ಷ ಹೆಚ್ಚಾಗಿದೆ. ಇದಕ್ಕೆ ಪರಿಹಾರ ಕ್ರಮ ಕೈಗೊಳ್ಳಬೇಕು. ಆನೆ ಕಾರಿಡಾರ್ ನಿರ್ಮಾಣಕ್ಕೆ ಹೆಚ್ಚು ಒತ್ತು ನೀಡಬೇಕು ಎಂದು ಸಲಹೆ ನೀಡಿದರು.

ಕೃತಿಗಳ ಬಗ್ಗೆ ಮಾತನಾಡಿದ ಮೈಸೂರು ವಿವಿ ಸಿಂಡಿಕೇಟ್ ಮಾಜಿ ಸದಸ್ಯ ಡಾ.ಈ.ಸಿ.ನಿಂಗರಾಜ್ ಗೌಡ, ಆನೆಗಳ ಜೊತೆ ನಿಕಟ ಸಂಬಂಧ ಇರುವ ವ್ಯಕ್ತಿಗಳಷ್ಟೇ ಆನೆ ಪುಸ್ತಕ ಬರೆಯಲು ಸಾಧ್ಯ ಎಂಬುದಕ್ಕೆ ಐತಿಚಂಡ ರಮೇಶ್ ಉತ್ತಪ್ಪ ಸಾಕ್ಷಿಯಾಗಿದ್ದಾರೆ. ಅರ್ಜುನ ಸಾವನ್ನಪ್ಪಿದಾಗ ಹಲವಾರು ಕಾರಣಗಳಿದ್ದು ಅವರ ಆತ್ಮಕ್ಕೆ ಶಾಂತಿಯನ್ನು ಕೋರಲಾಗುವುದು. ಇವರು ಬರೆದಿರುವಂತಹ ಪುಸ್ತಕ ವಿಶೇಷವಾಗಿದೆ ಎಂದು ಹೇಳಿದರು.

ಇದುವರೆಗೂ ಮನುಷ್ಯರಿಗಷ್ಟೇ ನಿವೃತ್ತಿ ವಯಸ್ಸು, ಸೇವಾ ಪುಸ್ತಕ ಇದೆ ಎಂದುಕೊಂಡಿದ್ದೆವು. ಆದರೆ ಅನೆಗಳಿಗೂ ಇದು ಇದೆ ಎಂಬುದನ್ನು ಐತಿಚಂಡ ರಮೇಶ್ ಉತ್ತಪ್ಪ ಅವರ ಪುಸ್ತಕ ಅಧ್ಯಯನ ಮಾಡಿದಾಗ ನನಗೆ ತಿಳಿಯಿತು ಎಂದು ತಿಳಿಸಿದರು.

ಅರಣ್ಯ ಇಲಾಖೆಯಲ್ಲಿ ಪಶುವೈದ್ಯರ ಕೊರತೆಯಿದ್ದು ಶೀಘ್ರವಾಗಿ ಅವರನ್ನು ನೇಮಕ ಮಾಡಬೇಕು ಹಾಗೂ ಪ್ರವಾಸೋದ್ಯಮಕ್ಕೆ ಅನುಕೂಲವಾಗುವಂತೆ ಆನೆಗಳ ಸಂಬಂಧಿತ ಮ್ಯೂಸಿಯಂ ಮಾಡಬೇಕು ಎಂದು ಸರಕಾರಕ್ಕೆ ಮನವಿ ಮಾಡುತ್ತೇನೆ ಎಂದು ಹೇಳಿದರು.
ಚೇಂಬರ್ ಆಫ್ ಕಾಮರ್ಸ್ ಅಧ್ಯಕ್ಷ ಕೆ.ಬಿ. ಲಿಂಗರಾಜು ಮಾತನಾಡಿ, ರಮೇಶ್ ಉತ್ತಪ್ಪ ಅವರ ಕೃತಿ ವಿಶೇಷವಾಗಿದ್ದು ಪ್ರಕೃತಿ, ಪ್ರಾಣಿಗಳ ಬಾಂಧವ್ಯವನ್ನು ಈ ಪುಸ್ತಕದಲ್ಲಿ ಬರೆದಿರುವುದು ಮುಂದಿನ ಪೀಳಿಗೆಗೆ ಈ ಪುಸ್ತಕಗಳ ಅವಶ್ಯಕತೆ ಇದೆ ಎಂದು ಅಭಿಪ್ರಾಯ ಪಟ್ಟರು.

ಕಾರ್ಯಕ್ರಮದಲ್ಲಿ ಡಾ ಮುಜಿಬ್ ರೆಹಮಾನ್(ಪಶುವೈದ್ಯ) ಹಾಗೂ (ಅರ್ಜುನ ಅಭಿಮಾನಿ )ಕೆ ಆರ್ ಸತ್ಯಪ್ರಭಾ ಅವರಿಗೆ ಸನ್ಮಾನಿಸಿ ಗೌರವಿಸಲಾಯಿತು.

