ಮಹಿಳೆ-ಮಕ್ಕಳ ರಕ್ಷಣೆ ಬಗ್ಗೆ ಮಹಾರಾಣಿಮಹಿಳಾ ವಿಜ್ಞಾನ ಕಾಲೇಜಲ್ಲಿ ಭಿತ್ತಿಪತ್ರ ಪ್ರದರ್ಶನ

Spread the love

ಮೈಸೂರು: ಮಹಿಳೆ ಮತ್ತು ಮಕ್ಕಳ
ರಕ್ಷಣೆ ಕುರಿತು ಅರಿವು ಮೂಡಿಸುವ ಸಲುವಾಗಿ
ಮಹಾರಾಣಿ ಮಹಿಳಾ ವಿಜ್ಞಾನ ಕಾಲೇಜಿನ ರಾಣಿ ಕೆಂಪನಂಜಮ್ಮಣ್ಣಿ ಅಮ್ಮನವರ ಉದ್ಯಾನದಲ್ಲಿ ಇಂಗ್ಲೀಷ್ ವಿಭಾಗದ ವತಿಯಿಂದ ಇಂದು ಭಿತ್ತಿಪತ್ರ ಪ್ರದರ್ಶನ ಏರ್ಪಡಿಸಲಾಗಿತ್ತು.

ದ್ವಿತೀಯ ಬಿಎಸ್ಸಿ ಪದವಿ ತರಗತಿಯ ಸುಮಾರು 165 ವಿದ್ಯಾರ್ಥಿಗಳು ರಚಿಸಿದ ಸಮಾಜಮುಖಿ, ಮಹಿಳಾ ಅಭ್ಯುದಯ ಕೇಂದ್ರಿತ ಭಿತ್ತಿಪತ್ರಗಳನ್ನು ಪ್ರದರ್ಶಿಸಲಾಯಿತು.

ಮಹಿಳೆ ಮತ್ತು ಮಕ್ಕಳ ರಕ್ಷಣೆ ಕುರಿತು ಅರಿವು ಮೂಡಿಸುವ ಭಿತ್ತಿಪತ್ರಗಳ ಜತೆಗೆ
ರಕ್ತದಾನ, ಕೃತಕ ಬುದ್ಧಿಮತ್ತೆ, ನಿಧಾನವೇ ಪ್ರಧಾನ, ಆಹಾರ ವಿಜ್ಞಾನ, ಮಕ್ಕಳ ಸುರಕ್ಷತೆ, ಪ್ಲಾಸ್ಟಿಕ್ ಬಳಕೆ ನಿಷೇಧ, ಭೂಮಂಡಲ ರಕ್ಷಣೆ, ಡ್ರಗ್ಸ್ ನಿಷೇಧ, ಹವಾಮಾನ ವೈಪರೀತ್ಯ, ಆರೋಗ್ಯ ರಕ್ಷಣೆ, ಮಾನವ ಅಂಗಾಂಗ ದಾನ, ಹೆಣ್ಣುಮಕ್ಕಳ ಶಿಕ್ಷಣ, ಮರ ಗಿಡ ಪರಿಸರ ರಕ್ಷಣೆ, ಬಾಲಕಾರ್ಮಿಕ ಪದ್ಧತಿ ವಿರೋಧ, ವಾಯು ಮಾಲಿನ್ಯ, ಕ್ಯಾನ್ಸರ್, ಕೋವಿಡ್ 19, ಅರಣ್ಯೀಕರಣ, ಇಂಡಿಯಾ ಮತ್ತು ತಾತ್ವಿಕತೆ, ತಂಬಾಕು ಸೇವನೆ ಪರಿಣಾಮ, ಮಹಿಳೆ ಮೇಲೆ ದೌರ್ಜನ್ಯ, ಜಲ ಸಂರಕ್ಷಣೆ, ಟೆರಾಕೊಟಾ ಆಭರಣ, ಸಮಾಜಮುಖಿ, ಮಹಿಳಾ ಸಂವೇದನೆ ಮತ್ತು ಮಕ್ಕಳ ಕಲ್ಯಾಣ ಇತ್ಯಾದಿ ಸಾಮಾಜಿಕ ಅರಿವಿನ ವಿಷಯಗಳ ಕುರಿತು ವಿವಿಧ ವಿಭಾಗಗಳ ವಿದ್ಯಾರ್ಥಿಗಳು ರಚಿಸಿದ ಭಿತ್ತಿಪತ್ರಗಳ ಪ್ರದರ್ಶನ ಮಾಡಲಾಯಿತು.

ಗಿಡಕ್ಕೆ ನೀರು ಹಾಕುವ ಮೂಲಕ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಮುಖ್ಯ ಅತಿಥಿ, ದೃಶ್ಯ ಕಲಾವಿದ ಮತ್ತು ಗ್ರಾಫಿಕ್ ವಿನ್ಯಾಸಕ ಶ್ರೀದರ್ಶನ್ ಭಾಸ್ಕರ್ ಮಲ್ವಾಂಕರ್, ವಿಜ್ಞಾನ ಓದಿನ ಜತೆಗೆ ಕಲೆ ಮತ್ತು ಸಾಹಿತ್ಯ ಅಭ್ಯಾಸ ಬದುಕನ್ನು ರೂಪಿಸಿಕೊಳ್ಳಲು ಅನುವು ಮಾಡಿಕೊಡುವುದರಿಂದ ಅದರ ಕಡೆ ಕೂಡ ಮನಸು ಮಾಡಿ ಎಂದು ಸಲಹೆ ನೀಡಿದರು.

