ಬೆಂಗಳೂರು,ಮೇ.1: ಜಾತಿ ಗಣತಿಗೆ ಕರ್ನಾಟಕದ ಮಾದರಿ ಅಳವಡಿಸಿ ಎಂದು ಸಿಎಂ ಸಿದ್ದರಾಮಯ್ಯ ನೀಡಿರುವ ಹೇಳಿ ಹಾಸ್ಯಾಸ್ಪದ ಎಂದು ಪ್ರತಿಪಕ್ಷ ನಾಯಕ ಆರ್.ಅಶೋಕ್ ಟೀಕಿಸಿದ್ದಾರೆ.
ಈ ಬಗ್ಗೆ ಎಕ್ಸ್ ನಲ್ಲಿ ಪೋಸ್ಟ್ ಮಾಡಿರುವ ಅಶೋಕ್,ಮೂಲ ಪ್ರತಿ ಕಳೆದು ಹೋಗಿರುವ, ಕಾರ್ಯದರ್ಶಿಗಳ ಸಹಿಯೇ ಇಲ್ಲದ, ಪುಟಕ್ಕೆ 5-10 ರೂಪಾಯಿ ನೀಡಿ ಶಾಲಾ ಮಕ್ಕಳ ಕೈಯಲ್ಲಿ ಅರ್ಜಿ ಭರ್ತಿ ಮಾಡಿಸಿರುವ, ನಾಯಿಗಳಿರುವ ಮನೆಯಲ್ಲಿ ಜಾತಿ ಗಣತಿ ಮಾಡಲು ಹೋಗದ ನಿಮ್ಮ ಜಾತಿ ಗಣತಿ ವರದಿಯು ಜಾತಿ ಜನಗಣತಿಯನ್ನು ಹೇಗೆ ಮಾಡಬಾರದು ಎನ್ನುವುದಕ್ಕೆ ಮಾದರಿಯಾಗಿದೆ ವ್ಯಂಗ್ಯ ವಾಡಿದ್ದಾರೆ.
ಜಾತಿ ಜನಗಣತಿಯನ್ನ ಬಿಜೆಪಿ ವಿರೋಧಿಸುತ್ತಲೇ ಬಂದಿದೆ ಎಂದು ತಾವು ಹೇಳಿರುವುದು ಸುಳ್ಳು. 2010ರಲ್ಲಿ ಅಂದಿನ ಲೋಕಸಭೆಯ ವಿಪಕ್ಷ ನಾಯಕಿ ದಿವಂಗತ ಸುಷ್ಮಾ ಸ್ವರಾಜ್ ಅವರು 2011ರ ಜನಗಣತಿಯಲ್ಲಿ ಜಾತಿ ಜನಗಣತಿಯನ್ನು ಸೇರಿಸಲು ಬಿಜೆಪಿ ಬೆಂಬಲಿಸುತ್ತದೆ ಎಂದು ಲಿಖಿತ ರೂಪದಲ್ಲಿ ಯುಪಿಎ ಸರ್ಕಾರಕ್ಕೆ ತಿಳಿಸಿದ್ದರು. ಸಂಸತ್ತಿನಲ್ಲಿ ಅಂಗೀಕರಿಸಲಾದ ಸರ್ವಾನುಮತದ ನಿರ್ಣಯವನ್ನೂ ಬಿಜೆಪಿ ಬೆಂಬಲಿಸಿತ್ತು ಎಂದು ಸಿಎಂ ಗೆ ಅಶೋಕ ಟಾಂಗ್ ನೀಡಿದ್ದಾರೆ.
ಆದರೆ, ಅಂದಿನ ಕಾಂಗ್ರೆಸ್ ಸರ್ಕಾರ ಜಾತಿ ಜನಗಣತಿಯ ಬದಲು ಕಾಟಾಚಾರಕ್ಕೆ ಸಾಮಾಜಿಕ-ಆರ್ಥಿಕ ಜಾತಿ ಜನಗಣತಿ ಸಮೀಕ್ಷೆ ನಡೆಸಿತು. ಕರ್ನಾಟಕದ ಜಾತಿ ಗಣತಿಯಂತೆ ಕಳಪೆ ಯೋಜನೆ ಮತ್ತು ಅಸಮರ್ಥ ಅನುಷ್ಠಾನದಿಂದಾಗಿ ಅದು ಸಂಪೂರ್ಣವಾಗಿ ವಿಫಲವಾಯಿತು. ಕೋಟ್ಯಂತರ ರೂಪಾಯಿ ಹಣ ಖರ್ಚು ಮಾಡಿದ ನಂತರವೂ ಅದರ ಫಲಿತಾಂಶಗಳನ್ನು ಬಿಡುಗಡೆ ಮಾಡಲೇ ಇಲ್ಲ. ಇದು ಕಾಂಗ್ರೆಸ್ ಪಕ್ಷಕ್ಕೆ ಜಾತಿ ಗಣತಿ ಬಗ್ಗೆ ಇರುವ ನಿಜವಾದ ಬದ್ಧತೆ ಎಂದು ಲೇವಡಿ ಮಾಡಿದ್ದಾರೆ.
ಬಿಜೆಪಿಗೆ ಜಾತಿ ಗಣತಿಯನ್ನ ಎಂದಿಗೂ ಚುನಾವಣಾ ಅಸ್ತ್ರವಾಗಿ ದುರ್ಬಳಕೆ ಮಾಡಿಕೊಳ್ಳಲಿಲ್ಲ. ಅಧಿಕಾರವಿದ್ದಾಗ ಜಾತಿ ಜನಗಣತಿ ಮಾಡುವ ನಿರ್ಧಾರ ಕೈಗೊಂಡು ಬದ್ಧತೆ ಪ್ರದರ್ಶನ ಮಾಡಿದ್ದೇವೆಯೇ ಹೊರತು ವಿಪಕ್ಷದಲ್ಲಿದಾಗ ಮೊಸಳೆ ಕಣ್ಣೀರು ಸುರಿಸಿ, ಅಧಿಕಾರ ಇದ್ದಾಗ ನಿರ್ಲಕ್ಷ್ಯ ಮಾಡುವ ಕೀಳು ರಾಜಕೀಯ ಮಾಡಿಲ್ಲ. ಇದು ಸಾಮಾಜಿಕ ನ್ಯಾಯದ ಬಗ್ಗೆ ನಮಗಿರುವ ನೈಜವಾದ ಬದ್ಧತೆ ತಿಳಿದುಕೊಳ್ಳಿ ಎಂದು ಹೇಳಿದ್ದಾರೆ.
ಕೇಂದ್ರ ಸರ್ಕಾರ ಈಗ ನಡೆಸಲಿರುವ ಜಾತಿ ಗಣತಿ ಅತ್ಯಂತ ಪಾರದರ್ಶಕವಾಗಿ, ವೈಜ್ಞಾನಿಕವಾಗಿ, ಸದುದ್ದೇಶದಿಂದ ನಡೆಯಲಿದೆಯೇ ಹೊರತು ನಿಮ್ಮ ಕಾಂಗ್ರೆಸ್ ಸರ್ಕಾರ ಮಾಡಿದಂತೆ ರಾಜಕೀಯ ಅನುಕೂಲಕ್ಕಾಗಿ ಮೂಗಿನ ನೇರಕ್ಕೆ ದತ್ತಾಂಶವನ್ನು ತಿರುಚುವ ದುರುದ್ದೇಶದಿಂದ ಮಾಡುವುದಿಲ್ಲ ಎಂದು ಅಶೋಕ್ ತಿಳಿಸಿದ್ದಾರೆ.