ಮೈಸೂರು: ಯೋಗ ಸಂಗೀತ ನಾದ ಭವನ ಎಂಬ ಪರಿಕಲ್ಪನೆಯೇ ಅದ್ಭುತ, ಇದೊಂದು ಪ್ರೇರಣದಾಯಕ ಶಕ್ತಿ, ಇದಕ್ಕೆ ಕಾರಣರು ದೈವ ಸ್ವರೂಪಿಗಳಾದ ಶ್ರೀ ಗಣಪತಿ ಸಚ್ಚಿದಾನಂದ ಸ್ವಾಮೀಜಿಗಳು ಎಂದು
ಕೇಂದ್ರ ಸಚಿವ ವಿ. ಸೋಮಣ್ಣ ಬಣ್ಣಿಸಿದರು.
ಶನಿವಾರ ಸಂಜೆ ಮೈಸೂರಿನ
ಅವಧೂತ ದತ್ತ ಪೀಠದಲ್ಲಿ ಅತ್ಯಾಧುನಿಕ ಯೋಗ ಸಂಗೀತ ನಾದಭವನದ ಉದ್ಘಾಟನೆ ನೆರವೇರಿಸಿ ಸಚಿವರು ಮಾತನಾಡಿದರು.

ಐದು ದಶಕಗಳಿಗಿಂತಲೂ ಹೆಚ್ಚು ಕಾಲದಿಂದ ಪೂಜ್ಯ ಶ್ರೀ ಗಣಪತಿ ಸಚ್ಚಿದಾನಂದ ಸ್ವಾಮಿಜಿಗಳು ಧ್ಯಾನ ಮತ್ತು ಚಿಕಿತ್ಸೆಗೆ ಸಂಗೀತ ಎಂಬ ಮಹಾದರ್ಶನವನ್ನು ರೂಪಿಸುವುದರಲ್ಲಿ ಹಾಗೂ ವಿಶ್ವದಾದ್ಯಂತ ಹರಡುವುದರಲ್ಲಿ ದೀಪಸ್ತಂಭರಾಗಿದ್ದಾರೆ ಎಂದು ಕೊಂಡಾಡಿದರು.
ಯೋಗ ಸಂಗೀತ ಜ್ಞಾನ ಚಿಕಿತ್ಸೆ ಮೈಸೂರಿನ ಜನತೆಗೆ ಅತ್ಯಂತ ಉಪಯುಕ್ತವಾದುದು ಇದು ಶಾಂತಿ ನೆಮ್ಮದಿ ನೀಡುತ್ತದೆ ನಗರದ ಜನತೆ ಇದರ ಸದುಪಯೋಗಪಡಿಸಿ ಕೊಳ್ಳಬೇಕು ಎಂದು ಸಲಹೆ ನೀಡಿದರು.
ಸ್ವಾಮೀಜಿಯವರ ಸಾಮಾಜಿಕ ಕಳಕಳಿ ನೋಡಿದರೆ ಇತರೆ ಮಠಮಾನ್ಯಗಳಿಗೆ ಅವಧೂತ ದತ್ತಪೀಠ ಮಾದರಿಯಾಗಿದೆ ಶ್ರೀಗಳ ಸಂಗೀತ ಚಿಕಿತ್ಸಾ ಪರಿಕಲ್ಪನೆ ನಿಜಕ್ಕೂ ಅತಿ ಅದ್ಭುತವಾದದ್ದು ಎಂದು ತಿಳಿಸಿದರು.
ಯೋಗ ಆರೋಗ್ಯಕ್ಕೆ ಅತ್ಯುತ್ತಮ. 2025 ರಲ್ಲಿ ಪ್ರಧಾನಿ ಮೋದಿಯವರು ಒಂದು ಭೂಮಿ ಒಂದು ಯೋಗ ಘೋಷ ವಾಕ್ಯದಲ್ಲಿ ಯೋಗವನ್ನು ಅಳವಡಿಸಿಕೊಳ್ಳುವಂತೆ ಕರೆ ನೀಡಿದರು ಯೋಗ ಬಹುತೇಕ ಎಲ್ಲಾ ದೇಶಗಳಲ್ಲಿ ಅಳವಡಿಸಿಕೊಂಡಿದ್ದಾರೆ, ವಿಶ್ವಸಂಸ್ಥೆಯಲ್ಲಿ ಇದನ್ನು ಅಂತರಾಷ್ಟ್ರೀಯ ಯೋಗ ದಿನ ಎಂದು ಘೋಷಿಸಿರುವುದು ನಮ್ಮ ನಾಡಿಗೆ ಹೆಮ್ಮೆ, ಯೋಗದಿಂದ ಮಾನಸಿಕ ಶಾಂತಿ, ನೆಮ್ಮದಿ, ದೈಹಿಕ ಆರೋಗ್ಯ ಸಿಗುತ್ತದೆ ಸಂಗೀತ ಜ್ಞಾನ ಚಿಕಿತ್ಸೆ ಕೂಡ ನೆಮ್ಮದಿ,ಆರೋಗ್ಯವನ್ನು ಕೊಡುತ್ತದೆ ಎಂದು ಹೇಳಿದರು.
