ಅತ್ಯಂತ ಪ್ರಭಾವಿ ಕ್ಷೇತ್ರ ಚಿತ್ರ ರಂಗ- ಹೆಚ್. ಸಿ ಮಹದೇವಪ್ಪ

Spread the love

ಮೈಸೂರು: ಭಾರತದ ಜನರ ಜೀವನದ ಮೇಲೆ ಸಾಮಾಜಿಕ, ಆರ್ಥಿಕ, ಶೈಕ್ಷಣಿಕ ಮತ್ತು ಧಾರ್ಮಿಕ ಶಕ್ತಿಗಳನ್ನು ಸೇರಿಸುವ ಮೂಲಕ ಸಮಾಜಮುಖಿ ಕೆಲಸ ಮಾಡುತ್ತಿರುವ ಅತ್ಯಂತ ಪ್ರಭಾವಿ ಕ್ಷೇತ್ರ ಎಂದರೇ ಅದು ಚಲನಚಿತ್ರ ರಂಗ ಎಂದು ಜಿಲ್ಲಾ ಉಸ್ತುವಾರಿ ಸಚಿವ ಡಾ.ಹೆಚ್.ಸಿ.ಮಹದೇವಪ್ಪ ತಿಳಿಸಿದರು.

ಮಾಲ್ ಆಫ್ ಮೈಸೂರಿನ ನೆಲಮಹಡಿಯಲ್ಲಿ ಹಮ್ಮಿಕೊಳ್ಳಲಾಗಿದ್ದ ದಸರಾ ಚಲನಚಿತ್ರೋತ್ಸವ -2025 ಅನ್ನು ಉದ್ಘಾಟಿಸಿ ಮಾತನಾಡಿದ‌ ಸಚಿವರು,ತಮ್ಮ ರಚನೆ, ಸಂಗೀತ, ಸಾಹಿತ್ಯದ ಮೂಲಕ ಸಮಾಜದಲ್ಲಿ ಹೆಚ್ಚು ಜನಪ್ರಿಯತೆಯನ್ನು ಚಲನಚಿತ್ರ ಕ್ಷೇತ್ರಗಳಿಸುತ್ತಿದೆ ಎಂದು ಹೇಳಿದರು.

ಸರೋಜಾ ದೇವಿ ಅವರು ದಕ್ಷಿಣ ಭಾರತದ ಲೇಡಿ ಸೂಪರ್ ಸ್ಟಾರ್, ರಾಷ್ಟ್ರ ಮತ್ತು ಅಂತರರಾಷ್ಟ್ರೀಯ ಮಟ್ಟದಲ್ಲಿ ಹೆಚ್ಚು ಹೆಸರು ಮಾಡಿ ಸಾಧನೆ ಮಾಡಿದ್ದಾರೆ. ಕನ್ನಡ, ತೆಲುಗು, ಹಿಂದಿ ಚಿತ್ರಗಳಲ್ಲಿ ತಮ್ಮದೇ ಆದಂತಹ ಗಂಭೀರತೆ ಮೂಲಕ ಜನರ ಮನಸನ್ನು ಗೆದ್ದಿದ್ದಾರೆ. ಅವರಿಗೆ ಕರ್ನಾಟಕ ರತ್ನ ಪ್ರಶಸ್ತಿ ನೀಡಲು ತೀರ್ಮಾನ ಮಾಡಲಾಗಿದೆ ಹಾಗೂ ಡಾ.ವಿಷ್ಣುವರ್ಧನ್ ಅವರಿಗೂ ನೀಡಲು ತೀರ್ಮಾನಿಸ ಲಾಗಿದೆ.ಸಮಾಜದ ಮೇಲೆ ನಡವಳಿಕೆಯ ಮೇಲೆ ಸಾಧಕರನ್ನು ಜೀವಂತವಾಗಿ ಇಡುವಂತೆ ಮಾಡುವುದು ನಮ್ಮ ಕರ್ತವ್ಯವಾಗಿದೆ ಎಂದು ಹೇಳಿದರು.

ಭಾರತೀಯರು ಎಲ್ಲರೂ ಒಂದೇ ಎಂದು ತೋರಿಸಿ ಕೊಡುವ ಹಬ್ಬ ನಮ್ಮ ಮೈಸೂರು ದಸರಾ. ಎಲ್ಲರೂ ಒಗ್ಗಟ್ಟಿನಿಂದ ಇರುವುದಕ್ಕೆ ಈ ಹಬ್ಬ ಸಾಕ್ಷಿಯಾಗಿದೆ ಎಂದು ನುಡಿದರು.

ನಾಲ್ವಡಿ ಕೃಷ್ಣರಾಜ ಒಡೆಯರ್ ದಸರಾ ಹಬ್ಬಕ್ಕೆ ಕೊಟ್ಟಿರುವಂತಹ ಕೊಡುಗೆ ಮಹತ್ವವಾದದ್ದು. ಅದರಂತೇ ನಾವೆಲ್ಲರೂ ಒಂದಾಗಿ ನಾವೆಲ್ಲರೂ ಒಂದೇ ಎಂಬ ಸಂದೇಶವನ್ನು ನೀಡುವುದರ ಮೂಲಕ ಈ ಚಲನಚಿತ್ರವನ್ನು ಉದ್ಘಾಟನೆ ಮಾಡಿದ್ದೇನೆ. ಇಲ್ಲಿ 84 ಸಿನಿಮಾಗಳ ಪ್ರದರ್ಶನ ಮಾಡಲಾಗುತ್ತಿದ್ದು, ಪ್ರೇಕ್ಷಕರು ಪ್ರತಿ ಚಿತ್ರವನ್ನು ವೀಕ್ಷಣೆ ಮಾಡಬೇಕು. ಎಲ್ಲರೂ ಮೈಸೂರು ಪ್ರಾಂತ್ಯವನ್ನು ಎತ್ತಿ ಹಿಡಿಯುವಂತಹ ಕೆಲಸ ಮಾಡೋಣ ಎಂದು ಸಚಿವರು ಕರೆ ನೀಡಿದರು.