ಪತ್ರಕರ್ತ ರಮೇಶ್ ಉತ್ತಪ್ಪ, ರೈತಮುಖಂಡ ಮಂಜುಕಿರಣ್, ಅಮರನಾಥ ರಾಜೇ ಅರಸು, ಎಂಜಿಆರ್ ಅರಸು, ಕೆ.ಎಸ್.ಶಿವರಾಂ, ಮಾಜಿ ಮೇಯರ್ ಶಿವಕುಮಾರ್, ನವ ಕರ್ನಾಟಕ ಸತ್ಯನಾರಾಯಣ್, ನಂಜಯ್ಯ ಹೊಂಗನೂರು, ಮಲ್ಲಿಕಾರ್ಜುನಸ್ವಾಮಿ, ಮೈಸೂರು ಕಲ್ಚರಲ್ ಅಸೋಸಿಯೇಷನ್ ಅಧ್ಯಕ್ಷ ಎ.ಪಿ.ನಾಗೇಶ್, ಪ್ರಕಾಶಕ ಎಂ.ಎಂ.ನಿಖಿಲೇಶ್ ಉಪಸ್ಥಿತರಿದ್ದರು.



ಪುಸ್ತಕವನ್ನು ಕೊಂಡು ಓದುವ ಸಂಸ್ಕೃತಿ ಬೆಳೆಸಿ-ಪ್ರತಾಪ್ ಸಿಂಹ ಕರೆ Read More

ಜಿಬಿಎ ಆಡಳಿತದಲ್ಲಿ ಭ್ರಷ್ಟಾಚಾರ ತಡೆಗೆಉಪ ಲೋಕಾಯುಕ್ತರ ನೇಮಿಸಿ:ಆಪ್

ಬೆಂಗಳೂರು: ಜಿಬಿಎ ಆಡಳಿತದಲ್ಲಿ ಭ್ರಷ್ಟಾಚಾರ ತಡೆಗಟ್ಟಲು ಹಾಗೂ ಪಾರದರ್ಶಕತೆ ತರಲು ವಿಶೇಷ ಉಪ ಲೋಕಾಯುಕ್ತರನ್ನು ನೇಮಿಸಬೇಕೆಂದು ಆಮ್ ಆದ್ಮಿ ಪಕ್ಷ ಆಗ್ರಹಿಸಿದೆ.
ಸರ್ಕಾರವು ಈಗಾಗಲೇ ನೂತನವಾಗಿ ರಚಿಸಿರುವ ಜಿಬಿಎ ಆಡಳಿತ ಸೇರಿದಂತೆ ಐದು ನಗರ ಪಾಲಿಕೆಗಳ ಆಡಳಿತದಲ್ಲಿ ಸಂಪೂರ್ಣವಾಗಿ ಭ್ರಷ್ಟಾಚಾರವನ್ನು ನಿರ್ಮೂಲನೆ ಮಾಡಲು ಹಾಗೂ ಪಾರದರ್ಶಕತೆಯನ್ನು ತರಲು ಪ್ರತ್ಯೇಕವಾಗಿ ಉಪಲೋಕಾಯುಕ್ತರನ್ನು ನೇಮಿಸುವುದು ಸೂಕ್ತ ಎಂದು ಸುದ್ದಿ ಗೋಷ್ಠಿಯಲ್ಲಿ ಪಕ್ಷದ ರಾಜ್ಯಕಾರ್ಯಾಧ್ಯಕ್ಷ ಸೀತಾರಾಮ್ ಗುಂಡಪ್ಪ
ಒತ್ತಾಯಿಸಿದರು.
ಈ ಹಿಂದಿನ ಬಿಬಿಎಂಪಿ ಆಡಳಿತಾವಧಿಯಲ್ಲಿ ಇತ್ತೀಚಿನ ದಶಕಗಳಲ್ಲಿ ಲಕ್ಷಾಂತರ ಕೋಟಿ ಹಣವನ್ನು ಲೂಟಿ ಮಾಡಲಾಗಿದೆ, ಬಿಡಿಗಾಸು ಸಹ ಚಪ್ತ ಮಾಡಲು ಸಾಧ್ಯವಾಗಿಲ್ಲ ಹಾಗೂ ಯಾರಿಗೂ ಇದುವರೆಗೂ ಶಿಕ್ಷೆ ಆಗಿಲ್ಲ. ಇದೇ ರೀತಿಯ ಭ್ರಷ್ಟ ಆಡಳಿತ ಈಗಿನ ಜಿಬಿಎ ದಲ್ಲಿ ಮುಂದುವರಿದಿದೆ, ಇಲ್ಲಿನ ಭ್ರಷ್ಟ ವ್ಯವಸ್ಥೆಯಿಂದಾಗಿ ಬೆಂಗಳೂರಿಗರು ಎಲ್ಲಾ ವಲಯಗಳಲ್ಲು ಸಹ ಸಾಕಷ್ಟು ಸಮಸ್ಯೆಗಳನ್ನು ಎದುರಿಸುತ್ತಿದ್ದಾರೆ ಎಂದು ಹೇಳಿದರು.
ಇಲ್ಲಿನ ಗುತ್ತಿಗೆದಾರರಿಗೆ ಈಗಿರುವ ಕಾನೂನಿನಲ್ಲಿ ತಪ್ಪಿಸಿಕೊಳ್ಳಲು ಸಾಕಷ್ಟು ನೆರವು ಸಿಗುತ್ತಿದೆ. ಗುತ್ತಿಗೆದಾರರನ್ನು ಸಹ ಸರ್ಕಾರಿ ನೌಕರರೆಂದು ಪರಿಗಣಿಸಿ ಅವರ ವಿರುದ್ಧವು ಕಠಿಣ ಕ್ರಮ ತೆಗೆದುಕೊಳ್ಳಲು ಕಾನೂನು ತಿದ್ದುಪಡಿಯನ್ನು ಮಾಡಬೇಕೆಂದು ಒತ್ತಾಯಿಸಿದರು.
ಉಪಲೋಕಾಯುಕ್ತರಿಗೆ ಜಿಬಿಎ ಕೇಂದ್ರ ಕಚೇರಿಯಲ್ಲಿಯೇ ಸಕಲ ವ್ಯವಸ್ಥೆಗಳುಳ್ಳ ಕಚೇರಿಯನ್ನು ನೀಡಬೇಕು. ಬ್ರಷ್ಟಾಚಾರಿಗಳ ವಿರುದ್ಧ ಕಠಿಣ ಕ್ರಮ ತೆಗೆದುಕೊಳ್ಳದಿದ್ದಲ್ಲಿ ಯಾವುದೇ ಕಾರಣಕ್ಕೂ ಬೆಂಗಳೂರನ್ನು ಕಾಪಾಡಲು ಯಾರಿಂದಲೂ ಸಾಧ್ಯವಿಲ್ಲ ಎಂದು ಆತಂಕ‌ ವ್ಯಕ್ತಪಡಿಸಿದರು.
ಪಕ್ಷದ ಪ್ರಚಾರ ಸಮಿತಿ ಅಧ್ಯಕ್ಷ ಲಕ್ಷ್ಮಿಕಾಂತ್ ರಾವ್ ಮಾತನಾಡಿ,ಈಗಿರುವ ಕಾನೂನಿನಲ್ಲಿ ಗುತ್ತಿಗೆದಾರರನ್ನು ನೇರವಾಗಿ ಆರೋಪಿಗಳನ್ನು ಮಾಡಲು ಸಾಧ್ಯವಿಲ್ಲ ಹಾಗಾಗಿ ಮುಂಬರುವ ವಿಧಾನಸಭಾ ಅಧಿವೇಶನದಲ್ಲಿ ಲೋಕಾಯುಕ್ತ ಕಾಯ್ದೆಗೆ ತಿದ್ದುಪಡಿ ತಂದು ಭ್ರಷ್ಟ ಗುತ್ತಿಗೆದಾರರನ್ನು ಕಾನೂನಿನ ಅಂಕುಶಕ್ಕೆ ಒಳಪಡಿಸಬೇಕು ಎಂದು ಸರ್ಕಾರವನ್ನು ಒತ್ತಾಯಿಸಿದರು.
ಸುದ್ದಿಗೋಷ್ಠಿಯಲ್ಲಿ ಪಕ್ಷದ ರಾಜ್ಯ ಮಾಧ್ಯಮ ಸಂಚಾಲಕ ಜಗದೀಶ್ ವಿ.ಸದಂ , ರಾಜ್ಯ ಕಾರ್ಯದರ್ಶಿ ರವಿಕುಮಾರ್ ಉಪಸ್ಥಿತರಿದ್ದರು.

