ಬೆಂಗಳೂರು: ಅಭಿವೃದ್ಧಿಗೆ ದುಡ್ಡಿಲ್ಲ,ರಾಜ್ಯದ ಪ್ರಗತಿಗೆ ಯಾವುದೇ ದೂರದೃಷ್ಟಿ ಇಲ್ಲ,ಹೂಡಿಕೆದಾರರನ್ನು, ಉದ್ಯಮಿಗಳನ್ನು ಆಕರ್ಷಿಸುವ, ಹಿಡಿದಿಟ್ಟುಕೊಳ್ಳುವ ಆಸಕ್ತಿ ಇಲ್ಲದ ಕಾಂಗ್ರೆಸ್ ಸರ್ಕಾರ ಎಂದು ಪ್ರತಿಪಕ್ಷ ನಾಯಕ ಆರ್.ಅಶೋಕ್ ಟೀಕಾಪ್ರಹಾರ ನಡೆಸಿದ್ದಾರೆ.
ಹಿಂದೆಂದೂ ಕಂಡರಿಯದ ದುರಾಡಳಿತ, ಭ್ರಷ್ಟಾಚಾರದ ಕೂಪದಲ್ಲಿ ರಾಜ್ಯವನ್ನು ಮುಳುಗಿಸಿರುವ ಸಿಎಂ ಸಿದ್ದರಾಮಯ್ಯ ನೇತೃತ್ವದ ರಾಜ್ಯ ಸರ್ಕಾರ, ಮುಜುಗರಕ್ಕೊಳಗಾದಾಗಲೆಲ್ಲ ಜನರ ದಿಕ್ಕು ತಪ್ಪಿಸಲು, ಸಾರ್ವಜನಿಕರ ಗಮನ ಬೇರೆಡೆ ಸೆಳೆಯಲು ಜಾತಿಗಣತಿ ಎಂಬ ಮೆಗಾ ಸೀರಿಯಲ್ ನ ಒಂದೊಂದೇ ಸಂಚಿಕೆ ಹೊರಬಿಡುವ ನಾಟಕ ಮಾಡುತ್ತಿದೆ ಎಂದು ಟ್ವೀಟ್ ಮಾಡಿ ವ್ಯಂಗ್ಯವಾಡಿದ್ದಾರೆ
ಸಿಎಂ ಸಿದ್ದರಾಮಯ್ಯನವರೇ, ಇನ್ನೆಷ್ಟು ದಿನ ಈ ಭಂಡ ಬಾಳು. ನೀವು ಹೇಳಿದ್ದನ್ನ ನಿಮ್ಮ ಸಂಪುಟ ಸದಸ್ಯರೆ ಒಪ್ಪುವುದಿಲ್ಲ, ಶಾಸಕರೂ ಒಪ್ಪುವುದಿಲ್ಲ, ಹೈಕಮಾಂಡ್ ಅಂತೂ ನಿಮ್ಮ ಮಾತಿಗೆ ಕವಡೆ ಕಿಮ್ಮತ್ತು ಕೊಡುತ್ತಿಲ್ಲ, ಈ ಭಂಡ ಬಾಳು ಸಾಕು ಮಾಡಿ ರಾಜೀನಾಮೆ ಕೊಟ್ಟು ರಾಜ್ಯವನ್ನು ಉಳಿಸಿ ಎಂದು ಅಶೋಕ್ ಹೇಳಿದ್ದಾರೆ.