ಮೂಢನಂಬಿಕೆಗಳಿರುವ ಸಮಾಜದ ಜೊತೆ ರಾಜಿಯಾಗಬೇಡಿ: ಸಿದ್ದರಾಮಯ್ಯ

ಮಂಗಳೂರು: ವೈಜ್ಞಾನಿಕ ಹಾಗೂ ವೈಚಾರಿಕ ಜ್ಞಾನವನ್ನು ಪಡೆಯಿರಿ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಸಲಹೆ ನೀಡಿದರು.
ಫೇಸ್ ಮತ್ತು ಎಐ ಉನ್ನತ ಅಧ್ಯಯನ ಕೇಂದ್ರದ ಶಿಲಾನ್ಯಾಸ ಫೇಸ್ ಟ್ರೈಡ್ ಪಾರ್ಕ್ ಮತ್ತು ಫೇಸ್ ಸ್ಪೋರ್ಟ್ಸ ಅರೇನಾ ಶಿಲಾನ್ಯಾಸ ಹಾಗೂ ಪೇಸ್ ಕೇರ್ಸ್ ಸಮುದಾಯ ಸೇವೆ ಯೋಜನೆಗಳನ್ನು ಉದ್ಘಾಟಿಸಿ ಸಿಎಂ ಮಾತನಾಡಿದರು.
ಪೇಸ್ ಗ್ರೂಪ್ನ ಸಂಸ್ಥಾಪಕರಾದ ಡಾ.ಪಿ.ಎ.ಇಬ್ರಾಹಿಂ ಅವರ ದೂರದೃಷ್ಟಿಯ ಫಲವಾಗಿ ಭಾರತ ಹಾಗೂ ವಿದೇಶಗಳಲ್ಲಿ ಅನೇಕ ಶೈಕ್ಷಣಿಕ ಸಂಸ್ಥೆಗಳು ಸ್ಥಾಪಿತವಾಗಿದ್ದು, ಸುಮಾರು 36,000 ಕ್ಕೂ ಹೆಚ್ಚು ವಿದ್ಯಾರ್ಥಿಗಳು ಶಿಕ್ಷಣ ಪಡೆಯುತ್ತಿದ್ದಾರೆ. ದೊಡ್ಡಪ್ರಮಾಣದಲ್ಲಿ ವಿದ್ಯಾರ್ಥಿಗಳಿಗೆ ಶಿಕ್ಷಣ ನೀಡುತ್ತಿರುವ ಪೇಸ್ ಸಂಸ್ಥೆ , ಉತ್ತಮ ಗುಣಮಟ್ಟದ ವಿದ್ಯಾಸಂಸ್ಥೆಯಾಗಿದೆ ಎಂದು ಶ್ಲಾಘಿಸಿದರು.
ವಿದ್ಯೆ ಪಡೆದ ನಂತರ ಸಮಾಜಕ್ಕೆ ನೀಡುವ ಕೊಡುಗೆ ಬಗ್ಗೆ ವಿದ್ಯಾರ್ಥಿಗಳು ಗಮನಹರಿಸಬೇಕು. ಆಧುನಿಕ ಶಿಕ್ಷಣದ ಜೊತೆಗೆ ವೈಜ್ಞಾನಿಕ ಹಾಗೂ ವೈಚಾರಿಕ ಜ್ಞಾನವನ್ನೂ ಹೊಂದಿರಬೇಕು. ಆಗ ಮಾತ್ರ ಸಮಾಜದ ಸಮಸ್ಯೆಗಳಿಗೆ ಉತ್ತಮ ರೀತಿಯಲ್ಲಿ ಸ್ಪಂದಿಸಲು ಸಾಧ್ಯ. ಮೂಢನಂಬಿಕೆಗಳಿರುವ ಸಮಾಜದ ಜೊತೆ ರಾಜಿಯಾಗಲೀ , ಅಂಧಶ್ರದ್ಧೆಯ ಪಾಲನೆಯಾಗಲಿ ಮಾಡಬಾರದು ಎಂದು ಸಿದ್ದರಾಮಯ್ಯ ಸಲಹೆ ನೀಡಿದರು.
ಕೃತಕ ಬುದ್ಧಿಮತ್ತೆ ಕಲಿತು ಹಣೆಬರಹ ಅಂದರೆ ಅದು ವಿದ್ಯೆಯೇ ಅಲ್ಲ. ಸಮಾಜದ ಸಮಸ್ಯೆಗಳಿಗೆ ಸ್ಪಂದಿಸುವಂತ ವಿದ್ಯೆ ಅಗತ್ಯವಿದೆ,ಸ್ವಾತಂತ್ರ್ಯ, ಸಮಾನತೆ, ಭಾತೃತ್ವವನ್ನು ನಮ್ಮ ಸಂವಿಧಾನ ಸಾರುತ್ತದೆ. ನಾವು ಏನೇ ಕಲಿತರೂ ವೈಚಾರಿಕತೆ ವೈಜ್ಞಾನಿಕತೆಯನ್ನು ಮೈಗೂಡಿಸಿಕೊಳ್ಳಬೇಕು . ಪ್ರತಿಯೊಬ್ಬರೂ ಮೊದಲು ಮಾನವನಾಗಬೇಕು ಎಂದು ತಿಳಿಸಿದರು.
ಪರಸ್ಪರ ಪ್ರೀತಿಸಬೇಕೆಂಬ ಮನೋಭಾವ ವಿದ್ಯಾರ್ಥಿಗಳಲ್ಲಿ ಬೆಳೆದರೆ ನಮ್ಮ ಸಮಾಜದಲ್ಲಿ ಅಸಮಾನತೆ ತೊಲಗಿಸುವುದು ಸುಲಭ ಸಿಎಂ ನುಡಿದರು.