ಜಿಬಿಎ ಆಡಳಿತದಲ್ಲಿ ಭ್ರಷ್ಟಾಚಾರ ತಡೆಗೆಉಪ ಲೋಕಾಯುಕ್ತರ ನೇಮಿಸಿ:ಆಪ್ Read More

ಗುರುವಿನ ಅವತಾರ ದತ್ತಾತ್ರೇಯ:ವಿದ್ವಾನ್ ಎಸ್ ಕೃಷ್ಣಮೂರ್ತಿ

ಮೈಸೂರು: ದತ್ತಾತ್ರೇಯ ಅಂದರೆ ಬ್ರಹ್ಮ ವಿಷ್ಣು ಮಹೇಶ್ವರರ ಅವತಾರ, ಅವರನ್ನೆಲ್ಲ ನಾವು ಗುರುವಿನಲ್ಲಿ ಕಾಣುತ್ತೇವೆ ದತ್ತಾತ್ರೇಯ ಅಂದರೆ ಗುರುವಿನ ಅವತಾರ ಎಂದು ಅರ್ಚಕ ಸಂಘದ ಅಧ್ಯಕ್ಷರಾದ ವಿದ್ವಾನ್ ಎಸ್ ಕೃಷ್ಣಮೂರ್ತಿ ಹೇಳಿದರು.
ಮಂಡಿ ಮೊಹಲ್ಲಾದ ಬೆಂಕಿನವಾಬರ ಬೀದಿ ಯಲ್ಲಿರುವ ಶ್ರೀ ದತ್ತಾತ್ರೇಯ ಸ್ವಾಮಿ ದೇವಸ್ಥಾನ ಸಾಯಿಬಾಬಾ ಮಂದಿರದಲ್ಲಿ
ಗುರುವಾರ ದತ್ತ ಜಯಂತಿ ಪ್ರಯುಕ್ತ ಜರುಗಿದ ದತ್ತಾತ್ರೇಯ ಪೂಜೆ, ಮಹಾರುದ್ರಾ ಭಿಷೇಕ, ಪಂಚಾಮೃತ ಅಭಿಷೇಕ, ಬೆಣ್ಣೆ ಅಲಂಕಾರ, ತೋಮಾಲೆ ಸೇವೆ ಹಾಗೂ ಸಾಮೂಹಿಕ ಸತ್ಯನಾರಾಯಣ ಪೂಜೆ
ಕಾರ್ಯಕ್ರಮದಲ್ಲಿ ಭಾಗಿಯಾಗಿ ಅವರು ಮಾತನಾಡಿದರು.
ದೇವಸ್ಥಾನಗಳಲ್ಲಿ ನಿತ್ಯ ನಿಯಮ, ಭಜನೆ ಧ್ಯಾನ ಉಪಾಸನೆಗಳನ್ನು ನಡೆಸಿಕೊಂಡು ಬರಲಾಗುತ್ತಿದೆ, ಇದರಿಂದ ಮನಸ್ಸಿಗೆ ನೆಮ್ಮದಿ ಶಾಂತಿ ಸಮಾಧಾನ ಸಿಗಲಿದೆ ಎಂದು ಹೇಳಿದರು.
ನಂತರ ಭಕ್ತಾದಿಗಳಿಗೆ ಪ್ರಸಾದ ವಿತರಿಸಲಾಯಿತು.
ಇದೇ ಸಂದರ್ಭದಲ್ಲಿ ದೇವಸ್ಥಾನದ ಧರ್ಮದರ್ಶಿಗಳು ಹಾಗೂ ನಗರ ಪಾಲಿಕೆ ಮಾಜಿ ಸದಸ್ಯರಾದ ಬಿ ವಾಸುದೇವ,
ಅರ್ಚಕರಾದ ರಾಜೇಶ್, ದೀಕ್ಷಿತ್, ರಮೇಶ್, ಸಾಗರ್, ಶರತ್ ಹಾಗೂ ಡಾಕ್ಟರ್ ಲೋಕೇಶ್ ಕುಟುಂಬ ಮತ್ತು ನೂರಾರು ಭಕ್ತರು ಹಾಜರಿದ್ದರು.

ಗುರುವಿನ ಅವತಾರ ದತ್ತಾತ್ರೇಯ:ವಿದ್ವಾನ್ ಎಸ್ ಕೃಷ್ಣಮೂರ್ತಿ Read More

ಮಧ್ಯರಂಗ ದೇವಾಲಯ ಜೀರ್ಣೋದ್ಧಾರ ಕಾಮಗಾರಿ ವೀಕ್ಷಿಸಿದ ಡಿಸಿ,ಶಾಸಕರು

(ವರದಿ:ಸಿದ್ದರಾಜು,ಕೊಳ್ಳೇಗಾಲ)