ಸು ಫ್ರಂ ಸೋ ಖ್ಯಾತಿಯ ಚಲನಚಿತ್ರ ನಟಿ ಸಂಧ್ಯಾ ಅರಕೆರೆ ಅವರು ಮಾತನಾಡಿ ನಾನು ಮೈಸೂರಿನವಳಾಗಿರುವುದು ನನಗೆ ತುಂಬಾ ಸಂತೋಷವಾಗಿದೆ. ಪ್ರತಿ ಭಾರಿ ನಾನು ಮೈಸೂರಿನವರಾಗಿ ದಸರಾ ವೀಕ್ಷಣೆಮಾಡುತ್ತಿದ್ದೆ, ಆದರೆ ಈಗ ಸಿನಿಮಾರಂಗದಿoದ ಬಂದು ಈ ದಸರಾದಲ್ಲಿ ಭಾಗಿಯಾಗಿರುವುದು ನನಗೆ ತುಂಬಾ ಸಂತೋಷ ಉಂಟುಮಾಡಿದೆ ಎಂದು ಹೇಳಿದರು.

ಖ್ಯಾತ ಚಲನಚಿತ್ರ ನಟ ಪೃಥ್ವಿ ಅಂಬರ್ ಅವರು ಮಾತನಾಡಿ ಕೆಡುಕನ್ನು ಗೆಲ್ಲುವಂತಹ ಒಳಿತನ್ನು ಮಾಡುವಂತಹ ಒಂದು ಹಬ್ಬ ಎಂದರೆ ನಮ್ಮ ಮೈಸೂರು ದಸರಾ ಹಬ್ಬ , ಮೈಸೂರು ಎಂದರೆ ನನಗೆ ಚಿಕ್ಕ ವಯಸ್ಸಿನಿಂದಲೂ ಒಂದು ದೊಡ್ಡ ಸೆಳೆತ. ಐತಿಹಾಸಿಕವಾಗಿ, ಸಾಂಸ್ಕೃತಿಕವಾಗಿ ಶ್ರೀಮಂತವಾಗಿರುವ ಜಿಲ್ಲೆ ಎಂದರೆ ಮೈಸೂರು. ಮೈಸೂರು ಎಂದರೆ ನನಗೆ ಹೆಚ್ಚು ಪ್ರೀತಿ ಎಂದು ತಿಳಿಸಿದರು.

ಖ್ಯಾತ ಹಿನ್ನೆಲೆ ಗಾಯಕ ಜಸ್ಕರನ್ ಸಿಂಗ್ ಅವರು ಕೃಷ್ಣಂ ಪ್ರಣಯ ಸಖಿ ಚಿತ್ರದ ದ್ವಾಪರ ದಾಟುತ ನನ್ನನೆ ನೋಡಲು ನನ್ನನ್ನೇ ಸೇರಲು ಬಂದ ರಾಧಿಕೆ ಎಂಬ ಹಾಡು ಹೇಳುವುದರ ಮೂಲಕ ಪ್ರೇಕ್ಷಕರನ್ನು ರಂಜಿಸಿದರು.

ಸಿನಿಮಾ ಕ್ಷೇತ್ರದಲ್ಲಿ ಸಾಧನೆ ಮಾಡಿದ ವಿವಿಧ ಕಲಾವಿದರು ನಿರ್ದೇಶಕರಿಗೆ ಸನ್ಮಾನ ಮಾಡಲಾಯಿತು.

ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯ ಸಹಾಯಕ ನಿರ್ದೇಶಕ ಟಿ ಕೆ ಹರೀಶ್, ಕರ್ನಾಟಕ ರಾಜ್ಯ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಪ್ರಾಧಿಕಾರದ ಉಪಾಧ್ಯಕ್ಷರಾದ ಡಾ.ಪುಷ್ಪ ಅಮರನಾಥ್, ಶಾಸಕರಾದ ತನ್ವೀರ್ ಸೇಠ್, ಟಿ.ಎಸ್.ಶ್ರೀವತ್ಸ, ವಿಧಾನ ಪರಿಷತ್ ಸದಸ್ಯ ಡಾ. ಡಿ ತಿಮ್ಮಯ್ಯ, ಅಪರ ಜಿಲ್ಲಾಧಿಕಾರಿ ಡಾ. ಪಿ ಶಿವರಾಜು, ಚಲನಚಿತ್ರೋತ್ಸವ ಉಪ ಸಮಿತಿ ಉಪವಿಶೇಷಾಧಿಕಾರಿ ವಿಜಯ್ ಕುಮಾರ್, ಕಾರ್ಯಾಧ್ಯಕ್ಷೆ ಕೆ.ಶೋಭಾ. ಖ್ಯಾತ ಚಲನಚಿತ್ರ ನಟಿ ಅಂಜಲಿ, ಖ್ಯಾತ ಸಂಗೀತ ನಿರ್ದೇಶಕ ನಾಗಾರ್ಜುನ ಶರ್ಮಾ, ನೃತ್ಯ ನಿರ್ದೇಶಕ ಮುರುಗ ಮತ್ತಿತರ‌ಗಣ್ಯರು ಉಪಸ್ಥಿತರಿದ್ದರು.