ಕೊಳ್ಳೇಗಾಲ: ಇದೇ ನವಂಬರ್ 29 ರಂದು ಪಟ್ಟಣದ ಜನತೆಯ ಬಹುನಿರೀಕ್ಷಿತ ಅಂಬೇಡ್ಕರ್ ಭವನ ಲೋಕಾರ್ಪಣೆಗೊಳ್ಳಲಿದೆ ಎಂದು ಡಾ. ಅಂಬೇಡ್ಕರ್ ಸ್ಮಾರಕ ಸಂಘದ ಅಧ್ಯಕ್ಷ ಆನಂದ್ ಮೂರ್ತಿ ತಿಳಿಸಿದರು.
ಪಟ್ಟಣದ ನೂತನ ಅಂಬೇಡ್ಕರ್ ಭವನದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು ಪಟ್ಟಣದ ಭೀಮನಗರದ ಬಹು ದಿನಗಳ ಕನಸು ಈ ತಿಂಗಳ ಅಂತ್ಯದಲ್ಲಿ ನನಸಾಗುವ ಕಾಲ ಕೂಡಿಬಂದಿದೆ. ಕಳೆದ ಹಲವಾರು ವರ್ಷಗಳಿಂದ ನೆನೆಗುದಿಗೆ ಬಿದ್ದಿದ್ದ ಅಂಬೇಡ್ಕರ್ ಭವನ ಉದ್ಘಾಟನೆ ಆಗುತ್ತಿರುವುದು ಸಮುದಾಯದ ಜನರಲ್ಲಿ ಹರ್ಷ ತಂದಿದೆ ಎಂದು ತಿಳಿಸಿದರು.
ಎಲ್ಲಾ ಕಾರ್ಯಕ್ರಮಗಳು ಕೊಳ್ಳೇಗಾಲ ಶಾಸಕ ಎ.ಆರ್ ಕೃಷ್ಣಮೂರ್ತಿ ಅವರ ಘನ ಅಧ್ಯಕ್ಷತೆಯಲ್ಲಿ ನಡೆಯಲಿದ್ದು, ಚನ್ನಾಲಿಂಗನಹಳ್ಳಿ ಚೇತವನದ ಮನೋರಕಿತ ಬಂತೆ ಜಿ, ಮೈಸೂರಿನ ಉರಿಲಿಂಗಿ ಪೆದ್ದಿ ಮಠದ ಜ್ಞಾನ ಪ್ರಕಾಶ್ ಸ್ವಾಮೀಜಿಗಳು ದಿವ್ಯ ಸಾನ್ವಿಧ್ಯ ವಹಿಸಲಿದ್ದಾರೆ.
ಸಮಾಜ ಕಲ್ಯಾಣ ಸಚಿವ ಡಾ.ಹೆಚ್.ಸಿ. ಮಹದೇವಪ್ಪ ನವರು ಭವನವನ್ನು ಉದ್ಘಾಟಿಸಲಿದ್ದಾರೆ, ಗೃಹ ಸಚಿವ ಜಿ ಪರಮೇಶ್ವರ್ ಅವರು ಮುಖ್ಯ ಭಾಷಣಕಾರರಾಗಿ ಆಗಮಿಸಲಿದ್ದಾರೆ.
ಮುಖ್ಯ ಅತಿಥಿಗಳಾಗಿ ಗ್ರಾಮೀಣ ಅಭಿವೃದ್ಧಿ ಮತ್ತು ಪಂಚಾಯತ್ ರಾಜ್ ಸಚಿವ ಪ್ರಿಯಾಂಕ ಖರ್ಗೆ, ಸಂಸದ ಸುನಿಲ್ ಬೋಸ್ ಸೇರಿದಂತೆ ಅನೇಕ ಗಣ್ಯರು ಭಾಗವಹಿಸಲಿದ್ದಾರೆ ಎಂದು ಮಾಹಿತಿ ನೀಡಿದರು
ವೇದಿಕೆ ಕಾರ್ಯಕ್ರಮಕ್ಕೂ ಮೊದಲು ಬೆಳಿಗ್ಗೆ ಭೀಮನಗರದಿಂದ ಮೆರವಣಿಗೆ ಹೊರಟು ಅಂಬೇಡ್ಕರ್ ಪುತ್ತಳಿಗೆ ಮಾಲಾರ್ಪಣೆ ಮಾಡಿ ಪ್ರಮುಖ ಬೀದಿಗಳಲ್ಲಿ ಮೆರವಣಿಗೆ ಸಾಗಿ, ಅಂಬೇಡ್ಕರ್ ಭವನ ತಲುಪಲಿದೆ. ನಂತರ ಭವನ ಉದ್ಘಾಟನೆ ಗೊಳ್ಳಲಿದ್ದು
ವೇದಿಕೆ ಕಾರ್ಯಕ್ರಮಗಳು ನಡೆಯಲಿದೆ. ಇದು ಭೀಮ ನಗರದ ಹೆಮ್ಮೆಯ ಕಾರ್ಯಕ್ರಮವಾಗಿದ್ದು ಸಮುದಾಯದ ಮುಖಂಡರು ಯಜಮಾನರು ಭವನ ಉದ್ಘಾಟನೆ ಕಾರ್ಯಕ್ರಮವನ್ನು ಯಶಸ್ವಿಗೊಳಿಸಲು ಉತ್ಸುಕರಾಗಿದ್ದಾರೆ ಎಂದು ಹರ್ಷ ವ್ಯಕ್ತಪಡಿಸಿದರು.
