ಪೊಲೀಸ್ ಬ್ಯಾಂಡ್ ಗೆ ತಲೆ ದೂಗಿದ ಜನತೆ

ಮೈಸೂರು: ಮೈಸೂರು ದಸರಾ ಮಹೋತ್ಸವ ಹಿನ್ನಲೆಯಲ್ಲಿ ಹಮ್ಮಿಕೊಂಡಿದ್ದ ಪೊಲೀಸ್ ಮಾಸ್ ಬ್ಯಾಂಡ್ ಹಲವಾರು ಬಗೆಯ ನಾದದ ಮೂಲಕ ಜನ ಮೈಮರೆತು ಆಲಿಸುವಂತೆ ಮಾಡಿತು.

ನಗರದ ಅರಮನೆ ಆವರಣದಲ್ಲಿ ನಡೆಯುತ್ತಿರುವ ಸಾಂಸ್ಕೃತಿಕ ಕಾರ್ಯಕ್ರಮ ವೇದಿಕೆಯಲ್ಲಿ ಶುಕ್ರವಾರ ರಾಜ್ಯದ 30 ಜಿಲ್ಲೆಯಿಂದ 379 ಪೊಲೀಸರು ತಮ್ಮದೇ ಆದ ವಿಶಿಷ್ಟ ಶೈಲಿಯಲ್ಲಿ ಸಂಗೀತ ನೀಡಿ ನೆರೆದಿದ್ದ ಪ್ರೇಕ್ಷಕರು ಮನಸೂರೆಗೊಂಡರು.

ಗೋಪಿನಾಥ್ ಅವರ ಮುಂದಾಳತ್ವದಲ್ಲಿ ಭಾರತ್ ಕೆ ಜವಾನ್, ವಿಜಯಭಾರತಿ ಮತ್ತು ಜಲಪಕ್ಷಿ ಸಂಗೀತವನ್ನು ಎಲ್ಲಾ ಪೊಲೀಸ್ ಬ್ಯಾಂಡ್ ತಂಡದವರು ನುಡಿಸಿದರು.

ಡಿಸಿಜಿ ಪ್ರವೀಣ್ ಕುಮಾರ್ ನೇತೃತ್ವದಲ್ಲಿ ಸ್ಟಿಕ್ ಮೇಜರ್ ಶೋ ಕ್ವಿನ್ ಕಲರ್ಸ್ ಮೂಲಕ ಪ್ರೇಕ್ಷಕರಿಗೆ ಮುದ ನೀಡಿದರು. ಇಂಗ್ಲೀಷ್ ಬ್ಯಾಂಡ್ ತಂಡದವರು ದೇಶಭಕ್ತಿ ಗೀತೆಗಳಾದ ಕದಂ ಕದಂ, ಒಂದೇ ಮಾತರಂ ಗೀತೆಗಳನ್ನು ನುಡಿಸಿದರು.

ಕುಮಾರ್ ರೆಡ್ಡಿ ಹಾಗೂ ಶ್ರೀಧರ್ ನೇತೃತ್ವದಲ್ಲಿ ಇಂಡಿಯಾ ಗೆಟ್ , ಪೈಪರ್ ರೈಫಲ್ಸ್, ಸ್ಕೈ ಬೋಟ್, ಸಾರೆ ಜಹಾಂಚೆ ಅಚ್ಚ ಸಂಗೀತ ಸುಧೆ ಹರಿಸಿದರು.

ಕರ್ನಾಟಿಕ್ ಹಾಗೂ ಇಂಗ್ಲಿಷ್ ಬ್ಯಾಂಡ್ ವಾದ್ಯ ವೃಂದ ತಂಡದಿಂದ ದುರ್ಗಾದೇವಿ ದುರಿತನಿವಾರಿಣಿ ಸಂಗೀತವನ್ನು ನವರಸ ಕನ್ನಡ ರಂಗದಲ್ಲಿ ನುಡಿಸಿದರು. ಲಯನಾದಮೃತವನ್ನು ಅಮೃತವರ್ಷಿಣಿ ರಾಗದಲ್ಲಿ ಹಾಗೂ ಶ್ರೀ ದುರ್ಗಾ ದೇವಕಾರ್ಯ ರಾಗದಲ್ಲಿ ನುಡಿಸಿ ಪ್ರೇಕ್ಷಕರಿಗೆ ಮುದ ನೀಡಿದರು.

ಬಾಲಿವುಡ್ ಮೆಲೋಡಿಯಲ್ಲಿ A.R ರೆಹಮಾನ್ ಕಂಪೋಸ್ ಮಾಡಿರುವ ಹಲವಾರು ಗೀತೆಗಳನ್ನು ಟೋನಿ ಮ್ಯಾಥ್ಯೂ ನೇತೃತ್ವದಲ್ಲಿ ಕೊಳಲು ಹಾಗೂ ಗಿಟಾರ್ ಮೂಲಕ ನುಡಿಸಿದರು. ಬ್ರಹ್ಮೋಸ್ ತಂಡದಿಂದ ಡ್ರಮ್ ವಾದನವನ್ನು ಚಂದ್ರು ಹಾಗೂ ಶಿವಕುಮಾರ್ ನೇತೃತ್ವದಲ್ಲಿ ಸಮೂಹವಾಗಿ ಎಲ್ಲಾ ತಂಡದವರು ನುಡಿಸಿ ಮೆಚ್ಚುಗೆ ಗಳಿಸಿದರು.

ನಂತರ ಎಲ್ಲಾ ತಂಡದವರು ಸಮ್ಮಾನ ಗಾರ್ಡ್ ಸ್ಲೋ ಮಾರ್ಚ್ ನಡೆಸಿದರು. ಬಳಿಕ ವಿಜೇತ ತಂಡಗಳಿಗೆ ಸಚಿವರುಗಳು ಬಹುಮಾನ ವಿತರಿಸಿದರು.

ಇದಕ್ಕೂ ಮುನ್ನ ಖ್ಯಾತ ಜಾನಪದ ಕಲಾವಿದ ಮಳವಳ್ಳಿ ಮಹಾದೇವಯ್ಯ ಅವರು ಮಹದೇಶ್ವರ ಕುರಿತ ಹಲವು ಜನಪದ ಗೀತೆಗಳನ್ನು ಹಾಡಿದರು.

ಈ ವೇಳೆ ಗೃಹ ಸಚಿವ ಜಿ.ಪರಮೇಶ್ವರ್, ಜಿಲ್ಲಾ ಉಸ್ತುವಾರಿ ಸಚಿವ ಡಾ. ಹೆಚ್.ಸಿ ಮಹದೇವಪ್ಪ, ಶಾಸಕರಾದ ತನ್ವೀರ್ ಸೇಠ್, ಜಿ. ಟಿ. ದೇವೇಗೌಡ, ಶ್ರೀವತ್ಸ, ವಿಧಾನ ಪರಿಷತ್ ನ ಸದಸ್ಯ ಕೆ.ಶಿವಕುಮಾರ್, ಜಿಲ್ಲಾಧಿಕಾರಿ ಜಿ.ಲಕ್ಷ್ಮಿಕಾಂತ ರೆಡ್ಡಿ, ನಗರ ಪೊಲೀಸ್ ಆಯುಕ್ತರಾದ ಸೀಮಾ ಲಾಟ್ಕರ್, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ವಿಷ್ಣುವರ್ಧನ ಮತ್ತಿತರರು ಹಾಜರಿದ್ದರು.