ದಸರಾ ಆಹಾರ ಮೇಳದಲ್ಲಿ ತಿಂಡಿ ಸವಿದ ಸಿದ್ದರಾಮಯ್ಯ

Spread the love

ಮೈಸೂರು: ವಿಶ್ವ ವಿಖ್ಯಾತ ಮೈಸೂರು ದಸರಾ ಅಂಗವಾಗಿ ಮಹಾರಾಜ ಕಾಲೇಜು ಮೈದಾನದಲ್ಲಿ ರುಚಿಯೊಂದಿಗೆ ಸ್ವಚ್ಛತೆಯ ಸಿರಿ ಎಂಬ ಧ್ಯೇಯ ವಾಕ್ಯದೊಂದಿಗೆ ಜನಪ್ರಿಯ ಆಹಾರ ಮೇಳವನ್ನು ಆಯೋಜಿಸಲಾಗಿದೆ.

ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಆಹಾರ ನಾಗರಿಕ ಸರಬರಾಜು ಮತ್ತು ಗ್ರಾಹಕ ವ್ಯವಹಾರಗಳ ಸಚಿವರಾದ ಕೆ.ಹೆಚ್. ಮುನಿಯಪ್ಪ ಅವರು ಉದ್ಘಾಟಿಸಿ ಆಹಾರ ಸವಿದು ಮೆಚ್ಚುಗೆ ಪಟ್ಟರು.

ಈ ವೇಳೆ ಮಾತನಾಡಿದ ಮುನಿಯಪ್ಪ, ಯುಪಿಎ ಅವಧಿಯ ಸರ್ಕಾರದಲ್ಲಿ ಅಂದಿನ ಪ್ರಧಾನ ಮಂತ್ರಿ ಮನಮೋಹನ್ ಸಿಂಗ್ ಅವರ ನೇತೃತ್ವದಲ್ಲಿ ಆಹಾರ ಭದ್ರತೆ ಕಾಯ್ದೆಯನ್ನು ಜಾರಿಗೆ ತರಲಾಯಿತು ಅಂದೇ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಅನ್ನಭಾಗ್ಯ ಯೋಜನೆಯನ್ನು ಜಾರಿಗೆ ತಂದು ಬಡವರಿಗೆ ಉಚಿತವಾಗಿ ಅಕ್ಕಿ ಯನ್ನು ವಿತರಿಸಲಾರಂಬಿಸಲಾಯಿತು ಎಂದು ಹೇಳಿದರು.

ಅಂದಿನಿಂದ ಆರಂಭಗೊಂಡ ಈ ಯೋಜನೆ ಇಂದಿನವರೆಗೂ ಮುಂದುವರೆಯುತ್ತಿದ್ದು ನಮ್ಮ ಸರ್ಕಾರ ಮುಖ್ಯಮಂತ್ರಿ ಗಳ ನೇತೃತ್ವದಲ್ಲಿ 10ಕೆಜಿ ಅಕ್ಕಿಯನ್ನು ಅರ್ಹ ಫಲಾನುಭವಿಗಳಿಗೆ ವಿತರಿಸುತ್ತಿದೆ ಎಂದು ತಿಳುಸಿದರು.

ನಮ್ಮ ಆಹಾರ ಪದ್ದತಿಗಳು ವಿಶೇಷ ಹಾಗೂ ವಿಭಿನ್ನವಾಗಿರುವುದರಿಂದ ಜನರು ಈ ದಸರಾ ಹಬ್ಬದ ಆಹಾರ ಮೇಳಕ್ಕೆ ಬಂದು ಇಷ್ಟವಾದುದನ್ನು ಸವಿಯಿರಿ ಎಂದು ಕರೆ ನೀಡಿದರು.

ಈ ಮೇಳದಲ್ಲಿ ಒಟ್ಟು 160 ಕ್ಕೂ ಹೆಚ್ಚು ಮಳಿಗೆಗಳು ತೆರೆದಿದ್ದು, ಅವುಗಳಲ್ಲಿ 121 ಸಸ್ಯಾಹಾರಿ ಹಾಗೂ 39 ಮಾಂಸಾಹಾರಿ ಮಳಿಗೆಗಳಿವೆ. ಇಲ್ಲಿ ಸ್ಥಳೀಯವಾಗಿ ಮೈಸೂರಿನ ವಿಶೇಷ ಆಹಾರ ಶೈಲಿ, ಬುಡಕಟ್ಟು, ಮಲೆನಾಡು, ಕೊಡವ, ಕರಾವಳಿ, ಉತ್ತರ ಹಾಗೂ ಮಧ್ಯ ಕರ್ನಾಟಕದ ಪಾಕಶೈಲಿಗಳ ಜೊತೆಗೆ ಗುಜರಾತಿ, ರಾಜಸ್ಥಾನಿ, ಹೈದರಬಾದಿ, ಕೇರಳ, ಚೈನೀಸ್ ಮತ್ತು ಅಂತರಾಷ್ಟ್ರೀಯ ಪಾಕಶೈಲಿಗಳನ್ನೂ ಪರಿಚಯಿಸಲಾಗಿದೆ.

ಆಹಾರ ಮೇಳಕ್ಕೆ ಆಗಮಿಸುವ ಪ್ರತಿಯೊಬ್ಬರೂ ಸ್ವಚ್ಚತೆಯನ್ನು ಕಾಪಾಡಿ, ಆಹಾರ ವ್ಯರ್ಥ ಮಾಡದೆ, ತಮಗೆ ಬೇಕಾದಷ್ಟು ಮಾತ್ರ ಆಹಾರವನ್ನು ಕೊಂಡು ಉಪಯೋಗಿಸಬೇಕೆಂದು ಮುನಿಯಪ್ಪ ಮನವಿ‌ ಮಾಡಿದರು.

ಕಾರ್ಯಕ್ರಮದಲ್ಲಿ ಸಚಿವರಾದ ಕೆ.ಜೆ ಜಾರ್ಜ್,ಶಾಸಕರಾದ ರವಿಶಂಕರ್,ರಮೇಶ್ ಬಂಡಿ ಸಿದ್ದೇಗೌಡ,ಡಾ.ತಿಮ್ಮಯ್ಯ ಜಿಲ್ಲಾಧಿಕಾರಿ ಲಕ್ಷ್ಮಿಕಾಂತ್ ರೆಡ್ಡಿ, ಸಚಿವರ ಆಪ್ತ ಕಾರ್ಯದರ್ಶಿ ಡಾ.ನಟರಾಜ್ ಹಾಗೂ ಜಂಟಿ ಉಪ‌ನಿರ್ದೇಶಕರಾದ ಮಂಟೇಶ್ವಾಮಿ ಹಾಗೂ ಅಧಿಕಾರಿಗಳು ಹಾಜರಿದ್ದರು.