ಜಂಬೂ ಸವಾರಿ ಸಂಪನ್ನ:ನಾಡ ಅಧಿದೇವತೆಗೆ ಪುಷ್ಪ ನಮನ ಸಲ್ಲಿಸಿದ ಸಿಎಂ

Spread the love

ಮೈಸೂರು, ಅ.2: ವಿಶ್ವ ವಿಖ್ಯಾತ ದಸರಾ ಮಹೋತ್ಸವದ ಅಂಗವಾಗಿ ಗುರುವಾರ ನಡೆದ ವಿಜಯ‌ ದಶಮಿ ಮೆರವಣಿಗೆ ಮಳೆಯ ಸಿಂಚನದ ನಡುವೆ ಅತ್ಯಂತ ಯಶಸ್ವಿಯಾಗಿ ಸಂಪನ್ನಗೊಂಡಿತು.

ಮೆರವಣಿಗೆ ಸಾಗಿದ ನಂತರ ಸಂಜೆ 4.42 ರಿಂದ 5.06 ಒಳಗೆ ಸಲ್ಲುವ ಶುಭ ಕುಂಭ ಲಗ್ನದಲ್ಲಿ ನಾಡ ಅಧಿದೇವತೆ ಚಾಮುಂಡೇಶ್ವರಿಯನ್ನು ಚಿನ್ನದ ಪಲ್ಲಕ್ಕಿಯಲ್ಲಿ ಹೊತ್ತು ಸಾಗಿ‌ ಬಂದ ಆನೆ ಅಭಿಮನ್ಯುವಿಗೆ ಸಿಎಂ ಸಿದ್ದರಾಮಯ್ಯ ಪುಷ್ಪಾರ್ಚನೆ ನೆರವೇರಿಸಿದರು.

ಈ ಸಂದರ್ಭದಲ್ಲಿ ಉಪಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಸಚಿವರುಗಳಾದ ಡಾ. ಎಚ್. ಸಿ ಮಹದೇವಪ್ಪ, ಶಿವರಾಜ ತಂಗಡಗಿ ಮತ್ತು ರಾಜವಂಶಸ್ಥರು ಹಾಗೂ ಸಂಸದರಾದ ಯದುವೀರ ಕೃಷ್ಣದತ್ತ ಚಾಮರಾಜ ಒಡೆಯರ್ ಮತ್ತಿತರರು ಮುಖ್ಯಮಂತ್ರಿಗಳಿಗೆ ಸಾತ್ ನೀಡಿದರು

ಅಭಿಮನ್ಯುವಿಗೆ,ತಾಯಿ ಚಾಮುಂಡೇಶ್ವರಿಗೆ ಎಲ್ಲೆಲ್ಲೂ ಜೈಕಾರ ಮೊಳಗಿತು.ತಾಯಿಯನ್ನು ಕಂಡ ಜನ ಕುಳಿತಲ್ಲೇ ನಮಿಸಿದರು.

ಇದಕ್ಕೂ ಮುನ್ನ ಮಧ್ಯಾಹ್ನ 1.18 ರಲ್ಲಿ‌ ಸಲ್ಲುವ ಶುಭ ಲಗ್ನದಲ್ಲಿ ನಂದಿ ಧ್ವಜಕ್ಕೆ ಮುಖ್ಯಮಂತ್ರಿಗಳು ಪೂಜೆ ಸಲ್ಲಿಸಿದರು. ಬಳಿಕ ತೆರೆದ ಜೀಪಿನಲ್ಲಿ ಸಾಗಿ ನೆರೆದಿದ್ದವರಿಗೆಲ್ಲ ಸ್ವಾಗತ ಕೋರಿದರು.

ನಂತರ ಮೆರವಣಿಗೆ ಸ್ಥಬ್ದ ಚಿತ್ರಗಳು ಜಾನಪದ ಕಲಾತಂಡಗಳೊಂದಿಗೆ ಸಾಗಿತು.

ಜಂಬೂಸವಾರಿ ವೀಕ್ಷಣೆಗಾಗಿ ಮೈಸೂರು ಅರಮನೆ ಆವರಣದಲ್ಲಿ 45,000 ಆಸನ ವ್ಯವಸ್ಥೆ ಮಾಡಲಾಗಿತ್ತು, ಗೋಲ್ಡ್ ಕಾರ್ಡ್ ಟಿಕೆಟ್ ಪಡೆದವರು ಹಾಗೂ ಫಾಸ್ ಪಡೆದವರಿಗೆ ಪ್ರತ್ಯೇಕ ಆಸನದ ವ್ಯವಸ್ಥೆ ಕಲ್ಪಿಸಲಾಗಿತ್ತು.

ಜಂಬೂಸವಾರಿ ಮೆರವಣಿಗೆ ಸಂದರ್ಭದಲ್ಲಿ ಯಾವುದೇ ರೀತಿಯ ಅಹಿತಕರ ಘಟನೆಗಳು ಸಂಭವಿಸದಂತೆ ಮೈಸೂರು ಜಿಲ್ಲಾಡಳಿತ ಹಾಗೂ ನಗರ ಪೊಲೀಸರು ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಂಡಿದ್ದರು.

6384 ಸಿವಿಲ್ ಹಾಗೂ ಟ್ರಾಫಿಕ್ ಪೊಲೀಸ್ ಸಿಬ್ಬಂದಿಯನ್ನು ನಿಯೋಜಿಸಲಾಗಿತ್ತು, 35 ಕಡೆ ಕೆ ಎಸ್ ಆರ್ ಪಿ ತುಕುಡಿಗಳು 15 ಸಿ ಎ ಆರ್ ಮತ್ತು ಡಿ ಆರ್ ತುಕಡಿಗಳು, 29 ಎ ಎಸ್ ಸಿ ಒಂದು ಗರುಡ ಫೋರ್ಸ್ ಹಾಗೂ 1500 ಹೋಂ ಗಾರ್ಡ್ ಗಳನ್ನು ಭದ್ರತೆಗಾಗಿ ನಿಯೋಜನೆ ಮಾಡಲಾಗಿತ್ತು.

ಇವರೊಂದಿಗೆ 35 ಡಿವೈಎಸ್ಪಿ 140 ಇನ್ಸ್ಪೆಕ್ಟರ್ ಗಳು ಸಹ ಭದ್ರತಾ ಕಾರ್ಯ ವಹಿಸಲಿದ್ದಾರೆ. ಪೊಲೀಸ್ ಇಲಾಖೆಯಿಂದ 220 ಸಿಸಿಟಿವಿ ಕ್ಯಾಮೆರಾಗಳನ್ನು ಜಂಬುಸವಾರಿ ಮಾರ್ಗದಾದ್ಯಂತ ಅಳವಡಿಸಲಾಗಿದ್ದು ಸಣ್ಣಪುಟ್ಟ ದೋಶ ಹೊರತುಪಡಿಸಿ ಮೈಸೂರು ದಸರಾ ಜಂಬೂಸವಾರಿ ಯಶಸ್ವಿಯಾಯಿತು.