ಗುಜರಾತ್ : ಪ್ರಧಾನಿ ನರೇಂದ್ರ ಮೋದಿ ಅವರ ಗುಜರಾತ್ ಪ್ರವಾಸದ ಎರಡನೇ ದಿನ ಗಾಂಧಿನಗರದಲ್ಲಿ ಮೆಗಾ ರೋಡ್ ಶೋ ನಡೆಸಿದರು.
ರಸ್ತೆಯ ಎರಡೂ ಬದಿ ಕಿಕ್ಕಿರಿದು ನಿಂತಿದ್ದ ಸಾವಿರಾರು ಜನರು ಮೋದಿ ಅವರಿಗೆ ಜಯಕಾರ ಹಾಕುತ್ತಾ ಪುಷ್ಪವೃಷ್ಟಿ ಸುರಿಸಿದರು.
ರೋಡ್ ಶೋ ನಡೆದ ಹಾದಿ ಉದ್ದಕ್ಕೂ ತ್ರಿವರ್ಣ ಧ್ವಜಗಳನ್ನು ಹಿಡಿದು ಜನರು ಭಾರತೀಯ ಸೇನೆಗೆ ಗೌರವ ಸಲ್ಲಿಸಿದರು.

ನಂತರ ನಡೆದ ಸಮಾವೇಶದಲ್ಲಿ ಮಾತನಾಡಿದ ಪ್ರಧಾನಿ 1947 ರಲ್ಲಿ ಕಾಶ್ಮೀರಕ್ಕೆ ನುಗ್ಗಿದ್ದ ಮುಜಾಹಿದ್ದೀನ್ಗಳನ್ನು ಮಟ್ಟ ಹಾಕಿದ್ದರೆ ಈಗ ನಾವು ಇಂತಹ ದುಃಸ್ಥಿತಿಯನ್ನು ಎದುರಿಸುತ್ತಿರಲಿಲ್ಲ ಎಂದು ಹೇಳಿದರು.
1947 ರಲ್ಲಿ ಸರ್ದಾರ್ ವಲ್ಲಭಬಾಯಿ ಪಟೇಲ್ ಅವರು ಪಾಕ್ ಆಕ್ರಮಿತ ಕಾಶ್ಮೀರವನ್ನು ಮರಳಿ ಪಡೆಯಲು ಬಯಸಿದ್ದರು. ಪಿಒಕೆ ಮರಳಿ ಮರು ವಶವಾಗುವವರೆಗೂ ಸೇನಾ ಕಾರ್ಯಾಚರಣೆ ನಿಲ್ಲಿಸಬಾರದು ಅವರು ನಿರ್ಧರಿಸಿದ್ದರು ಎಂದು ಹೇಳಿದರು
75 ವರ್ಷಗಳಿಂದ ನಾವು ಒಂದಲ್ಲಾ ಒಂದು ತೊಂದರೆಯನ್ನು ಅನುಭವಿಸುತ್ತಲೇ ಇದ್ದೇವೆ. ಪಹಲ್ಗಾಮ್ನಲ್ಲಿ ನಡೆದಿದ್ದು, ಆ ದಾಳಿಯ ವಿಕೃತ ರೂಪವಷ್ಟೇ. ಪ್ರತಿ ಸಲವೂ ಪಾಕಿಸ್ತಾನದ ಸೇನೆಯ ವಿಫಲ ಯತ್ನವನ್ನು ನಮ್ಮ ಯೋಧರು ಹಿಮ್ಮೆಟ್ಟಿಸಿದ್ದಾರೆ. ಭಾರತವನ್ನು ಸೋಲಿಸಲು ಸಾಧ್ಯವೇ ಇಲ್ಲ ಎಂಬುದು ಈಗ ಆ ದೇಶಕ್ಕೆ ಮನವರಿಕೆಯಾಗಿದೆ ಎಂದು ಪ್ರಧಾನಿ ಟಾಂಗ್ ನೀಡಿದರು
ನಾವು ಈಗ ಸಿಂಧೂ ಜಲ ಒಪ್ಪಂದವನ್ನು ಸ್ಥಗಿತಗೊಳಿಸಿ, ಪಾಕಿಸ್ತಾನಕ್ಕೆ ಬಿಸಿ ಮುಟ್ಟಿಸಿದ್ದೇವೆ. ನಮ್ಮ ಭಾಗದ ಅಣೆಕಟ್ಟುಗಳ ಸಾಮರ್ಥ್ಯವನ್ನು ಹೆಚ್ಚಿಸಲು ಪ್ರಾರಂಭಿಸಿದ್ದೇವೆ. ಇದು ಆ ದೇಶಕ್ಕೆ ನುಂಗಲಾರದ ತುತ್ತಾಗಿ ಪರಿಣಮಿಸಿದೆ ಎಂದು ಪ್ರಧಾನಿ ಮೋದಿ ಹೇಳಿದರು.