ಕೊಳ್ಳೇಗಾಲ: ಶಿವನಸಮುದ್ರದ ಶ್ರೀ ರಂಗನಾಯಕಿ ಸಮೇತ ಶ್ರೀ ಜಗನ್ಮೋಹನ ರಂಗನಾಥಸ್ವಾಮಿ ದೇವಾಲಯದ ಜೀರ್ಣೋದ್ಧಾರ ಕಾಮಗಾರಿಯನ್ನು ಈ ತಿಂಗಳೇ‌ ಪೂರ್ಣಗೊಳಿಸುವಂತೆ‌ ಹನೂರು ಶಾಸಕ ಎಂ.ಆರ್.ಮಂಜುನಾಥ್ ಖಡಕ್ ಸೂಚನೆ ನೀಡಿದರು.
2026 ರ‌ ಜನವರಿ 25 ಅಥವಾ ಫೆಬ್ರವರಿ ಪ್ರಾರಂಭದಲ್ಲಿ ಜಗನ್ಮೋಹನ ರಂಗನಾಥ ಸ್ವಾಮಿ (ಮಧ್ಯರಂಗ) ದೇವಾಲಯವನ್ನು ಲೋಕಾರ್ಪಣೆ ಮಾಡಿ ಜನರ ದರ್ಶನಕ್ಕೆ ನೀಡಬೇಕಿದೆ ಹಾಗಾಗಿ ನವೆಂಬರ್ ಒಳಗೇನೆ ಕಾಮಗಾರಿ ಪೂರ್ಣಗೊಳಿಸುವಂತೆ 
ಅಧಿಕಾರಿಗಳು ಹಾಗೂ ಗುತ್ತಿಗೆದಾರರಿಗೆ ಶಾಸಕರು ಸೂಚಿಸಿದರು.
ಜಿಲ್ಲಾಧಿಕಾರಿ ಶಿಲ್ಪಾನಾಗ್ ಅವರ ಜೊತೆ ತಾಲ್ಲೂಕಿನ ಪ್ರಸಿದ್ಧ ಶಿವನಸಮುದ್ರದ ಶ್ರೀ ರಂಗನಾಯಕಿ ಸಮೇತ ಶ್ರೀ ಜಗನ್ಮೋಹನ ರಂಗನಾಥಸ್ವಾಮಿ ದೇವಸ್ಥಾನಕ್ಕೆ ಭೇಟಿ ನೀಡಿ ದೇವಸ್ಥಾನದ ಜೀರ್ಣೋದ್ಧಾರ ಕಾಮಗಾರಿಯನ್ನು ಪರಿಶೀಲನೆ ನಡೆಸಿ ಅವರು ಮಾತನಾಡಿದರು.
ಕಳೆದ ಐದಾರು ವರ್ಷಗಳಿಂದ ಪ್ರಾಚ್ಯವಸ್ತು ಇಲಾಖೆ ವತಿಯಿಂದ ಜಗನ್ಮೋಹನ ರಂಗನಾಥ ಸ್ವಾಮಿ ದೇವಾಲಯದ ಜೀರ್ಣೋದಾರ ಕಾಮಗಾರಿ ಹಾಗೂ ಆಂಧ್ರ ಮೂಲದ ದಾನಿಗಳಿಂದ ರಂಗನಾಯಕಿ ಅಮ್ಮನವರ ದೇವಾಲಯಗಳ ಪುನರ್ ನಿರ್ಮಾಣ ಕಾಮಗಾರಿ ನಡೆಯುತ್ತಿದ್ದು ಇತ್ತೀಚೆಗೆ ವೇಗ ಪಡೆದುಕೊಂಡಿದೆ.
ಈ ಹಿನ್ನೆಲೆಯಲ್ಲಿ ಜಿಲ್ಲಾಧಿಕಾರಿಗಳೊಡನೆ ಭೇಟಿ ನೀಡಿ ಬಳಿಕ ಅಧಿಕಾರಿಗಳಿಗೆ ಕೆಲ ಸಲಹೆ ನೀಡಿದರು.
ದೇವಾಲಯದ ಸುತ್ತುಗೋಡೆ ದುರಸ್ತಿ, ರಂಗನಾಥ ಸ್ವಾಮಿ ದೇವಾಲಯದ ಒಳಗಡೆ ಇರುವ ವೀರ ಪಾಲಕರ ಗುಡಿಗಳಿಗೆ ಬಾಗಿಲುಗಳ ಅಳವಡಿಕೆ ಗರ್ಭಗುಡಿ ಚಪ್ಪರ ನಿರ್ಮಾಣ ದರ್ಶನಕ್ಕೆ ನಿಲ್ಲುವ ಭಕ್ತರ ಕ್ಯೂ ಲೈನ್ ನಿರ್ಮಾಣಕ್ಕೆ ಸ್ಟೇನ್ಲೆಸ್ ಸ್ಟೀಲ್ ಅಳವಡಿಕೆ, ನೆಲಹಾಸು, ಕಾಮಗಾರಿಗಳು ಮುಕ್ತಾಯ ಹಂತ ತಲುಪಿದ್ದು ಕಾಮಗಾರಿಗಳು ವೇಗ ಪಡೆದು ಕೊಂಡಿದೆ.
ರಾಜಗೋಪುರ, ವಿಮಾನ ಗೋಪುರ ಹಾಗೂ ಯೋಗ ಶಾಲೆಗೆ ಬಣ್ಣ ಬಳಿಸುವ ವಿಚಾರದ ಬಗ್ಗೆ ಚರ್ಚೆ ಆಯಿತು. ಮಲೆ ಮಹದೇಶ್ವರ ಬೆಟ್ಟದ ವಿಮಾನ ಗೋಪುರ ಹಾಗೂ ರಾಜಗೋಪುರಗಳಿಗೆ ಬಣ್ಣ ಬಳಿದವರು ಚೆನ್ನಾಗಿ ಮಾಡಿದ್ದು, ಅವರಿಂದಲೇ ಇಲ್ಲಿಗೂ ಬಣ್ಣ ಬಳಿಸುವುದು ಎಂದು ತೀರ್ಮಾನಿಸಲಾಯಿತು.
