ಪತ್ನಿಯ ಕೊಂದ ಪತಿಗೆ ಮರಣ ದಂಡನೆ ಶಿಕ್ಷೆ

Spread the love

ಮೈಸೂರು: ಜೂಜಾಡಲು ಹೆಚ್ಚು ಹಣ ತರುವಂತೆ ಒತ್ತಾಯಿಸಿ ಪತ್ನಿಯನ್ನು ಕೊಂದಿದ್ದ ಪತಿಗೆ ಮೈಸೂರಿನ ಐದನೇ ಅಧಿಕ ಜಿಲ್ಲಾ ಮತ್ತು ಸತ್ರ ನ್ಯಾಯಾಲಯದ ನ್ಯಾಯಾಧೀಶರಾದ ರೂಪ ಅವರು ಮರಣ ದಂಡನೆ ಶಿಕ್ಷೆ ವಿಧಿಸಿ ತೀರ್ಪು ನೀಡಿದ್ದಾರೆ.

ಮಹೇಶ್ ಎಂಬಾತನಿಗೆ ನ್ಯಾಯಾಲಯ ಮರಣದಂಡನೆ ಶಿಕ್ಷೆ ಹಾಗೂ ಒಂದು ಲಕ್ಷ ರುಪಾಯಿ ದಂಡ ವಿಧಿಸಿದೆ.

ಮೈಸೂರಿನ ಐದನೇ ಅಧಿಕ ಜಿಲ್ಲಾ ಮತ್ತು ಸತ್ರ ನ್ಯಾಯಾಲಯದ ಸರ್ಕಾರಿ ಅಭಿಯೋಜಕರಾದ ಬಿ ಈ ಯೋಗೇಶ್ವರ ಅವರು ಸರ್ಕಾರದ ಪರವಾಗಿ ವಾದ ಮಂಡಿಸಿದ್ದರು.
ವಿವರ:
ಶಿಲ್ಪ ಮತ್ತು ಮಹೇಶ ಮದುವೆ ಆದ ಹೊಸದರಲ್ಲಿ ಚೆನ್ನಾಗಿಯೇ ಸಂಸಾರ‌ ಮಾಡಿಕೊಂಡಿದ್ದರು, ದಂಪತಿಗೆ ಇಬ್ಬರು ಮಕ್ಕಳಿದ್ದಾರೆ, ಆದರೆ ಮಹೇಶ ಇಸ್ಪೀಟ್ ಆಟದ ಚಟಕೆ ಬಿದ್ದು ಬಹಳ ಸಾಲ ಮಾಡಿಕೊಂಡಿದ್ದ, ಸದಾ ಪತ್ನಿಗೆ ತವರು ಮನೆಯಿಂದ ಹಣ ತರುವಂತೆ ಹಿಂಸೆ ಮಾಡುತ್ತಿದ್ದ ಜೊತೆಗೆ ದೈಹಿಕವಾಗಿ ಹಲ್ಲೆ ಮಾಡುತ್ತಿದ್ದ.

ಈ ಬಗ್ಗೆ ಶಿಲ್ಪ ತಂದೆಗೆ ವಿಷಯ ತಿಳಿಸಿದ್ದಳು. ನಂತರ ರಾಜೀ ಪಂಚಾಯಿತಿ ಮಾಡಿ ತಂದೆ ಸಮಾಧಾನ ಮಾಡಿದ್ದರು.ಆದರೂ ಮಹೇಶ ತನ್ನ ಚಟ ಬಿಟ್ಟಿರಲಿಲ್ಲ, ಜಮೀನು ಮಾರಾಟ ಮಾಡುತ್ತೇನೆ ಸಹಿ ಹಾಕು ಎಂದು ಪೀಡಿಸುತ್ತಿದ್ದ, ಹಾಗಾಗಿ ಶಿಲ್ಪ 14-4-2024 ರಂದು ತವರಿಗೆ ಬಂದು ವಿಷಯ ತಿಳಿಸಿದಳು ತಂದೆ ಈ ಬಗ್ಗೆ ಶಿಲ್ಪಳಿಗೆ ಸಮಾಧಾನ ಮಾಡಿ ಕಳುಹಿಸಿದ್ದರು.

