ಮೈಸೂರು,ನವೆಂಬರ್.೧: ಮನೆಯ ಮುಂಬಾಗಿಲನ್ನು ಮುರಿದು ಒಳ ನುಗ್ಗಿರುವ ಕಳ್ಳರು ಸುಮಾರು ೧ ಕೋಟಿ ರೂ. ಮೌಲ್ಯದ ಚಿನ್ನಾಭರಣ ಮತ್ತು ಬೆಳ್ಳಿ ವಸ್ತುಗಳನ್ನು ದೋಚಿರುವ ಘಟನೆ ಮೈಸೂರಿನಲ್ಲಿ ನಡೆದಿದೆ.
ನಗರದ ದಟ್ಟಗಳ್ಳಿ ೩ನೇ ಹಂತ, ಕನಕದಾಸನಗರ ’ಜೆ’ಬ್ಲಾಕ್ ನಿವಾಸಿ ಸಾಫ್ಟ್ವೇರ್ ಎಂಜಿನಿಯರ್ ವಿನಯ್ ಕುಮಾರ್ ಅವರ ಮನೆಯಲ್ಲಿ ಈ ಘಟನೆ ನಡೆದಿದೆ.
ಅ.೨೦ ರಂದು ವಿನಯ್ ಪತ್ನಿ ಮತ್ತು ಮಕ್ಕಳೊಂದಿಗೆ ಚಿಕ್ಕಮಗಳೂರಿಗೆ ಕುಟುಂಬದ ಕಾರ್ಯಕ್ರಮವೊಂದರಲ್ಲಿ ಭಾಗವಹಿಸಲು ತೆರಳಿದ್ದರು.
ಅವರು ಅ.೨೧ ರಂದು ಮಧ್ಯಾಹ್ನ ೩ ಗಂಟೆಗೆ ಹಿಂತಿರುಗಿದ್ದಾರೆ.ಆಗ ಮನೆಯ ಮುಂಭಾಗದ ಬಾಗಿಲು ತೆರೆದಿರುವುದನ್ನು ನೋಡಿ ವಿನಯ್ ಆತಂಕಗೊಂಡಿದ್ದಾರೆ.
ಮನೆಯೊಳಗೆ ಹೋಗಿ ನೋಡಿದಾಗ ಮಲಗುವ ಕೋಣೆಯಲ್ಲಿದ್ದ ವಾರ್ಡ್ ರೋ ಬ್ನಲ್ಲಿ ಇಟ್ಟಿದ್ದ ಬೆಲೆಬಾಳುವ ವಸ್ತುಗಳು ಕಳ್ಳತನವಾಗಿರುವುದನ್ನು ಗೊತ್ತಾಗಿದೆ.
ಕಳ್ಳರು ಸುಮಾರು ೭೦೦ ಗ್ರಾಂ ತೂಕದ ಚಿನ್ನದ ಆಭರಣಗಳು, ನಾಲ್ಕು ಸರಗಳು, ಮೂರು ಆಭರಣ ಸೆಟ್ಗಳು, ಐದು ಬಳೆಗಳು, ಎಂಟು ಕಿವಿಯ ವಾಲೆಗಳು, ೧೦ ಉಂಗುರಗಳು ಮತ್ತು ೩ ಕೆಜಿ ಬೆಳ್ಳಿ ವಸ್ತುಗಳನ್ನು ದೋಚಿದ್ದಾರೆ.
ತಕ್ಷಣ, ವಿನಯ್ ಸರಸ್ವತಿಪುರಂ ಪೊಲೀಸರಿಗೆ ದೂರು ನೀಡಿದ್ದಾರೆ. ಪೊಲೀಸರು ಶ್ವಾನ ದಳ ಮತ್ತು ಬೆರಳಚ್ಚು ತಜ್ಞರೊಂದಿಗೆ ಬಂದು ಮಹಜರು ನಡೆಸಿದರು.
ಸರಸ್ವತಿಪುರಂ ಪೊಲೀಸರು ಪ್ರಕರಣ ದಾಖಲಿಸಿಕೊಂಡು ಮುಂದಿನ ಕ್ರಮ ಕೈಗೊಂಡಿದ್ದಾರೆ.

