ಸಿಎಂ ಪತ್ನಿಗೆ ರಿಲೀಫ್, ಸಂಭ್ರಮ:ಕೋರ್ಟ್ ತೀರ್ಪು ಬಿಜೆಪಿಗೆ ಮುಖಭಂಗ-ಹೆಚ್.ವಿ.ರಾಜೀವ್

Spread the love

ಮೈಸೂರು: ನ್ಯಾಯಾಲಯವು ಮುಖ್ಯ ಮಂತ್ರಿ ಸಿದ್ದರಾಮಯ್ಯನವರ ಪತ್ನಿಗೆ ರಿಲೀಫ್ ನೀಡಿರುವುದನ್ನು ಸ್ವಾಗತಿಸಿ ಸಿಎಂ ತವರು ಮೈಸೂರಿನಲ್ಲಿ ಕೈ ನಾಯಕರು ಸಿಹಿ ಹಂಚಿ‌ ಸಂಭ್ರಮಿಸಿದರು.

ಸಿಹಿ ವಿತರಿಸುತ್ತಿದ್ದ ವೇಳೆ ಅದೇ ಮಾರ್ಗದಲ್ಲಿ ಕಾರಿನಲ್ಲಿ ತೆರಳುತ್ತಿದ್ದ ಮಾಜಿ ವಿಧಾನ ಪರಿಷತ್ ಸದಸ್ಯ ಗೊ. ಮಧುಸೂದನ್ ಅವರಿಗೆ ಸಿಹಿ ನೀಡಿದರು.ಈ‌ ವೇಳೆ ಗೊ. ಮಧುಸೂದನ್ ಅವರು ಸಿದ್ದರಾಮಯ್ಯ ವರಿಗೆ ಸೂಪರ್ ಜೈ ಹೇಳಿದ್ದಾರೆ ಅದಕ್ಕೆ ಕೈ ನಾಯಕರು ಖುಷಿ ಪಟ್ಟಿದ್ದಾರೆ.

ಮುಡಾ ಪ್ರಕರಣ ಸಿಎಂ ಪತ್ನಿಗೆ ರಿಲೀಫ್ ಹಿನ್ನೆಲೆಯಲ್ಲಿ ಸಿದ್ದರಾಮಯ್ಯ ಅಭಿಮಾನಿ ಬಳಗ ಹಾಗೂ ಎಚ್ ವಿ ರಾಜೀವ್ ಸ್ನೇಹ ಬಳಗದ ವತಿಯಿಂದ 101 ಗಣಪತಿ ದೇವಸ್ಥಾನದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಅವರ ಪತ್ನಿ ಪಾರ್ವತಿ ಭಾವಚಿತ್ರ ಹಿಡಿದು ಅವರ ಹೆಸರಿನಲ್ಲಿ ವಿಶೇಷ ಪೂಜೆ ಸಲ್ಲಿಸಿ ನಂತರ ಸತ್ಯಮೇವ ಜಯತೆ ಎಂದು ಘೋಷಣೆ ಕೂಗಿ ಸಾರ್ವಜನಿಕರಿಗೆ ಸಿಹಿ ವಿತರಿಸಿ,
ಸುಪ್ರೀಂ ಕೋರ್ಟ್ ಆದೇಶವನ್ನು ಸ್ವಾಗತಿಸುತ್ತೇವೆ ಎಂದು ಕೂಗಿದರು.

ಈ ವೇಳೆ ಮಾತನಾಡಿದ ಮೂಡ ಮಾಜಿ ಅಧ್ಯಕ್ಷ ಹೆಚ್ ವಿ ರಾಜೀವ್ ಅವರು, ಭಾರತರತ್ನ ಸಂವಿಧಾನ ಶಿಲ್ಪಿ ಡಾ.ಬಿ ಆರ್. ಅಂಬೇಡ್ಕರ್ ಅವರು ದೇಶಕ್ಕೆ ರಚಿಸಿಕೊಟ್ಟ ಸಂವಿಧಾನದ ಅಡಿಯಲ್ಲಿ ನ್ಯಾಯಾಂಗ, ಕಾರ್ಯಾಂಗ, ಶಾಸಕಾಂಗ ಬಲಿಷ್ಠವಾಗಿದೆ ಪಾರದರ್ಶಕವಾಗಿದೆ ಎಂಬುದಕ್ಕೆ ಪಾರ್ವತಮ್ಮ ಅವರು ಭೂ ಪರಿಹಾರ ಪಡೆದುಕೊಂಡ ಪ್ರಕ್ರಿಯೆಗೆ ಮೂಡ ಸರಿಯಾಗಿ ಕಾರ್ಯನಿರ್ವಹಿಸಿದೆ ಎಂದು ಹೈಕೋರ್ಟ್, ಸುಪ್ರಿಂ ಕೋರ್ಟ್ ನೀಡಿದ ತೀರ್ಪು ನಿದರ್ಶನವಾಗಿದೆ ಎಂದು ಹೇಳಿದರು.

