ಪುಟಗಟ್ಟಲೇ ಜಾಹೀರಾತು ಕೊಟ್ಟು ಬಿಟ್ಟಿ ಪ್ರಚಾರ ಪಡೆದಿದ್ದೆ ನಿಮ್ಮ ಸಾಧನೆ:ಅಶೋಕ್

ಬೆಂಗಳೂರು: ಸಿಎಂ ಸಿದ್ದರಾಮಯ್ಯ ನವರೇ,
ಸಾರಿಗೆ ಸಂಸ್ಥೆಗಳು ಹಿಂದೆಂದೂ ಕಂಡು ಕೇಳರಿಯದ ರೀತಿಯಲ್ಲಿ ಲಾಭದಲ್ಲಿದೆ ಎಂದು ಸುಳ್ಳು ಹೇಳುತ್ತಾ ಪುಟಗಟ್ಟಲೇ ಜಾಹೀರಾತು ಕೊಟ್ಟು ಬಿಟ್ಟಿ ಪ್ರಚಾರ ಪಡೆದಿದ್ದೆ ನಿಮ್ಮ ಏಕೈಕ ಸಾಧನೆ ಎಂದು ಪ್ರತಿಪಕ್ಷ ನಾಯಕ ಅಶೋಕ್‌ ಜರಿದಿದ್ದಾರೆ.

ಅವೈಜ್ಞಾನಿಕ ಯೋಜನೆಗಳ ಮೂಲಕ ರಾಜ್ಯ ಸಾರಿಗೆ ಸಂಸ್ಥೆಗಳನ್ನ ದಿವಾಳಿ ಮಾಡಿದ ಕುಖ್ಯಾತಿ ನಿಮ್ಮ ಸರ್ಕಾರಕ್ಕೆ ಸಲ್ಲುತ್ತದೆ. ನಿಮ್ಮ ದುರಾಡಳಿತದಿಂದ ಬಸ್ ನಿಲ್ದಾಣಗಳನ್ನೂ ಲೀಸ್‌ಗಿಡುವ ಹೀನಾಯ ಸ್ಥಿತಿಗೆ ಇಂದು ಕೆ ಎಸ್ ಆರ್ ಟಿ ಸಿ ಸಂಸ್ಥೆ ತಲುಪಿದೆ ನಿಮ್ಮ ಕಾರ್ಯವೈಖರಿಗೆ ಇದಕ್ಕಿಂತ ಸಾಕ್ಷಿ ಬೇಕಾ ಎಂದು ಟ್ವೀಟ್ ಮಾಡಿ ಅವರು ಕಾರವಾಗಿ ಪ್ರಶ್ನಿಸಿದ್ದಾರೆ.

ಈಗಾಗಲೇ ಶೇ 15-30 ಟಿಕೆಟ್ ದರ ಏರಿಕೆ ಮಾಡಿದ್ದೀರಿ, ಮತ್ತೊಂದೆಡೆ ಕೆ ಎಸ್ ಆರ್ ಟಿಸಿ ಸಂಸ್ಥೆಯನ್ನ 2,000 ಕೋಟಿ ರೂಪಾಯಿ ಸಾಲದ ಸುಳಿಯಲ್ಲಿ ಸಿಲುಕಿಸಿದ್ದೀರಿ. ನೌಕರರಿಗೆ 1,800 ಹಿಂಬಾಕಿ ಉಳಿಸಿಕೊಂಡಿದ್ದೀರಿ, ನಿಗಮಗಳಿಗೆ 6,000 ಕೋಟಿ ರೂಪಾಯಿ ಬಾಕಿ ಇದೆ. ಪರಿಸ್ಥಿತಿ ಹೀಗೆ ಮುಂದುವರಿದರೆ ಮುಂದಿನ ದಿನಗಳಲ್ಲಿ ಅರ್ಥಿಕ ಪರಿಸ್ಥಿತಿ ನಿಭಾಯಿಸಲು ಬಸ್ ನಿಲ್ದಾಣಗಳನ್ನು ಹರಾಜು ಹಾಕಿದರೂ ಅಚ್ಚರಿಯಿಲ್ಲ ಎಂದು ಲೇವಡಿ‌ ಮಾಡಿದ್ದಾರೆ.

2013ರಲ್ಲಿ ನಾನು ಸಾರಿಗೆ ಸಚಿವನಾಗಿದ್ದಾಗ, ಸಾರಿಗೆ ಸಂಸ್ಥೆಗಳಲ್ಲಿ 1,000 ಕೋಟಿಗೂ ಹೆಚ್ಚು ಲಾಭ ತಂದುಕೊಟ್ಟಿದ್ದೆ. ಸಾರಿಗೆ ನಿಗಮಗಳಲ್ಲಿ 25,000 ಜನರಿಗೆ ಕಾಯಂ ಉದ್ಯೋಗ ಕೊಟ್ಟಿದ್ದೆ. ಪ್ರಯಾಣಿಕರಿಗೆ ಗುಣಮಟ್ಟದ ನಿಲ್ದಾಣ ಮತ್ತು ಬಸ್ ಸೇವೆ, ಇಂಧನ ಉಳಿತಾಯ, ಜೈವಿಕ ಇಂಧನ ಬಳಕೆ ಮತ್ತಿತರ ಕಾರ್ಯದಕ್ಷತೆ ಗಮನಿಸಿ ಅಂದಿನ ಕಾಂಗ್ರೆಸ್ ನೇತೃತ್ವದ ಯುಪಿಎ ಸರ್ಕಾರ ರಾಜ್ಯಕ್ಕೆ 30ಕ್ಕೂ ಹೆಚ್ಚು ಪ್ರಶಸ್ತಿ ನೀಡಿತ್ತು ಎಂಬುದುನ್ನು ತಿಳಿದುಕೊಳ್ಳಿ ಎಂದು ಚಾಟಿ ಬೀಸಿದ್ದಾರೆ

ಹಿಂದಿನ ಬಿಜೆಪಿ ಸರ್ಕಾರದ ಅವಧಿಯಲ್ಲಿ ಕೋವಿಡ್ ಸಾಂಕ್ರಾಮಿಕದಿಂದ ಸಾರಿಗೆ ಸಂಸ್ಥೆಗಳಿಗೆ ನಷ್ಟ ಆಗಿದ್ದು ನಿಜ. ಆದರೆ ಬೇರೆ ರಾಜ್ಯಗಳಲ್ಲಿ ಸಾರಿಗೆ ನೌಕರರಿಗೆ ಸಂಬಳ ಕೊಡದಿದ್ದ ಸಂದರ್ಭದಲ್ಲೂ ನಾವು ವೇತನ ಕೊಟ್ಟಿದ್ದೇವೆ. ಅದು ಕಾರ್ಮಿಕರ ಕಲ್ಯಾಣದ ಬಗ್ಗೆ ನಮ್ಮ ಪಕ್ಷದ ಬದ್ಧತೆ. ನಮ್ಮ ಪಕ್ಷವಾಗಲಿ, ನಾನಾಗಲಿ ತಮ್ಮಿಂದ ಆಡಳಿತದ ಪಾಠ ಕಲಿಯಬೇಕಿಲ್ಲ ಎಂದು ಅಶೋಕ್ ತಿರುಗೇಟು ನೀಡಿದ್ದಾರೆ.