ಅದಕ್ಕಾಗಿ ಮ.ಮ. ಬೆಟ್ಟ ಅಭಿವೃದ್ಧಿ ಪ್ರಾಧಿಕಾರದ ಕಾರ್ಯದರ್ಶಿ ರಘು ಅವರಿಗೆ ದೂರವಾಣಿ ಮೂಲಕ ಕರೆ ಮಾಡಿ ನಿಮ್ಮ ದೇವಾಲಯಕ್ಕೆ ಬಣ್ಣ ಬಳಿದವರು ಯಾರು ಅವರಿಂದಲೇ ಇಲ್ಲಿಗೆ ಬಣ್ಣ ಬಯಸುವ ಜವಾಬ್ದಾರಿ ನಿಮ್ಮದು ಎಂದು ಶಾಸಕರು ಸೂಚಿಸಿದರು.
ಮುಖ್ಯ ದ್ವಾರಗಳ ಬಾಗಿಲುಗಳು ಚೆನ್ನಾಗಿ ಮೂಡಿಬಂದಿದೆ, ದೇವಾಲಯದಲ್ಲಿ ಅಳವಡಿಸಲಾಗಿರುವ ಕಲ್ಲುಗಳ ಬಣ್ಣ ಮಾಸಿದ್ದು ಕಾಮಗಾರಿಗೆ ಆಧುನಿಕ ಸ್ಪರ್ಶ ನೀಡಬೇಕು ಎಲ್ಲಾ ಕಲ್ಲುಗಳಿಗೂ ಸ್ಯಾನ್ ಬ್ಲಾಸ್ಟ್ ಮಾಡಿಸುವಂತೆ ತಹಸೀಲ್ದಾರ್ ಬಸವರಾಜು ರವರಿಗೆ ಸೂಚಿಸಿದರು
ಉತ್ತಮ ಗುಣಮಟ್ಟದ ಕಾಮಗಾರಿ ಮಾಡಿಸಿ ಯಾವುದೇ ಕಾರಣಕ್ಕೂ ಕಳಪೆ ಮಾಡಿಸಬೇಡಿ ಎಂದು ಜಿಲ್ಲಾಧಿಕಾರಿ ಸಿ.ಟಿ. ಶಿಲ್ಪನಾಗ್ ಸೂಚಿಸಿದಾಗ ಧ್ವನಿಗೂಡಿಸಿದ ಶಾಸಕರು ಕಳಪೆ ಕಾಮಗಾರಿ ಮಾಡಿಸಿದ ವರನ್ನು ಮುಲಾಜಿಲ್ಲದೆ ಅಮಾನತು ಮಾಡಲಾಗುವುದು ಎಂದು ಎಚ್ಚರಿಕೆ ನೀಡಿದರು.
ಈ ಎಲ್ಲಾ ಕಾಮಗಾರಿಗಳು 2026ರ ಜನವರಿ 4ಕ್ಕೆ ಮುಕ್ತಾಯಗೊಳ್ಳಬೇಕು ಎಂದು ಜಿಲ್ಲಾಧಿಕಾರಿಗಳು ತಾಕೀತು ಮಾಡಿದರು.
ಇದೇ ವೇಳೆ ದೇವಾಲಯದ ಮುಂಭಾಗದ ರಾಜಭೀದಿಯಲ್ಲಿ ನಿರ್ಮಾಣವಾಗುತ್ತಿರುವ ಯಾತ್ರಿ ನಿವಾಸ್ ಕಾಮಗಾರಿ ಮುಕ್ತಾಯ ಹಂತದಲ್ಲಿದ್ದು ಕಟ್ಟಡಕ್ಕೆ ಯಾವುದೇ ಮೂಲಭೂತ ಸೌಲಭ್ಯ ಕಲ್ಪಿಸಿಲ್ಲದ್ದನ್ನು ಮನಗಂಡ ಜಿಲ್ಲಾಧಿಕಾರಿ ಹಾಗೂ ಶಾಸಕರು ಇಲ್ಲಿ ಸೌಲಭ್ಯ ಕಲ್ಪಿಸಲು ಪ್ರವಾಸೋದ್ಯಮ ಇಲಾಖೆ ಅನುದಾನವನ್ನು ನೀಡಲಾಗುವುದು ಅದಕ್ಕಾಗಿ ಏಜೆನ್ಸಿ ಗುರುತಿಸುವಂತೆ ಶಾಸಕರಿಗೆ ಜಿಲ್ಲಾಧಿಕಾರಿಗಳು ಹೇಳಿದರು.
ಹಳೆ ವೈಭವ ಮರುಕಳಿಸುವಂತಹ ವಾತಾವರಣ ನಿರ್ಮಾಣ ಮಾಡಲು ದೇವಸ್ಥಾನದ ಮುಂಭಾಗ ಇರುವ ರಾಜಭೀದಿಯನ್ನು ಹನ್ನೆರಡು ಕಾಲು ಮಂಟಪದವರೆಗೂ‌ ಪುನರುಜ್ಜೀವನ
ಗೊಳಿಸಲು ಮಾಸ್ಟರ್ ಪ್ಲಾನ್ ಸಿದ್ಧಪಡಿಸಲಾಗಿದೆ.
ಈ ಸಂದರ್ಭದಲ್ಲಿ ಕೊಳ್ಳೇಗಾಲ ಉಪವಿಭಾಗಧಿಕಾರಿ ದಿನೇಶ್ ಕುಮಾರ್ ಮೀನಾ,ತಹಸೀಲ್ದಾರ್ ಬಸವರಾಜು, ಇಒ ಗುರುಶಾಂತಪ್ಪ, ಲೋಕೋಪಯೋಗಿ ಎಇಇ ಪುರುಷೋತ್ತಮ್, ನೀರಾವರಿ ಇಲಾಖೆಯ  ಎಇಇ ರಾಮಕೃಷ್ಣ,ನಿರ್ಮಿತಿ ಕೇಂದ್ರದ ಇಇ ರವಿಕುಮಾರ್, ಧಾರ್ಮಿಕ ದತ್ತಿ ಇಲಾಖೆಯ ಸುರೇಶ್ ಹಾಗೂ ಇತರೆ ಅಧಿಕಾರಿಗಳು ಹಾಜರಿದ್ದರು.