ಈ ಕಾರ್ಯಕ್ರಮಕ್ಕೆ ಜಿಲ್ಲೆಯ ಹಾಲಿ ಹಾಗೂ ಮಾಜಿ ಶಾಸಕರುಗಳು ಚುನಾಯಿತ ಪ್ರತಿನಿಧಿಗಳು ವಿವಿಧ ಸಮುದಾಯಗಳ ಮುಖಂಡರು ಹಾಗೂ ಜಿಲ್ಲೆಯ ಎಲ್ಲಾ ಅಂಬೇಡ್ಕರ್ ಸಂಘಗಳ ಪದಾಧಿಕಾರಿಗಳು ಅಂಬೇಡ್ಕರ್ ಅನುಯಾಯಿಗಳು ಭಾಗವಹಿಸಲಿದ್ದಾರೆ ಎಂದು ತಿಳಿಸಿದರು.
ಭೀಮನಗರದ ಯಜಮಾನರಾದ ಚಿಕ್ಕಮಾಳಿಗೆ ಮಾತನಾಡಿ ಅಂದಿನ ಕಾರ್ಯಕ್ರಮವನ್ನು ಜಿಲ್ಲಾಡಳಿತ ಅಚ್ಚುಕಟ್ಟಾಗಿ ನಡೆಸಲು ಮುಂದಾಗಿದ್ದು ಈಗಾಗಲೇ ಕಾರ್ಯಕ್ರಮಕ್ಕೆ ತಯಾರಿ ನಡೆಸುತ್ತಿದೆ ಎಂದು ತಿಳಿಸಿದರು.
ಜಿಲ್ಲಾಡಳಿತ ನಡೆಸುವ ಕಾರ್ಯಕ್ರಮಕ್ಕೆ ಸಮುದಾಯದ ಮುಖಂಡರು ಯಜಮಾನರು ಸಾಥ್ ನೀಡಲಿದ್ದಾರೆ ನ.29 ರಂದು ಉದ್ಘಾಟನೆಯಾಗಲಿರುವ ಭವನದಲ್ಲಿ ಮುಂದುವರಿದ ಕಾಮಗಾರಿ ನಡೆಯಲಿದ್ದು ಕಾಮಗಾರಿ ಸಂಪೂರ್ಣ ಮುಗಿದ ಬಳಿಕ ಜನವರಿ ನಂತರ ಸಾರ್ವಜನಿಕರ ಸೇವೆಗೆ ದೊರಕಲಿದೆ ಎಂದು ಹೇಳಿದರು.
ಸುದ್ದಿಗೋಷ್ಟಿಯಲ್ಲಿ ಅಂಬೇಡ್ಕರ್ ಸಂಘದ ಪ್ರಧಾನ ಕಾರ್ಯದರ್ಶಿ ಪಾಪಣ್ಣ, ಉಪಾಧ್ಯಕ್ಷ ಕಿರಣ್, ಸಹಕಾರ್ಯದರ್ಶಿ ಶಶಿಕುಮಾರ್, ಖಜಾಂಚಿ ರಾಜೇಶ್, ನಿರ್ದೇಶಕರುಗಳಾದ ಎಂ ಮರಿಸ್ವಾಮಿ, ಪಿ ಕೃಷ್ಣರಾಜು, ಮಣಿ, ಪುಟ್ಟಲಿಂಗಯ್ಯ, ಭೀಮನಗರದ ಯಜಮಾನರುಗಳಾದ ಮಹದೇವಸ್ವಾಮಿ, ಆನಂದ್ ಮುಖಂಡರುಗಳಾದ ನಾಗರಾಜು, ಲಿಂಗರಾಜು, ಯುವ ವಕೀಲ ಹರ್ಷ ಮತ್ತಿತರರು ಉಪಸ್ಥಿತರಿದ್ದರು.