ವಿಜ್ಞಾನ ಕಲಿಕೆ ಕೇವಲ ಪದವಿ ಗಳಿಸಲು ಸಹಾಯ ಮಾಡುತ್ತದೆ. ಆದರೆ ಕಲೆ ಮತ್ತು ಸಾಹಿತ್ಯ ಮನಸನ್ನು ಹೆಚ್ಚು ಸಂತೋಷಗೊಳಿಸುತ್ತದೆ. ಅಲ್ಲದೆ, ಬದುಕನ್ನು ಅರ್ಥಪೂರ್ಣವಾಗಿ ಸಾಗಿಸಲು ಸಹಕಾರಿ ಎಂದು ಹೇಳಿದರು.

ಕೃತಕ ಬುದ್ಧಿಮತ್ತೆ ಆಳುತ್ತಿರುವ
ಇಂದಿನ ದಿನಗಳಲ್ಲಿ ಆಧುನಿಕ ತಾಂತ್ರಿಕ ಕೌಶಲ್ಯ ಕಲಿಕೆ ಉದ್ಯೋಗ ಒದಗಿಸಿ ಕೊಡುತ್ತದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ಅಧ್ಯಕ್ಷತೆ ವಹಿಸಿದ್ದ ಕಾಲೇಜು ಪ್ರಾಂಶುಪಾಲ ಪ್ರೊ. ಅಬ್ದುಲ್ ರಹಿಮಾನ್ ಎಂ ಅವರು ಮಾತನಾಡಿ, ಪದವಿ ದಿನಗಳಲ್ಲಿ ಶೈಕ್ಷಣಿಕ ಓದಿನ ಜತೆಗೆ ಕಲೆ ಮತ್ತು ಕ್ರಿಯಾಶೀಲ ನಡೆಗಳ ಕಡೆಗೆ ಗಮನ ಹರಿಸುವಂತೆ ಸಲಹೆ ನೀಡಿದರು.

ವಿದ್ಯುನ್ಮಾನ ಮತ್ತು ತಂತ್ರಜ್ಞಾನ ಎರಡು ಕ್ಷೇತ್ರಗಳಲ್ಲಿ ಮಹತ್ತರ ಬದಲಾವಣೆ ಆಗುತ್ತಿರುವ ಈ ಕಾಲದಲ್ಲಿ ಬದುಕಿನ ಹಾದಿ ಕಂಡುಕೊಳ್ಳಲು ಕ್ರಿಯಾಶೀಲತೆ ಬಹುಮುಖ್ಯ ಪಾತ್ರ ವಹಿಸಲಿದೆ ಎಂದು ಹೇಳಿದರು.

ಇಂಗ್ಲಿಷ್ ವಿಭಾಗದ ಮುಖ್ಯಸ್ಥ ಗೋವಿಂದರಾಜು ಪ್ರಾಸ್ತಾವಿಕವಾಗಿ ಮಾತನಾಡಿ, ಭಿತ್ತಿಪತ್ರ ರಚನೆ ಕೇವಲ ಶೈಕ್ಷಣಿಕ ಅಗತ್ಯ ಪ್ರಕ್ರಿಯೆ ಮಾತ್ರ ಆಗದೆ, ಉದ್ಯೋಗ ಮತ್ತು ಬದುಕಿನ ಮಾರ್ಗವಾಗಿ ಮಾಡಿಕೊಳ್ಳಲು ಸಾಧ್ಯ ಎಂದು ಹೇಳಿದರು.

ವಿದ್ಯಾರ್ಥಿಗಳಾದ ಮಿಸ್ಬಾ ಸ್ವಾಗತಿಸಿದರೆ,
ಕೀರ್ತನ ಎನ್ ವಂದಿಸಿದರು ಹಾಗೂ ಮಮತಾ ನಿರೂಪಿಸಿದರು.

ಡಾ. ಪರಶಿವಮೂರ್ತಿ ಎಚ್.ಎಸ್. ಮತ್ತು ಡಾ. ಶೋಭಲತ ಎನ್ ತೀರ್ಪುಗಾರರಾಗಿದ್ದರು.

ಕಾರ್ಯಕ್ರಮದಲ್ಲಿ, ಅತಿಥಿಗಳಾಗಿ ಡಾ.ರಾಮಚಂದ್ರ, ಎನ್.ಎಸ್.ಎಸ್. ಅಧಿಕಾರಿ ಡಾ. ಲಕ್ಷ್ಮಣ ಬಿ, ಡಾ.ನಂಜುಂಡಸ್ವಾಮಿ, ಅಧ್ಯಾಪಕರಾದ ರಂಗನಾಥ ಎಚ್.ಎಸ್, ದಿನೇಶ ಎಚ್.ಆರ್, ಮಂಜುನಾಥ ಕೆ.ಎಂ, ಲೋಕೇಶ್ ಟಿ.ವಿ, ವಿದ್ಯಾರ್ಥಿಗಳು, ಅಧ್ಯಾಪಕರು, ಅಧ್ಯಾಪಕೇತರರು, ಕಾಲೇಜು ಅಭಿವೃದ್ಧಿ ಸಮಿತಿ ನೌಕರರು, ವಿವಿಧ ವಿಭಾಗಗಳ ವಿದ್ಯಾರ್ಥಿಗಳು ಭಾಗವಹಿಸಿದ್ದರು.