2014ರಲ್ಲಿ ಟ್ರಾನ್ಸ್ ಪರೆನ್ಸಿ ಭೂ ಕಾಯ್ದೆ ಬಂದ ನಂತರ ಮಾರುಕಟ್ಟೆಯ ಬೆಲೆಗಿಂತ ಮೂರು ಪಟ್ಟು ಪರಿಹಾರವನ್ನ ಭೂಮಾಲೀಕರಿಗೆ ನೀಡಬೇಕು ಎಂದು ಕಾಯ್ದೆಯ ನೀತಿ ಜಾರಿಯಾಗಿದೆ, ಬದಲಿ ನಿವೇಶನಕ್ಕೂ ಸಾಕಷ್ಟು ಮಂದಿ ಅರ್ಜಿ ಸಲ್ಲಿಸಿದ್ದರು, ಕೇಂದ್ರ ಮತ್ತು ರಾಜ್ಯದಲ್ಲಿ ಬಿಜೆಪಿ ಆಡಳಿತದಲ್ಲಿ ಇದ್ದ ಜನಪ್ರತಿನಿಧಿಗಳ ಸಮಿತಿ ಮೂಡ ನಿವೇಶನ ಭೂಪರಿಹಾರ ಮತ್ತು ಬದಲಿ ನಿವೇಶನಕ್ಕೆ ಒಪ್ಪಿಗೆ ನೀಡಲಾಗಿತ್ತು, ಆದರೆ ಬಿಜೆಪಿ ಕೇಂದ್ರ ಸರ್ಕಾರ ಇಡಿ ಸಂಸ್ಥೆಯನ್ನ ದುರ್ಬಳಕೆ ಮಾಡಿಕೊಂಡು ಏಕಾಏಕಿ ವ್ಯವಸ್ಥೆಯನ್ನೆ ಅತಂತ್ರ ಮಾಡಲು ಹೊರಟಿತ್ತು ಎಂದು ದೂರಿದರು.

ಈಗ ಬಿಜೆಪಿ ಷಡ್ಯಂತ್ರಕ್ಕೆ ನ್ಯಾಯಾಲಯದ ತೀರ್ಪು ಭಾರಿ ಮುಖಭಂಗವಾಗಿದೆ, ಬೆಂಗಳೂರು ಮೈಸೂರು ಕಾಲ್ನಡಿಗೆ ಇವೆಲ್ಲಾ ಹೈಡ್ರಾಮ ಎಂದು ಕರ್ನಾಟಕದ ಜನತೆಗೆ ಗೊತ್ತಾಗಿದೆ, ಈ ಕೂಡಲೇ ತಪ್ಪನ್ನ ಅರಿತು ಬಿಜೆಪಿ ರಾಷ್ಟ್ರೀಯ ಅಧ್ಯಕ್ಷರು ಮತ್ತು ಕರ್ನಾಟಕ ಬಿಜೆಪಿ ಸಮಿತಿ ರಾಜ್ಯದ ಜನೆತೆಯ ಕ್ಷಮೆ ಕೇಳಬೇಕು ಎಂದು ರಾಜೀವ್ ಆಗ್ರಹಿಸಿದರು.

ಸಂಭ್ರಮಾಚರಣೆಯಲ್ಲಿ ನಗರ ಕಾಂಗ್ರೆಸ್ ಸಮಿತಿ ಕಾರ್ಯದರ್ಶಿ ಶಿವಕುಮಾರ್, ಕೆಪಿಸಿಸಿ ಸದಸ್ಯ ನಜರ್ಬಾದ್ ನಟರಾಜ್, ಕೆ ಆರ್ ಬ್ಯಾಂಕ್ ಅಧ್ಯಕ್ಷ ಬಸವರಾಜ ಬಸಪ್ಪ, ಕಂಸಾಳೆ ರವಿ, ಸೇವಾದಳ ಮೋಹನ್ ಕುಮಾರ್,ಯುವ ಕಾಂಗ್ರೆಸ್ ಮಲ್ಲೇಶ್ ಮಲ್ಲು, ಶ್ರೀಕಾಂತ್ ಯಾದವ್, ಹೇಮಂತ್,ಉಮೇಶ್, ಎಸ್ ಎನ್ ರಾಜೇಶ್ ಮತ್ತಿತರ ಕಾಂಗ್ರೆಸ್ ಕಾರ್ಯಕರ್ತರು ಪಾಲ್ಗೊಂಡಿದ್ದರು.