ಮೈಸೂರು: ವೈದ್ಯರು ನಿರಂತರವಾಗಿ ಕಲಿಯುವ ಪ್ರವೃತ್ತಿ ಅಳವಡಿಸಿಕೊಳ್ಳಬೇಕು ಎಂದು ಜೈಪುರದ ಮಹಾತ್ಮ ಗಾಂಧಿ ವೈದ್ಯಕೀಯ ವಿಜ್ಞಾನ ಮತ್ತು ತಂತ್ರಜ್ಞಾನ ವಿವಿ ಕುಲಪತಿ ಡಾ.ಅಚಲ್ ಗುಲಾಟಿ ಸಲಹೆ ನೀಡಿದರು.
ಮೈಸೂರಿನ ಶಿವರಾತ್ರಿಶ್ವರ ನಗರದಲ್ಲಿರುವ ಜೆಎಸ್ಎಸ್ ವೈದ್ಯಕೀಯ ಮಹಾವಿದ್ಯಾಲಯದಲ್ಲಿ ವಿದ್ಯಾರ್ಥಿಗಳಿಗೆ ಪದವಿ ಪ್ರದಾನ ಮಾಡಿ ಅವರು ಮಾತನಾಡಿದರು.

ಸಮಸ್ಯೆಗಳನ್ನು ಎದುರಿಸುವ ಧೈರ್ಯವನ್ನು ಮೈಗೂಡಿಸಿಕೊಳ್ಳಬೇಕು, ಸ್ಪರ್ಧಾತ್ಮಕ ಯುಗದಲ್ಲಿ ಕೌಶಲ್ಯತೆ ಇದ್ದವರಿಗೆ ಅಷ್ಟೇ ಆದ್ಯತೆ ಎಂಬಂತಾಗಿದೆ ಈ ನಿಟ್ಟಿನಲ್ಲಿ ವೃತ್ತಿ ಕೌಶಲ್ಯತೆಗಳ ಕಲಿಕೆಯ ಕಡೆಗೂ ಹೆಚ್ಚಿನ ಗಮನ ಹರಿಸಬೇಕು ಎಂದು ಕಿವಿಮಾತು ಹೇಳಿದರು.
ವೈದ್ಯಕೀಯ ಕ್ಷೇತ್ರದಲ್ಲಿ ಕೃತಕ ಬುದ್ಧಿಮತ್ತೆ (ಎಐ) ಮಾಹಿತಿ ಕಲೆ ಹಾಕಲು ಹಾಗೂ ಇನ್ನಿತರ ಸಂಶೋಧನೆ ಸಹಕಾರಗಳಿಗೆ ಬಳಸಬಹುದೇ ಹೊರತು ಅದು ಮಾನವೀಯ ಗುಣಗಳನ್ನು ಹೊಂದಿರುವ ವೈದ್ಯರಿಗೆ ಪರ್ಯಾಯವಲ್ಲ ಎಂದು ಡಾ.ಅಚಲ್ ಗುಲಾಟಿ ತಿಳಿಸಿದರು.
2೦8 ಎಂಬಿಬಿಎಸ್ ಪದವಿದರರಿಗೆ ಪದವಿ ಪ್ರದಾನ ಮಾಡಲಾಯಿತು.
ಸಮಾರಂಭದ ದಿವ್ಯ ಸಾನ್ನಿಧ್ಯವನ್ನು ಸುತ್ತೂರು ಮಠಾಧೀಶ್ವರರಾದ ಶ್ರೀ ಶಿವರಾತ್ರಿ ದೇಶಿಕೇಂದ್ರ ಸ್ವಾಮೀಜಿ ವಹಿಸಿದ್ದರು.
ಜೆಎಸ್ಎಸ್ ಮಹಾವಿದ್ಯಾಪೀಠದ ಕಾರ್ಯನಿರ್ವಾಹಕ ಕಾರ್ಯದರ್ಶಿ ಡಾ. ಬೆಟ್ಟಸೂರ ಮಠ್, ಸಮಕುಲಾಧಿಪತಿ ಡಾ. ಬಿ. ಸುರೇಶ್, ಕುಲಸಚಿವ ಡಾ. ಹೆಚ್. ಬಸವನಗೌಡಪ್ಪ, ಜೆಎಸ್ಎಸ್ ಉನ್ನತ ಶಿಕ್ಷಣ ಮತ್ತು ಸಂಶೋಧನಾ ಅಕಾಡೆಮಿ ಕುಲ ಸಚಿವ ಡಾ. ಬಿ. ಮಂಜುನಾಥ್, ಪ್ರಾಂಶುಪಾಲ ಡಾ. ಡಿ. ನಾರಾಯಣಪ್ಪ ಮತ್ತಿತರರು ಉಪಸ್ಥಿತರಿದ್ದರು.