ನಾನು ಸಾಹಸ್ರಾರು ಕಾರ್ಯ ಕ್ರಮಗಳನ್ನು ನೋಡಿದ್ದೇನೆ ದೇಶ ವಿದೇಶಗಳಲ್ಲೂ ನೋಡಿದ್ದೇನೆ ಇಂತಹ ವಿಶೇಷ ಕಾರ್ಯಕ್ರಮ ಎಲ್ಲೂ ಕಂಡಿರಲಿಲ್ಲ,ಇಲ್ಲಿಗೆ ನಾನು ಬಂದುದು ನನ್ನ ಪೂರ್ವ ಜನ್ಮದ ಪುಣ್ಯ ಎಂದು ಸೋಮಣ್ಣ ತಿಳಿಸಿದರು.
ನಮ್ಮ ದೇಶ ನಡೆದು ಬಂದ ದಾರಿ ತಿಳಿದು,ನೆಮ್ಮದಿ ಮತ್ತು ಬಾಳ್ವೆಗೆ ಬೇಕಾದ ಸಲಕರಣೆ ಗಳನ್ನು ತಿಳಿದು ಶ್ರೀಗಳು ದೂರ ದೃಷ್ಟಿಯ ಚಿಂತನೆ ಮಾಡಿದ್ದಾರೆ ಇದನ್ನೆಲ್ಲ ನೋಡಿದರೆ ನಿಜಕ್ಕೂ ಶ್ರೀಗಳು ಭಗವಂತನ ಅವತಾರವೇ ಸರಿ ಎಂದು ಸೋಮಣ್ಣ ಬಣ್ಣಿಸಿದರು.
ವಿಶ್ವದ ಭೂಪಟದಲ್ಲಿ ಶ್ರೀ ಸ್ವಾಮೀಜಿಗಳು ಚರ ಪರಿಚಿತರು ಅವರ ನಾದ ಚಿಕಿತ್ಸೆಯನ್ನು ತಿಳಿದು ಅಳವಡಿಸಿಕೊಂಡು ನಾದವನ್ನು ಆಲಿಸಲೆಂದೇ ದತ್ತ ಪೀಠಕ್ಕೆ ವಿದೇಶಿಗರು ಬರುತ್ತಾರೆ ಎಂದರೆ ಅದು ನಿಜಕ್ಕೂ ಅದ್ಭುತ ಎಂದು ಮನದುಂಬಿ ನುಡಿದರು.
ಶ್ರೀ ಗಣಪತಿ ಸಚ್ಚಿದಾನಂದ ಸ್ವಾಮಿಜಿ ಅವರು
ನಮ್ಮ ಸಂಸ್ಕೃತಿ ಪರಂಪರೆಯನ್ನು ಉಳಿಸುವ ಕೆಲಸ ಮಾಡುತ್ತಿದ್ದಾರೆ ಅದಕ್ಕಾಗಿ ನಾನು ಅವರಿಗೆ ಧನ್ಯವಾದ ಸಲ್ಲಿಸುತ್ತೇನೆ ಅವರ ಪಾದಗಳಿಗೆ ನಮಿಸುತ್ತೇನೆ ಎಂದು ಸಚಿವರು ತಿಳಿಸಿದರು.
ಯಾವುದೇ ಕಾರಣಕ್ಕೂ ಬೇರೆ ಕಡೆ ಹೋಗದೆ ಮೈಸೂರಿನಲ್ಲೇ ನೆಲೆಸುವಂತೆ ನೋಡಿಕೊಳ್ಳಬೇಕು ಎಂದು ವೇದಿಕೆಯಲ್ಲಿ ಉಪಸ್ಥಿತರಿದ್ದ ಕಿರಿಯ ಶ್ರೀಗಳಾದ ಶ್ರೀ ದತ್ತ ವಿಜಯಾನಂದ ತೀರ್ಥ ಸ್ವಾಮೀಜಿಯವರಿಗೆ ಸೋಮಣ್ಣ ಮನವಿ ಮಾಡಿದರು.
ಶ್ರೀ ಗಣಪತಿ ಸಚ್ಚಿದಾನಂದ ಸ್ವಾಮೀಜಿಯವರು ಆಶೀರ್ವಚನ ನೀಡಿ
ನಾವೆಲ್ಲರೂ ಸನಾತನ ಪದ್ದತಿಯನ್ನು ಪಾಲಿಸೋಣ ಎಂದು ಕರೆ ನೀಡಿದರು.
