ಮೈಸೂರು: ದಸರಾ ಮಹೋತ್ಸವದ ಅಂಗವಾಗಿ ಚಲನಚಿತ್ರೋತ್ಸವ ಏರ್ಪಡಿಸಲಾಗಿದ್ದು,ಅ. 3 ರಂದು ಕರ್ನಾಟಕ ರಾಜ್ಯ ಮುಕ್ತ ವಿಶ್ವ ವಿದ್ಯಾನಿಲಯದ ಘಟಿಕೋತ್ಸವ ಭವನದಲ್ಲಿ ಬೆಳಿಗ್ಗೆ 11 ಗಂಟೆಗೆ ಉದ್ಘಾಟನೆಯಾಗಲಿದೆ.
ಉದ್ಘಾಟನಾ ಕಾರ್ಯಕ್ರಮದಲ್ಲಿ ಕನ್ನಡ ಚಲನಚಿತ್ರದ ಖ್ಯಾತ ನಾಯಕನಟರಾದ ರಮೇಶ್ ಅರವಿಂದ್, ಡಾಲಿ ಧನಂಜಯ, ಕಾಂತಾರ ಖ್ಯಾತಿಯ ಸಪ್ತಮಿ ಗೌಡ, ಶರಣ್ಯ ಶೆಟ್ಟಿ, ಅಕ್ಷಿತ ಬೋಪಯ್ಯ ಮೆರಗು ನೀಡಲಿದ್ದಾರೆ ದಸರಾ ಉಪ ಸಮಿತಿಯ ಅಧಿಕಾರಿಗಳು ತಿಳಿಸಿದ್ದಾರೆ.
ಬೆಳಿಗ್ಗೆ 11.00 ಗಂಟೆಗೆ ಸಾಧುಕೋಕಿಲಾ ತಂಡದವರಿಂದ ಸಂಗೀತ ಮತ್ತು ಮನರಂಜನೆ ಕಾರ್ಯಕ್ರಮ ನಡೆಯಲಿದೆ.
ನಿರ್ಮಾಪಕ, ಕನ್ನಡದ ಮುತ್ತು – ಕರ್ನಾಟಕ ಕುಳ್ಳ ದಿವಂಗತ ದ್ವಾರಕೀಶ್ ಅವರ ಸವಿನೆನಪಿನಲ್ಲಿ ಈ ಬಾರಿಯ ಚಲನಚಿತ್ರೋತ್ಸವ ಹಮ್ಮಿಕೊಳ್ಳಲಾಗಿದ್ದು, ಅವರ ಪುತ್ರ ಯೋಗಿಶ್ ಅವರಿಗೆ ಗೌರವ ಸಮರ್ಪಣೆ ಹಾಗೂ ದ್ವಾರಕೀಶ್ ಅಭಿನಯದ ಚಲನಚಿತ್ರಗಳನ್ನು ಪ್ರದರ್ಶಿಸಲಾಗುತ್ತಿದೆ.
ಅ.4 ರಿಂದ 10 ರವರೆಗೆ ಬಿ.ಎಂ ಹ್ಯೆಬಿಟೆಡ್ ಮಾಲ್ನ DRC ಸಿನಿಮಾಸ್ನಲ್ಲಿ ಒಂದು ಪರದೆ ಹಾಗೂ ಮಾಲ್ ಆಫ್ ಮೈಸೂರಿನ ಐನಾಕ್ಸ್ ಸಿನಿಮಾಸ್ನಲ್ಲಿ 3 ಪರದೆಗಳಲ್ಲಿ ಪ್ರದರ್ಶನ ಗೊಳ್ಳಲಿದೆ
ಓಲ್ಡ್ ಈಸ್ ಗೋಲ್ಡ್ ಶೀರ್ಷಿಕೆಯಲ್ಲಿ ಡಾ| ರಾಜ್ ಕುಮಾರ್. ಡಾ ವಿಷ್ಣುವರ್ಧನ್, ಡಾ. ಅಂಬರೀಷ್, ಶಂಕರ್ನಾಗ್ ಹಾಗೂ ಪುನೀತ್ ರಾಜಕುಮಾರ್, ರಮೇಶ್ ಅರವಿಂದ, ಶ್ರೀನಾಥ್, ಶಿವವರಾಜ್ ಕುಮಾರ್, ರವಿಚಂದ್ರನ್ ಹಾಗೂ ದಿ|| ಅಪರ್ಣ ಸಿನಿಮಾಗಳನ್ನು ವೀಕ್ಷಿಸಬಹುದಾಗಿದೆ.
ಈ ಬಾರಿ ಬುಡಕಟ್ಟು ಭಾಷೆಗಳಾದ ಬೊಡೊ, ಜನ್ಸಿಯ ಹಾಗೂ ಕರ್ನಾಟಕ ಕೊಡವ ಮತ್ತು ಅರೆಭಾಷೆಯ ಚಲನಚಿತ್ರಗಳು ಪ್ರದರ್ಶನವಾಗುತ್ತಿದ್ದು, ಒಟ್ಟಾರೆ 112 ಚಲನಚಿತ್ರಗಳನ್ನು ವೀಕ್ಷಿಸಬಹುದಾಗಿದೆ.
ಈ ಬಾರಿ ವಿಶೇಷವಾಗಿ ಸಿನಿ ಪೋಟೋ ಪ್ರದರ್ಶನವನ್ನು ಐನಾಕ್ಸ್ ಸಿನಿಮಾಸ್ ಹೊರ ಆವರಣದಲ್ಲಿ ಅಕ್ಟೋಬರ್ 4 ರಿಂದ 10 ರವರೆಗೆ ಆಯೋಜನೆ ಮಾಡಲಾಗಿದೆ.
ಯುವಜನಾಂಗಕ್ಕೆ ಪ್ರೋತ್ಸಾಹ ನೀಡಲು ಕಿರುಚಿತ್ರ ಸ್ಪರ್ಧೆ ಏರ್ಪಡಿಸಲಾಗಿದ್ದು, ಆಯ್ಕೆಗೊಂಡ ಅತ್ಯುತ್ತಮ 10 ಕಿರುಚಿತ್ರಗಳನ್ನು ಸಹ ದೊಡ್ಡ ಪರದೆಯಲ್ಲಿ ಪ್ರದರ್ಶಿಸಲಾಗುವುದು.
ಅಕ್ಟೋಬರ್ 8 ರಂದು ಬಹುಮಾನ ವಿತರಣೆ ಮಾಡಲಿದ್ದು, ಖ್ಯಾತ ನಟ ಮಂಡ್ಯ ರಮೇಶ್ ಭಾಗವಹಿಸಲಿದ್ದಾರೆ.