ಮೈಸೂರು: ಗಣಪತಿ ಮೆರವಣಿಗೆ ವೇಳೆ ವ್ಯಕ್ತಿಯೊಬ್ಬರು ಟ್ರ್ಯಾಕ್ಟರ್ನಿಂದ ಕುಸಿದು ಬಿದ್ದು ಸಾವನ್ನಪ್ಪಿದ ಘಟನೆ ಜಿಲ್ಲೆಯ ಹುಣಸೂರು ತಾಲೂಕಿನ ಗಾವಡಗೆರೆ ಹೋಬಳಿಯಲ್ಲಿ ನಡೆದಿದೆ.
ಗಾವಡಗೆರೆ ಹೋಬಳಿ ಹರವೆ ಗ್ರಾಮದಲ್ಲಿ ಭಾನುವಾರ ರಾತ್ರಿ ಈ ಘಟನೆ ನಡೆದಿದೆ.
ಆಟೋ ರಾಜು(34) ಎಂಬವರು ಮೃತಪಟ್ಟಿದ್ದು,ಅವರಿಗೆ ಪತ್ನಿ, ಎರಡು ಹೆಣ್ಣು, ಗಂಡು ಮಗು ಸೇರಿದಂತೆ ಮೂವರು ಮಕ್ಕಳಿದ್ದಾರೆ.
ಎರಡು ಕಡೆ ಪ್ರತಿಷ್ಠಾಪಿಸಿದ್ದ ಗಣಪತಿಗಳನ್ನು ಗ್ರಾಮಸ್ಥರು ವಿಸರ್ಜನೆಗಾಗಿ ಟ್ರ್ಯಾಕ್ಟರ್ ಗಳಲ್ಲಿ ಮೆರವಣಿಗೆ ಮೂಲಕ ಕೊಂಡೊಯ್ಯುತ್ತಿದ್ದ ವೇಳೆ ಮನೆಗಳ ಬಳಿ ಬಂದ ಗಣಪನಿಗೆ ಪೂಜೆ ಸಲ್ಲಿಸುತ್ತಿದ್ದರು.
ಆಗ ಟ್ರ್ಯಾಕ್ಟರ್ ನಲ್ಲಿದ್ದ ಆಟೋರಾಜು ದಿಢೀರ್ ಕುಸಿದು ಕೆಳಕ್ಕೆ ಬಿದ್ದಿದ್ದಾರೆ. ತಕ್ಷಣ ಹುಣಸೂರು ಆಸ್ಪತ್ರೆಗೆ ಕರೆ ತರುವಾಗ ಮಾರ್ಗ ಮಧ್ಯದಲ್ಲೇ ಅವರು ಮೃತಪಟ್ಟಿದ್ದರು.
ಇದರಿಂದಾಗಿ ಸಂಭ್ರಮ ಮನೆಮಾಡಿದ್ದ ಗ್ರಾಮದಲ್ಲಿ ಸೂತಕ ಛಾಯೆ ಆವರಿಸಿದೆ.ಕೂಡಲೇ ಮೆರವಣಿಗೆ ರದ್ದು ಮಾಡಿ ನೇರವಾಗಿ ಚಿಕ್ಕ ಕೆರೆಯಲ್ಲಿ ಗಣಪತಿಗಳನ್ನು ವಿಸರ್ಜಿಸಿದ್ದಾರೆ.