ಮೇಡ್ ಇನ್ ಇಂಡಿಯಾ ಎಂಬುದನ್ನು ಮರೆಯಬಾರದು ನಮ್ಮ ದೇಶದಲ್ಲೇ ತಯಾರಿಸಿದ ಪದಾರ್ಥಗಳನ್ನೇ ಎಲ್ಲರೂ ಕೊಂಡುಕೊಳ್ಳಬೇಕು ಉತ್ತೇಜನ ನೀಡಬೇಕು ಕೈನಲ್ಲಿ ನೇಯ್ದ ಸೀರೆಗಳನ್ನು ಕೊಂಡುಕೊಳ್ಳಬೇಕು ಎಂದು ಸಲಹೆ ನೀಡಿದರಲ್ಲದೆ ಪ್ರತಿ ದಿನ ಯೋಗ ಮಾಡಿ ಪ್ರತಿದಿನ ವಾಕ್ ಮಾಡಿ ಆರೋಗ್ಯವನ್ನು ಕಾಪಾಡಿಕೊಳ್ಳಿ ಎಂದು ತಿಳಿ ಹೇಳಿದರು.
ಪಶು ಪಕ್ಷಿ ಪ್ರಾಣಿಗಳು ಕೂಡ ನಾದದಲ್ಲಿ ತಲ್ಲೀನವಾಗುತ್ತವೆ, ಶರೀರ ಪೂರ್ತಿ ನಾದ ಆವರಿಸಿಕೊಳ್ಳುತ್ತದೆ ಇದರಿಂದ ವ್ಯಾದಿಗಳು, ಮನಕ್ಲೇಶ ಎಲ್ಲವೂ ಮಾಯವಾಗುತ್ತದೆ ಹಾಗಾಗಿ ಪ್ರತಿಯೊಬ್ಬರೂ ಮಲಗುವ ಮುಂಚೆ ರಿದಂ ಇಲ್ಲದ ಸಾಫ್ಟ್ ಸಂಗೀತವನ್ನು ಕೇಳುತ್ತಾ ಮಲಗಿದರೆ ಬೆಳಿಗ್ಗೆ ಎದ್ದಾಗ ಫ್ರೆಶ್ ಆಗಿರುತ್ತೀರಿ ಹೊಸ ಹೊಸ ಐಡಿಯಾಗಳು ಸಿಗುತ್ತವೆ ನಿಮ್ಮ ಮನಸ್ಸಿಗೆ ಉತ್ತೇಜನ ಸಿಗುತ್ತದೆ ಎಂದು ಶ್ರೀಗಳು ಹೇಳಿದರು.
ನಾದ ಚಿಕಿತ್ಸೆ ಎಂದರೆ ಕುಳಿತು ಆಲಿಸುವುದು.ಇದರಿಂದ ಆರೋಗ್ಯ ಭಾಗ್ಯ ಸಿಗುತ್ತದೆ ಈ ನಾದ ಸಂಗೀತ ಚಿಕಿತ್ಸೆಯನ್ನು ಅರಿತು ರಷ್ಯಾ, ಜಪಾನ್, ಚೈನಾದವರು ನನ್ನನ್ನು ಕರೆಸಿಕೊಳ್ಳುತ್ತಾರೆ ಮುಂದೆ ಕೊರಿಯಾಗು ಹೋಗುತ್ತೇನೆ ಎಂದು ತಿಳಿಸಿದರು.
ಸ್ವಾಮೀಜಿಯವರ ಸಂಗೀತದಲ್ಲಿ ಏನೊ ಧನ್ಯತೆ ಕಂಡು ಅವರು ಕರೆಸುತ್ತಾರೆ ಈಗ ಸಂಗೀತ ಭವನ ಉದ್ಘಾಟನೆ ಆಗಿದೆ ಎಲ್ಲರೂ ನಾದ ಕೇಳುವ ಅಭ್ಯಾಸ ಮಾಡಬೇಕು ಎಂದು ಹೇಳಿದರು.
ನಮ್ಮ ರಾಷ್ಟ್ರಕ್ಕೆ ಕರ್ನಾಟಕಕ್ಕೆ ಮತ್ತು ಎಲ್ಲ ಪ್ರಜೆಗಳಿಗೆ ಸುಖ ಶಾಂತಿ ನೆಮ್ಮದಿ ಸಿಗಲಿ ಉತ್ತಮ ಬೆಳೆಯಾಗಲಿ, ಎಲ್ಲರಿಗೂ ಸದ್ಭುದ್ದಿ ಕೊಡಲಿ ನಾವೆಲ್ಲರೂ ಸನಾತನ ಪದ್ದತಿಯನ್ನು ಪಾಲಿಸೋಣ ಎಂದು ಸ್ವಾಮೀಜಿ ಕರೆ ನೀಡಿದರು.
ಕಾರ್ಯಕ್ರಮದಲ್ಲಿ ಅವಧೂತ ದತ್ತಪೀಠದ ಕಿರಿಯ ಶ್ರೀಗಳಾದ ಶ್ರೀ ದತ್ತ ವಿಜಯಾನಂದ ತೀರ್ಥ ಸ್ವಾಮೀಜಿ ಮತ್ತು ಶಾಸಕ ಟಿ.ಎಸ್.ಶ್ರೀವತ್ಸ ಮತ್ತಿತರರು ಉಪಸ್ಥಿತರಿದ್ದರು.