ಮಧ್ಯರಂಗ ದೇವಾಲಯ ಜೀರ್ಣೋದ್ಧಾರ ಕಾಮಗಾರಿ ವೀಕ್ಷಿಸಿದ ಡಿಸಿ,ಶಾಸಕರು Read More

ನುಗ್ಗೇಕಾಯಿ ಕೆಜಿಗೆ 600 – 700ರೂ!

ಮೈಸೂರು: ದಿನದಿಂದ ದಿನಕ್ಕೆ ತರಕಾರಿ ಬೆಲೆ ಗಗನಕ್ಕೇರುತ್ತಿದ್ದು, ನುಗ್ಗೇಕಾಯಿ ಬೆಲೆ ಮಟನ್‌ ದರದಷ್ಟು ಏರಿಕೆಯಾಗಿದೆ ಅಂದ್ರೆ ನಂಬ್ತೀರಾ ಖಂಡಿತಾ ನಂಬಲೇಬೇಕು!

ನುಗ್ಗೇಕಾಯಿ ಕೆಜಿಗೆ 600 ರಿಂದ 700ರೂಗೆ ಮಾರಾಟವಾಗುತ್ತಿದ್ದು, ನುಗ್ಗೇಕಾಯಿ ಖರೀದಿ ಅಸಾಧ್ಯ ಎಂದು ಜನ ಬೇಸರ ಪಡುತ್ತಿದ್ದಾರೆ.
ಇದುವರೆಗಿನ ತರಕಾರಿ ಇತಿಹಾಸದಲ್ಲೇ ಈ ಮಟ್ಟದ ರೇಟ್ ನೋಡಿಯೇ ಇರಲಿಲ್ಲ ಎನ್ನುತ್ತಿದ್ದಾರೆ ನುಗ್ಗೆಕಾಯಿ ಪ್ರಿಯರು.