ಮರುದಿನವೂ ಕೂಡ ಜಮೀನು ಮಾರಾಟಕ್ಕೆ ಸಹಿ ಹಾಕುವಂತೆ ಪತಿ ಒತ್ತಾಯಿಸಿದ್ದಾನೆ ಆಕೆ ಒಪ್ಪದಿದ್ದಾಗ ಕೊಲೆ ಬೆದರಿಕೆ ಕೂಡ ಹಾಕಿದ್ದಾನೆ.

ಶಿಲ್ಪ ಒಂದು ವಾರದಿಂದ ಗಾರ್ಮೆಂಟ್ಸ್ ಕೆಲಸಕ್ಕೆ ಹೋಗುತ್ತಿದ್ದಳು ಎಂದು ಆಕೆಯ ತಂದೆ ತಿಳಿಸಿದ್ದಾರೆ ಆದರೂ ಅಳಿಯ ಮಹೇಶ್ ಬಿಡದೆ ಮತ್ತೆ ತೊಂದರೆ ಕೊಟ್ಟಿದ್ದಾನೆ ಎಂದು ತಿಳಿಸಿದ್ದಾರೆ‌

ನಂತರ 15 -4- 2024 ರಂದು ಶಿಲ್ಪ ಗಾರ್ಮೆಂಟ್ಸ್ ಗೆ ಹೋಗುವುದಾಗಿ ಹೇಳಿ ಹೋಗಿದ್ದಳು ಆದರೆ ಆಕೆಯನ್ನು ಯಾರೊ ಮೆಚ್ಚಿನಲ್ಲಿ ಕೊಚ್ಚಿ ಓಡಿ ಹೋಗಿದ್ದರು. ಆದರೆ ಈ ಕೃತ್ಯವನ್ನು ಅಳಿಯನೇ ಮಾಡಿದ್ದಾನೆ ಎಂದು ಶಿಲ್ಪಾಳ ತಂದೆ ಆಲನಹಳ್ಳಿ ಪೊಲೀಸ್ ಠಾಣೆಗೆ ದೂರು ನೀಡಿದ್ದರು.

ಶಿಲ್ಪ ಆಸ್ಪತ್ರೆಯಲ್ಲಿ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಳು. ಅಲನಹಳ್ಳಿ ಠಾಣೆ ಪೊಲೀಸ್ ಅಧಿಕಾರಿಗಳು ಈ ಸಂಬಂಧ ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಿ ನ್ಯಾಯಾಲಯಕ್ಕೆ ದೋಷಾರೋಪಣ ಪಟ್ಟಿ ಸಲ್ಲಿಸಿದ್ದರು.

5ನೇ ಅಧಿಕ ಜಿಲ್ಲಾ ಮತ್ತು ಸತ್ರ ನ್ಯಾಯಾಲಯದ ನ್ಯಾಯಾಧೀಶರಾದ ರೂಪ ಅವರು ಅಭಿ ಯೋಜನೆಯು ಹಾಜರುಪಡಿಸಿದ ಸಾಕ್ಷಾಧಾರಗಳನ್ನು ಪರಿಶೀಲಿಸಿ ಮಹೇಶನೇ ಕೊಲೆ ಮಾಡಿರುವುದು ಸಾಬೀತಾದ ಕಾರಣ ಆತನಿಗೆ ಶಿಕ್ಷೆ ಮತ್ತು ಒಂದು ಲಕ್ಷ ದಂಡ ವಿಧಿಸಿ ತೀರ್ಪು ಪ್ರಕಟಿಸಿದ್ದಾರೆ.