ಮೈಸೂರು: ಬರವಣಿಗೆ ನಾವು ಯಾವುದೇ ಕ್ಷೇತ್ರ ಆಯ್ದು ಕೊಂಡರೂ ಅಗತ್ಯವಿದೆ ಹಾಗಾಗಿ ಎಳವೆಯಲ್ಲೇ ಮಕ್ಕಳು ಬರೆಯುವ
ಅಭ್ಯಾಸವನ್ನು ರೂಢಿಸಿಕೊಳ್ಳಬೇಕು ಎಂದು ಖ್ಯಾತ ಸಾಹಿತಿ ಎಸ್ ಎಲ್ ಭೈರಪ್ಪ ಅವರು ಸಲಹೆ ನೀಡಿದರು.
ನಗರದ ಪೂರ್ಣ ಚೇತನ ಶಾಲೆಯ ಮಕ್ಕಳೇ ಬರೆದು, ಸಂಪಾದಿಸಿರುವ “ಪಾಠ ಶಾಲಾ ಜೀವನ ಯಾತ್ರಾ” ಪುಸ್ತಕವನ್ನು ಬಿಡುಗಡೆಗೊಳಿಸಿ ಅವರು ಮಾತನಾಡಿದರು.
ಎಳವೆಯಲ್ಲೇ ಮಕ್ಕಳಿಗೆ ಬರೆಯಲು ಒಂದು ವೇದಿಕೆ ಒದಗಿಸಿಕೊಟ್ಟರೆ,ಅವರಲ್ಲಿ ಸೃಜನಾತ್ಮಕ ಆಲೋಚನೆಗಳನ್ನು ಅಕ್ಷರ ರೂಪಕ್ಕಿಳಿಸಲು ಸಹಾಯವಾಗುತ್ತದೆ ಎಂದು ಹೇಳಿದರು.
ವೈದ್ಯಕೀಯ, ಇಂಜಿನಿಯರಿಂಗ್, ವಿಜ್ಞಾನ, ಹೀಗೆ ನೀವು ಭವಿಷ್ಯದಲ್ಲಿ ಯಾವುದೇ ಉದ್ಯೋಗ್ಯ ಕ್ಷೇತ್ರ ಆಯ್ದುಕೊಳ್ಳಿ ಬರವಣಿಗೆ ನಿಮ್ಮ ಉಪಯೋಗಕ್ಕೆ ಬರುತ್ತದೆ ಎಂದು, ಭೈರಪ್ಪ ತಿಳಿಸಿದರು.
ಶಾಲೆಯ ನಾಲ್ಕರಿಂದ ಹತ್ತನೇ ತರಗತಿಯವರೆಗಿನ 104 ವಿದ್ಯಾರ್ಥಿಗಳು ತಮ್ಮ ಬದುಕಿನ ಸಣ್ಣ ಸಣ್ಣ ಅನುಭವಗಳು, ಪ್ರವಾಸ, ಸೃಜನಶೀಲ ಆಲೋಚನೆಗಳು, ತಮ್ಮನ್ನು ಪ್ರಭಾವಿಸಿದ ಸಂಗತಿಗಳು-ವ್ಯಕ್ತಿಗಳ ಬಗ್ಗೆ ಬರೆದಿರುವ 189 ಲೇಖನಗಳ ಗುಚ್ಛವನ್ನು ಈ ಪುಸ್ತಕ ಒಳಗೊಂಡಿದೆ.
ಈ ಪುಸ್ತಕದ ಇನ್ನೊಂದು ವಿಶಿಷ್ಟತೆ ಎಂದರೆ ಇದಕ್ಕೆ ಪ್ರತಿಷ್ಠಿತ ಐ ಎಸ್ ಬಿ ಎನ್ ಸಂಖ್ಯೆ ಕೂಡಾ ದೊರೆತಿದೆ. ಇದು ಈ ಪುಸ್ತಕದ ಗುಣಮಟ್ಟಕ್ಕೆ ಇನ್ನೊಂದು ಸಾಕ್ಷಿ, ಐ ಎಸ್ ಬಿ ಎನ್ ಸಂಖ್ಯೆ ದೊರೆತ ಮೊಟ್ಟಮೊದಲ ನಗರದ ಮಕ್ಕಳ ಪ್ರಕಟನೆ ಇದಾಗಿದೆ.
ಶಾಲಾ ಸಿಇಒ ಬಿ ದರ್ಶನ್ ರಾಜ್ ಮಾತನಾಡಿ, ಅಕ್ಷರಗಳ ಅದ್ಭುತಲೋಕ, ನಮ್ಮ ಮಕ್ಕಳ ಯೋಚನೆಯ ಪರಿಧಿಯನ್ನು ವಿಸ್ತರಿಸುತ್ತದೆ. ಅವರನ್ನು ಭವಿಷ್ಯದಲ್ಲಿ ಹೆಚ್ಚು ಸೃಜನಾತ್ಮಕವಾಗಿ ಯೋಚಿಸುವಂತೆ ಮಾಡುತ್ತದೆ ಎಂದು ಹೇಳಿದರು.
ಸರಸ್ವತಿ ದೇವತೆಯ ವರಪುತ್ರ ಎಸ್ ಎಲ್ ಭೈರಪ್ಪನವರು ನಮ್ಮ ಮಕ್ಕಳ ಪುಸ್ತಕ ಬಿಡುಗಡೆಗೊಳಿಸಿ ಆಶೀರ್ವದಿಸಿರುವುದು ಎಲ್ಲರ ಸೌಭಾಗ್ಯ ಎಂದು ತಿಳಿಸಿದರು.
ಶಾಲೆಯ ಮುಖ್ಯ ಆಡಳಿತಾಧಿಕಾರಿ ಮಾಧುರ್ಯ ರಾಮಸ್ವಾಮಿ ಮಾತನಾಡಿ ಶಾಲೆ ತನ್ನ ವಿದ್ಯಾರ್ಥಿಗಳ ಸೃಜನಾತ್ಮಕ ಯೋಚನೆಗಳಿಗೆ ಬೆಂಬಲವಾಗಿ ನಿಲ್ಲಲು ಈ ಪುಸ್ತಕವನ್ನು ಪ್ರಕಟಿಸಿದೆ. ಮುಂದಿನ ದಿನಗಳಲ್ಲಿ, ಮಕ್ಕಳ ಸೃಜನಾತ್ಮಕ ಬೆಳವಣಿಗೆಗೆ ಒತ್ತು ನೀಡುವ ಇನ್ನಷ್ಟು ಪ್ರಯತ್ನಗಳಿಗೆ ಶಾಲೆ ವೇದಿಕೆ ಒದಗಿಸಲಿದೆ ಎಂದು ತಿಳಿಸಿದರು.
ಕಾರ್ಯಕ್ರಮದಲ್ಲಿ ಶಾಲಾ ಪ್ರಾಂಶುಪಾಲೆ ಪ್ರಿಯಾಂಕಾ ಬಿ ಉಪಸ್ಥಿತರಿದ್ದರು.