ಹವಾಮಾನ ವೈಪರೀತ್ಯದಿಂದ ಈ ಬಾರಿ ನುಗ್ಗೇಕಾಯಿ ಬೆಳೆ ಬಂದಿಲ್ಲ. ಆದ್ದರಿಂದ ನುಗ್ಗೇಕಾಯಿ ಹೆಚ್ಚು ಸರಬರಾಜಾಗುತ್ತಿಲ್ಲ. ಬೆಲೆ ಕೂಡ ಗಗನಕ್ಕೇರಿದೆ.ಮಾರುಕಟ್ಟೆಗಳಲ್ಲಿ ಸೊಪ್ಪು, ತರಕಾರಿಗಳ ಬೆಲೆ ತೀವ್ರ ಏರಿಕೆ ಆಗುತ್ತಿದ್ದು, ಗ್ರಾಹಕರ ಜೇಬಿಗೆ ಕತ್ತರಿ ಬೀಳುತ್ತಿದೆ.

ಹಿಂಗಾರು ಮಳೆ ವಿಳಂಬದಿಂದ ಕಡಿಮೆ ಇಳುವರಿ ಹಾಗೂ ಬೆಳೆಗಳಿಗೆ ರೋಗ ಬಂದ ಕಾರಣ ಬೇಡಿಕೆಗೆ ತಕ್ಕಂತೆ ಮಾರುಕಟ್ಟೆಗಳಿಗೆ ತರಕಾರಿ ಪೂರೈಕೆಯಾಗುತ್ತಿಲ್ಲ.ಹಾಗಾಗಿ ಬೆಲೆ ಗಗನಕ್ಕೇರಿದೆ.

ಆದರೂ ನುಗ್ಗೇಕಾಯಿ ಬೆಲೆ ಈ ಪಾಟಿ ಏರಿಬಿಟ್ಟೈತಲ್ಲಾ ಅದೇ ಮಹಿಳೆಯರ ತಲೆ ಕೆಡಿಸಿದೆ.

ಆದರೆ ಮಾಲ್ ಗಳಲ್ಲಿ ಆಫರ್ ಬಿಟ್ಟಿದ್ದಾರೆ ಒಂದು ಕೆಜಿ ನುಗ್ಗೆಕಾಯಿ ಬೆಲೆ 380 ರಿಂದ 400 ರೂ.ಕೊಳ್ಳೊರು ಕೊಳ್ಳಬಹುದು.

ನುಗ್ಗೇಕಾಯಿ ಕೆಜಿಗೆ 600 – 700ರೂ! Read More

ಚಿನ್ಮಯ ಮಿಷನ್ ನಲ್ಲಿ ದತ್ತ ಜಯಂತಿ ಆಚರಣೆ

ಮೈಸೂರು: ಮೈಸೂರಿನ ಗೋಕುಲಮ್ ನಲ್ಲಿರುವ ಚಿನ್ಮಯ ಮಿಷನ್ ನಲ್ಲಿ ದತ್ತ ಜಯಂತಿಯನ್ನು ಶ್ರದ್ಧಾ,ಭಕ್ತಿಯಿಂದ ಆಚರಿಸಲಾಯಿತು.
ಶ್ರೀ ಗುರು ದತ್ತಾತ್ರೇಯ ಸ್ವಾಮಿಗೆ ಬೆಳಿಗ್ಗೆ ಕ್ಷೀರಾಭಿಷೇಕ ನೆರವೇರಿಸಿ ನಂತರ ಅಷ್ಟೋತ್ತರ, ಪಾದುಕ ಪೂಜೆ ಮಾಡಲಾಯಿತು.
ಈ ವೇಳೆ ಸ್ವಾಮಿ ಕಾಶಿಕಾನಂದ ಜಿ ಯವರು ದತ್ತಾತ್ರೇಯ ಮೂರ್ತಿಗೆ ಕ್ಷೀರಭಿಷೇಕವನ್ನು ನೆರವೇರಿಸಿದರು.
ನಂತರ ಭಜನೆ,ಮಹಾ ಮಂಗಳಾರತಿ ನೆರವೇರಿಸಿ ಭಕ್ತರಿಗೆ ಪ್ರಸಾದ ವಿನಿಯೋಗ ಮಾಡಲಾಯಿತು.
ಚಿನ್ಮಯ ಮಿಷನ್ ಮಂಡ್ಯ ಕೇಂದ್ರದ ಸ್ವಾಮಿ ಆದಿತ್ಯನಂದಜಿ ಅವರು ದತ್ತ ಜಯಂತಿ ಕಾರ್ಯಕ್ರಮ ದಲ್ಲಿ ಪಾಲ್ಗೊಂಡು ದತ್ತಾತ್ರೇಯ ಪೂಜೆ ಕುರಿತು ಭಕ್ತರಿಗೆ ವಿವರಿಸಿದರು.ನೂರಾರು ಮಂದಿ ಪಾಲ್ಗೊಂಡು ಭಕ್ತಿ ಸಮರ್ಪಿಸಿದರು.

ಚಿನ್ಮಯ ಮಿಷನ್ ನಲ್ಲಿ ದತ್ತ ಜಯಂತಿ ಆಚರಣೆ Read More